
https://youtu.be/1pdgC2cqLPs
ಪ್ರಗತಿವಾಹಿನಿ ಸುದ್ದಿ, ಕಾರವಾರ -: ಜಿಲ್ಲೆಯಲ್ಲಿ ನಿಷೇಧಾಜ್ಞೆಯನ್ನು ಉಲ್ಲಂಘಿಸಿದವರ ವಿರುದ್ದ ಕಟ್ಟುನಿಟ್ಟಿನ ಕ್ರಮಕೈಗೊಂಡು ಪೊಲೀಸ್ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ ಅವರು ತಿಳಿಸಿದರು.
ಅವರು ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಜಿಲ್ಲಾಧಿಕಾರಿಗಳು 144 ಸಿಆರ್ಪಿಸಿ ನಿಷೇಧಾಜ್ಞೆ ಆದೇಶವನ್ನು ಜಾರಿಗೊಳಿಸಿದಾಗಿನಿಂದ ಪೊಲೀಸ್ ಇಲಾಖೆಯು ಜಿಲ್ಲೆಯಲ್ಲಿ 16 ಚೆಕ್ ಪೋಸ್ಟ್ ಗಳನ್ನು ತೆರೆಯುವದರೊಂದಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿರುತ್ತದೆ. ಕಳೆದ ಒಂದೇ ವಾರದ ಅವಧಿಯಲ್ಲಿ 10 ಪ್ರಕರಣಗಳನ್ನು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಿಸಲಾಗಿರುತ್ತದೆ.
ರಾಮನಗರ, ಮಲ್ಲಾಪುರ, ಕದ್ರಾ ದಲ್ಲಿ ತಲಾ 1, ಭಟ್ಕಳ ಶಹರದಲ್ಲಿ 3, ಹಾಗೂ ಹಳಿಯಾಳದಲ್ಲಿ 2 ಪ್ರಕರಣ ದಾಖಲಾದರೆ, ದಾಂಡೇಲಿ ನಗರ ಠಾಣೆಯಲ್ಲಿ 2 ಪ್ರಕರಣ ದಾಖಲಿಸಿದ್ದು, ಒಂದು ಅಬಕಾರಿ ಕಾಯ್ದೆಯಡಿ ಮತ್ತೊಂದು ಐಪಿಸಿ ಹಾಗೂ ವಿಪತ್ತು ನಿರ್ವಾಹಣಾ ಕಾಯ್ದೆಯಡಿ ದಾಖಲಾಗಿರುತ್ತವೆ ಇದಲ್ಲದೇ ಮಾರ್ಚ 24 ಒಂದೇ ದಿನದಲ್ಲಿ ಜಿಲ್ಲೆಯಾದ್ಯಂತ 20 ಜನರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಅದರಲ್ಲಿ 09 ಜನ ಆರೋಪಿತರನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಹಾಗೂ 4 ಬೈಕ್, 1 ಕಾರ ವಶಪಡಿಸಿಕೊಳ್ಳಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ದೇಹಲಿಯ ಜಮಾತ್ ಸಭೆಯಲ್ಲಿ ಭಾಗವಹಿಸಿದ್ದ ಉತ್ತರ ಕನ್ನಡ ಜಿಲ್ಲೆಯ ಜನರನ್ನು ಗುರುತಿಸಿ ಈಗಾಗಲೇ ಹೋಮ್ ಕ್ವಾರಂಟೈನ್ ಗೆ ಸೂಚಿಸಲಾಗಿದೆ. ಜಮಾತ್ ಸಭೆಗೆ ಹೊಗುವುದು ತಪ್ಪಲ್ಲ ಆದರೆ ಕರೋನಾ ವೈರಸ್ ಹರಡುವಿಕೆ ಸಾಧ್ಯತೆ ಇರುವದರಿಂದ ಜಿಲ್ಲೆಯ ಜನರು ಈ ತರಹದ ಸಭೆಗೆ ಹಾಜರಾಗಿದ್ದಲ್ಲಿ ಸ್ವಯಂ ಪ್ರೇರಿತರಾಗಿ ಮಾಹಿತಿ ನೀಡುವ ಮೂಲಕ ಆರೋಗ್ಯ ತಪಾಸಣೆಗೆ ಒಳಗಾಗಬೇಕು. ಒಂದು ವೇಳೆ ಬಚ್ಚಿಟ್ಟಲ್ಲಿ ತಪ್ಪಾಗುತ್ತದೆ. ಜನರು ಭಯ ಪಡಬೇಕಿಲ್ಲ. ತಮ್ಮ ಕುಟುಂಬ ಹಾಗೂ ಸಮಾಜದ ಹಿತರಕ್ಷಣೆಗಾಗಿ ಸರಕಾರದೊಂದಿಗೆ ಸಹಕರಿಸಬೇಕೆಂದು ವಿನಂತಿಸಿದರು.
ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆಯಿಂದ ನಿಷೇಧಾಜ್ಞೆ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು ನಿಷೇಧಾಜ್ಞೆ ಉಲ್ಲಂಘಿಸುವವರ ಮೇಲೆ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಅನಗತ್ಯವಾಗಿ ಹೊರಗಡೆ ಹೋಗದೇ, ಶಾಂತ ರೀತಿಯಿಂದ ಪೊಲೀಸರೊಂದಿಗೆ ಸಹಕರಿಸುವಂತೆ ಮಾಧ್ಯಮಗಳ ಮೂಲಕ ಪೊಲೀಸ್ ವರಿಷ್ಠಾಧಿಕಾರಿ ಕೋರಿದರು.