*ಗೋಕಾಕ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ: ಅಗತ್ಯ ಸೌಕರ್ಯ ಕಲ್ಪಿಸಲು ಡಿಸಿ ಮೊಹಮ್ಮದ ರೋಷನ್ ಸೂಚನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗೋಕಾಕ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವಕ್ಕೆ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಜಾತ್ರೆಯಲ್ಲಿ ಲಕ್ಷಾಂತರ ಭಕ್ತಾದಿಗಳು ಪಾಲ್ಗೊಳ್ಳುತ್ತಾರೆ ಹಾಗಾಗಿ ಜಾತ್ರೆಯು ಸುಗಮವಾಗಿ ಜರುಗಲು ಸಂಬಂಧಿಸಿದ ಎಲ್ಲ ಇಲಾಖೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ (ಜೂ.23) ನಡೆದ ಗೋಕಾಕ ಶ್ರೀ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವ ನಿಮಿತ್ಯ ಮುಂಜಾಗೃತಾ ಕ್ರಮ ಕೈಗೊಳ್ಳುವ ಕುರಿತು ಜರುಗಿದ ಪೂರ್ವಭಾವಿ ಸಭೆಯ ಅಧಕ್ಷತೆ ವಹಿಸಿ ಅವರು ಮಾತನಾಡಿದರು.
ಗೋಕಾಕ ಶ್ರೀ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರಿಲಿದ್ದು ಈ ಸಂದರ್ಭದಲ್ಲಿ ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಸಾರ್ವಜನಿಕರಿಗೆ ಯಾವುದೇ ಅನಾನೂಕುಲಗಳಾಗದಂತೆ ನಿಗಾವಹಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವದರಿಂದ ಸಾರ್ವಜನಿಕರ ಪ್ರಯಾಣಕ್ಕೆ ಅಗತ್ಯದ ಸಾರಿಗೆ ವ್ಯವಸ್ಥೆ ಮಾಡುವದರ ಜೊತೆಗೆ ನಗರದಲ್ಲಿ ಸಂಚಾರ ದಟ್ಟಣೆ ಆಗದಂತೆ ಅಗತ್ಯದ ಕ್ರಮ ವಹಿಸಬೇಕು. ಅಗತ್ಯ ಬಿದ್ದಲ್ಲಿ ಶಾಲಾ, ಕಾಲೇಜುಗಳ ವಾಹನಗಳನ್ನು ಬಳಸಿಕೊಳ್ಳುವಂತೆ ತಿಳಿಸಿದರು.
ರಥೋತ್ಸವದ ದಿನ ಲಕ್ಷಾಂತರ ಜನ ಸೇರುವದರಿಂದ ಕಾಲ್ತುಳಿತ ಪ್ರಕರಣಗಳು ಸಂಭವಿಸದಂತೆ ಎಲ್ಲಾ ರೀತಿಯ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ದೇವಿ ಮೆರವಣಿಗೆ, ದೀಪಾಲಂಕಾರ, ಪಲ್ಲಕ್ಕಿ ಉತ್ಸವ, ಹೊನ್ನಾಟ, ಪ್ರಸಾದ ವ್ಯವಸ್ಥೆ, ಜೋಡೆತ್ತು ರೇಸ್, ಜೋಡು ಕುದರೆ ರೇಸ್ ಹಾಗೂ ಸೈಕಲ್ ರೇಸ್ ಇತರೆ ಕಾರ್ಯಕ್ರಮಗಳ ವೇಳಾಪಟ್ಟಿ ಹಾಗೂ ಭಾಗವಹಿಸಬಹುದಾದ ಭಕ್ತಾಧಿಗಳ ಸಂಖ್ಯೆಯನ್ನು ಮುಂಚಿತವಾಗಿಯೇ ತಿಳಿಸಬೇಕು.
ಕುಡಿಯುವ ನೀರಿನ ವ್ಯವಸ್ಥೆ, ಬಸ್ ವ್ಯವಸ್ಥೆ ಮುಂತಾದವುಗಳ ಕುರಿತು ಪ್ರದರ್ಶನ ಫಲಕಗಳನ್ನು ಅಳವಡಿಸಿ ಈ ಕುರಿತು ಸುದ್ದಿ ಮಾಧ್ಯಮಗಳ ಮೂಲಕ ಬಿತ್ತರಿಸುವದರಿಂದ ಜನರಿಗೆ ಮುಂಚಿತವಾಗಿ ತಿಳಿಸಬೇಕು. ವಿಐಪಿ ದರ್ಶನ ವ್ಯವಸ್ಥೆಯನ್ನು ಶಿಷ್ಟಾಚಾರದಂತೆ ಸುವ್ಯವಸ್ಥಿತವಾಗಿ ಕೈಗೊಳ್ಳಲು ಅಧಿಕಾರಿಗಳೊಬ್ಬರನ್ನು ನಿಯೋಜಿಸಬೇಕು ದೇವಸ್ಥಾನದ ಕಾರ್ಯದರ್ಶಿಗಳು ಸೂಚಿಸುವ ಮನವಿಗಳನ್ನು ಮಾತ್ರ ವಿಐಪಿ ದರ್ಶನಕ್ಕೆ ಅನುಮತಿ ನೀಡಬೇಕೆಂದು ತಿಳಿಸಿದರು.
ಜಾತ್ರೆಯ ಸರ್ವಸಿದ್ಧತೆಗಳನ್ನು ಜೂನ್ 28 ರೊಳಗಾಗಿ ಮಾಡಿಕೊಳ್ಳಬೇಕು. ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ತ್ಯಾಜ್ಯ ವಿಲೇವಾರಿಗೆ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಸಂಖ್ಯೆಯ ಟ್ರಾಕ್ಟರ್ಗಳ ಮುಖಾಂತರ ನಿಗದಿತ ಸ್ಥಳಗಳಲ್ಲಿ ಡಂಪಿಂಗ್ ಮಾಡುವಂತೆ ತಿಳಿಸಿದರು.
ಸಾವಿರಾರು ಜನ ನದಿಯಲ್ಲಿ ಸ್ನಾನ ಮಾಡುವ ಸಂದರ್ಭದಲ್ಲಿ ಅಗತ್ಯದ ಮುನ್ನೆಚ್ಚರಿಕಾ ಕ್ರಮಗಳ ಫಲಕಗಳನ್ನು ಅಳವಡಿಸಬೇಕು. ನದಿಯಲ್ಲಿ ಹಗ್ಗ/ ಬ್ಯಾರಿಕೇಡ್ ವ್ಯವಸ್ಥೆ ಮಾಡಿಕೊಳ್ಳುವಂತೆ, ಹೆಚ್ಚಿನ ಸಂಖ್ಯೆಯಲ್ಲಿ ಲೈಫ್ ಜಾಕೆಟ್ಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ಗೋಕಾಕ ನರಸಭೆ ಆಯುಕ್ತರಿಗೆ ಜಿಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಅವರು ಮಾತನಾಡಿ ನದಿ ಭಾಗದ ಸ್ಥಳದಲ್ಲಿ ಎಸ್.ಡಿ.ಆರ್.ಎಫ್ ಹಾಗೂ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಲು ಕ್ರಮ ವಹಿಸಬೇಕು. ಅನೈರ್ಮಲ್ಯದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮೊಬೈಲ್ ಟಾಯ್ಸಟ್ ವ್ಯವಸ್ಥೆ ಕಲ್ಪಿಸಬೇಕು. ರಸ್ತೆ ಸಂಚಾರ, ರಥೋತ್ಸವ ಇನ್ನಿತರೆ ಕಾರ್ಯಕ್ರಮಗಳಿಗೆ ತೊಂದರೆಯಾಗದಂತೆ ಮರಗಳ ಕೊಂಬೆಗಳ ಸವರಿಕೆಯನ್ನು ಮಾಡುವಂತೆ ತಿಳಿಸಿದರು.
ದೇವಸ್ಥಾನದ ಆವರಣ ಹಾಗೂ ಇನ್ನಿತರ ಸಾರ್ವಜನಿಕರು ಸೇರುವ ಜಾಗೆಗಳಲ್ಲಿ ನಿರಂತರವಾಗಿ ನಿಂತ ನೀರನ್ನು ಸ್ವಚ್ಛಗೊಳಿಸಬೇಕು. ನಿಗದಿತ ಸ್ಥಳಗಳಲ್ಲಿ ಭಂಡಾರ ಮಾರಾಟ ಮಾಡುವ ಮಳಿಗೆಗಳನ್ನು ತೆರೆಯಬೇಕು. ರಾಸಾಯನಿಕ ಮುಕ್ತ ಭಂಡಾರಗಳನ್ನು ಮಾತ್ರ ಮಾರಾಟ ಮಾಡಲು ಅನುಮತಿ ನೀಡುವಂತೆ ತಿಳಿಸಿದರು.
ಕನಿಷ್ಠ ನಾಲ್ಕು ಅಂಬ್ಯೂಲೆನ್ಸ್ ವ್ಯವಸ್ಥೆಗಳನ್ನು ಶ್ರೀ ಲಕ್ಷ್ಮೀ ದೇವಿ ದೇವಸ್ಥಾನ, ಶ್ರೀ ದ್ಯಾಮವ್ವ ದೇವಿ ದೇವಸ್ಥಾನ, ಕೋಳಿಕಾಟಾ ಸರ್ಕಲ್ (ವಾಲ್ಮೀಕಿ ಸರ್ಕಲ್) ಹಾಗೂ ಇನ್ನಿತರ ಸಾರ್ವಜನಿಕರು ಸೇರುವ ಸ್ಥಳಗಳ ಹತ್ತಿರ ಇರುವಂತೆ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಡಾ. ಭೀಮಾಶಂಕರ ಗುಳೇದ ನಿರ್ದೇಶನ ನೀಡಿದರು.
ಆಸ್ಪತ್ರೆಗಳಿಗೆ ತೆರಳುವ ರಸ್ತೆಗಳಲ್ಲಿ ಟ್ರಾಫಿಕ್ ನಿಯಂತ್ರಿಸಲು ಸೂಚಿಸಲಾಗಿದೆ. ಜಾತ್ರೆಯ ಸಮಯದಲ್ಲಿ 10 ಕಿಮೀ ವ್ಯಾಪ್ತಿಯೊಳಗೆ ಮದ್ಯ ಮಾರಾಟ ನಿಷೇಧ ಮಾಡಲಾಗುವುದು. ರಸ್ತೆ ಬದಿ ಇರುವ ವಿಧ್ಯುತ್ ಲೈನ್, ದೀಪಾಲಂಕಾರಗಳನ್ನು ನಿರಂತರವಾಗಿ ಪರಿವೀಕ್ಷಸಬೇಕು ಹಾಗೂ ಜಾತ್ರೆಯ ಸಮಯದಲ್ಲಿ ನಿರಂತರ/ತಡೆರಹಿತ ವಿದ್ಯುತ್ ಸಂಪರ್ಕ ಇರುವಂತೆ ನೋಡಿಕೊಳ್ಳುವದರ ಮೂಲಕ ಯಾವುದೇ ವಿದ್ಯುತ್ ಅವಘಡಗಳು ಸಂಭವಿಸದಂತೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲು ಎಸ್.ಪಿ ಡಾ. ಭೀಮಾಶಂಕರ ಗುಳೇದ ಸೂಚಿಸಿದರು.
ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕಿರಪರ, ಗೋಕಾಕ್ ತಹಶೀಲ್ದಾರ್ ಮೋಹನ ಭಸ್ಮ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಈಶ್ವರ ಗಡಾದ, ತಾಲೂಕು ಕಾರ್ಯನಿರ್ವಾಹಕಾಧಿಕಾರಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು, ಹೆಸ್ಕಾಂ ಸಹಾಯಕ ಕಾರ್ಯಕಾರಿ ಅಭಿಯಂತರರು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.