Latest

ನವ ಕರ್ನಾಟಕದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಮೊದಲ ವ್ಯಕ್ತಿಗೆ ದೊರೆಯುವ ಸ್ಥಾನಮಾನ: ಸಿಎಂ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನವ ಕರ್ನಾಟಕದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಮೊದಲ ವ್ಯಕ್ತಿಗೆ ಸಿಕ್ಕುವ ಸ್ಥಾನಮಾನ, ಗೌರವ, ಅವಕಾಶ ದೊರಕುವುದು ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಪರಿಶಿಷ್ಟ ಜಾತಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮತ್ತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತ ಮತ್ತು ಕರ್ನಾಟಕ ಹಲವಾರು ಆರ್ಥಿಕ ಸ್ತರಗಳಲ್ಲಿರುವ ಜನ ಮತ್ತು ಜನಾಂಗಗಳಿಂದ ಕೂಡಿರುವ ದೇಶ. ಸ್ವತಂತ್ರಪೂರ್ವದಿಂದಲೂ, ಮಾನಸಿಕವಾಗಿ, ಸಾಮಾಜಿಕವಾಗಿ ಆರ್ಥಿಕವಾಗಿ ತುಳಿತಕ್ಕೊಳಪಟ್ಟ ಹಲವಾರು ಸಮಾಜಗಳಿವೆ ಭಾರತ ರತ್ನ, ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ಜನಾಂಗಗಳಿಗೆ ಹಕ್ಕು ನೀಡಿ ಅವರು ಮುಖ್ಯವಾಹಿನಿಗೆ ಸೇರಿ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಯನ್ನು ಸುಧಾರಿಸಿಕೊಂಡು ತಮ್ಮ ಕುಟುಂಬವನ್ನು ದೇಶ ಕಟ್ಟಲು ಪಾತ್ರ ವಹಿಸುತ್ತಿದ್ದಾರೆ ಎಂದರು

ಸಾಮಾಜಿಕ ಲೆಕ್ಕಪರಿಶೋಧನೆ
ಸಂವಿಧಾನದ ಹಕ್ಕು 75 ವರ್ಷವಾದ ನಂತರ ಎಷ್ಟರಮಟ್ಟಿಗೆ ಅಂಬೇಡ್ಕರ್ ಅವರ ಕನಸನ್ನು ಈಡೇರಿಸಲು ಸಾಧ್ಯವಾಗಿದೆ ಎಂಬ ಆತ್ಮಾವಲೋಕನ ಮಾಡಿಕೊಳ್ಳುವ ಕಾಲವಿದು. ಪ್ರತಿ ಹತ್ತು ವರ್ಷಕ್ಕೊಮ್ಮೆ ಇದರ ಪುನರ್ವಿಮರ್ಶೆಯಾಗಬೇಕು. ಮೀಸಲಾತಿ ಮತ್ತು ಈ ಎಲ್ಲಾ ಸಮುದಾಯಗಳಿಗೆ ನೀಡಿರುವ ಸರ್ಕಾರದ ಕಾರ್ಯಕ್ರಮಗಳು ಎಷ್ಟರಮಟ್ಟಿಗೆ ಮುಟ್ಟಿದೆ ಹಾಗೂ ಎಷ್ಟು ಜನರ ಜೀವನ ಗುಣಮಟ್ಟ ಉತ್ತಮಗೊಂಡಿದೆ, ಅವಕಾಶಗಳು ಯಾವ ಜನಾಂಗಕ್ಕೆ ದೊರೆತಿದೆ ಹಾಗೂ ಯಾರಿಗೆ ದೊರೆತಿಲ್ಲ ಎಂಬ ಸಾಮಾಜಿಕ ಲೆಕ್ಕಪರಿಶೋಧನೆಯಾಗಬೇಕು ಎಂದರು.

ಆತ್ಮಾವಲೋಕನ
ನಾವು ಕಂಡಂತೆ ಮೀಸಲಾತಿಯ ಲಾಭ ಕೆಲವೇ ಕೆಲವು ಜನರಿಗೆ ಸಿಕ್ಕಿದೆ. ದೊರೆತಿರುವವರಿಗೆ ಸೌಲಭ್ಯಗಳು ದೊರೆಯುತ್ತಿದ್ದು, ಅವರಿಗೆ ಸಂವಿಧಾನದ ಈ ಹಕ್ಕನ್ನು ಹೇಗೆ ಪಡೆಯಬೇಕು ಎಂದು ಕರಗತವಾಗಿದೆ. ದೂರದ ಹಳ್ಳಿ, ಕೊಳಚೆಪ್ರದೇಶ, ಬಡವರಿಗೆ ಈ ಮೀಸಲಾತಿ ಇರುವ ಅರಿವೂ ಕೂಡ ಇಲ್ಲ.75 ವರ್ಷಗಳಾದರೂ ಪೂರ್ಣ ಪ್ರಮಾಣದಲ್ಲಿ ಮಾಡಲಾಗಿಲ್ಲ.

ನಮ್ಮ ಹಕ್ಕು ನಮಗೆ ತಿಳಿದಿಲ್ಲವೆಂದರೆ ಅದನ್ನು ಪಡೆಯುವುದು ದೂರದ ಮಾತು. ಕಾರ್ಯಕ್ರಮ ಲೋಪದೋಷಗಳಿದ್ದು ಕಟ್ಟಕಡೆಯ ವ್ಯಕ್ತಿಗೆ ಮುಟ್ಟದಂತೆ ಮಾಡಲಾಗುತ್ತದೆ. ಪ್ರಾಮಾನಿಕವಾಗಿ ಆ ಬಗ್ಗೆ ಚಿಂತಿಸುವ ಅಗತ್ಯವಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ, ಸೌಲಭ್ಯಗಳನ್ನು. ಮುಟ್ಟಿಸಲಾಗಿಲ್ಲ. ಇದಕ್ಕೆ ಯಾರು ಹೊಣೆಗಾರರು ಎಂದು ಆತ್ಮಾವಲೋಕನ ಮಾಡಿಕೊಳ್ಳೋಣ ಎಂದರು.

17 ಸಾವಿರ ಜನರಿಗೆ ಗಂಗಾಕಲ್ಯಾಣ
ನಮ್ಮ ಸರ್ಕಾರ ವಿಭಿನ್ನವಾಗಿ ಕಾರ್ಯಕ್ರಮ ಅನುಷ್ಠಾನ ಮಾಡುತ್ತಿದೆ. 17 ಸಾವಿರ ಜನರಿಗೆ ಗಂಗಾಕಲ್ಯಾಣ ಮಂಜೂರಾಗಿದೆ. 595 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡು ಅನುದಾನ ಬಿಡುಗಡೆಯಾಗಿದೆ. ಮೊದಲ ಹಂತದಲ್ಲಿ 8 ಸಾವಿರ ಫಲಾನುಭವಿಗಳಿಗೆ 75 ಸಾವಿರ ರೂ.ಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಅವರೇ ನಿಂತು ಕೊಳವೆಬಾವಿ ಕೊರೆಸಿ, ಪಂಪ್ ಹಾಕಿಸಿಕೊಂಡು ಕಾನೂನಿನ ಪ್ರಕಾರ ವಿದ್ಯುದೀಕರಣ ಮಾಡಿಸಿಕೊಳ್ಳಬಹುದು. ಎಲ್ಲಾ ನಿಗಮಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲಾಗಿದೆ. ಅನುಮೋದನೆ ಪಡೆದುಕೊಂಡ ಫಲಾನುಭವಿಯ ಹೊಲದಲ್ಲಿಯೇ ಕೊಳವೆಬಾವಿ ಕೊರೆಸಬೇಕು. ಸ್ಥಳ ಪರಿಶೀಲನೆ ಮಾಡಬೇಕು ಆಗ ಮಾತ್ರ ನ್ಯಾಯ ಸಿಗುತ್ತದೆ ಎಂದರು..

ಯುವಕರ ಜೀವನದಲ್ಲಿ ಬದಲಾವಣೆ
ಸ್ವಯಂ ಉದ್ಯೋಗಕ್ಕೆ ನಿಗಮಗಳಲ್ಲಿ ಹಲವಾರು ಕಾರ್ಯಕ್ರಮಗಳಿವೆ. ಆದರೆ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎನ್ನುವುದು ಯಕ್ಷಪ್ರಶ್ನೆ. ನೇರವಾಗಿ ಎಸ್.ಸಿ.ಎಸ್.ಟಿ ಸಮುದಾಯದವರಿಗೆ ವ್ಯಾಪಾರ ಮಾಡಲು ವಾಹನ ನೀಡಬೇಕು ಎಂದು ಬಜೆಟ್ ನಲ್ಲಿ ಇಲ್ಲದಿದ್ದರೂ 250 ಕೋಟಿಗಿಂತ ಹೆಚ್ವು ಹಣವನ್ನು ಅಧಿಕವಾಗಿ ಒದಗಿಸಿ ಬಾಬು ಜಗ ಜೀವನ್ ರಾಂ ಅವರ ಹೆಸರಿನಲ್ಲಿನಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ದ್ವಿಚಕ್ರ ವಾಹನ ಒದಗಿಸಲಾಗುತ್ತಿದೆ. ಡಿಲಿವರಿ ಕಾರ್ಯದಲ್ಲಿ ತೊಡಗಿಸಿಕೊಂಡವರು ಬಹಳ ಜನ ಇದ್ದಾರೆ. ಯುವಕರ ಜೀವನದಲ್ಲಿ ಬಹಳ ದೊಡ್ಡ ಬದಲಾವಣೆ ಆಗುತ್ತದೆ ಎಂದರು.

100 ಹಾಸ್ಟೆಲ್
ಪ್ರಮಾಣಿತ ವಿನ್ಯಾಸ ತಯಾರಿಸಿ ನೂರು ವಿದ್ಯಾರ್ಥಿನಿಲಯಗಳನ್ನು ಏಕಕಾಲಕ್ಕೆ ಪ್ರಾರಂಭಿಸಿ ನಿಗದಿತ ಸಮಯಕ್ಕೆ ಎಲ್ಲವನ್ನೂ ಪೂರ್ಣ ಗೊಳಿಸಲಾಗುವುದು. ಈ ವರ್ಷ ನೂರು ಎಸ್.ಸಿ.ಎಸ್.ಟಿ ಹಾಸ್ಟೆಲ್ ಹಾಗೂ 50 ಕನಕದಾಸ ಹಾಸ್ಟೆಲ್ ಗೆ ಮಂಜೂರಾತಿ ನೀಡಿದೆ. ಈ ವರ್ಷವೇ ಪ್ರಾರಂಭವಾಗಲಿದೆ. ವಿದ್ಯಾಸಿರಿ ಯೋಜನೆಯಡಿ 33 ಸಾವಿರ ವಿದ್ಯಾರ್ಥಿಗಳಿಗೆ ಸುಮಾರು 59 ಕೋಟಿಗಿಂತ ಹೆಚ್ವು ಅನುದಾನವನ್ನು ನೀಡಿ ಹಾಸ್ಟೆಲ್ ಗಳಲ್ಲಿ ಪ್ರವೇಶ ನೀಡಲಾಗಿದೆ. 33 ಸಾವಿರ ಮಕ್ಕಳಿಗೆ ಅನುಕೂಲವಾಗಿದೆ. ಈ ವರ್ಷ ಒಂದು ಲಕ್ಷ ಮಕ್ಕಳಿಗೆ ಹಾಸ್ಟೆಲ್ ಗಳಲಿ ಪ್ರವೇಶ ದೊರಕಿಸಬೇಕು ಹಾಸ್ಟೆಲ್ ಇಲ್ಲದೆಡೆ ಹಾಸ್ಟೆಲ್ ಶುಲ್ಕ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಸಮಸ್ಯೆ ಅರ್ಥ ಮಾಡಿಕೊಂಡು ಯೋಜನೆ ರೂಪಿಸಲಾಗುತ್ತಿದೆ ಎಂದರು.

ಮೆಗಾ ಹಾಸ್ಟೆಲ್
ಬೆಂಗಳೂರು, ಮೈಸೂರು, ಕಲಬುರಗಿ, ಹುಬ್ಬಳ್ಳಿ ಧಾರವಾಡ, ಮಂಗಳೂರಿಗೆ ಸುತ್ತಲಿನ ಗ್ರಾಮಗಳ ಮಕ್ಕಳು ಬರುತ್ತಾರೆ ಅವರಿಗೆ ಪ್ರವೇಶ ಸಿಕ್ಕರೂ ಹಾಸ್ಟೆಲ್ ಗಳಿರುವುದಿಲ್ಲ. ಹಾಸ್ಟೆಲ್ ಸಂಖ್ಯೆ ಹೆಚ್ಚಳವನ್ನು ಜನಸಂಖ್ಯೆ ಹೆಚ್ಚಾದರೂ ಮಾಡಿರಲಿಲ್ಲ. ಅದಕ್ಕಾಗಿ 5 ಮೆಗಾ ಹಾಸ್ಟೆಲ್ ಗಳನ್ನು ಬೆಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡ ಕಲಬುರಗಿಯಲ್ಲಿ ತೆರೆಯಲಾಗುತ್ತಿದೆ. ಪ್ರತಿ ಹಾಸ್ಟೆಲ್ ನಲ್ಲಿ ಒಂದು ಸಾವಿರ ಮಕ್ಕಳ ಸಾಮರ್ಥ್ಯ ಹೊಂದಿದೆ. ಪ್ರತಿ ವರ್ಷ ಮಂಜೂರಾಗಿ ಮುಂದಿನ 5 ವರ್ಷ 5 ಸಾವಿರ ಮಕ್ಕಳು ಸೇರಿ 25 ಸಾವಿರ ಮಕ್ಕಳಿಗೆ ಅನುಕೂಲವಾಗಬೇಕು. ಮುಂದೆ ಜಿಲ್ಲಾ ಮಟ್ಟದಲ್ಲಿ ಇಂಥ ಹಾಸ್ಟೆಲ್ ಗಳು ನಿರ್ಮಾಣವಾಗಬೇಕು. ಆಗ ಶಿಕ್ಷಣಕ್ಕೆ ದೊಡ್ಡ ಬೆಂಬಲ ದೊರೆಯುತ್ತದೆ.
640 ಕೋಟಿ ರೂ ವೆಚ್ಚದಲ್ಲಿ ನೂರು ಹಾಸ್ಟೆಲ್ ನಿರ್ಮಾಣವಾಗುತ್ತಿದೆ. 500 ಕೋಟಿ ರೂಗಳ ವೆಚ್ಚದಲ್ಲಿ 5 ಮೆಗಾ ಹಾಸ್ಟೆಲ್ ಗಳನ್ನು ನಿರ್ಮಿಸಲಾಗುತ್ತಿದೆ ಎಂದರು.

ಪೌರನೌಕರರು
11141 ಪೌರಕಾರ್ಮಿಕರಿಗೆ ಖಾಯಂ ಮಾಡಿ ಆದೇಶ ಹೊರಡಿಸಿದೆ. ನಾಲ್ಕು ದಿನಗಳ ಹಿಂದೆ 13 ಸಾವಿರ ಪೌರನೌಕರರ ಖಾಯಂ ಗೊಳಿಸಿ ಪುನಃ ಆದೇಶ ನೀಡಲಾಗಿದ್ದು ಒಟ್ಟು 24 ಸಾವಿರ ಪೌರನೌಕರರನ್ನು ಖಾಯಂಗೊಳಿಸಿದೆ. ವಿಶೇಷ ಕಾನೂನು ಕ್ರಮ ವಹಿಸಿ ಅವಕಾಶ ಕಲ್ಪಿಸಿ ಅವಕಾಶ ಮಾಡಿಕೊಡಲಾಗಿದ್ದು, ಗೌರವದಿಂದ ಬದುಕುವ ಕೆಲಸ ಮಾಡಲಾಗಿದೆ. ಇದೊಂದು ಕ್ರಾಂತಿಕಾರಿ ಹೆಜ್ಜೆ ಎಂದರು.

ನೈಜ ಅಭಿವೃದ್ಧಿ
ಎಸ್.ಸಿ.ಎಸ್.ಟಿ ಸಮುದಾಯಕ್ಕೆ 31 ಸಾವಿರ ಕೋಟಿ ರೂ.ಗಳನ್ನು ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆಯಡಿ ಮೀಸಲಿಡಲಾಗಿದೆ. ಇದಲ್ಲದೆ ಪಿ.ಟಿ. ಸಿ.ಎಲ್ ಕಾನೂನು ತಿದ್ದುಪಡಿ ಮಾಡಬೇಕೆಂಬ ಬೇಡಿಕೆ ಇತ್ತು. ಅದನ್ನು ಕೂಡ ಕಾರ್ಯಗತ ಮಾಡಲು ಕ್ರಮ ವಹಿಸಲಾಗುತ್ತಿದೆ. ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಕಾನೂನಿನಲ್ಲಿ 7 ಡಿ ತೆಗೆಯಬೇಕು ಎಂಬ ಬೇಡಿಕೆಗೆ ಸಮಿತಿ ರಚಿಸಲಾಗಿದೆ. ಜಮೀನು ಕೊಳ್ಳಲು 20 ಲಕ್ಷ ರೂ.ಒದಗಿಸಲು ಆದೇಶ, 2 ಲಕ್ಷ ರೂ ಮನೆ ನಿರ್ಮಾಣಕ್ಕೆ 75 ಯೂನಿಟ್ ಉಚಿತ ವಿದ್ಯುಚ್ಛಕ್ತಿ ಸೇರಿದಂತೆ ಹಲವಾರಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಎಸ್.ಸಿ.ಎಸ್.ಟಿ ಗುತ್ತಿಗೆಗಾರರಿಗೆ 1.ಕೋಟಿ ರೂ.ಗಳವರೆಗೆ ಹೆಚ್ಚಳ ಮಾಡಿದ್ದು,ಒಳಗೊಳ್ಳುವ ಬೆಳವಣಿಗೆಗಿಂತ ಈ ಸಮುದಾಯದ ಒಟ್ಟಾರೆ ಅಭಿವೃದ್ಧಿ ಯಾದರೆ ರಾಜ್ಯದ ನೈಜ ಅಭಿವೃದ್ಧಿಯಾಗಿತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಜನಾಂಗಗಳಲ್ಲಿ ಆತ್ಮ ವಿಶ್ವಾಸ ಮೂಡಬೇಕು. ಸ್ವಾವಲಂಬಿ, ಸ್ವಾಭಿಮಾನಿ ಬದುಕು ಬದುಕಲು ಅವಕಾಶ ನೀಡಿ ಸಮಾನತೆ ಕಾಣಬಹುದು. ಮೀಸಲಾತಿ ಹೆಚ್ಚಳ ಅನುಷ್ಠಾನಕ್ಕೆ ಬರುತ್ತಿದೆ ಎಂದರು.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಚಂದ್ರ, ಮುರುಗೇಶ್ ನಿರಾಣಿ, ಕೆ.ಎಸ್.ಆರ್.ಟಿ. ಸಿ ಅಧ್ಯಕ್ಷ ಚಂದ್ರಪ್ಪ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೂಳಿಹಟ್ಟಿ ಶೇಖರ್, ಸಫಾಯಿ ಕರ್ಮಚಾರಿ ನಿಗಮದ ಅಧ್ಯಕ್ಷ ವೆಂಕಟೇಶ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್, ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button