Latest

ತಾಯಿಯ ಮೃತದೇಹದೊಂದಿಗೆ 4 ದಿನ ಕಳೆದ ಬಾಲಕ ; ತಾಯಿ ನಿದ್ರಿಸುತ್ತಿದ್ದಾಳೆಂದು ತಿಳಿದು ಶಾಲೆಗೆ ಹೋಗಿ ಬರುತ್ತಿದ್ದ !

ಪ್ರಗತಿ ವಾಹಿನಿ ಸುದ್ದಿ ತಿರುಪತಿ – 

ತಾಯಿ ಮೃತಪಟ್ಟಿದ್ದು ಅರಿವಾಗದೆ ನಿದ್ರಿಸುತ್ತಿದ್ದಾಳೆಂದು ತಿಳಿದ ೧೦ ವರ್ಷದ ಬಾಲಕನೊಬ್ಬ ೪ ದಿನಗಳ ಕಾಲ ತಾಯಿಯ ಮೃತದೇಹದೊಂದಿಗೆ ವಾಸವಿದ್ದ ಶಾಕಿಂಗ್ ಘಟನೆ ತಿರುಪತಿಯಲ್ಲಿ ನಡೆದಿದೆ.

Home add -Advt

೪ ದಿನಗಳ ಬಳಿಕ ಮನೆಯಲ್ಲಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಬಾಲಕ ತನ್ನ ಮಾವನಿಗೆ ಕರೆ ಮಾಡಿ ತಿಳಿಸಿ ಅವರು ಬಂದು ನೋಡಿದಾಗ ತಾಯಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಬಾಲಕನ ಮುಗ್ಧತೆಗೆ ಜನ ಕಣ್ಣೀರಾಗಿದ್ದಾರೆ.

ಪತಿಯೊಂದಿಗೆ ವಿಚ್ಛೇದನ ಪಡೆದಿದ್ದ ರಾಜಲಕ್ಷ್ಮೀ (೪೧) ಮೃತಪಟ್ಟ ತಾಯಿ. ಖಾಸಗಿ ಕಾಲೇಜೊಂದರಲ್ಲಿ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದ ಅವರು ಮಗ ಶ್ಯಾಮ ಕಿಶೋರನೊಂದಿಗೆ ತಿರುಪತಿಯ ವಿದ್ಯಾನಗರದ ಬಾಡಿಗೆ ಪ್ಲ್ಯಾಟ್ ಒಂದರಲ್ಲಿ ಕಳೆದ ೨ ವರ್ಷಗಳಿಂದ ವಾಸ ಮಾಡುತ್ತಿದ್ದರು. ಮಗ ಶ್ಯಾಮ ಕಿಶೋರ್ ಖಾಸಗಿ ಶಾಲೆಯೊಂದರಲ್ಲಿ ೫ನೇ ತರಗತಿಯಲ್ಲಿ ಓದುತ್ತಿದ್ದಾನೆ.

ಮಾರ್ಚ್ ೯ರಂದು ರಾತ್ರಿ ರಾಜಲಕ್ಷ್ಮೀ ನಿದ್ರೆಯಲ್ಲಿದ್ದಾಗ ಮಂಚದಿಂದ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ಮೃತಪಟ್ಟಿರಬಹುದು ಎಂದು ಊಹಿಸಲಾಗಿದೆ. ಆದರೆ ಘಟನೆಯ ಬಗ್ಗೆ ಅರಿಯದ ಶ್ಯಾಮ್ ಕಿಶೋರ್ ತಾಯಿ ನಿದ್ರಿಸುತ್ತಿದ್ದಾಳೆ ಎಂದು ಭಾವಿಸಿ ಎಬ್ಬಿಸಲು ಹೋಗಿಲ್ಲ. ಮನೆಯಲ್ಲಿದ್ದ ಬ್ರೆಡ್ ಮತ್ತಿತರ ಸ್ನ್ಯಾಕ್‌ಗಳನ್ನೇ ತಿಂದು ಕಾಲ ಕಳೆದಿದ್ದಾನೆ. ಅಲ್ಲದೇ ದಿನ ನಿತ್ಯ ಶಾಲೆಗೆ ಹೋಗಿ ಬರುತ್ತಿದ್ದ. ಅಕ್ಕ ಪಕ್ಕದವರು ವಿಚಾರಿಸಿದಾಗ ತಾಯಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದ.

ನಾಲ್ಕನೇ ದಿನವಾದ ಮಾ.೧೩ರಂದು ಮನೆಯಲ್ಲಿ ದುರ್ವಾಸನೆ ಬರತೊಡಗಿದಾಗ ಮಾವ ದುರ್ಗಾಪ್ರಸಾದ್‌ಗೆ ಫೋನ್ ಮಾಡಿದ ಬಾಲಕ, ಜೊತೆಗೆ ತಾಯಿ ನಾಲ್ಕು ದಿನದಿಂದ ಮಲಗಿಯೇ ಇರುವುದನ್ನು ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ದುರ್ಗಾಪ್ರಸಾದ್ ಕೂಡಲೇ ಮನೆಗೆ ಧಾವಿಸಿದ್ದಾರೆ. ಪರಿಶೀಲಿಸಿದಾಗ ತನ್ನ ತಂಗಿ ರಾಜಲಕ್ಷ್ಮೀ ಮೃತಪಟ್ಟಿರುವುದು ಗೊತ್ತಾಗಿದೆ. ಸ್ಥಳಕ್ಕೆ ತೆರಳಿ ಪರಿಶೀಲಿಸಿದ ಪೊಲೀಸರು ಸಹಜ ಸಾವು ಎಂದು ತಿಳಿಸಿದ್ದಾರೆ.

ತಾಯಿಗಾಗಿ ಔಷಧ ಹುಡುಕುತ್ತಾ ಹೊರಟ ಯುವತಿ ರಷ್ಯಾ ದಾಳಿಗೆ ಬಲಿ

 

Related Articles

Back to top button