
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡ ನಾಡಿನಲ್ಲಿ ಹುಟ್ಟಿದ್ದು ನಮ್ಮ ಪುಣ್ಯ. ಅತ್ಯಂತ ಶ್ರೀಮಂತವಾಗಿರುವ ನಾಡು ನಮ್ಮದು. ಕರ್ನಾಟಕದ ಉದ್ದಗಲಕ್ಕೂ ನದಿಗಳು ಹರಿಯುತ್ತವೆ. ಅಪಾರವಾದ ನೈಸರ್ಗಿಕ ಸಂಪತ್ತು, ಖನಿಜ ಸಂಪತ್ತನ್ನು ಹೊಂದಿದೆ. ರಾಜ-ಮಹಾರಾಜರು ಆಳ್ವಿಕೆ ನಡೆಸಿದ ನಾಡು ನಮ್ಮದು ಎಂದು ನಾಡಿನ ಇತಿಹಾಸ, ಹಿರಿಮೆ-ಗರಿಮೆಯನ್ನು ಸಿಎಂ ಬಸವರಾಜ್ ಬೊಮಮಯಿ ಕೊಂಡಾಡಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಿಎಂ ಆಗಿ ಅಧಿಕಾರಕ್ಕೆ ಬಂದು 6 ತಿಂಗಳು ಪೂರೈಕೆಯಾಗಿರುವ ಹಿನೆಲೆಯಲ್ಲಿ ಜನಕಲ್ಯಾಣ ಸಮಾರಂಭ ಕಾರ್ಯಕ್ರಮದ ನಿಮಿತ್ತ ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು ಎಂಬ ಸರ್ಕಾರದ ಸಾಧನೆ ಕುರಿತ ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದರು.
ಆರ್ಥಿಕ ಸಂಪನ್ಮೂಲದ ಕೊರತೆ ನಮ್ಮನ್ನು ಜಿಜ್ಞಾಸೆಗೆ ತಳ್ಳುತ್ತದೆ. ವ್ಯಕ್ತಿಗಾಗಲಿ, ಸರ್ಕಾರಕ್ಕಾಗಲಿ ಅರಿವು ಮುಖ್ಯ. ಅರಿವೇ ಗುರು ಎಂಬ ಮಾತಿದೆ. ಅದರಂತೆ ನಮ್ಮದು ಅರಿವಿರುವ ಸರ್ಕಾರವಾಗಿದೆ. ಜನರಿಗಾಗಿ ಜನರಿಗೋಸ್ಕರ ಜನರ ಕಲ್ಯಾಣಕ್ಕಾಗಿ ದುಡಿಯುವ ಸರ್ಕಾರ ನಮ್ಮದು. ರಾಜ್ಯದ ಜನತೆಯ ಕಷ್ಟ ನಷ್ಟ-ನೋವು ನಲಿವು ಪ್ರತಿಯೊಂದರಲ್ಲಿಯೂ ಭಾಗಿಯಾಗುವ, ಜನರಿಗೆ ಸ್ಪಂದಿಸುವ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದರು.
ನಾವು ತೆಗೆದುಕೊಲ್ಳುವ ಪ್ರತಿ ನಿರ್ಣಯ ಸಾರ್ವತ್ರಿಕ. ಅಭಿಪ್ರಾಯವಿದೆ. ಚರ್ಚೆ ಇದೆ. ವಿಷಯದ ಮಂಥನವಾಗುತ್ತೆ ಆದರೆ ಅಂತಿಮವಾಗಿ ಜನಹಿತವೇ ಮುಖ್ಯ, ಜನಹಿತವೇ ಕೇಂದ್ರ ಬಿಂದುವಾಗಿರುತ್ತದೆ. ಕಳೆದ 6 ತಿಂಗಳಲ್ಲಿ ಯಾವುದೇ ವೈಯಕ್ತಿಕ ಹಿತಾಸಕ್ತಿಗೆ ನಾವು ಅವಕಾಶ ಕೊಟ್ಟಿಲ್ಲ ಎಂಬುದನ್ನು ಅತ್ಯಂತ ಪ್ರಾಂಜಲ ಮನಸ್ಸಿನಿಂದ ಹೇಳುತ್ತೇನೆ.
ಕರ್ನಾಟಕದಲ್ಲಿ 10 ಕೃಷಿ ವಲಯಗಳಿವೆ. 365 ದಿನ ರಾಜ್ಯದಲ್ಲಿ ಕೃಷಿ ಉತ್ಪನ್ನಗಳ ಉತ್ಪಾದನೆಯಾಗುತ್ತದೆ. ಇಂತಹ ಭಾಗ್ಯ ದೇಶದ ಬೇರೆ ಯಾವ ರಾಜ್ಯದಲ್ಲಿಯೂ ಇಲ್ಲ. ಗಂಗರು, ಚೋಳರು, ಬಾದಾಮಿ ಚಾಲುಕ್ಯರು, ವಿಜಯನಗರ ಸಾಮ್ರಾಜ್ಯದ ಅರಸರು, ಮೈಸೂರು ಅರಸರು ಕರ್ನಾಟಕ್ಕೆ ಅದ್ಭುತವಾದ ಸಂಸ್ಕೃತಿ ಬಿಟ್ಟು ಹೋಗಿದ್ದಾರೆ, ಆಳುವುದು ಬೇರೆ ಆಡಳಿತ ನಡೆಸುವುದೇ ಬೇರೆ ಎಂದು ಮಹನೀಯರು ಹೇಳಿದ್ದಾರೆ ಎಂದು ಇತಿಹಾಸ ಸ್ಮರಿಸಿದರು.
ನಮ್ಮೆಲ್ಲರನ್ನು ಸುರಕ್ಷಿತರನ್ನಾಗಿ ಮಾಡುವ ರೈತ ಇಂದು ಅಭದ್ರತೆಯಲ್ಲಿ ಬದುಕುತ್ತಿದ್ದಾನೆ. ಹಳ್ಳಿಗಳಲ್ಲಿ ರೈತರನ ಸ್ಥಿತಿ ಸಂಕಷ್ಟದಲ್ಲಿದೆ. ತನ್ನ ಮಕ್ಕಳ ವಿದ್ಯಾಭ್ಯಾಸಕ್ಕೂ ಸಾಧ್ಯವಾಗದ ಸ್ಥಿತಿಯಿದೆ ಈ ಕಷ್ಟ ಅರಿತೇ ರೈತ ವಿದ್ಯಾನಿಧಿ ಯೋಜನೆ ಆರಂಭಿಸಿದೆವು. ಕಾರ್ಮಿಕ ಮಕ್ಕಳಿಗಾಗಿ ಸ್ಕಾಲರ್ ಶಿಪ್ ಆರಂಭಿಸಲಾಗಿದೆ. ವಿದವಾ ವೇತನ ಹೆಚ್ಚಳ, ಸಂಧ್ಯಾ ಸುರಕ್ಷಾ ವೇತನ ಹೆಚ್ಚಳ, ಅಂಗವಿಕಲರ ವೇತನ ಹೆಚ್ಚಳ ಸೇರಿದಂತೆ ಹಲವು ಯೋಜನೆ ಜಾರಿಗೆ ತಂದೆವು. ರಾಜ್ಯದಲ್ಲಿ ಅತಿವೃಷ್ಟಿಯಿಮ್ದ ಮನೆ, ಬೆಳೆ ಕಳೆದುಕೊಂಡವರಿಗೆ ತಕ್ಷಣ ಪರಿಹಾರ ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಾರದ ಸಾಧನೆ ವಿವರಿಸಿದರು.
ನಮ್ಮ ಗುರಿ ಒಂದೇ. ನಾಡಿನ ಕಟ್ಟಕಡೆಯ ವ್ಯಕ್ತಿಗೂ ಸಮಾಜದಲ್ಲಿ ಸ್ವಾಭಿಮಾನದ ಸ್ಥಾನ ಸಿಗಬೇಕು. ಸಮಾಜದ ಅಭಿವೃದ್ಧಿಯಲ್ಲಿ ಪಾಲು ಸಿಗಬೇಕೆನ್ನುವ ನಿಟ್ಟಿನಲ್ಲಿ ನಾವೆಲ್ಲರೂ ಒಟ್ಟಾಗಿ ಕೆಲಸವನ್ನು ಮಾಡುವ ಭರವಸೆಯನ್ನು ಕನ್ನಡದ ಮಹಾಜನತೆಗೆ ಈಗಾಗಲೇ ನೀಡಲಾಗಿದೆ. ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದರು.
ಹುಟ್ಟುಹಬ್ಬದ ಅಂಗವಾಗಿ ಗೋಪೂಜೆ ನೆರವೇರಿಸಿದ ಸಿಎಂ ಬೊಮ್ಮಾಯಿ