Latest

*ಶಾಲೆಗೆ ಹೋಗುತ್ತಿದ್ದ ಮಗನನ್ನೇ ಕಿಡ್ನ್ಯಾಪ್ ಮಾಡಿದ ತಂದೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಇಲ್ಲೊಬ್ಬ ಪತಿಮಹಾಶಯ ಪತ್ನಿಯೊಂದಿಗೆ ಜಗಳವಾಡಿ ಮಗನನ್ನೇ ಅಪಹರಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಶಾಲೆಗೆ ಮಗುವನ್ನು ಕಳುಹಿಸಲು ಆಟೋದಲ್ಲಿ ಬಂದಿದ್ದ ತಾಯಿಯನ್ನು ತಡೆದು ಮಗವನ್ನು ಕಿಡ್ನ್ಯಾಪ್ ಮಾಡಿ ತಂದೆ ಆಟೋದಲ್ಲಿ ಪರಾರಿಯಾಗಿದ್ದಾನೆ. ಮಗುವನ್ನು ಕಿಡ್ನ್ಯಾಪ್ ಮಾಡಿದ್ದನ್ನು ಗಮನಿಸಿದ ಸಬ್ ಇನ್ಸ್ ಪೆಕ್ಟರ್ ಓರ್ವರು ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಹಿಡಿದಿದ್ದಾರೆ.

ವಿದ್ಯಾರಣ್ಯಪುರ ಠಾಣೆ ಸಬ್ ಇನ್ಸ್ ಪೆಕ್ಟರ್ ಡ್ಯೂಟಿ ಮುಗಿಸಿ ಮನೆ ಕಡೆ ಬರುತ್ತಿದ್ದ ವೇಳೆ ಮಹಿಳೆಯೊಬ್ಬರು ಆಟೋದಲ್ಲಿ ತನ್ನ ಮಗನನ್ನು ಶಾಲೆಗೆ ಬಿಡಲು ಜಿಕೆವಿಕೆ ಬಳಿ ಬಂದಿದ್ದಾರೆ. ಈ ವೇಳೆ ಮೂರು ಆಟೋದಲ್ಲಿ ಬಂದ ಗುಂಪು ಮಹಿಳೆಯ ಕೈಯಿಂದ ಮಗುವನ್ನು ಕಿತ್ತುಕೊಂಡು ಆಟೋದಲ್ಲಿ ಕೂರಿಸಿಕೊಂಡು ಪರಾರಿಯಾಗಿದ್ದಾರೆ. ಪತಿಯೇ ಮಗನನ್ನು ಕಿಡ್ನ್ಯಾಪ್ ಮಾಡುತ್ತಿದ್ದಾನೆ ಎಂದು ಮಹಿಳೆ ಕೂಗಿಕೊಂಡಿದ್ದಾರೆ.

ತಕ್ಷಣ ಅದೇ ಮಾರ್ಗದಲ್ಲಿ ಹೋಗುತ್ತಿದ್ದ ಸಬ್ ಇನ್ಸ್ ಪೆಕ್ಟರ್ ಹೊಯ್ಸಳ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಹೊಯ್ಸಳ ಪೊಲೀಸರು ಮೂರು ಆಟೋದಲ್ಲಿ ಸಾಗಿಸುತ್ತಿದ್ದ ಆರೋಪಿಗಳನ್ನು ಹಿಡಿದು ವಶಕ್ಕೆ ಪಡೆದಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಕೋಡಿಗೆಹಳ್ಳಿ ಪೊಲೀಸರು ಮಗುವಿನ ತಂದೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಪತಿ ಪತ್ನಿ ನಡುವೆ ಗಲಾಟೆ-ಜಗಳದಿಂದಾಗಿ ಬೇರೆ ಬೇರೆ ವಾಸವಾಗಿದ್ದರು. ಇದೇ ಕಾರಣಕ್ಕೆ ಈಗ ತಂದೆ ತನ್ನ ಮಗನನ್ನೇ ಕಿಡ್ನಾಮ್ ಮಾಡಿದ್ದಾನೆ ಎನ್ನಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button