Latest

ತನ್ನ ಹತ್ಯೆಗೆ ತಾನೇ ಸುಪಾರಿ ಕೊಟ್ಟು ಹೆಣವಾದ ಉದ್ಯಮಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕುಟುಂಬಕ್ಕೆ ಇನ್ಯೂರೆನ್ಸ್ ಹಣ ತಲುಪಿಸಬೇಕು ಎಂಬ ಉದ್ದೇಶದಿಂದ ಉದ್ಯಮಿಯೊಬ್ಬ ನಾಲ್ವರಿಗೆ ಸುಪಾರಿ ಕೊಟ್ಟು, ತನ್ನನ್ನೇ ಹತ್ಯೆ ಮಾಡಿಸಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಗೌರವ್ (37) ಮೃತ ಉದ್ಯಮಿ. ಜೂನ್ 10 ರಂದು ಈ ಕೊಲೆ ನಡೆದಿದ್ದು, ತನಿಖೆ ವೇಳೆ ಮೃತ ಗೌರವ್ ಸುಪಾರಿಕೊಟ್ಟು ತನ್ನನ್ನೇ ಕೊಲೆ ಮಾಡಿಸಿಕೊಂಡಿರುವ ಸಂಗತಿ ಬೆಳಕಿಗೆ ಬಂದಿದೆ. ಇದೀಗ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ.

ಗೌರವ್ ದಿನಸಿ ವ್ಯಾಪಾರಿ­ಯಾಗಿದ್ದು ವ್ಯಾಪಾರಕ್ಕೆ ತೆರಳಿದವರು ಜೂನ್ 10ರಂದು ಮನೆಗೆ ಹಿಂದಿರುಗಿಲ್ಲ. ಇದರಿಂದ ಗಾಬರಿಗೊಂಡ ಪತ್ನಿ ಶಾನು ಬನ್ಸಾಲ್ ಪೊಲೀಸರಿಗೆ ದೂರು ನೀಡಿದ್ದರು.

ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರಿಗೆ ದೆಹಲಿಯ ಹೊರಭಾಗದಲ್ಲಿನ ರಾನ್‍ಹೌಲಾ ಪ್ರದೇಶದಲ್ಲಿ ಗೌರವ್ ಶವ ಸಿಕ್ಕಿತ್ತು. ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೌರವ್ ಮೃತದೇಹ ಪತ್ತೆಯಾಗಿದ್ದು, ಗೌರವ್‍ನ ಎರಡು ಕೈಗಳನ್ನು ಕಟ್ಟಲಾಗಿತ್ತು. ನಂತರ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದರು.

ಪೊಲೀಸರು ಗೌರವ್ ಮೊಬೈಲ್ ಫೋನ್ ವಿವರಗಳನ್ನು ಪರಿಶೀಲನೆ ಮಾಡಿದ್ದಾರೆ. ಜೂನ್ 9 ರಂದು ಗೌರವ್ ಬಸ್ಸಿನ ಮೂಲಕ ರಾನ್‍ಹೌಲಾ ಪ್ರದೇಶಕ್ಕೆ ಹೋಗಿದ್ದಾರೆ. ಅಲ್ಲಿ ತನ್ನದೇ ಫೋಟೋವನ್ನು ಆರೋಪಿಗಳಿಗೆ ಕಳುಹಿಸಿದ್ದಾರೆ. ಆರೋಪಿಗಳಾದ ಮನೋಜ್ ಕುಮಾರ್ ಯಾದವ್, ಸೂರಜ್, ಮತ್ತು ಸುಮಿತ್ ಕುಮಾರ್ ಸೇರಿದಂತೆ ಅಪ್ರಾಪ್ತ ಹುಡುಗನೊಬ್ಬ ಗೌರವ್ ಇದ್ದ ಸ್ಥಳಕ್ಕೆ ಬಂದಿದ್ದು, ಗೌರವ್ ಕೈಗಳನ್ನು ಕಟ್ಟಿ ಮರಕ್ಕೆ ನೇಣು ಬಿಗಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಬ್ರವರಿಯಲ್ಲಿ 6 ಲಕ್ಷ ರೂ.ಗಳನ್ನು ಗೌರವ್ ವೈಯಕ್ತಿಕ ಸಾಲವಾಗಿ ತೆಗೆದುಕೊಂಡಿದ್ದಾರೆ. ಅಲ್ಲದೇ ಕ್ರೆಡಿಟ್ ಕಾರ್ಡ್ ವಂಚನೆಯಿಂದ 3.5 ಲಕ್ಷ ರೂಪಾಯಿಯನ್ನು ಕಳೆದುಕೊಂಡಿದ್ದರು. ಇದರಿಂದ ಗೌರವ್ ಖಿನ್ನತೆ ಒಳಗಾಗಿದ್ದು, ಚಿಕಿತ್ಸೆ ಕೂಡ ಪಡೆಯುತ್ತಿದ್ದರು. ಹೀಗಾಗಿ ತಾನು ಮೃತ­ಪಟ್ಟರೆ ವಿಮೆ ಹಣ ಪತ್ನಿಗೆ ಸೇರುತ್ತದೆ. ಆಕೆಯಾದರೂ ಬದುಕಬಹುದು ಎಂಬ ಆರಣಕ್ಕೆ ತನ್ನ ಹತ್ಯೆಗೆ ತಾನೇ ಸುಪಾರಿ ನೀಡಿದ್ದಾರೆ ಎಂದು ಪೊಲೀಸರು ತನಿಖೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button