*”ಹಳ್ಳಿ ಹೈದ ಪ್ಯಾಟೆಗೆ ಬಂದ” ಶೋ ಸ್ಪರ್ಧಿ ರಸ್ತೆ ಅಪಘಾತದಲ್ಲಿ ಸಾವು*

ಪ್ರಗತಿವಾಹಿನಿ ಸುದ್ದಿ: ನಿಂತಿದ್ದ ಬಸ್ಸಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಿಯಾಲಿಟಿ ಶೋ ನಟ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ನಡೆದ ಅಪಘಾತದಲ್ಲಿ ನಟ ಬಾವತೀಸ್ ಮೃತಪಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಬಳಿಯ ಕೋಳಿಕೆರೆ ಸಮೀಪ ನಿಂತಿದ್ದ ಬಸ್ಸಿಗೆ ಅತೀ ವೇಗದಲ್ಲಿ ಬಂದ ಟಿವಿಎಸ್ ಮೊಪೆಡೆ ದ್ವಿಚಕ್ರ ವಾಹನ ಸವಾರ ಡಿಕ್ಕಿ ಹೊಡೆದಿದ್ದಾನೆ. ಅಪಘಾತದ ರಭಸಕ್ಕೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಬಾವತೀಸ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬೈಕ್ ಬಸ್ಸಿನ ಬಲಬದಿಯ ಲೈಟಿಗೆ ಗುದ್ದಿದ ಪರಿಣಾಮ ಅಲ್ಲಿ ಬೆಂಕಿ ಹೊತ್ತಿಕೊಂಡಿತು. ಬಸ್ಸಿನ ಚಾಲಕ ರವಿ ಚಿಗರಿ ಹಾಗೂ ನಿರ್ವಾಹಕ ಅಬ್ದುಲ್ ನಜೀರ್ ಅಮೀನಸಾಬ್ ಗೌಂಡಿ ಸೇರಿ ಆ ಬೆಂಕಿ ಆರಿಸಿದರು. ಆದರೆ, ಬೈಕಿಗೆ ಹೊತ್ತಿದ ಬೆಂಕಿ ಆರಿಸಲು ಅವರಿಂದ ಸಾಧ್ಯವಾಗಲಿಲ್ಲ. ಅಪಘಾತ ಸಂಭವಿಸಿದ ಕೂಡಲೇ ಖಾಸಗಿ ಅಂಬುಲೆನ್ಸ್ ನ ಮೂಲಕ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಆಸ್ಪತ್ರೆಗೆ ಹೋಗುವ ಮುಂಚೆಯೆ ಆಸ್ಪತ್ರೆಯವರು ಭಾವತೀಸ್ ಘಾಡಿ ಅವರ ಸಾವನ್ನು ದೃಢೀಕರಿಸಿದರು. ಪಿಎಸ್ಐ ಸಿದ್ದಪ್ಪ ಗುಡಿ ಅವರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿದ್ದಾರೆ.
ಹಳ್ಳಿ ಹೈದ ಪ್ಯಾಟೆಗೆ ಬಂದ ಸೀಸನ್ -3 ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಹಳಿಯಾಳ ತಾಲೂಕಿನ ವಾಡಗರಡೊಳ್ಳಿ ನಿವಾಸಿ ಬಾವತೀಸ್ ಘಾಡಿ ಮೂಲತಃ ಸಿದ್ದಿ ಜನಾಂಗದ ಈ ಪ್ರತಿಭೆ ಖಾಸಗಿ ವಾಹಿನಿಯ ರಿಯಾಲಿಟಿ ಶೋ ಮೂಲಕ ಪ್ರಸಿದ್ದಿ ಪಡೆದಿದ್ದ.
ಮೂರು ವರ್ಷಗಳ ಹಿಂದೆ ಈತನ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಎರಡು ವರ್ಷಗಳ ಹಿಂದೆಯಷ್ಟೇ ಇವರ ಮಗ ಬಾವಿಗೆ ಬಿದ್ದು ಸಾವನ್ನಪ್ಪಿದ್ದ.

