*ಮೆಲೋಡಿ VS ಮೆಲೋಡಿ ರಾಗದಿಂದ ರೋಗ ಮುಕ್ತಿ ಕಾರ್ಯಕ್ರಮ: KLE ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ವಿನೂತನ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ: ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳು ಮತ್ತು ಅವರ ಜೊತೆಗಾರರು ವಚನ ಗಾಯನ, ಸುಗಮ ಸಂಗೀತ ಮತ್ತು ಕರ್ನಾಟಕ ಸಂಗೀತ ಕೇಳಿ ಪುಳಕಿತಗೊಂಡರು. ಒಂದು ಗಂಟೆಗಳ ಕಾಲ ಎಲ್ಲ ನೋವುಗಳನ್ನು ಮರೆತು ಸಂಗೀತಲೋಕದಲ್ಲಿ ಮೈಮರೆತರು.
ವೈದ್ಯರ ದಿನಾಚರಣೆ ಅಂಗವಾಗಿ ಕೆಎಲ್ಇ ವಿಶ್ವವಿದ್ಯಾಲಯ, ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಸಂಗೀತ ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ, ಮೆಲೋಡಿ ವರ್ಸಸ್ ಮೆಲೋಡಿ ಎಂಬ ರಾಗದಿಂದ ರೋಗ ಮುಕ್ತಿ ಕಾರ್ಯಕ್ರಮ ಆಸ್ಪತ್ರೆಯಲ್ಲಿ ನೆರವೇರಿತು.
ಜೆಎನ್ಎಂ ಸಿ, ಬಿ ಎಂ ಕಂಕನವಾಡಿ, ಯು,ಎಸ್,ಎಮ್ ಹಾಗೂ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯರು ಒಂದೂವರೆ ಗಂಟೆಗಳ ಕಾಲ ನಿರಂತರ ಹಾಡುಗಳನ್ನು ಹಾಡಿ ಸಭಿಕರನ್ನು ಮಂತ್ರಮುಗ್ದರನ್ನಾಗಿಸಿದರು. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ಹಳೆಯ ಹಿಂದಿ ಚಿತ್ರಗೀತೆಗಳು ಹಾಗೂ ಸುಮಧುರ ಕನ್ನಡ ಚಿತ್ರಗೀತೆಗಳನ್ನು, ಅತ್ಯಂತ ಮಧುರವಾಗಿ ಹಾಡಿದರು. ಡಾ ರಾಜೇಂದ್ರ ಭಾಂಡನಕರ, ಡಾ ಎ ಎಸ್ ಗೋದಿ, ಡಾ ಜ್ಯೋತಿ ನಾಗಮೋತಿ ,ಡಾ ಸದಾನಂದ ಪಾಟೀಲ, ಡಾ ಬಸವರಾಜ ಬಿಜ್ಜರಗಿ, ಡಾ ಅರವಿಂದ ತೇನಗಿ, ಡಾ ದೀಪಕ ಕರ್ಣಂ, ಡಾ ಪ್ರಭಾಕರ ಹೆಗಡೆ, ಡಾ ಮಂಜುನಾಥ ಶಿವಪೂಜಿಮಠ ಡಾ ಪಿಟ್ಕೆ, ಡಾ ಹರ್ಪಿತ್ ಕೌರ್ ಅವರು ರಂಜಿಸಿದರು. ರಾಹುಲ ಮಂಡೋಳ್ಕರ್, ನಿತಿನ ಸುತಾರ, ಯಾದವೇಂದ್ರ ಪೂಜಾರಿ ಅವರು ಹಾರ್ಮೋನಿಯಂ ಹಾಗೂ ತಬಲಾ ಸಾತ ನೀಡಿದರು.
ಸಮಾರಂಭದಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ (ಕರ್ನಲ) ಎಂ. ದಯಾನಂದ, ಡಾ ಮಾಧವ ಪ್ರಭು, ಡಾ ರಾಜಶೇಖರ, ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯರಾದ ರಾಜಾರಾಮ್ ಅಂಬರಡೇಕರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಸಂಗೀತ ಮಹಾವಿದ್ಯಾಲಯದ ಡಾ ಸುನೀತಾ ಪಾಟೀಲ ಸ್ವಾಗತಿಸಿದರು, ಡಾ ಮನಿಷಾ ಭಾಂಡಂಕರ ಹಾಗೂ ಸಂಗೀತಾ ಕುಲಕರ್ಣಿ ನಿರೂಪಿಸಿದರು. ಡಾಕ್ಟರ ದುರ್ಗಾ ಕಾಮತ ವಂದಿಸಿದರು.