*ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ: ಕಟ್ಟೆಚ್ಚರಕ್ಕೆ ಸೂಚನೆ*

ಅತಿವೃಷ್ಟಿ/ಪ್ರವಾಹ ನಿರ್ವಹಣೆ ಸಿದ್ಧತೆಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಹಾರಾಷ್ಟ್ರ ರಾಜ್ಯದಲ್ಲಿ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಜಿಲ್ಲೆಯ ನದಿಗಳಿಗೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗುತ್ತಿರುವದರಿಂದ ಜಿಲ್ಲೆಯಲ್ಲಿ ಉಂಟಾಗಬಹುದಾದ ಅತೀವೃಷ್ಟಿ/ಪ್ರವಾಹ ನಿರ್ವಹಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಜೂ.18) ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಳಗಾವಿ, ಹುಕ್ಕೇರಿ, ಖಾನಾಪೂರ, ನಿಪ್ಪಾಣಿ, ಚಿಕ್ಕೋಡಿ ಭಾಗದಲ್ಲಿ ಮಳೆ ಹೆಚ್ಚಿರುವ ಕಾರಣ ಸಂಬಂಧಿಸಿದ ಅಧಿಕಾರಿಗಳು ಜಲಾಶಯ ಮಟ್ಟದ ಕುರಿತು ನಿರಂತರ ನಿಗಾ ವಹಿಸಬೇಕು ಎಂದರು.
ಅಗತ್ಯವಿರುವ ಸ್ಥಳಗಳಲ್ಲಿ ಜನರಿಗೆ ತಿಳುವಳಿಕೆ ಹೇಳಿ ಜನ, ಜಾನುವಾರುಗಳ ಸ್ಥಳಾಂತರಕ್ಕೆ ಸೂಚಿಸಬೇಕು. ಕಾಳಜಿ ಕೇಂದ್ರಗಳನ್ನು ಗುರುತಿಸಿ, ಮೂಲಭೂತ ಸೌಕರ್ಯವಿರುವ ಕಾಳಜಿ ಕೇಂದ್ರಗಳಿಗೆ ಒದಗಿಸಬೇಕು.
ಮಾರ್ಖಂಡೇಯ ಜಲಾಶಯದಲ್ಲಿ ನೀರು ಬಿಡುಗಡೆಯಾದರೆ ಗೋಕಾಕ್ ಕೆಲವು ಸ್ಥಳಗಳಲ್ಲಿ ನೀರು ನುಗ್ಗಿ ಜನರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಅಂತಹ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಗೋಕಾಕ್ ತಹಶೀಲ್ದಾರ್ ಗೆ ತಿಳಿಸಿದರು.

ಮುಳುಗಡೆ ಸೇತುವೆಗಳಿಗೆ ಬ್ಯಾರಿಕೇಡ್ ಅಳವಡಿಕೆ:
ಮುಳುಗಡೆಯಾದ ಸೇತುವೆಗಳಿಗೆ ಕಡ್ಡಾಯವಾಗಿ ಬ್ಯಾರಿಕೇಡ್ ಅಳವಡಿಸಬೇಕು. ಸೇತುವೆಯ ಸ್ಥಿತಿಗತಿ ನೋಡಿಕೊಂಡು ನೀರು ಕಡಿಮೆಯಾದಾಗ ಬ್ಯಾರಿಕೇಡ್ ತೆರವುಗೊಳಿಸಬೇಕು.
ಸದ್ಯಕ್ಕೆ ಕೊಯ್ನಾ ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ನೀರಿನ ಮಟ್ಟ ಹೆಚ್ಚಿದೆ. ಮಹಾರಾಷ್ಟ್ರದಿಂದ ಕೃಷ್ಣ ನದಿಗೆ 6 ಟಿ.ಎಂ.ಸಿ ನೀರು ಹರಿದು ಬರುತ್ತಿದೆ.
ಮಹಾರಾಷ್ಟ್ರ ಜಲಾಶಯದಿಂದ ಇನ್ನೂ ಹೆಚ್ಚಿನ ಮಟ್ಟದಲ್ಲಿ ನೀರು ಬಿಡುಗಡೆಯಾಗುವ ಸಾಧ್ಯತೆ ಇರುವ ಕಾರಣ ಕೊಯ್ನಾ ಜಲಾಶಯದ ನೀರಿನಮಟ್ಟದ ಕುರಿತು ಮಾಹಿತಿ ಪಡೆಯಲು ಜಿಲ್ಲೆಯ ಒಬ್ಬ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗುವುದು.
ಹಿಡಕಲ್ ಜಲಾಶಯ ಹಾಗೂ ಮಾರ್ಕಾಂಡೇಯ ಜಲಾಶಯದ ನೀರಿನ ಮಟ್ಟ, ನೀರು ಬಿಡುಗಡೆ ಕುರಿತು ನಿರಂತರ ನಿಗಾ ವಹಿಸಬೇಕು. ರಕ್ಷಣಾತ್ಮಕವಾಗಿ ಬೋಟ್, ವಾಟರ್ ಜಾಕೆಟ್, ಬ್ಯಾರಿಕೇಡ್, ಲೈಟ್ಸ್ ಸೇರಿಸಂತೆ ಉಪಕರಣಗಳ ಜೊತೆಗೆ ಗೃಹರಕ್ಷಕ ದಳ, ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಎಂದರು.
ಎಲ್ಲ ತಹಸೀಲ್ದಾರ್ ಗಳು ಅತಿವೃಷ್ಟಿ ಸಂದರ್ಭದಲ್ಲಿ ಅಗತ್ಯವಿರುವ ರಕ್ಷಣಾ ಸಾಮಗ್ರಿಗಳ ಬೇಡಿಕೆ ಪಟ್ಟಿ ತಯಾರಿಸಿ, ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ತಕ್ಷಣವೇ ಬೇಡಿಕೆ ಸಲ್ಲಿಸಬೇಕು ಎಂದು ತಿಳಿಸಿದರು.
ಕಾಳಜಿಕೇಂದ್ರ ಗುರುತಿಸಲು ಸೂಚನೆ:
ಗುರುತಿಸಿದ ಎಲ್ಲ ಕಾಳಜಿ ಕೇಂದ್ರಗಳಲ್ಲಿ, ಪೌಷ್ಟಿಕ ಆಹಾರ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಈ ಕುರಿತು ಮೂರು ದಿನಗಳೊಳಗೆ ವರದಿ ನೀಡಬೇಕು. ಎಲ್ಲ ತಹಶೀಲ್ದಾರ್ ಗಳು ಜಿಲ್ಲಾ ಮಟ್ಟದ ಕಂಟ್ರೋಲ್ ರೂಮ್ ಗೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯತಿ ಕೆರೆಗಳ ಕಟ್ಟೆ ಒಡೆಯದಂತೆ ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಗೋಕಾಕ್ ತಾಲೂಕಿನ ವ್ಯಾಪ್ತಿಯಲ್ಲಿ ಮನೆಯ ಮೇಲ್ಛಾವಣಿ ಬಿದ್ದು ಅವಘಡ ಸಂಭವಿಸಿದೆ ಹಾಗಾಗಿ ಮುಂಜಾಗೃತಿಯಿಂದ ಅಂತಹ ಮನೆಗಳನ್ನು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಜಂಟಿ ಸರ್ವೆ ನಡೆಸಬೇಕು ಎಂದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ಚರಂಡಿ ಸ್ವಚ್ಛತೆ, ನಗರದ ಪ್ರಮುಖ ರಸ್ತೆಗಳ ಬದಿಯಲ್ಲಿನ ಅಪಾಯಕಾರಿ ಮರಗಳನ್ನು ಕಟಾವು ಮಾಡಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ನೀಡಿದರು.
ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ ಬೊರಸೆ ಮಾತನಾಡಿ ನಗರದಲ್ಲಿ ಗಾಂಧಿ ನಗರದ ಸೇತುವೆ ಪಕ್ಕದ ಚರಂಡಿ ಭರ್ತಿಯಾಗಿ ಸೇತುವೆಯ ಒಳರಸ್ತೆ ಮುಳುಗಡೆಯಾಗುತ್ತಿದೆ. ಸಾಂಬ್ರಾ ರಸ್ತೆಯ ಸೇತುವೆಯಲ್ಲಿ ಸಹ ಇದೆ ಪರಿಸ್ಥಿತಿ ಎದುರಾಗುತ್ತಿದೆ. ಸಂಬಂಧಿಸಿದ ಇಲಾಖೆಯಿಂದ ಒಳಚರಂಡಿಗಳನ್ನು ಸ್ವಚ್ಛಗೊಳಿಸಬೇಕು ತಿಳಿಸಿದರು.
ಶಾಲೆ-ಅಂಗನವಾಡಿ ಕಟ್ಟಡಗಳ ಪರಿಶೀಲನೆ ಸೂಚನೆ:
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ ಮಾತನಾಡಿ ನೀರಾವರಿ ಇಲಾಖೆಯಿಂದ ಎಲ್ಲ ಜಲಾಶಯಗಳ ಸಮರ್ಪಕವಾಗಿ ನಿರ್ವಹಣೆಯಾಗುವ ಕುರಿತು ವರದಿ ನೀಡಬೇಕು. ಪ್ರತಿ ತಾಲೂಕುಗಳಲ್ಲಿ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳ ಕಟ್ಟಡಗಳನ್ನು ಪರಿಶೀಲಿಸಿ ಸರಿಯಾಗಿರುವ ಕುರಿತು ವರದಿ ನೀಡಬೇಕು ಎಂದನು ಎಂದರು.
ಗ್ರಾಮ ಮಟ್ಟದಲ್ಲಿ ಸೇತುವೆಗಳು ಕುಸಿತ, ಮುಳುಗಡೆ, ದುರಸ್ಥಿ ಇರುವ ಕುರಿತು ಕೂಡಲೇ ವರದಿ ಸಲ್ಲಿಸಬೇಕು. ಸೇತುವೆ, ನಾಲಾ, ಬ್ಯಾರೇಜ್ ಗಳಲ್ಲಿ ಬ್ಲಾಕ್ ಗಳನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಬೇಕು ಜಿ.ಪಂ ಸಿಇಓ ರಾಹುಲ್ ಶಿಂಧೆ ತಿಳಿಸಿದರು.
ಕಂಟ್ರೋಲ್ ರೂಮ್ ಸ್ಥಾಪನೆ:
ಜಿಲ್ಲಾಡಳಿತದಿಂದ ಅತಿವೃಷ್ಟಿ ಪ್ರವಾಹ ನಿರ್ವಹಣೆಗೆ ಈಗಾಗಲೇ ಕಂಟ್ರೋಲ್ ರೂಮ್ ಸ್ಥಳಿಸಲಾಗಿದೆ ಈ ಕುರಿತು ಪ್ರಕಟಣೆ ಹೊರಡಿಲಾಗುವುದು. ಸಾಮಾಜಿಕ ಜಾಲತಾಣ ಮುಖಾಂತರ ಪ್ರವಾಹ ಸಂದರ್ಭದಲ್ಲಿ ಸುಳ್ಳು ಸುದ್ದಿ ಹರಡತಂತೆ ನಿಗಾ ವಹಿಸಬೇಕು. ತಾಲೂಕಾ ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳು ಕಂಟ್ರೋಲ್ ರೂಮ್ ವರದಿ ನೀಡಬೇಕು ಎಂದು ಪ್ರೊಬೇಷನರಿ ಐಎಎಸ್ ಅಧಿಕಾರಿ ಅಭಿನವ. ಜೆ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ್ ನಾಯಕ, ತಹಶೀಲ್ದಾರ ಬಸವರಾಜ ನಾಗರಾಳ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಈಶ್ವರ ಗಡಾದ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶದ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್ ಕಲಾದಗಿ, ಜಿಲ್ಲಾಪಂಚಾತ್ ಮುಖ್ಯ ಯೋಜನಾ ನಿರ್ದೇಶಕ ಗಂಗಾಧರ್ ದಿವಟರ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಎಲ್ಲ ಉಪವಿಭಾಗಾಧಿಕಾರಿಗಳು, ತಾಲೂಕಾ ತಹಶೀಲ್ದಾರಗಳು, ಕಾರ್ಯನಿರ್ವಾಹಕ ಅಧಿಕಾರಿಗಳು, ವಿಡಿಯೋ ಸಂವಾದದಲ್ಲಿ ಹಾಜರಿದ್ದರು.