Kannada NewsKarnataka NewsLatest

ಕಾರಣಾಂತರಗಳಿಂದ ಬಾಲಚಂದ್ರ ಜಾರಕಿಹೊಳಿ ಪ್ರಚಾರದಲ್ಲಿ ಭಾಗಿಯಾಗುತ್ತಿಲ್ಲ – ನಳೀನ್ ಕುಮಾರ ಕಟೀಲು

 ಪ್ರಗತಿವಾಹಿನಿ ಸುದ್ದಿ, ಮೂಡಲಗಿ: ಕಾಂಗ್ರೇಸ್ ಪಕ್ಷ ಮೂರು ಹೋಳಾಗಿ ಅದೋಗತಿಗೆ ಬಂದಿಳಿದಿದೆ, ತಮ್ಮ ರಾಜಕೀಯ ಬೇಳೆಯನ್ನು ಬೆಳೆಸಿಕೊಳ್ಳುವಗೋಸ್ಕರ ಪಕ್ಷದಲ್ಲಿ ಪ್ರಭಾವಿಯಾಗಿರುವ ಕೆ.ಪಿ.ಸಿ.ಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದು, ಸತೀಶ ಅವರ ರಾಜಕೀಯ ಮುಗಿಸಲು ಇದೊಂದು ಡಿಕೆಶಿ ಹೂಡಿರುವ ಸಂಚು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳೀನಕುಮಾರ ಕಟೀಲ ಹೇಳಿದರು.
ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿ ರವಿವಾರ ಸಂಜೆ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರ ಪ್ರಚಾರಾರ್ಥವಾಗಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿದ್ದು-ಡಿಕೆಶಿ ಬಣಗಳು ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಜಗಳವಾಡುತ್ತಾ ಪಕ್ಷವನ್ನು ಅಧೋಗತಿಗೆ ಇಳಿಸಿದ್ದಾರೆ ಎಂದು ಹೇಳಿದರು.
ಕಾಂಗ್ರೇಸ್ಸಿನ ಹಡಗು ಮುಳುಗುತ್ತಿದೆ, ಭಾರತೀಯ ಜನತಾ ಪಾರ್ಟಿಯು ದೇಶದ ಮೂಲೆ ಮೂಲೆಗೂ ಪ್ರಜ್ವಲಿಸುತ್ತಿದೆ, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ ಕಾರಣವಾಗಿದೆ, ಇಡೀ ವಿಶ್ವವೇ ಭಾರತದತ ನೋಡುತ್ತಿದೆ. ಮೋದಿ ಅವರ ಆಡಳಿತವನ್ನು ಇಡೀ ಜಗತ್ತೆ ಕೊಂಡಾಡುತ್ತಿದೆ, ಸ್ವತಹ ವಿಶ್ವದ ದೊಡ್ಡಣ್ಣ ಅಮೇರಿಕಾ ಸಹಿತ ಪ್ರಗತಿಶೀಲ ರಾಷ್ಟ್ರಗಳು ಮೋದಿ ಅವರ ಆಡಳಿತವನ್ನು ಮಾದರಿಯನ್ನಾಗಿ ಇಟ್ಟುಕೊಂಡಿರುವದಕ್ಕೆ ಸಾಕಷ್ಟು ನಿದರ್ಶನಗಳಿವೆ, ಅಂತಹ ವಿಶ್ವ ಮಾನ್ಯ ನರೇಂದ್ರ ಮೋದಿ ಅವರಿಗೆ ಮತ್ತಷ್ಟು ಶಕ್ತಿ ತುಂಬಲು ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಕೋರಿದರು.
ಕೇಂದ್ರ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರ ಅಕಾಲಿಕ ಸಾವು ನಮ್ಮನ್ನೂ ದಿಗ್ಬ್ರಮೆಗೊಳಿಸಿದೆ, ಸರಳ ಸಜ್ಜನಿಕೆಗೆ ಹೆಸರುವಾಸಿಯಾಗಿದ್ದ ಅಂಗಡಿ ಅವರು ನನಗೆ ಉತ್ತಮ ಮಾರ್ಗದರ್ಶಿಯಾಗಿದ್ದರು, ಕರ್ನಾಟಕಕ್ಕೆ ಸಾಕಷ್ಟು ಅನುದಾನವನ್ನು ತಂದಿದ್ದರು, ಕೇಂದ್ರ ರೈಲ್ವೆ ಸಚಿವರಾಗಿ ಉತ್ತಮವಾಗಿ ಕಾರ್ಯ ನಿರ್ವಹಿಸಿದರು. ಸರಕಾರದಿಂದ ಅತೀ ಹೆಚ್ಚು ಅನುದಾನ ತಂದು ತಮ್ಮ ಲೋಕಸಭಾ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಪರ ಕೆಲಸಗಳನ್ನು ಕೈಗೊಂಡಿದ್ದರು. ಇನ್ನಷ್ಟು ಎತ್ತರಕ್ಕೆ ಬೆಳೆಯುತ್ತಿರುವ ಸಂದರ್ಭದಲ್ಲಿ ವಿಧಿಯಾಟದಿಂದ ಕೊರೋನಾಗೆ ಬಲಿಯಾದರು. ಆಕಸ್ಮಿಕವಾಗಿ ಬಂದಿರುವ ಈ ಚುನಾವಣೆಯಲ್ಲಿ ಖುಷಿಯಿಂದ ಮತ ಕೇಳಲು ಆಗುತ್ತಿಲ್ಲ. ಏಕೆಂದರೆ ನಿಷ್ಕಳಂಕ ವ್ಯಕ್ತಿತ್ವದ ಸುರೇಶ ಅಂಗಡಿ ಅವರ ಸಾವನ್ನೂ ಇನ್ನೂ ಮರೆಯೋಕೆ ಆಗುತ್ತಿಲ್ಲ. ಅನಿವಾರ‍್ಯವಾಗಿ ಚುನಾವಣೆಯನ್ನು ಎದುರಿಸಬೇಕಾಗಿದ್ದು, ಅಂಗಡಿ ಅವರ ಧರ್ಮ ಪತ್ನಿಯನ್ನು ಕಣಕ್ಕಿಳಿಸಲಾಗಿದೆ. ಪ್ರಧಾನಿ ನರೇಂದ್ರ ಅವರ ಕೈ ಬಲಪಡಿಸಲು ಮಂಗಳಾ ಅವರಿಗೆ ಆಶಿರ್ವಾದ ಮಾಡುವಂತೆ ಅವರು ಕೋರಿದರು.
ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಬಹುಮತ ಪಡೆಯಲಿದೆ. ಪಶ್ಚಿಮಬಂಗಾಳದಲ್ಲಿ ಮತದಾರರು ದೀದಿಗೆ ಟಾಟಾ ಹೇಳಲಿದ್ದಾರೆ, ಅಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರಲ್ಲಿದೆ, ಆಸ್ಸಾಂದಲ್ಲಿ ಬಿಜೆಪಿ ಆಡಳಿತ ನಡೆಸಲಿದ್ದು, ಎಲ್ಲಡೇ ನಮ್ಮ ಪಕ್ಷವೇ ಅಧಿಕಾರದಲ್ಲಿದೆ. ಕಾಂಗ್ರೇಸ್ ಒಂದೂ ರಾಜ್ಯದಲ್ಲಿ ಅಧಿಕಾರ ಪಡೆಯಲಾಗದ ಹೀನಾಯ ಸ್ಥಿತಿಗೆ ಬಂದಿದೆ ಎಂದು ಹೇಳಿದರು.
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರಗಳು ಜನಪರ ಹಾಗೂ ರೈತ ಪರ ಆಡಳಿತ ನಡೆಸುತ್ತಿವೆ, ರೈತರಿಗಾಗಿಯೇ ಸಾಕಷ್ಟು ಯೋಜನೆಗಳನ್ನು ರೂಪಿಸಿವೇ, ಬೆಳಗಾವಿ ಸಮಗ್ರ ಅಭಿವೃದ್ಧಿಗಾಗಿ ಎ.೧೭ ರಂದು ನಡೆಯುವ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿತಿಗೆ ಮತ ನೀಡಿ ಆಶೀರ್ವದಿಸುವಂತೆ ಮತದಾರರಲ್ಲಿ ಕೋರಿದರು.
ಅರಭಾವಿಯಲ್ಲಿ ಹೆಚ್ಚಿನ ಲೀಡ್: ಅರಭಾವಿ ಕ್ಷೇತ್ರಕ್ಕೆ ಪ್ರಚಾರಕ್ಕೆ ಬರುತ್ತಿರುವ ಸಂಧರ್ಭದಲ್ಲಿ ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಕೆಲವೊಂದು ಕಾರಣಾಂತರಗಳಿಂದ ಪ್ರಚಾರದಲ್ಲಿ ಭಾಗಿಯಾಗುತ್ತಿಲ್ಲ, ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸುರೇಶ ಅಂಗಡಿ ಅವರಿಗೆ ನೀಡಿದ್ದ ಮುನ್ನಡೆ ಮತಗಳನ್ನು ಈ ಚುನಾವಣೆಯಲ್ಲಿ ಮಂಗಳಾ ಅಂಗಡಿ ಅವರಿಗೆ ಅತ್ಯಧಿಕ ಮತಗಳ ಮುನ್ನಡೆಯನ್ನು ನೀಡುವದಾಗಿ ಪ್ರಕಟಿಸಿದ್ದಾರೆ ಎಂದು ನಳೀನಕುಮಾರ ಕಟೀಲ ಸಭೆಯಲ್ಲಿ ತಿಳಿಸಿದರು.
ಸಚಿವ ಉಮೇಶ ಕತ್ತಿ, ಸಂಸದ ಈರಣ್ಣಾ ಕಡಾಡಿ, ಮಾಜಿ ಸಂಸದ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ರಾಜ್ಯ ಯುವಮೋರ್ಚಾ ರಾಜ್ಯಾಧ್ಯಕ್ಷ ಡಾ: ಸತೀಶಕುಮಾರ, ಮಂಗಳೂರ ಜಿಲ್ಲಾಧ್ಯಕ್ಷ ಸತೀಶ ರೈ ಹಾಗೂ ಬಿಜೆಪಿ ಪದಾಧಿಕಾರಿಗಳು, ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ ಮತ್ತಿಉತರರು ಉಪಸ್ಥಿತರಿದ್ದರು. ಮಾಜಿ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಇನ್ನೆರಡು ದಿನಗಳಲ್ಲಿ ಬಾಲಚಂದ್ರ ಜಾರಕಿಹೊಳಿ ಪ್ರಚಾರಕ್ಕೆ – ಸಚಿವ ಉಮೇಶ್ ಕತ್ತಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button