
ಪ್ರಗತಿವಾಹಿನಿ ಸುದ್ದಿ: ಜನರು ಹೆಚ್ಚು ಹೆಚ್ಚು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಳಕೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲಿದೆ ಎಂದು ಪೌರಾಡಳಿತ ಸಚಿವ ರಹೀಮ್ ಖಾನ್ ಭರವಸೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ‘ಇವೈಸ್ ರೆಂಟಲ್ಸ್ ‘ ಆನ್ಲೈನ್ ದ್ವಿಚಕ್ರ ವಾಹನ ಬಾಡಿಗೆ ನೀಡುವ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿ ಸಚಿವರು ಮಾತನಾಡಿದರು.
ವಾಯು ಮಾಲಿನ್ಯದಿಂದ ಪರಿಸರ ಹಾಳಾಗುತ್ತಿದ್ದು, ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ.
ದಿನೇ ದಿನೇ ಇಂಧನ ಬೆಲೆ ಗಗನಮುಖಿಯಾಗುತ್ತಿದ್ದು, ಬಡವರು ಹಾಗೂ ಕೆಳಮಧ್ಯಮ ವರ್ಗದವರಿಗೆ ಇದು ಹೊರೆಯಾಗಿದೆ. ಈ ಸಮಸ್ಯೆಗೆ ವಿದ್ಯುತ್ ಚಾಲಿತ ವಾಹನಗಳು ಪರ್ಯಾಯ ಸಾರಿಗೆ ಸಾಧನಗಳಾಗಿವೆ ಎಂದು ಪೌರಾಡಳಿತ ಸಚಿವ ರಹೀಮ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳು ಕೈಗೊಳ್ಳುವ ಪ್ರಯತ್ನಗಳಿಗೆ ರಾಜ್ಯ ಸರ್ಕಾರ ಸಂಪೂರ್ಣ ಉತ್ತೇಜನ ನೀಡಲಿದೆ ಎಂದು ಪೌರಾಡಳಿತ ಸಚಿವರು ಸಮಾರಂಭದಲ್ಲಿ ಘೋಷಿಸಿದರು.
ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸ್ಪರ್ಧೆ ವಿಜೇತ ಗಿಲ್ಲಿ ನಟ ‘ಇವೈಸ್ ರೆಂಟಲ್ಸ್’ ನ ನೂತನ ದ್ವಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ಸಮರ್ಪಿಸಿದರು.
ಈ ವೇಳೆ ಮಾತನಾಡಿದ ಗಿಲ್ಲಿ ನಟ, “ಗ್ರಾಮೀಣ ಭಾಗದಿಂದ ಉದ್ಯೋಗ ಅರಸಿ ಬೆಂಗಳೂರಿಗೆ ಬರುವ ಯುವಕ-ಯುವತಿಯರಿಗೆ ಹೊಸ ದ್ವಿಚಕ್ರ ವಾಹನ ಖರೀದಿ ಮಾಡಲು ಹಣ ಸಾಲದು. ಇಂಥವರಿಗೆ ಬಾಡಿಗೆ ಆಧಾರದಲ್ಲಿ ‘ಇವೈಸ್ ರೆಂಟಲ್ಸ್’ ವಾಹನಗಳು ತುಂಬಾ ಉಪಯುಕ್ತವಾಗಿವೆ ಎಂದರು. ಮಾಜಿ ಶಾಸಕಿ ಸೌಮ್ಯ ರೆಡ್ಡಿ, ಬಿಗ್ ಬಾಸ್ ಖ್ಯಾತಿಯ ‘ಒಳ್ಳೆ ಹುಡುಗ ಪ್ರಥಮ್’, ಕಿರುತೆರೆ ರಿಯಾಲಿಟಿ ಶೋಗಳಿಂದ ಮನೆ ಮಾತಾಗಿರುವ ರಜತ್, ಇವೈಸ್ ರೆಂಟಲ್ಸ್ ಸಂಸ್ಥಾಪಕ ಮುಖ್ಯ ಕಾರ್ಯ ನಿರ್ವಾಹಕ ಮುಖ್ಯಸ್ಥ ಸುರೇಶ್ ರೆಡ್ಡಿ, ನಿರ್ದೇಶಕ ಸುರೇಶ್, 2021ನೇ ಸಾಲಿನ ಮಿಸ್ ಇಂಡಿಯಾ ಪ್ರಶಸ್ತಿ ಪಡೆದ ಸ್ಮಿತಾ ಪ್ರಭು, ಸೇರಿದಂತೆ ಹಲವು ಗಣ್ಯರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.




