*ಶ್ರೀಗಳು, ಜನ, ಕಾರ್ಯಕರ್ತರು ಬಯಸಿದ್ದು ತಪ್ಪು ಎಂದು ಹೇಳಲು ಆಗುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಕಾರ್ಯಕರ್ತರು, ಶ್ರೀಗಳು, ಜನರು ಬಯಸುತ್ತಾರೆ. ಯಾರು ಏನೇ ಬಯಸಿದರು ಅದನ್ನು ತಪ್ಪು ಎಂದು ಹೇಳಲು ಆಗುವುದಿಲ್ಲ. ನಾವೆಲ್ಲ ಪಕ್ಷ ಕಟ್ಟಿರುವವರು, ಪಕ್ಷದ ಶಿಸ್ತಿನ ಸಿಪಾಯಿಗಳು. ನಾನಾಗಲಿ ಸಿದ್ದರಾಮಯ್ಯ ಅವರಾಗಲಿ ಯಾರೇ ಆಗಿರಲಿ ನಾವೆಲ್ಲರೂ ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳುತ್ತೇವೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ನಿವಾಸದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಭಾನುವಾರ ಸಂಜೆ ಪ್ರತಿಕ್ರಿಯೆ ನೀಡಿದರು.
“ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಇದರ ಬಗ್ಗೆ ಮಾತನಾಡಲು ಹೋಗಬೇಡಿ ಎಂದು ಹೇಳಿದ್ದಾರೆ. ಮಾತನಾಡಿದರೆ ತಪ್ಪಾಗುತ್ತದೆ. ಪಕ್ಷ ಏನು ಹೇಳುತ್ತದೆಯೋ ಅದನ್ನು ನಾವೆಲ್ಲರೂ ಕೇಳುತ್ತೇವೆ” ಎಂದರು.
ಬಾಯಿ ಚಪಲಕ್ಕೆ ಮಾತನಾಡುತ್ತಾರೆ
“ಸಿದ್ದರಾಮಯ್ಯ ಅವರು ಅನೇಕ ಬಾರಿ ಹೇಳಿದ್ದಾರೆ. ಪದೇ, ಪದೇ ಮಾಧ್ಯಮಗಳು, ವಿರೋಧ ಪಕ್ಷದವರು, ನಮ್ಮ ಪಕ್ಷದಲ್ಲಿನ ಕೆಲವರು ಚಪಲಕ್ಕೆ ಮಾತನಾಡುತ್ತಾರೆ. ಈಗ ಅದರ ಅವಶ್ಯಕತೆಯಿಲ್ಲ” ಎಂದರು.
“ಜನರು ನಮ್ಮನ್ನು ನಂಬಿ ಮತ ನೀಡಿದ್ದಾರೆ. ಅವರ ಆಶೋತ್ತರಗಳನ್ನು ನಾವು ಒಂದೊಂದಾಗಿ ಈಡೇರಿಸುತ್ತಿದ್ದೇವೆ. ಕೊಟ್ಟ ಮಾತನ್ನು ಈಡೇರಿಸುತ್ತಿದ್ದೇವೆ. ಇನ್ನೂ ಅನೇಕ ಯೋಜನೆಗಳಿವೆ ಅದಕ್ಕೂ ನಾವು ತಯಾರು ಮಾಡಿಕೊಳ್ಳುತ್ತಿದ್ದೇವೆ. ದೇವರ, ವರುಣನ ಕೃಪೆಯಿಂದ ಉತ್ತಮ ಮಳೆ ಬೀಳುತ್ತಿದೆ” ಎಂದರು.
“ಒಡಂಬಡಿಕೆಯಂತೆ ನೀವು ಸಿಎಂ ಆಗಬೇಕು ಎನ್ನುವ ರಂಭಾಪುರಿ ಶ್ರೀಗಳ ಮಾತಿನ ಬಗ್ಗೆ ಕೇಳಿದಾಗ, “ಬಹಿರಂಗವಾಗಿ ನಾನು ಏಕೆ ಮಾತನಾಡಲಿ? ನಾನುಂಟು, ಪಕ್ಷವುಂಟು. ನಾವೆಲ್ಲರೂ ಒಟ್ಟಿಗೆ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದೇವೆ” ಎಂದು ತಿಳಿಸಿದರು.