Kannada NewsKarnataka NewsLatest

*ತನಿಖಾ ಸಂಸ್ಥೆಗಳು ಅಪರಾಧಿಗಳಿಗಿಂತ ಒಂದು ಹೆಜ್ಜೆ ಮುಂದಿರಬೇಕು: ಮುಖ್ಯಮಂತ್ರಿ ಸಿದ್ದರಾಮಯ್ಯ*

ಸೈಬರ್ ಅಪರಾಧ ತೆಡೆಗೆ ಅತ್ಯಾಧುನಿಕ ವಿಧಿವಿಜ್ಞಾನ ಸಾಧನಗಳು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತನಿಖಾ ಸಂಸ್ಥೆಗಳು ಅಪರಾಧಿಗಳಿಗಿಂತ ಒಂದು ಹೆಜ್ಜೆ ಮುಂದಿರಬೇಕು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ದಕ್ಷಿಣ ಭಾರತ ರಾಜ್ಯಗಳ ಪೋಲೀಸ್ ಮಹಾನಿದೇರ್ಶಕರ ಸಮನ್ವಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಹಗಲಿರುಳು ಎನ್ನದೇ ಕಾರ್ಯನಿರ್ವಹಿಸುವ ಪೋಲಿಸ್ ಪಡೆಗಳ ಕಾರ್ಯವನ್ನು ಶ್ಲಾಘಿಸಿದ ಮುಖ್ಯಮಂತ್ರಿಗಳು, ಸೈಬರ್ ಅಪರಾಧಗಳನ್ನು ತಡೆಗಟ್ಟುವಲ್ಲಿ ನಿಟ್ಟಿನಲ್ಲಿ ಪೋಲಿಸರು ಕ್ರಿಯಾತ್ಮಕವಾಗಿರಬೇಕು. ಕಳೆದ ಹಲವು ವರ್ಷಗಳಲ್ಲಿ ಸೈಬರ್ ದಾಳಿಗಳು ವಿವಿಧ ರೀತಿಯಲ್ಲಿ ಹೆಚ್ಚಾಗುತ್ತಿದ್ದು, ಆನ್ ಲೈನ್ ಮೂಲಕ ಮೋಸ ಮಾಡುವುದು ಅಧಿಕವಾಗಿದೆ. ಇದು ವ್ಯಕ್ತಿಗತವಾಗಿ ಹಾನಿಯಲ್ಲದೇ ರಾಷ್ಟ್ರೀಯ ಭದ್ರತೆಗೂ ಅಪಾಯಕಾರಿಯಾಗಿದೆ ಎಂದರು.

ಅತ್ಯಾಧುನಿಕ ವಿಧಿವಿಜ್ಞಾನ ಸಾಧನಗಳು ಸೈಬರ್ ಅಪರಾಧಿಗಳನ್ನು ಮಟ್ಟಹಾಕಲು ಸಹಾಯಕವಾಗಿವೆ. 2003 ರಲ್ಲಿ ಸೈಬರ್ ಅಪರಾಧಗಳ ಪೋಲೀಸ್ ಠಾಣೆಯನ್ನು ತೆರೆದ ಮೊದಲ ರಾಜ್ಯ ಕರ್ನಾಟಕ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಸೈಬರ್ ಅಪರಾಧ ತಡೆಗಾಗಿ ಸಿಇಎನ್ ಪೋಲಿಸ್ ಠಾಣೆಗಳನ್ನು ರಾಜ್ಯ ಹೊಂದಿದೆ. ಇಂಥ ಪ್ರಕರಣಗಳನ್ನು ನಿರ್ವಹಿಸಲೆಂದೇ ಸೈಬರ್ ಠಾಣೆಯ ಪೋಲಿಸ್ ಅಧಿಕಾರಿಗಳು ವಿಶೇಷ ತರಬೇತಿ ಪಡೆದಿದ್ದಾರೆ ಎಂದರು.

ಆಂತರಿಕ ಭದ್ರತೆ

ನಮ್ಮ ದೇಶದ ಬುನಾದಿ ಹಾಗೂ ಸಮಾಜದ ಸಂರಚನೆಗೆ ಸವಾಲಾಗಿರುವ ಆಂತರಿಕ ಭದ್ರತಾ ವಿಷಯಗಳು ತಮ್ಮ ಸಂಪೂರ್ಣ ಗಮನ ಮತ್ತು ಸಹಯೋಗ ಅಗತ್ಯ ಎಂದರು. ಕಾನೂನು ಸುವ್ಯವಸ್ಥೆ ಕಾಪಾಡುವುದು, ಸಾರ್ವಜನಿಕ ವ್ಯವಸ್ಥೆ ಹಾಗೂ ತಮ್ಮ ಪ್ರದೇಶದ ಪ್ರತಿಯೊಬ್ಬರ ಸುರಕ್ಷತೆ ಹಾಗೂ ಭದ್ರತೆಯ ಜವಾಬ್ದಾರಿಯನ್ನು ಹೊತ್ತಿರುವ ಪೋಲೀಸರಿಂದ ಅಚಲ ಬದ್ಧತೆ, ಸಮರ್ಪಣೆ ಹಾಗೂ ಕರ್ತವ್ಯಪರತೆಯನ್ನು ನಿರೀಕ್ಷಿಸಲಾಗುತ್ತದೆ ಎಂದರು.

ಪೋಲಿಸ್ ತಂತ್ರಗಾರಿಕೆಯಲ್ಲಿ ನಿರಂತರ ಮಾರ್ಪಾಡು ಅಗತ್ಯ
ಇತ್ತೀಚಿನ ದಿನಗಳಲ್ಲಿ ಸಾಂಪ್ರದಾಯಿಕ ಅಪರಾಧಿ ಚಟುವಟಿಕೆಗಳಿಂದ ಹಿಡಿದು ಡಿಜಿಟಲ್ ವಲಯದ ಬೆದರಿಕೆಗಳನ್ನೂ ದೇಶ ಎದುರಿಸುತ್ತಿದೆ. ಆಧುನಿಕ ಸಮಾಜದ ಸಂಕೀರ್ಣತೆಗಳೂ ಕೂಡ ಹೊಸ ಮಾದರಿಯ ಅಪರಾಧಗಳನ್ನು ಹೆಚ್ಚಿಸಿವೆ. ಇದರಿಂದಾಗಿ ಪೋಲಿಸ್ ತಂತ್ರಗಾರಿಕೆಯಲ್ಲಿಯೂ ನಿರಂತರವಾಗಿ ಮಾರ್ಪಾಡು ತರಬೇಕಾದ ಅವಶ್ಯಕತೆ ಇದೆ ಎಂದರು.

ಕಾನೂನು ಪಾಲಕರಾಗಿ ತಾವುಗಳು ಸಮಾಜದ ಸ್ವಾಸ್ವ್ಥವನ್ನು ಹಾಳು ಮಾಡುವವರಿಂದ, ಶಾಂತಿ ಕದಡುವವರಿಗಿಂತ ಒಂದು ಹೆಜ್ಜೆ ಮುಂದಿರಿರಬೇಕಲ್ಲದೇ ಶೀಘ್ರವಾಗಿ ಹೊಂದಿಕೊಂಡು ನವೀನ ಮಾದರಿಯನ್ನು ಅಳವಡಿಸಿಕೊಳ್ಳಬೇಕು ಎಂದರು.

ಮಾದಕವಸ್ತು ನಿಯಂತ್ರಣ
ಮಾದಕವಸ್ತು ನಿಯಂತ್ರಣದಲ್ಲಿ ಕರ್ನಾಟಕ ರಾಜ್ಯ ಪೋಲಿಸ್ ಅತ್ಯುತ್ತಮ ಕೆಲಸ ಮಾಡಿದ್ದು ಅಂತರರಾಷ್ಟ್ರೀಯ ಮಾದಕವಸ್ತು ಜಾಲವನ್ನು ಪತ್ತೆ ಹಚ್ಚಲಾಗಿದೆ. ಡಾರ್ಕ್‍ವೆಬ್ ಮೂಲಕ ನಡೆಸುವ ಡ್ರಗ್ಸ್ ಜಾಲವನ್ನೂ ಕೂಡ ಬೇಧಿಸಲಾಗಿದೆ ಎಂದರು. ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳನ್ನು ನಿಗ್ರಹಿಸಲಾಗಿದ್ದರೂ, ಕರ್ನಾಟಕದ, ಕೇರಳ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಈ ಸಮಸ್ಯೆಯನ್ನು ಮಟ್ಟಹಾಕಲು ಹೆಚ್ಚಿನ ಸಹಕಾರ ಅಗತ್ಯ ಎಂದರು.

ಭಯೋತ್ಪಾದನೆ ನಿಗ್ರಹ:

ಭಯೋತ್ಪದನಾ ಚಟುವಟಿಕೆಗಳು ರಾಜ್ಯದಲ್ಲಿಯೂ ನಡೆದಿದ್ದು, ಇವುಗಳ ನಿಗ್ರಹಕ್ಕೆ ಮಾಹಿತಿ ಸಂಗ್ರಹಣೆ, ಸಮನ್ವಯ, ಸಹಕಾರ ಹಾಗೂ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಕ್ರಮ ಅಗತ್ಯ ಎಂದರು.

ಅಂತರ ರಾಜ್ಯಗಳ ಸಮನ್ವಯ
ಅಂತರ ರಾಜ್ಯ ಅಪರಾಧಿಗಳು ಹಾಗೂ ಗ್ಯಾಂಗ್ ಗಳ ಮೇಲೆ ನಿಗಾ ಅಗತ್ಯವೆಂದ ಮುಖ್ಯಮಂತ್ರಿಗಳು ಈ ಕುರಿತು ವಿವಿಧ ರಾಜ್ಯಗಳ ನಡುವೆ ಸಮನ್ವಯ ಹಾಗೂ ಸಹಕಾರವಿದ್ದರೆ ಅಪರಾಧಿಗಳನ್ನು ಮಟ್ಟಹಾಕುವುದು ಸುಲಭ ಎಂದರು.

ತೀವ್ರಗಾಮಿಗಳ ಪ್ರತ್ಯೇಕತೆಗೆ ಕ್ರಮ
ಜೈಲುಗಳಲ್ಲಿ ತೀವ್ರಗಾಮಿಗಳ ಪ್ರತ್ಯೇಕತೆಗೆ ಕ್ರಮ ಕೈಗೊಳ್ಳುವುದು ಅವಶ್ಯಕ ಎಂದ ಮುಖ್ಯಮಂತ್ರಿಗಳು ಪೋಲಿಸ್ ಅಧಿಕಾರಿಗಳಿಗೆ ತಂತ್ರಜ್ಞಾನದ ಬಳಕೆ, ತರಬೇತಿ, ಸಾಮಥ್ರ್ಯ ವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

ಗೃಹ ಸಚಿವರಾದ ಜಿ.ಪರಮೇಶ್ವರ್ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಅಲೋಕ್ ಮೋಹನ್ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button