Kannada NewsLatestUncategorized

*ಡಾ.ಬೆಟಗೇರಿ ಕೃಷ್ಣಶರ್ಮ ಕಾವ್ಯದ ಜೀವಧಾತು ದೇಸಿಯತೆ: ಪ್ರೊ. ಭೈರಮಂಗಲ ರಾಮೇಗೌಡ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಟಗೇರಿ ಕೃಷ್ಣಶರ್ಮ ಅವರ ಕಾವ್ಯದ ಜೀವಧಾತು ದೇಸಿಯತೆ. ಅಪ್ಪಟ ಉತ್ತರ ಕರ್ನಾಟಕದ ಮಣ್ಣಿನ ವಾಸನೆ ಅವರ ಕವಿತೆಯಲ್ಲಿದೆ. ನೆಲದ ಜನಪದ ಜೀವನವೇ ಅವರ ಕಾವ್ಯಸಂವಿಧಾನವಾಗಿದೆ. ಅವರ ಕಾವ್ಯವು ಉತ್ತರ ಕರ್ನಾಟಕದ ಬದುಕಿನ ವಿಶ್ವಕೋಶದಂತೆ ಅಭಿವ್ಯಕ್ತಿಯಾಗಿದೆ. ನವೋದಯದ ಎಲ್ಲ ಅಭಿವ್ಯಕ್ತಿಗಳನ್ನು ಒಳಗೊಂಡ ಸ್ವೋಪಜ್ಞ ಪ್ರತಿಭೆ ಅವರದ್ದು. ಅವರ ಕಾವ್ಯಗಳ ಕುರಿತು ಬಹುಶಿಸ್ತೀಯ ಅಧ್ಯಯನಗಳು ನಡೆಯಬೇಕಾಗಿದೆ ಎಂದು ಬೆಂಗಳೂರಿನ ಬಿ. ಎಂ. ಶ್ರೀ. ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಭೈರಮಂಗಲ ರಾಮೇಗೌಡ ಅವರು ಅಭಿಪ್ರಾಯಪಟ್ಟರು.

ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ‘ಡಾ. ಬೆಟಗೇರಿ ಕೃಷ್ಣಶರ್ಮ : ಕಾವ್ಯಾನುಸಂಧಾನ’ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಆಶಯ ಭಾಷಣದಲ್ಲಿ ಮಾತನಾಡಿ ಬೆಟಗೇರಿ ಕೃಷ್ಣಶರ್ಮ ಅವರ ಬರವಣಿಗೆಗಳು ಮುಂಬರುವ ದಿನಗಳಲ್ಲಿ ಹೆಚ್ಚು ಪ್ರಸ್ತುತವಾಗಲಿವೆ ಎಂದು ಅಭಿಪ್ರಾಯಪಟ್ಟರು.

ಉದ್ಘಾಟನೆಯನ್ನು ನೆರವೇರಿಸಿದ ಕುಲಪತಿಗಳಾದ ಪ್ರೊ. ಎಂ. ರಾಮಚಂದ್ರಗೌಡ ಅವರು ಕನ್ನಡ ವಿಭಾಗದ ಮೂಲಕ ಬೆಳಗಾವಿ ಜಿಲ್ಲೆಯ ಎಲ್ಲ ಹೆಸರಾಂತ ಕವಿಗಳ ಹೆಸರಿನಿಂದ ಏಕೀಕೃತ ಅಧ್ಯಯನ ಪೀಠವೊಂದನ್ನು ಆರಂಭಿಸುವ ಪ್ರಸ್ತಾವನೆ ವಿಶ್ವವಿದ್ಯಾಲಯದ ಮುಂದಿದೆ ಎಂದು ತಿಳಿಸಿದರು.

ಉದ್ಘಾಟನಾ ಸಮಾರಂಭದ  ಅಧ್ಯಕ್ಷತೆಯನ್ನು ವಹಿಸಿದ್ದ ಡಾ. ರಾಘವೇಂದ್ರ ಪಾಟೀಲ ಅವರು ಬೆಟಗೇರಿ ಕೃಷ್ಣಶರ್ಮ ಅವರ ಸಾಹಿತ್ಯವನ್ನು ಯುವಪೀಳಿಗೆಗೆ ವಿಶ್ವವಿದ್ಯಾಲಯವು ತಲುಪಿಸುವ ಮುಖ್ಯವಾದ ಕೆಲಸದ ನೇತೃತ್ವವನ್ನು ವಹಿಸಿಕೊಳ್ಳಬೇಕೆಂದು ಅಭಿಪ್ರಾಯಪಟ್ಟರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ಸರಜೂ ಕಾಟ್ಕರ್ ಅವರು ಮಾತನಾಡಿ ಬೆಳಗಾವಿ ಜಿಲ್ಲೆಯ ಮಹತ್ವವನ್ನು ಇಲ್ಲಿನ ಭಾಷೆ, ಹವಾಮಾನ, ಬದುಕು ಅಲ್ಲದೇ ಹೋರಾಟದ ಮನೋಭಾವವು ಬೆಟಗೇರಿ ಕೃಷ್ಣಶರ್ಮ ಅವರ ಕಾವ್ಯದಲ್ಲಿ ಅಭಿವ್ಯಕ್ತಿಗೊಂಡಿದೆ. ಅದನ್ನು ವ್ಯಾಪಕವಾಗಿ ಪ್ರಚುರಪಡಿಸುವಲ್ಲಿ ವಿಶ್ವವಿದ್ಯಾಲಯವು ಪಠ್ಯಗಳಲ್ಲಿ ಕಡ್ಡಾಯವಾಗಿ ಬೆಟಗೇರಿ ಕೃಷ್ಣಶರ್ಮ ಮತ್ತು ಬಸವರಾಜ ಕಟ್ಟಿಮನಿ ಅವರ ಸಾಹಿತ್ಯವನ್ನು ಸೇರಿಸಬೇಕೆಂದು ಸಲಹೆಯನ್ನು ನೀಡಿದರು.

‘ಡಾ. ಬೆಟಗೇರಿ ಕೃಷ್ಣಶರ್ಮ ಅವರ ಕಾವ್ಯಗಳಲ್ಲಿ ದೇಸಿಯತೆ’ ಎನ್ನುವ ವಿಷಯದ ಮೇಲೆ ಡಾ. ನಾಗರತ್ನಾ ವಿ. ಪರಾಂಡೆ, ‘ಡಾ. ಬೆಟಗೇರಿ ಕೃಷ್ಣಶರ್ಮ ಅವರ ಕಾವ್ಯಗಳಲ್ಲಿ ಗೇಯತೆ’ ಎನ್ನುವ ವಿಷಯದ ಮೇಲೆ ಡಾ. ಕವಿತಾ ಕುಸುಗಲ್, ‘ಡಾ. ಬೆಟಗೇರಿ ಕೃಷ್ಣಶರ್ಮ ಅವರ ಕಾವ್ಯಗಳಲ್ಲಿ ಪ್ರತಿಮೆ, ರೂಪಕ ಮತ್ತು ಉಪಮೆ’ ಎನ್ನುವ ವಿಷಯದ ಮೇಲೆ ಡಾ. ಗಜಾನನ ನಾಯ್ಕ, ‘ಡಾ. ಬೆಟಗೇರಿ ಕೃಷ್ಣಶರ್ಮ ಅವರ ಕಾವ್ಯಗಳ ವಸ್ತುವೈವಿಧ್ಯತೆ’ ಕುರಿತು ಡಾ. ಮಹೇಶ ಗಾಜಪ್ಪನವರ ಹಾಗೂ ‘ಡಾ. ಬೆಟಗೇರಿ ಕೃಷ್ಣಶರ್ಮ ಅವರ ಕಾವ್ಯ ಮತ್ತು ನವೋದಯ’ ಕುರಿತು ಡಾ. ಶೋಭಾ ನಾಯಕ ಅವರು ಪ್ರಬಂಧಗಳನ್ನು ಮಂಡಿಸಿದರು. ಗೋಷ್ಠಿಯ ಅಧ್ಯಕ್ಷತೆಯನುನ ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ವಹಿಸಿದ್ದರು. ಡಾ. ಸಿ. ಕೆ. ನಾವಲಗಿ ಅವರು ಸಮಾರೋಪ ನುಡಿಗಳನ್ನಾಡಿದರು. ಡಿ.ಸಿ.ಪಿ. ಕ್ರೈಂ ಆದ ಶ್ರೀಮತಿ. ಸ್ನೇಹಾ ಪಿ. ವಿ. ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಆರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರು ಮತ್ತು ಟ್ರಸ್ಟ್ನ ಸದಸ್ಯಕಾರ್ಯದರ್ಶಿಗಳಾದ ಶ್ರೀಮತಿ. ವಿದ್ಯಾವತಿ ಭಜಂತ್ರಿ ಅವರು ಸ್ವಾಗತಿಸಿದರು. ಡಾ. ಪಿ. ನಾಗರಾಜ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಶಾಸ್ತ್ರಿಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ವಿದ್ಯಾರ್ಥಿಗಳು ನಾಡಗೀತೆ ಮತ್ತು ಪ್ರಾರ್ಥನಾ ಗೀತೆಗಳನ್ನು ಹಾಡಿದರು. ಕನ್ನಡ, ಇಂಗ್ಲೀಷ ಹಾಗೂ ಮರಾಠಿ ವಿಭಾಗಗಳ ಅಧ್ಯಾಪಕರುಗಳು ಹಾಗೂ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್, ಬೆಳಗಾವಿ ಸರ್ವ ಸದಸ್ಯರು ವಿಚಾರ ಸಂಕಿರಣದಲ್ಲಿ ಉಪಸ್ಥಿತರಿದ್ದರು. ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಜರಿದ್ದರು.

*ವಿದಾಯದ ಭಾಷಣ…ವಿಧಾನಸಭೆಯಲ್ಲಿ ಭಾವುಕರಾದ ಮಾಜಿ ಸಿಎಂ ಯಡಿಯೂರಪ್ಪ*

https://pragati.taskdun.com/b-s-yedyurappavidhanasabhe-last-speech/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button