*ಗುರುವಾರ ವಿಶ್ವರಂಗಭೂಮಿ ದಿನಾಚರಣೆ ನಿಮಿತ್ತ ದತ್ತಿ ಉಪನ್ಯಾಸ ಹಾಗೂ ರಂಗ ಗೌರವ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ೨೭-ಮಾರ್ಚ್-೨೦೨೫,ವಿಶ್ವ ರಂಗಭೂಮಿ ದಿನ. ಅಂದು ರಂಗಭೂಮಿಯ ಉತ್ತೇಜನಕ್ಕಾಗಿ, ಕ್ರಿಯಾಶೀಲತೆಗಾಗಿ ಹಲವಾರು ಕಾರ್ಯಗಳು ಇಡೀ ವಿಶ್ವದಲ್ಲಿ ಜರಗುತ್ತವೆ. ಇದರಂಗವಾಗಿ ಬೆಳಗಾವಿಯ ನಾಟ್ಯಭೂಷಣ ಏಣಗಿ ಬಾಳಪ್ಪ ಸ್ಮಾರಕ ಪ್ರತಿಷ್ಠಾನವು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಹಯೋಗದೊಂದಿಗೆ ದತ್ತಿ ಉಪನ್ಯಾಸ ಹಾಗೂ ರಂಗಗೌರವ ಕಾರ್ಯಕ್ರಮವನ್ನು ಕಳೆದ ೨೦೧೯ ರಿಂದ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.
ಕರ್ನಾಟಕದಲ್ಲಿ ಸ್ಮರಣೀಯ ಸೇವೆಗೈದು ತೆರೆಮರೆಗೆ ಸರಿದಂಥ ಶ್ರೇಷ್ಠ ನಾಟಕ ಕಂಪನಿಗಳ ಸೇವೆ ಸಾಧನೆಯನ್ನು ಸ್ಮರಿಸುವ ಮತ್ತು ಅಸ್ತಿತ್ವದಲ್ಲಿರುವ ಹಳೆಯ ನಾಟಕ ಕಂಪನಿಗಳನ್ನೂ ಗುರುತಿಸಿ ಆ ಕಂಪನಿಗಳ ವಂಶಸ್ಥರಿಗೆ ಗೌರವಿಸುವ ವಿಶಿಷ್ಟ ಕಾರ್ಯಕ್ರಮ ಜರುಗುತ್ತಿದೆ.
ಈ ವರ್ಷ ನಾಡಿನ ಮೊಟ್ಟಮೊದಲ ಸ್ತ್ರೀ ಸಂಗೀತ ನಾಟಕ ಮಂಡಳಿಯೆಂದು ಹೆಸರಾದ ಲಕ್ಷ್ಮೇಶ್ವರದ ಬಚ್ಚಾಸಾನಿಯ “ಸೋಮನಾಥ ಸ್ತ್ರೀ ಸಂಗೀತ ನಾಟಕ ಮಂಡಳಿ” (೧೯೧೬ – ೧೯೨೫)ಯ ಬಚ್ಚಾಸಾನಿಯ ಮರಿಮಗಳು ಶಾರದಮ್ಮ ಹೊಂಬಳ ಅವರಿಗೆ, ಮತ್ತೊಂದು ಕಂಪನಿ ಚಿತ್ತರಗಿ ಗಂಗಾಧರ ಶಾಸ್ತ್ರಿಗಳ “ಶ್ರೀ ಕುಮಾರ ವಿಜಯ ನಾಟ್ಯಸಂಘ,ಚಿತ್ತರಗಿ” (೧೯೪೨-ಇವತ್ತಿಗೂ ಅಸ್ತಿತ್ವದಲ್ಲಿದೆ) ಶಾಸ್ತ್ರಿಯವರ ಸೊಸೆ ವಿಜಯಲಕ್ಷ್ಮಿ ಹಿರೇಮಠ ಅವರಿಗೆ ರಂಗಗೌರವ ಹಾಗೂ ಅಭಿನಂದನ ಕಾರ್ಯಕ್ರಮ ನಡೆಯಲಿದೆ.
ಗುರುವಾರ ಸಂಜೆ 6 ಗಂಟೆಗೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಕಾರ್ಯಕ್ರಮ ನಡೆಯಲಿದೆ. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು. ರಂಗಾಯಣ ಅಧ್ಯಕ್ಷ ರಾಜು ತಾಳಿಕೋಟೆ ಪ್ರಶಸ್ತಿ ಪ್ರದಾನ ಮಾಡುವರು. ಮಹ್ಮದ ಆರ್ ಹೊಸೂರ್ ಮತ್ತು ಗಣೇಶ ಅಮಿನಗಡ ಅಭಿನಂದ ನುಡಿಯಾಡಲಿದ್ದಾರೆ.
ಬಸವರಾಜ ಏಣಗಿ ಮತ್ತು ಬಸವರಾಜ ಬೊಂಗೇರಿ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಡಾ.ವೀರಣ್ಣ ರಾಯಚೂರು, ಡಾ.ಬಸವರಾಜ ಜಗಜಂಪಿ, ಡಾ.ರಾಮಕೃಷ್ಣ ಮರಾಠೆ, ಡಾ.ಪಿ.ಜಿ.ಕೆಂಪಣ್ಣವರ್, ಶಿರೀಶ ಜೊಶಿ, ಡಾ.ಶಶಿಧರ ನರೇಂದ್ರ, ಡಾ.ಪ್ರಕಾಶ ಗರುಡ, ಸುನಂದಾ ಹೊಸಪೇಡೆ ಪಾಲ್ಗೊಳ್ಳುವರು.