*ಕರ್ನಲ್ ಸೋಫಿಯಾ ಮಾವನ ಮನೆ ಮೇಲೆ ದಾಳಿ ವದಂತಿ: ಸುಳ್ಳು ಸುದ್ದಿಯನ್ನು ನಂಬಬೇಡಿ: ಎಸ್ ಪಿ ಭೀಮಾಶಂಕರ್ ಗುಳೇದ್ ಮನವಿ*

ಪ್ರಗತಿವಾಹಿನಿ ಸುದ್ದಿ: ಕರ್ನಲ್ ಸೋಫಿಯಾ ಖುರೇಷಿ ಪತಿ ಕರ್ನಲ್ ತಾಜುದ್ದೀನ್ ತಂದೆಯ ನಿವಾಸದ ಮೇಲೆ ಆರ್.ಎಸ್.ಎಸ್ ದಾಳಿ ನಡೆಸಿದೆ ಎಂಬ ವದಂತಿ ಸುಳ್ಳು ಸುದ್ದಿ ಎಂದು ಬೆಳಗಾವಿ ಎಸ್ ಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಎಸ್ ಪಿ ಭೀಮಾಶಂಕರ್ ಗುಳೇದ್, ಟ್ವಿಟರ್ ಖಾತೆಯಲ್ಲಿ ಅನಿಸ್ ಉದ್ದೀನ್ ಎಂಬಾತ ಕರ್ನಲ್ ಸೋಫಿಯಾ ಖುರೇಶಿ ಮಾವ ಗೌಸಾಸಾಬ್ ಬಾಗೇವಾಡಿ ಅವರ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದ ಮನೆ ಮೇಲೆ ದಾಳಿ ನಡೆದಿದೆ ಎಂದು ಯಾವುದೋ ಹಳೇ ಫೋಟೋ ಪೋಸ್ಟ್ ಮಾಡಿದ್ದ. ವಿಷಯ ತಿಳಿದು ಪೊಲೀಸರು ಕೊಣ್ಣೂರು ಗ್ರಾಮಕ್ಕೆ ತೆರಳಿ ಗೌಸಾಸಾಬ್ ಅವರ ಮನೆ ಪರಿಶೀಲಿಸಿದ್ದು, ಯಾವುದೇ ದಾಳಿ ನಡೆದಿಲ್ಲ ಎಂದು ಖಚಿತ ಪಡಿಸಿದರು.
ಮುಂಜಾಗೃತಾ ಕ್ರಮವಾಗಿ ಗೋಕಾಕ್ ಪೊಲೀಸರು ಗೌಸಾಸಾಬ್ ಮನೆಗೆ ಭದ್ರತೆ ನಿಯೋಜಿಸಿದ್ದಾರೆ. ಪೊಲೀಸರು ಪರಿಶೀಲಿಸುತ್ತಿದಂತೆ ಕಿಡಿಗೇಡಿ ತನ್ನ ಪೋಸ್ಟ್ ಡಿಲಿಟ್ ಮಾಡಿದ್ದಾನೆ. ತಾಜುದ್ದೀನ್ ತಂದೆ ಮನೆ ಮೇಲೆ ದಾಳಿ ಎಂಬುದು ಸುಳ್ಳು ಸುದ್ದಿಯಾಗಿದ್ದು, ಯಾವುದೇ ದಾಳಿ ನಡೆದಿಲ್ಲ. ಯಾರೂ ಸುಳ್ಳು ಸುದ್ದಿಯನ್ನು ನಂಬಬೆಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.