*ಬೆಳಗಾವಿ-ಗೋವಾ ಮಾರ್ಗದ ರಸ್ತೆ ಕಾಮಗಾರಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಖಾನಾಪೂರ-ಜಾಂಬೋಟಿ ಮಾರ್ಗದ ಅಂದಾಜು 50 ಕೋಟಿ ಅಧಿಕ ವೆಚ್ಚದ ಬೆಳಗಾವಿ-ಗೋವಾ ರಸ್ತೆ ದುರಸ್ಥಿ ಕಾಮಗಾರಿಯನ್ನು ಶನಿವಾರ (ಮೇ.17) ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಪರಿಶೀಲಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಜಾಂಬೋಟಿ ಮಾರ್ಗದ ಬೆಳಗಾವಿ-ಗೋವಾ ರಸ್ತೆ ನಿರ್ಮಾಣಕ್ಕೆ ಕಳೆದ 10 ವರ್ಷಗಳಿಂದ ಬೇಡಿಕೆ ಇತ್ತು. ಅದರಂತೆ ಕೇಂದ್ರ ಸರ್ಕಾರದ ಮಂಜೂರಾತಿ ಪಡೆದುಕೊಂಡರು ನಿರ್ಧಿಷ್ಟ ಕಾಲಾವಧಿಯೊಳಗೆ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಸುಮಾರು 50 ಕಿ.ಮೀ ಕ್ಕಿಂತ ಹೆಚ್ಚು ರಸ್ತೆ ದುರಸ್ಥಿ ಮಾಡಲಾಗಿದೆ. ಪ್ರಯಾಣಿಕರಿಗೆ ಗೋವಾ ರಾಜ್ಯಕ್ಕೆ ಹೋಗಲು ಸುಲಭದ ರಸ್ತೆ ಇದಾಗಿದೆ. ರಾಜ್ಯ ಸರ್ಕಾರದ ಹಲವಾರು ಸಾಧನೆಗಳಲ್ಲಿ ಇದು ಕೂಡ ಒಂದಾಗಿದೆ.
ಈ ಮೊದಲು ರಸ್ತೆ ಬಹಳಷ್ಟು ಹಾಳಾಗಿತ್ತು. ಜನರು ಮಳೆಗಾಲದಲ್ಲಿ ಭಯದ ವಾತಾವರಣದಲ್ಲಿ ಸಂಚರಿಸುತ್ತಿದ್ದರು. ಅಪಾಯದ ರಸ್ತೆ ಆಗಿರುವುದರಿಂದ ಅಪಘಾತ ಸಂಭವಿಸಿದರೆ ಗಾಯಾಳುಗಳನ್ನು ಆಸ್ಪತ್ರೆಗೆ ತಲುಪಿಸಲು ಸಾಧ್ಯವಾಗುತ್ತಿರಲಿಲ್ಲ.
ಇವೆಲ್ಲವುಗಳನ್ನು ಗಮನಿಸಿ, ಸಾರ್ವಜನಿಕರಿಗೆ ಪ್ರಯಾಣಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಅತಿ ಕಡಿಮೆ ಅವಧಿಯಲ್ಲಿ ರಸ್ತೆ ದುರಸ್ಥಿ ಮಾಡಲಾಗಿದೆ. ಅದೇ ರೀತಿಯಲ್ಲಿ ಪ್ರಯಾಣಿಕರು ಸಹ ವೇಗದ ಮಿತಿಯಲ್ಲಿ ಸಂಚರಿಸಬೇಕು.
ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅತೀ ವೇಗವಾಗಿ ಸಂಚರಿಸುವ ಪ್ರಯಾಣಿಕರಿಗೆ ಪೊಲೀಸ್ ಇಲಾಖೆಯಿಂದ ದಂಡ ದಂಡ ವಿಧಿಸಲು ಸೂಚಿಸಲಾಗುವುದು. ಮಳೆಗಾಲ ಆರಂಭವಾಗುವ ಮುನ್ನ ಜಿಲ್ಲೆಯಲ್ಲಿ ಹಲವಾರು ರಸ್ತೆ ದುರಸ್ಥಿ, ಗುಂಡಿ ಮುಚ್ಚುವ ಕಾರ್ಯ, ನೂತನ ರಸ್ತೆಗಳನ್ನು ನಿರ್ಮಾಣ ಮಾಡಲಾಗಿದೆ.
ಜಿಲ್ಲೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ರಸ್ತೆಗಳ ದುರಸ್ಥಿ, ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು.