Latest

ಕೋವಿಡ್ ತೊಲಗಿಸಲು ಪಣ ತೋಡೋಣ: ಸಿಎಂ ಬೊಮ್ಮಾಯಿ ಕರೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 2022ನ್ನು ಆರೋಗ್ಯಭರಿತ ಹಾಗೂ ಕೋವಿಡ್ ಮುಕ್ತ ವರ್ಷವನ್ನಾಗಿ ಮಾಡಲು ಸಂಕಲ್ಪ ತೋಡೋಣ. ಕೋವಿಡ್ ವಿರುದ್ದ ಒಟ್ಟಾಗಿ ಸಮರವನ್ನು ಸಾರಿ ತೊಲಗಿಸಲು ಪಣ ತೋಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು.

ಬೆಂಗಳೂರಿನ ಭೈರವೇಶ್ವರನಗರದ ಬಿಬಿಎಂಪಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಸ್ನಾತಕೋತ್ತರ ಕಾಲೇಜಿನಲ್ಲಿ 15-18 ವರ್ಷದೊಳಗಿನ ಶಾಲಾ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಕರ್ನಾಟಕದಲ್ಲಿ ಅತ್ಯಂತ ಯಶಸ್ವಿಯಾಗಿ ಕೋವಿಡ್ ನ್ನು ನಿಯಂತ್ರಣ ಮಾಡಲಾಯಿತು. ಔಷಧಿ, ಬೆಡ್, ಆಕ್ಸಿಜನ್, ಸಮಸ್ಯೆಗಳನ್ನು ನಿಭಾಯಿಸಿ, ಕರ್ನಾಟಕವನ್ನು ಸುರಕ್ಷಿತ ರಾಜ್ಯ ವನ್ನಾಗಿಸುಲು ಅವರು ತೆಗೆದುಕೊಂಡ ಕ್ರಮಗಳು ಕಾರಣ ಎಂದರು.

ನಮ್ಮ ಸರ್ಕಾರ ಕೋವಿಡ್ ಸುರಕ್ಷತೆಗಾಗಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಹೀಗಾಗಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕೋವಿಡ್ ಕಡಿಮೆ ಇದೆ. ಸೂಕ್ತ ಕ್ರಮಗಳನ್ನು ತೆಗೆದುಕೊಂಡ ಕಾರಣ ಇದನ್ನು ಸಾಧಿಸಲಾಗಿದೆ. ವೈಜ್ಞಾನಿಕ ಚಿಂತನೆ ಮಾಡಬೇಕು. ಸರಿಯಾದ ಕಾರ್ಯಸೂತ್ರ ರೂಪಿಸಿ,ಜನರನ್ನು ಇದರಲ್ಲಿ ತೊಡಗಿಸಿಕೊಳ್ಳಬೇಕು. ಆರೋಗ್ಯ ಮೂಲ ಸೌಕರ್ಯಗಳನ್ನು ಸಿದ್ಧಗೊಳಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡುತ್ತಿದೆ. ಇದನ್ನು ಸಾಧಿಸಲು ನೇರವಾದ ಎಲ್ಲಾ ಕೋವಿಡ್ ಸೇನಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ ಮುಖ್ಯ ಮಂತ್ರಿಗಳು ಆರೋಗ್ಯ ಇಲಾಖೆ ಸಿಬ್ಬಂದಿ, ವೈದ್ಯರು, ಇಲಾಖಾ ಮುಖ್ಯಸ್ಥರ ಪರಿಶ್ರಮದಿಂದ ಈ ಕೆಲಸವಾಗಿದೆ. ನಗರ ಪ್ರದೇಶದಲ್ಲಿ ನಮ್ಮ ನಗರಾಭಿವೃದ್ಧಿ ಸಚಿವರು ಉತ್ತಮವಾಗಿ ನಿರ್ವಹಣೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ಕೋವಿಡ್ ಹರಡದಿರಲು ಗಂಭೀರ ಯೋಜನೆ
ಇದರಿಂದಾಗಿ ಆರೋಗ್ಯ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರಲಾಗಿದ್ದು, ತಳಮಟ್ಟದಲ್ಲಿ ಆರೋಗ್ಯ ಮೂಲಸೌಕರ್ಯ ಹೆಚ್ಚಳವಾಗಿದೆ. ಮೂರನೇ ಅಲೆ ಎಂದು ಬಿಂಬಿತವಾಗಿರುವ ಒಮಿಕ್ರಾನ್ ನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡಲು ಗಡಿ ಭದ್ರತೆ, ಆರ್.ಟಿ.ಪಿ.ಸಿ.ಆರ್ ಕಡ್ಡಾಯ, ಎರಡು ಡೋಸ್ ಲಸಿಕೆಯಾಗಿರುವ ಬಗ್ಗೆ ಪರಿಶೀಲನೆ , ಸಂಪರ್ಕ ಪತ್ತೆ ಮಾಡುವ ಮೂಲಕ ಕ್ರಮ ಕೈಗೊಂಡಿದೆ. ಒಂದು ವಾರದಲ್ಲಿ ಪ್ರಕರಣಗಳು ಉಲ್ಬಣಗೊಂಡಿದ್ದು, ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಎರಡು ಅಲೆಗಳನ್ನು ನಿಭಾಯಿಸಿರುವ ಅನುಭವದ ಹಿನ್ನೆಲೆಯಲ್ಲಿ ಇದನ್ನು ವಿಭಿನ್ನವಾಗಿ ನಿಭಾಯಿಸಬೇಕಿದೆ. ಬೆಳೆಯುತ್ತಿರುವ ಆರ್ಥಿಕತೆಯನ್ನು ಗಮನಿಸಿ, ಕೋವಿಡ್ ಹರಡದಂತೆ ಮುನ್ನಡೆಯಬೇಕಿದೆ. ಈ ನಿಟ್ಟಿನಲ್ಲಿ ಗಂಭೀರ ಯೋಜನೆಗಳನ್ನು ರೂಪಿಸಲಾಗುವುದು. ಇದಕ್ಕೆ ಜನರ ಸಹಕಾರ ಅಗತ್ಯ. ಕರ್ನಾಟಕದ ಮಹಾಜನತೆ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಮನವಿ ಮಾಡಿದರು.

ಲಸಿಕೆ ಅಭಿಯಾನಕ್ಕೆ ಸಹಕರಿಸಿ
15- 18 ವರ್ಷದ ಮಕ್ಕಳ ಆರೋಗ್ಯ ಬಹಳ ಮುಖ್ಯ. ರಾಜ್ಯದ್ಯಂತ ಇಂದು 4.41 ಲಕ್ಷ ಮಕ್ಕಳಿಗೆ ಹಾಗೂ ಬೆಂಗಳೂರಿನಲ್ಲಿ 30 ಸಾವಿರ ಲಸಿಕೆಗಳನ್ನು ನೀಡಲಾಗುತ್ತಿದೆ. ಎರಡನೇ ಡೋಸ್ ನ್ನು 28 ದಿನಗಳ ನಂತರ ನೀಡಲಾಗುವುದು.ಜನವರಿ 10 ರ ನಂತರ 60 ವರ್ಷ ಮೇಲ್ಪಟ್ಟವರಿಗೆ ಮತ್ತು ಕೋ- ಮಾರ್ಬಿಡಿಟಿ ಇರುವವರಿಗೆ ಲಸಿಕೆ ನೀಡಲಾಗುವುದು. ಕೋವಿಡ್ ವಿರುದ್ಧ ಸುರಕ್ಷಾ ಚಕ್ರವನ್ನು ಕನ್ನಡಿಗರಿಗೆ, ವಿಶೇಷವಾಗಿ ಮಕ್ಕಳಿಗೆ ನೀಡಬೇಕು. ಅದಕ್ಕೆ ಪೋಷಕರು,ಮಕ್ಕಳು, ಶಿಕ್ಷಕರೆಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಪ್ರಧಾನಮಂತ್ರಿಗಳ ಕ್ರಮ ವಿಶ್ವಕ್ಕೆ ಮಾದರಿ

ಕರೋನಾ ಬಗ್ಗೆ ಏನೂ ತಿಳಿಯದಿದ್ದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅದನ್ನು ಮುಂಚೂಣಿಯಲ್ಲಿ ನಿಂತು ಅದು ಒಡ್ಡಿದ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದರು.

ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ, ಇದರಿಂದ ಪರಿಣಾಮ ಹೊಂದಿದ ಆರ್ಥಿಕ ಹಿಂಜರಿತವನ್ನು ಅವರು ಕಾಲಕಾಲಕ್ಕೆ ತೆಗೆದುಕೊಂಡ ತೀರ್ಮಾನಗಳಿಂದ ವಿಶ್ವಕ್ಕೇ ಮಾದರಿಯಾಗಿವೆ. ಆತ್ಮನಿರ್ಭರ್ ಭಾರತ್, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ, ವಿಶೇಷವಾಗಿ ಆರೋಗ್ಯ ಕ್ಷೇತ್ರಕ್ಕೆ ಹಣಕಾಸಿನ ನೆರವು, ರಾಜ್ಯಗಳಿಗೆ ಕಾಲಕಾಲಕ್ಕೆ ಕೊಟ್ಟ ನಿರ್ದೇಶನಗಳು, ಮಾರ್ಗದರ್ಶನಗಳು, ಆರೋಗ್ಯ ಪರಿಣಿತರನ್ನು ಕಳಿಸಿ ಎಲ್ಲರಿಗೂ ಮನವರಿಕೆ, ಜನರನ್ನು ಇದರಲ್ಲಿ ತೊಡಗಿಸಿಸುವುದು ಹಾಗೂ ಲಸಿಕೆ ಉತ್ಪಾದನೆಗೆ ಪ್ರೋತ್ಸಾಹ, 140 ಕೋಟಿ ಜನರಿಗೆ ಲಸಿಕೆ ಹಾಕುವುದನ್ನು ಹಂತ ಹಂತವಾಗಿ ನಡೆಸಿ ಶೇ 97 ರಷ್ಟು ಜನರಿಗೆ ಲಸಿಕೆ ಪೂರೈಕೆ ಮಾಡಿರುವುದು ಒಂದು ದಾಖಲೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಡಾ.ಕೆ.ಸುಧಾಕರ್, ವಿ.ಸೋಮಣ್ಣ, ಬಿ.ಎ. ಬಸವರಾಜ, ಅಧಿಕಾರಿಗಳು ಉಪಸ್ಥಿತರಿದ್ದರು.
ಒಮಿಕ್ರಾನ್: ದೀರ್ಘಾವಧಿ ಕ್ರಮಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ: ಸಿಎಂ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button