Kannada NewsKarnataka NewsLatest

ಬೆಳಗಾವಿಯ ಗ್ರಾಮ ಗ್ರಾಮಗಳಲ್ಲಿ ಕಾಂಗ್ರೆಸ್ಸೋತ್ಸವ

ಎಲ್ಲೆಡೆ ಹರ್ಷೋದ್ಘಾರ, ಪೂಜೆ, ಪುನಸ್ಕಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗುರುವಾರ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರಾದ್ಯಂತ ಹಬ್ಬದ ಸಂಭ್ರಮ. ಎಲ್ಲಿ ನೋಡಿದರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಉತ್ಹಾಹ, ಜಯ ಘೋಷಗಳು ಮುಗಿಲುಮುಟ್ಟಿದ್ದವು. ಇಡೀ ಕ್ಷೇತ್ರ ಹಬ್ಬದ ರೀತಿಯಲ್ಲಿ  ಕಾಂಗ್ರೆಸ್ ಉತ್ಸವವನ್ನು ಆಚರಿಸಿ ಸಂಭ್ರಮಿಸಿತು.
ಭಾರತದ ರಾಜಕೀಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ವಿನೂತನ ರೀತಿಯಲ್ಲಿ ಪ್ರತಿಜ್ಞಾ ಕಾರ್ಯಕ್ರಮವಾಗಿ ಬೆಂಗಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮದ ನೇರ ಪ್ರಸಾರಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದಾದ್ಯಂತ ವ್ಯವಸ್ಥೆ ಮಾಡಲಾಗಿತ್ತು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕನ್ನಡ -ಮರಾಠಿಗರ ಸಂಗಮದಂತಿರುವ ಕ್ಷೇತ್ರದ ಕರಡಿಗುದ್ದಿ, ಮಾರಿಹಾಳ, ಸುಳೇಭಾವಿ, ಮೊದಗಾ, ಬಾಳೇಕುಂದ್ರಿ ಬಿಕೆ, ಬಾಳೇಕುಂದ್ರಿ ಕೆ ಎಚ್, ಮಾವಿನಕಟ್ಟಿ, ಸಾಂಬ್ರಾ,​​ ತಾರಿಹಾಳ, ಚಂದನಹೊಸೂರ, ಶಿಂಧೋಳ್ಳಿ, ಮುತಗಾ, ಹಿರೇ ಬಾಗೇವಾಡಿ, ಬಡಾಲ ಅಂಕಲಗಿ, ಮುತ್ನಾಳ, ಅರಳಿಕಟ್ಟಿ, ಬೆಂಡಿಗೇರಿ, ಇನಾಂ ಬಡಸ್, ಕುಕಡೊಳ್ಳಿ, ಸಂತಿ ಬಸ್ತವಾಡ, ಮಾರ್ಕಂಡೇಯ ನಗರ, ಹಲಗಾ ಬಸ್ತವಾಡ, ಕೊಂಡಸಕೊಪ್ಪ, ಕೆಕೆ ಕೊಪ್ಪ, ನಂದಿಹಳ್ಳಿ, ರಾಜಹಂಸಗಡ್, ಬೆಳವಟ್ಟಿ, ಬಿಜಗರಣಿ, ಬೆಕ್ಕಿನಕೇರಿ, ಅತಿವಾಡ, ಉಚಗಾಂವ, ತುರಮರಿ, ಕುದ್ರೆಮನಿ, ಕಂಗ್ರಾಳಿ ಕೆ ಎಚ್, ಬೆಳಗುಂದಿ, ಸುಳಗಾ, ಹಂಗರಗಾ, ತುಮ್ಮರಗುದ್ದಿ  ಮುಂತಾದ ಸ್ಥಳಗಳಲ್ಲಿ ಜನರು ದೊಡ್ಡ ದೊಡ್ಡ ಪರದೆಗಳ ಮೂಲಕ ಕಾರ್ಯಕ್ರಮ ವೀಕ್ಷಿಸಿದರು. 
ಈ ವೇಳೆ ಜನರು ವಿಜೃಂಭಣೆಯಿಂದ,  ಹುಮ್ಮಸ್ಸು, ಹರ್ಷೊದ್ಘಾರಗಳನ್ನು ಹಾಕಿದರು. ಕಾಂಗ್ರೆಸ್ ಗೆ ಜಯವಾಗಲಿ, ಡಿ.ಕೆ.ಶಿವಕುಮಾರ ಅವರಿಗೆ ಜಯವಾಗಲಿ, ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಜಯವಾಗಲಿ ಎನ್ನುವ ಘೋಷಣೆಗಳನ್ನು ಕೂಗಿದರು.
ಪ್ರತಿಜ್ಞಾ ಕಾರ್ಯಕ್ರಮದ ನೇರ ಪ್ರಸಾರ ಆರಂಭವಾಗುತಿದ್ದಂತೆಯೇ ಕ್ಷೇತ್ರದ ಜನ ತಂಡೋಪ ತಂಡವಾಗಿ ಆಗಮಿಸಿ ಕಾರ್ಯಕ್ರಮವನ್ನು ವೀಕ್ಷಿಸಿದರು.  ಪ್ರತಿಜ್ಞಾ ಕಾರ್ಯಕ್ರಮದ ನೇರ ಪ್ರಸಾರದ ಮುನ್ನ ಬೆಳಗಾವಿ ಗ್ರಾಮೀಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳ ಪ್ರಮುಖ ದೇವಸ್ಥಾನಗಳಲ್ಲಿ ಪೂಜೆ ನೆರವೇರಿಸಲಾಯಿತು. ಪ್ರತಿ ಗ್ರಾಮದಲ್ಲಿ ತಮ್ಮದೇ ಕಾರ್ಯಕ್ರಮ, ತಮ್ಮೂರಲ್ಲೇ ಕಾರ್ಯಕ್ರಮ ನಡೆಯುತ್ತಿದೆ ಎನ್ನುವ ರೀತಿಯಲ್ಲಿ ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು. ಮುಖಂಡರು ಭಾಷಣಗಳನ್ನು ಮಾಡಿದರು. ಪ್ರತಿಜ್ಞಾ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಲಿ, ಕಾಂಗ್ರೆಸ್ ಪಕ್ಷವು ಮತ್ತೊಮ್ಮೆ ರಾಜ್ಯದಲ್ಲಿ ವಿಜ್ರಂಭಿಸಲಿ ಎಂದು  ಅಭಿಷೇಕವನ್ನು ಮಾಡಿಸಲಾಯಿತು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಬೆಂಗಳೂರಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ ಅವರ ಸಹೋದರ ಚನ್ನರಾಜ ಹಟ್ಟಿಹೊಳಿ, ಪುತ್ರ ಮೃಣಾಲ ಹೆಬ್ಬಾಳಕರ್, ಕಾಂಗ್ರೆಸ್ ಮುಖಂಡರಾದ ಎಪಿಎಂಸಿ ಅಧ್ಯಕ್ಷ ಯುವರಾಜ ಕದಂ ಸೇರಿದಂತೆ ನೂರಾರು ಮುಖಂಡರು, ಕಾರ್ಯಕರ್ತರು ವಿವಿಧೆಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪ್ರತಿಜ್ಞಾ ಕಾರ್ಯಕ್ರಮವು ಜನರ ಹಾಗೂ ಕಾರ್ಯಕರ್ತರ ಆಶೀರ್ವಾದ  ಹಾರೈಕೆಗಳ ಮೂಲಕ ಯಶಸ್ವಿಗೊಂಡು ಕಾಂಗ್ರೆಸ್ ಪಕ್ಷ ತಳಮಟ್ಟದಿಂದ ಸಂಪೂರ್ಣವಾಗಿ ಸದೃಢವಾಗಿ ಮಾರ್ಪಟ್ಟಿದೆ, ಪ್ರತಿಜ್ಞಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ನನ್ನ ಎಲ್ಲ ಪ್ರೀತಿಯ ಜನತೆಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಹೃದಯಪೂರ್ವಕ ಧನ್ಯವಾದಗಳು.
 – ಲಕ್ಷ್ಮೀ ಹೆಬ್ಬಾಳಕರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button