Kannada NewsKarnataka NewsLatest

ಪ್ರಭಾಕರ ಕೋರೆಯನ್ನು ಬುಲೆಟ್ ಮ್ಯಾನ್ ಎಂದು ಕರೆದ ಸಿಎಂ ಬೊಮ್ಮಾಯಿ

ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ 75ನೇ ಜನ್ಮದಿನ ನಿಮಿತ್ತ  ಅಮೃತ್ ಮಹೋತ್ಸವ
*ರಾಜಕೀಯ ಜೀವನ ತ್ಯಾಗ ಮಾಡಿ  ಕೆಎಲ್‌ಇ ಸೊಸೈಟಿ  ಕಟ್ಟಿದ ಪ್ರಭಾಕರ್ ಕೋರೆ*: *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಡಾ.ಪ್ರಭಾಕರ್ ಕೋರೆ ಅವರು ತಮ್ಮ ರಾಜಕೀಯ ಜೀವನ ತ್ಯಾಗ ಮಾಡಿ  ಕೆಎಲ್‌ಇ ಸೊಸೈಟಿ  ಕಟ್ಟಿದ್ಧಾರೆ ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ತಿಳಿಸಿದರು.
ಅವರು ಇಂದು ಡಾ: ಪ್ರಭಾಕರ ಕೋರೆಯವರ 75 ನೇ   ಹುಟ್ಟು ಹಬ್ಬದ ಅಂಗವಾಗಿ ಇಂದು ಹಮ್ಮಿಕೊಳ್ಳಲಾಗಿದ್ದ  ಅಮೃತ್ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೆಎಲ್‌ಇ  ಸೊಸೈಟಿ ಕಟ್ಟಲು ಡಾ.ಪ್ರಭಾಕರ್ ಕೋರೆ ಎಷ್ಟು ಶ್ರಮ ವಹಿಸಿದ್ದಾರೆ ಅಷ್ಟು ಶ್ರಮ ರಾಜಕೀಯ ರಂಗಕ್ಕೆ ಕೊಟ್ಟಿದ್ದರೆ ಬಹಳ  ದೊಡ್ಡ ರಾಜಕೀಯ ನಾಯಕ ಆಗುತ್ತಿದ್ದರು. ನಮ್ಮ ಭಾಗದ ಜನ, ಬಡವರು, ಗ್ರಾಮೀಣ ವರ್ಗದವರಿಗೆ ಶಿಕ್ಷಣ ನೀಡುವುದು ಬಹಳ ಮುಖ್ಯ ಎಂದು ಅವರು ಅರಿತಿದ್ದ ಅವರು ಆಮೂಲಾಗ್ರ ಬದಲಾವಣೆ ತರಲು ಶಿಕ್ಷಣ ಮುಖ್ಯ. ನಾನೊಬ್ಬ ನಾಯಕನಾಗುವುದಕ್ಕಿಂತ ಹಲವಾರು ನಾಯಕರನ್ನು ಬೆಳೆಸೋಣ ಎಂದು  ತಮ್ಮ ರಾಜಕೀಯ ಜೀವನ ತ್ಯಾಗ ಮಾಡಿ ಕೆಎಲ್‌ಇ ಸೊಸೈಟಿ  ಕಟ್ಟಿದ್ಧಾರೆ ಎಂದರು.
*ಕೆ.ಎಲ್.ಇ ಸಂಸ್ಥೆಯನ್ನು ಸ್ವತಂತ್ರ ವಿವಿ ಯಾಗುವ ಮಟ್ಟಕ್ಕೆ ಕಟ್ಟಿದರು*
ಒಬ್ಬ ವ್ಯಕ್ತಿಗೆ 75 ವರ್ಷ ತುಂಬಿದಾಗ ಬದುಕಿನ ಆಯಾಮಗಳನ್ನು ಸಿಂಹಾವಲೋಕನ ಮಾಡುವ ಸಮಯ. ಪ್ರಭಾಕರ್ ಕೋರೆ ಅವರು ನಡೆದು ಬಂದ ದಾರಿಯನ್ನು ಗಮನಿಸಿದಾಗ, ಸಣ್ಣ ವಯಸ್ಸಿನಲ್ಲಿ ಸೊಸೈಟಿಯ ನಿರ್ದೇಶಕ ಮಂಡಳಿ ಸದಸ್ಯರಾದರು.  ಮುಂದೆ ಕೆಎಲ್‌ಇ ಅಧ್ಯಕ್ಷರಾಗಿ ಕೆಲಸ ಮಾಡುವ ಸಂದರ್ಭದಲ್ಲಿ ಹಲವಾರು ಸವಾಲುಗಳನ್ನು ಸೊಸೈಟಿ  ಎದುರಿಸುತ್ತಿತ್ತು.   ಅವರು ಅಧ್ಯಕ್ಷರಾಗುವ ಪೂರ್ವದಲ್ಲಿ ಕೆಎಲ್‌ಇ  ಮತ್ತು ಇತರೆ ಸಂಸ್ಥೆಗಳನ್ನು ರಾಷ್ಟ್ರೀಕರಣ ಮಾಡಬೇಕೆಂಬ  ಕಾರ್ಮೋಡದ ವಾತಾವರಣವನ್ನು ನಿಭಾಯಿಸಿದರು.  ಎಲ್ಲಾ ಸವಾಲುಗಳನ್ನು ಎದುರಿಸಿ ಕೆ.ಎಲ್.ಇ ಸೊಸೈಟಿ ಪ್ರಗತಿಯನ್ನು ಮುನ್ನಡೆಸುವುದು ಸುಲಭ ಇರಲಿಲ್ಲ. ಡಾ.ಪ್ರಭಾಕರ ಕೋರೆ ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು ಸಂಸ್ಥೆಯನ್ನು ಬೆಳೆಸಿದರು. ಹಲವಾರು ಟೀಕೆಗಳು, ನ್ಯಾಯಾಲಯದ ಪ್ರಕರಣಗಳು,  ಅವಮಾನದ ಮಾತುಗಳು ಕೆಲಸ ಮಾಡಲು ಅವಕಾಶ ಇಲ್ಲದಿರುವ  ಸನ್ನಿವೇಶವನ್ನು ನೋಡಿದಾಗಲೂ ಅವುಗಳನ್ನು ದಿಟ್ಟತನದಿಂದ ಎದುರಿಸಿ, ಬುದ್ಧಿಶಕ್ತಿಯಿಂದ ಕೆ.ಎಲ್.ಇ ಸಂಸ್ಥೆಯನ್ನು ಸರ್ವಸ್ವತಂತ್ರ ವಿವಿ ಮಾಡುವ ಮಟ್ಟಕ್ಕೆ ಡಾ.ಪ್ರಭಾಕರ ಕೋರೆ ಶ್ರಮವಹಿಸಿದರು ಎಂದರು.
*ಸರ್ಕಾರ ಮಾಡುವ ಕೆಲಸ ಮಾಡಿದ್ದಾರೆ*
ಈ ಭಾಗದ ಬಹುತೇಕ ನಾಯಕರು ಕೆಎಲ್‌ಇ ಸೊಸೈಟಿ ವಿದ್ಯಾರ್ಥಿಗಳು.  ನಾವೆಂದಿಗೂ ಇದನ್ನು ಮರೆಯಲು ಸಾಧ್ಯವಿಲ್ಲ. ಸ್ವತಂತ್ರ ಪೂರ್ವ ಹಾಗೂ ನಂತರದಲ್ಲಿ  ಕೆಎಲ್‌ಇ ಸಂಸ್ಥೆ ಇಲ್ಲದಿದ್ದರೆ,  ಮುಂಬೈ ಕರ್ನಾಟಕದಲ್ಲಿ ಇಷ್ಟು ದೊಡ್ಡ ಪ್ರಮಾಣದ ಶಿಕ್ಷಣ ಸಂಸ್ಥೆ ತೆರೆಯದಿದ್ದರೆ ದಾನಿಗಳು ದಾನವನ್ನು ಕೊಡದಿದ್ದರೆ, ಬಹುತೇಕವಾಗಿ ಮುಂಬೈ ಕರ್ನಾಟಕ  ಭಾಗ ಶೈಕ್ಷಣಿಕವಾಗಿ ಬೆಳೆಯುತ್ತಿರಲಿಲ್ಲ. ಯಾವ ಕೆಲಸವನ್ನು ಸರ್ಕಾರ ಮಾಡಬೇಕಿತ್ತೋ  ಅದನ್ನು ಕೆಎಲ್‌ಇ ಸೊಸೈಟಿ   ಮಾಡಿದೆ ಎಂಧರು.
*ಶೈಕ್ಷಣಿಕ ಕ್ರಾಂತಿ*
ಕೆಎಲ್‌ಇ ಸೊಸೈಟಿ  ಬೆಳೆದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ  ಮುಚ್ಚುವ ಹಂತದಲ್ಲಿ ಇದ್ದ ಶಿಕ್ಷಣ ಸಂಸ್ಥೆಗಳು ಕೆಎಲ್‌ಇ ಸಂಸ್ಥೆ ಬಳಿ ಬಂದು ಮುನ್ನಡೆಸಿ ಎಂದು ಕೇಳುತ್ತಿದ್ದರು. ತಮ್ಮ ಸಂಸ್ಥೆಯಲ್ಲಿ ಜಾತಿ, ಮತ, ಪಂಥ ನೋಡದೇ ಎಲ್ಲರಿಗೂ ಶಿಕ್ಷಣ ನೀಡಿದ್ದಾರೆ. ಡಾ.ಪ್ರಭಾಕರ್ ಕೋರೆ ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಬೆಂಗಳೂರಿನಲ್ಲಿಯೂ ಯಾವ ಸಂಸ್ಥೆಗೂ ಕಡಿಮೆ ಇಲ್ಲದಂತೆ ಕೆಎಲ್‌ಇ ಸಂಸ್ಥೆ ಕಟ್ಟಿದ್ದಾರೆ.  ಶಿಕ್ಷಣ, ವೈದ್ಯಕೀಯ, ಕೃಷಿಯಲ್ಲಿ ಏನಾದರೂ ಹೊಸತನ ಬಂದಿದ್ದರೆ ಕೂಡಲೇ  ತಮ್ಮ ಸಂಸ್ಥೆಯಲ್ಲಿ ಅದನ್ನು ತೆರೆಯುತ್ತಾರೆ ಎಂದರು.
*ಎಲ್ಲಾ ರಂಗಗಳಲ್ಲಿಯೂ ಸಾಧನೆ*
ಎಲ್ಲ ರಂಗದಲ್ಲೂ ಪ್ರಭಾಕರ ಕೋರೆ ಅವರು ಸಾಧನೆ ಮಾಡಿದ್ದಾರೆ. ಒಬ್ಬ ವ್ಯಕ್ತಿಗೆ ರಾಜಕೀಯ ಶಕ್ತಿಯಿಂದಲೇ ಮಾತ್ರ ಬೆಳೆಯಬೇಕಾಗಿಲ್ಲ.  ಬೆಳಗಾವಿಯಲ್ಲಿ ಕನ್ನಡ ಮೇಯರ್ ಆಯ್ಕೆ ಮಾಡಬೇಕಾದ ಸಂದರ್ಭದಲ್ಲಿ 19 ಎಂಇಎಸ್ ಸದಸ್ಯರ ಮತಗಳ ಅಗತ್ಯವಿತ್ತು.  ಆಗ ಅದರ ಜವಾಬ್ದಾರಿಯನ್ನು ಹೊತ್ತ ಕೋರೆಯವರು ಆ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಎಂಇಎಸ್ ಮತಗಳನ್ನು ಪಡೆಯತ್ತಾರೆ ಎಂದರೆ ಅವರ  ಶಕ್ತಿ ಏನೆಂದು ಅಂದಾಜು ಮಾಡಬಹುದು ಎಂದರು.
*ಬುಲೆಟ್ ಮ್ಯಾನ್*
‘ದೇಹದೊಳಗೆ ಬುಲೆಟ್ ಇಟ್ಟುಕೊಂಡು ಅಷ್ಟು ಶಕ್ತಿಯಿಂದ ಓಡಾಡುತ್ತಿದ್ದರು.  ಅವರಿಗೆ ನಾನು ಬುಲೆಟ್ ಮ್ಯಾನ್ ಎಂದು ಕರೆಯುತ್ತೇನೆ. ಅವರ ಮೇಲೆ  ಗುಂಡು ಹಾರಿಸಿದ ಸಂದರ್ಭದಲ್ಲಿ ಭೇಟಿಯಾಗಿದ್ದೆ. ಆಗ ಬಸಣ್ಣ ನಾನು ಬದುಕಬಾರದಿತ್ತು. ಈಗ ಬದುಕಿ ಬಂದಿದೀನಿ ಇದು ನನ್ನ ಪುನರ್ಜನ್ಮ. ನಾನೇದಾರೂ ಬದುಕಿದ್ರೆ ಕೆಎಲ್‌ಇ ಸೊಸೈಟಿಗಾಗಿ ಸಮಾಜಕ್ಕಾಗಿ ಎಂದಿದ್ದರು’ ಎಂದು ಸ್ಮರಿಸಿದ ಮುಖ್ಯಮಂತ್ರಿಗಳು ಅದೇ ರೀತಿ ಡಾ.ಪ್ರಭಾಕರ್ ಕೋರೆ ಬದುಕುತ್ತಿದ್ದಾರೆ ಎಂದರು.

ಕೋರೆ ವ್ಯಕ್ತಿಯಲ್ಲ, ಜನಾಂದೋಲನ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಮಾತನಾಡಿ, ಪ್ರಭಾಕರ ಕೋರೆ ಕೇವಲ ವ್ಯಕ್ತಿಯಲ್ಲ, ಕೇವಲ ರಾಜಕಾರಣಿಯಲ್ಲ, ಕೇವಲ ಉದ್ಯಮಿಯಲ್ಲ, ಅವರೊಬ್ಬ ಬಹುದೊಡ್ಡ ಜನಾಂದೋಲನ. ಪ್ರಭಾಕರ ಕೋರೆ ಅವರ ಹೆಸರಿನಲ್ಲಿ ದೇವರೇ ಸದಾಚಾರ ಆದೋಲನ ನಡೆಸುತ್ತಿದ್ದಾನೆ ಎಂದರು.

ಬಸವಣ್ಣ ಆರಂಭಿಸಿದ ಸಮಾಜ ಸುಧಾರಣೆಯನ್ನು ಪ್ರಭಾಕರ ಕೋರೆ ಮುಂದುವರಿಸಿದ್ದಾರೆ. ಬಸವಣ್ಣ, ರಾಣಿ ಚನ್ನಮ್ಮರ ಪವಿತ್ರ ಭೂಮಿಯಲ್ಲಿ ಡಾ.ಪ್ರಭಾಕರ ಕೋರೆ ಅವರ ಅಮೃತಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ನನ್ನ ಸುಧೈವ ಎಂದರು.

 

ಬಡವರ ಪಾಲಿನ ದೇವರು:

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಕೆಲವು ಜನರನ್ನು ನೋಡಿದ ತಕ್ಷಣ ನಮ್ಮಲ್ಲಿ ಜೀವನೋತ್ಸಾಹ ಉಕ್ಕುತ್ತದೆ. ಕೆಎಲ್ಇ ಸಂಸ್ಥೆಯನ್ನು ಏಷ್ಯಾ ಖಂಡದಲ್ಲೇ ಮುಂಚೂಣಿಯಾಗಿ ಬೆಳೆಸಿದ್ದು ಕೋರೆಯವರ ಅಮಿತೋತ್ಸಾಹ ಕಾರಣ. ಅವರು ಬಡವರ ಪಾಲಿಗೆ ದೇವರೆನಿಸಿದ್ದಾರೆ. ಸಂಸ್ಥೆಯ ಇತಿಹಾಸದಲ್ಲಿ ಕೋರೆಯವರ ಅಧಿಕಾರಾವಧಿ ಸುವರ್ಣಾಕ್ಷರಗಳಿಂದ ಬರೆಯಬೇಕು.  ಕೆಎಲ್ಇ ದೇವಾಲಯಕ್ಕೆ ಚಿನ್ನದ ಕಳಶ ಇಟ್ಟವರು ಅವರು. ಹೊಸ ಇತಿಹಾಸವನ್ನು ಬರೆದಿದ್ದಾರೆ. ಸರಕಾರಗಳಿಂದ ಮಾಡಲಾಗದ ಕೆಲಸವನ್ನು ಅವರು ಮಾಡಿದ್ದಾರೆ ಎಂದರು.

ಬೆಳಗಾವಿಯಲ್ಲಿ ಮೊಟ್ಟ ಮೊದಲ ಬಾರಿಗೆ ವಿಧಾನಸಭೆಯ ಅಧಿವೇಶನ ನಡೆಸಲು ತಕ್ಷಣ ಮುಂದೆ ಬಂದರು. ಇಡೀ ಕೆಎಲ್ಇ ಸಂಸ್ಥೆಯನ್ನು ಅಧಿವೇಶನದ ಕೆಲಸದಲ್ಲಿ ತೊಡಗಿಸಿದರು. ಅವರಿಗೆ ಪಕ್ಷಾತೀತ, ಜಾತ್ಯತೀತ, ಧರ್ಮಾತೀತ ಅಭಿಮಾನಿಗಳಿದ್ದಾರೆ. ಇವರನ್ನು ಬಿಟ್ಟು ಉತ್ತರ ಕರ್ನಾಟಕದಲ್ಲಿ ಏನನ್ನಾದರೂ ಸಾಧಿಸುವುದು ಅಸಾಧ್ಯದ ಕೆಲಸ ಎಂದು ಯಡಿಯೂರಪ್ಪ ಹೇಳಿದರು.

ನಿಜವಾದ ಸತ್ಪುರುಷರು:

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹಲ್ಲಾದ ಜೋಶಿ ಅವರು ಅನನ್ಯ ಸಾಧಕ ಪ್ರಭಾಕರ ಕೋರೆ ಪುಸ್ತಕ ಬಿಡುಗಡೆ ಮಾಡಿ, ಸ್ವಾತಾಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲೇ ಪ್ರಭಾಕರ ಕೋರೆ ಅವರ ಅಮೃತ ಮಹೋತ್ಸವ ನಡೆಯುತ್ತಿರುವುದು ಯೋಗಾ ಯೋಗ. ಮಾತಿನಲ್ಲಿ, ಕೃತಿಯಲ್ಲಿ, ಮನಸ್ಸಿನಲ್ಲಿ ಏಕರೂಪವಾಗಿರುವವರೇ ನಿಜವಾದ ಸತ್ಪುರುಷರು. ಹಾಗಾಗಿಯೇ ಕೋರೆಯವರ ಎಲ್ಲ ಕೆಲಸಗಳು ಸಿದ್ದಿಯಾಗುತ್ತವೆ. ಕೋರೆಯವರು ಎಲ್ಲ ವರ್ಗದ ಜನರನ್ನು ಬೆಳೆಸಿದ್ದಾರೆ. ದೇಶವಿದೇಶಗಳಲ್ಲಿ ಸಂಸ್ಥೆಯ ಶಾಲೆಗಳನ್ನು ಕಟ್ಟಿದ್ದಾರೆ ಎಂದರು.

ಕೆಎಲ್ಇ ಕಾಲೇಜುಗಳಿಲ್ಲದಿದ್ದರೆ ನಾವೆಲ್ಲ ಪದವೀಧರರಾಗುತ್ತಿದ್ದವೋ ಇಲ್ಲವೋ ಎನ್ನುವ ಸಂಶಯವಿದೆ. ಸಹಸ್ರಾರು ಜನರಿಗೆ ವಿದ್ಯಾಧಾನ ಮತ್ತು ಅನ್ನಧಾನ ಮಾಡಿದ ಕೀರ್ತಿ ಕೋರೆ ಅವರಿಗೆ ಸಲ್ಲುತ್ತದೆ. ಅವರು ಗುಣಮಟ್ಟದಲ್ಲಿ ಎಂದೂ ರಾಜಿ ಮಾಡಿಕೊಳ್ಳಲಿಲ್ಲ. ಅವರು ನಿಗರ್ವಿ ಮನುಷ್ಯ. ಎಲ್ಲರ ಜೊತೆ ಹೊಂದಿಕೊಳ್ಳುವ ಸ್ವಭಾವ ಅವರದ್ದು ಎಂದು ಪ್ರಹ್ಲಾದ ಜೋಶಿ ಹೇಳಿದರು.

ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಕೋರೆ ಒಬ್ಬ ಸರಳ, ಸಜ್ಜನ ವ್ಯಕ್ತಿ. ಕಳೆದ 40 ವರ್ಷದಲ್ಲಿ ಕೋರೆಯವರು ಕೆಎಲ್ಇ ಸಂಸ್ಥೆ ಮೂಲಕ ಹೊಸ ಕ್ರಾಂತಿ ಮಾಡಿದ್ದಾರೆ. ಸಂಸ್ಥೆ ಇನ್ನಷ್ಟು ಬೆಳೆಯಲಿ. ನೂರಾರು ವರ್ಷ ಅವರು ಬಾಳಲಿ ಎಂದರು.

ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ, ಡಾ.ಪ್ರಭಾಕರ ಕೋರೆ ಅವರು ಕೆಎಲ್ಇ ಸಂಸ್ಥೆಯ ಮೂಲಕ ಸರ್ವ ಕ್ಷೇತ್ರಗಳಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಮೋದಿಯವರ ನವಭಾರತ ಸ್ವಪ್ನವನ್ನು ಸಾಕಾರ ಮಾಡುತ್ತಿದ್ದಾರೆ ಎಂದರು.

ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಉತ್ತರ ಕರ್ನಾಟಕ ಭಾಗದಲ್ಲಿ ಎಲ್ಲ ಕಡೆ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ವಿಧಾನ ಮಂಡಳದ ಅಧಿವೇಶನ, ವಿಶ್ವಕನ್ನಡ ಸಮ್ಮೇಳನಗಳನ್ನು ಬೆಳಗಾವಿಯಲ್ಲಿ ನಡೆಸಿದವರು ಅವರು. ನೂರು ವರ್ಷದ ಕಾರ್ಯಕ್ರಮವನ್ನು ಸಹ ಇದೇ ರೀತಿ ಮಾಡೋಣ ಎಂದರು.

ಡಾ.ಪ್ರಭಾಕರ ಕೋರೆ ಅವರನ್ನು ಗ್ರಂಥ (ಪುಸ್ತಕಗಳಿಂದ)  ತುಲಾಭಾರ ಮಾಡಲಾಯಿತು. ಈ ಪುಸ್ತಕಗಳನ್ನು ಶಾಲೆಗಳಿಗೆ ವಿತರಿಸಲಾಗುವುದು ಎಂದು ಪ್ರಕಟಿಸಲಾಯಿತು. ಡಾ.ಪ್ರಭಾಕರ ಕೋರೆ ಮತ್ತು ಪತ್ನಿ ಆಶಾ ಕೋರೆ ಅವರನ್ನು ಗಣ್ಯರು ಸನ್ಮಾನಿಸಿದರು.

 

 ಶಾಸಕರ ಭವನ ಕಟ್ಟಿ, ಪರಿಪೂರ್ಣ ಅಧಿವೇಶನ ನಡೆಸಿ – ಕೋರೆ

ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಡಾ.ಪ್ರಭಾಕರ ಕೋರೆ, ಇಡೀ ಜೀವನದಲ್ಲಿ ಈ ದಿನ ಅತ್ಯಂತ ಮಹತ್ವದ್ದಾಗಿದೆ. ವಯಸ್ಸು 75 ಆದರೂ ನಾನು ಮನಸ್ಸಿನಲ್ಲಿ 57 ವರ್ಷದವನು. ಎಲ್ಲರ ಹಾರೈಕೆಯಿಂದ ನಾನು ಅಲ್ಪಸ್ವಲ್ಪ ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ಶಿಕ್ಷಣಕ್ಕಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ಇಷ್ಟು ಸಮಯವನ್ನು ನಾನು ರಾಜಕೀಯಕ್ಕೆ ನೀಡಿದ್ದರೆ ಮಂತ್ರಿಯಾದರೂ ಆಗುತ್ತಿದ್ದೆ. 1984ರಲ್ಲಿ ಚೇರಮನ್ ಆಗಿ 6 ತಿಂಗಳಲ್ಲಿ 300 ಹಾಸಿಗೆಗಳ ಆಸ್ಪತ್ರೆ ಆರಂಭಿಸಿದೆ. ಇಂದು 2400 ಹಾಸಿಗೆಗಳ ಆಸ್ಪತ್ರೆಯಾಗಿದೆ. ಲಕ್ಷಾವದಿ ಜನರು ಆಸ್ಪತ್ರೆಯಿಂದ ಪ್ರಯೋಜನ ಪಡೆದರು. ಇಂದು ಪ್ರತಿ ಅಂಗಾಂಗ ಬದಲಾವಣೆ ಮಾಡುವಷ್ಟು ದೊಡ್ಡ ಮಟ್ಟದಲ್ಲಿ ಬೆಳೆದಿದೆ ಎಂದು ಹೆಮ್ಮೆಯಿಂದ ಹೇಳಿದರು.

ಆರೋಗ್ಯ ಸೇವೆ ಇಲ್ಲದ ಭಾಗದಲ್ಲಿ ವಿಶ್ವದ ಯಾವುದೇ ಭಾಗಕ್ಕೆ ಕಡಿಮೆ ಇಲ್ಲದಂತೆ ಆರೋಗ್ಯ ಸೇವೆ ಬೆಳೆಸಲಾಗಿದೆ. ಇದು ಜನರ ಆಶಿರ್ವಾದ, ಪಕ್ಷಾತೀತವಾಗಿ ಮುಖಂಡರ ಆಶಿರ್ವಾದದಿಂದ ಆಗಿದೆ. ಉತ್ತಮ ಕೆಲಸ ಮಾಡುವವರಿಗೆ ಎಲ್ಲರ ಸಹಕಾರ ಸಿಗುತ್ತದೆ ಎನ್ನುವುದಕ್ಕೆ ನಾನೇ ಸಾಕ್ಷಿ ಎಂದ ಅವರು,  ಕೆಎಲ್ಇ ಒಂದು ಕುಟುಂಬವಾಗಿ ಬೆಳೆದಿದೆ ಎಂದರು.

ನನಗೆ ಗುಂಡು ಹೊಡೆದಾಗ ನಾನು ಸಾಯುತ್ತೇನೆಂದು ತಿಳಿದು ಆಡಳಿತ ಮಂಡಳಿಯವರು ಆಸ್ಪತ್ರೆಯನ್ನು ನನ್ನ ಹೆಸರಿಗೆ ಮಾಡಿದ್ದಾರೆ. ಸಾಧ್ಯವಿದ್ದಷ್ಟು ಜನರ, ರೈತರ ಸೇವೆಯನ್ನು ಮುಂದುವರಿಸುತ್ತೇನೆ ಎಂದು ಹೇಳಿದರು.

ಬೆಳಗಾವಿಯಲ್ಲಿ ಶಾಸಕರ ಭವನ ಕಟ್ಟಿ ಪರಿಪೂರ್ಣ ವಿಧಾನಮಂಡಳದ ಅಧಿವೇಶನ ನಡೆಸಿ ಎಂದು ಪ್ರಭಾಕರ ಕೋರೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.

ಗೋವಾದಲ್ಲಿ ಕನ್ನಡ ಭವನ ಕಟ್ಟಲು ಜಾಗ ಕೊಡುವುದಾಗಿ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರಿಂದ ಮಾತು ಪಡೆದಿದ್ದೇನೆ ಎಂದು ಕೋರೆ ಹೇಳಿದರು.

ರೈತರ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ನೀಡಲು ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುವುದು ಎಂದು ಘೋಷಿಸಿದರು.

 

ಭಾಗಿಯಾದ ಗಣ್ಯರು:

ಮಹಾರಾಷ್ಟ್ರ ಸಚಿವ ರಾಧಾಕೃಷ್ಣ ವಿಖೆ ಪಾಟೀಲ,  ಸಚಿವರಾದ ಮುರುಗೇಶ ನಿರಾಣಿ, ಭೈರತಿ ಬಸವರಾಜ,  ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ, ಬಿ.ಸಿ.ನಾಗೇಶ, ಕೋಟಾ ಶ್ರೀನಿವಾಸ ಪೂಜಾರಿ, ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಮಂಗಲಾ ಅಂಗಡಿ, ಶಿವಕುಮಾರ ಉದಾಸಿ, ಸಿದ್ದೇಶ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ, ಗೋವಾ ಮಾಜಿ ಮುಖ್ಯಮಂತ್ರಿ ಚರ್ಚಿಲ್ ಅಲ್ಮಾಡೋ, ಕೊಲ್ಲಾಪುರ ಸಂಸದ ಜಯಸಿದ್ದೇಶ್ವರ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ವಿಶ್ವನಾಥ ಪಾಟೀಲ, ಮಹಾಂತೇಶ ದೊಡ್ಡಗೌಡರ್, ಶ್ರೀಮಂತ ಪಾಟೀಲ, ಇಚಲಕರಂಜಿ ಶಾಸಕ ಪ್ರಕಾಶ ಅವಾಡೆ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಮೊದಲಾದವರು ಭಾಗವಹಿಸಿದ್ದರು.

ಕೆಎಲ್ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ಸ್ವಾಗತಿಸಿದರು. ಕೆಎಲ್ಇ ನಿರ್ದೇಶಕ ಮಹಾಂತೇಶ ಕವಟಗಿಮಠ ಪ್ರಾಸ್ತಾವಿಕ ಮಾತನಾಡಿ, ಕೆಎಲ್ಇ ಸಂಸ್ಥೆ ಮತ್ತು ಡಾ.ಪ್ರಭಾಕರ ಕೋರೆ ಅವರ ಜೀವನ ಸಾಧನೆ ಮತ್ತು ಯೋಜನೆಯನ್ನು ವಿವರಿಸಿದರು. ಕೆಎಲ್ಇ ನಿರ್ದೇಶಕ ಅಮಿತ್ ಕೋರೆ ಕೆಂದ್ರ ಸಚಿವ ಧರ್ಮೇಂದ್ರ ಪ್ರಧಾನ ಅವರನ್ನು ಸನ್ಮಾನಿಸಿದರು. ಕೆಎಲ್ಇ ಸಂಸ್ಥೆಯ ನಿರ್ಧೇಶಕರು, ಅಭಿಮಾನಿಗಳು ವಿವಿಧ ಗಣ್ಯರನ್ನು ಸನ್ಮಾನಿಸಿದರು.

https://pragati.taskdun.com/politics/dr-prabhakar-kore-amritamahotsava/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button