
ಪ್ರಗತಿವಾಹಿನಿ ಸುದ್ದಿ; ರಾಯಚೂರು: ಮಳೆ ಅವಾಂತರದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಬೆಂಗಾವಲು ಹೆಲಿಕಾಪ್ಟರ್ ಕೆಸರು ಗದ್ದೆಯಲ್ಲಿ ಸಿಲುಕಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ನಡೆದಿದೆ
ಸಿಂಧನೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದರು. ಬಿಜೆಪಿ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿ, ಭರ್ಜರಿ ಚುನಾವಣಾ ಪ್ರಚಾರ ಮಾಡಿ, ಕಲಬುರ್ಗಿಯತ್ತ ಪ್ರಧಾನಿ ಮೋದಿ ಸಾಗಿದ್ದಾರೆ. ಇದೇ ವೇಳೆ ಸಿಂಧನೂರಿನಲ್ಲಿ ಭಾರಿ ಮಳೆಯಾಗಿದ್ದು, ಪ್ರಧಾನಿ ಮೋದಿಯವರ ಬೆಂಗಾವಲು ಹೆಲಿಕಾಪ್ಟರ್ ನಿಲ್ಲಿಸಿದ್ದ ಹೊಸಹಳ್ಳಿ ಹೆಲಿಪ್ಯಾಡ್ ಸಂಪೂರ್ಣ ಜಲಾವೃತಗೊಂಡಿದೆ. ಈ ಹೆಲಿಕಾಪ್ಟರ್ ನಲ್ಲಿ ಪ್ರಧಾನಿ ಭದ್ರತೆಗೆ ಆಗಮಿಸಿದ್ದ ಬೆಂಗಾವಲು ಪಡೆ ಸಿಬ್ಬಂದಿಗಳು ಇದ್ದರು. ಹೆಲಿಕಾಪ್ಟರ್ ಕೆಸರಿನಲ್ಲಿ ಸಿಲುಕಿಕೊಂಡಿದೆ.
ಜೆಸಿಬಿ ಮೂಲಕ ಹೆಲಿಕಾಪ್ಟರ್ ಮೇಲೆತ್ತಲು ಪ್ರಯತ್ನಿಸಲಾಗಿದ್ದು, 100ಕ್ಕೂ ಹೆಚ್ಚು ಜನರು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಕೆಸರು ಗದ್ದೆಯಲ್ಲಿ ಎಡಭಾಗಕ್ಕೆ ಹೆಲಿಕಾಪ್ಟರ್ ವಾಲಿದ್ದು, ಹೆಲಿಕಾಪ್ಟರ್ ಮೇಲೆಕೆತ್ತಲು ಹರಸಾಹಸ ನಡೆದಿದೆ.