Kannada NewsKarnataka NewsLatest

ಸೂತಕ ಕಳೆಯುವ ಮುನ್ನವೇ ಬಿಜೆಪಿಯಲ್ಲಿ ಸನ್ಮಾನ, ಸಂಭ್ರಮ; ಇದೆಂತಹ ಸಂಸ್ಕಾರ?

3 ತಿಂಗಳ ಹಿಂದೆ ಆಯ್ಕೆಯಾದ ಕಡಾಡಿಗೆ ಈಗ ಬೇಕಿತ್ತೇ ಸನ್ಮಾನ?

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ, ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಸುರೇಶ ಅಂಗಡಿ ಮೃತರಾಗಿ ಇನ್ನೂ ವಾರವಾಗಿಲ್ಲ. ಈ ಸೂತಕದ ವಾತಾವರಣದ ಮಧ್ಯೆಯೇ ಬಿಜೆಪಿಯಲ್ಲಿ ಸನ್ಮಾನ, ಸಂಭ್ರಮ ನಡೆದಿದೆ.

ರಾಜ್ಯ ಸಭೆಗೆ ಜೂನ್ ತಿಂಗಳಲ್ಲಿ ಆಯ್ಕೆಯಾದ ಈರಣ್ಣಾ ಕಡಾಡಿ ಅವರನ್ನು ಭಾನುವಾರ ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ  ಸಂಜಯ ಪಾಟೀಲ ಸನ್ಮಾನಿಸಿದರು.

ಈ ಕುರಿತು ಸಂಜಯ ಪಾಟೀಲ ಅವರೇ ಸ್ವತಃ ಮಾಧ್ಯಮ ಪ್ರಕಟಣೆ ನೀಡಿದ್ದಾರೆ – “ದಿನಾಂಕ: ೨೭.೦೯.೨೦೨೦ ರಂದು ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಕಾರ್ಯಾಲಯದಲ್ಲಿ ನೂತನವಾಗಿ ರಾಜ್ಯಸಭೆಗೆ ಆಯ್ಕೆಯಾದ ಶ್ರೀ ಈರಣ್ಣಾ ಕಡಾಡಿ ಅವರಿಗೆ ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ವತಿಯಿಂದ ಜಿಲ್ಲಾಧ್ಯಕ್ಷರಾದ ಶ್ರೀ ಸಂಜಯ ಪಾಟೀಲ ಅವರು ಸನ್ಮಾನ ಮಾಡಿದರು” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ  ಸಂಜಯ ಪಾಟೀಲ, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಮೋಹಿತೆ, ಸುಭಾಷ ಪಾಟೀಲ, ಗ್ರಾಮೀಣ ಮಂಡಲ ಅಧ್ಯಕ್ಷ ಧನಂಜಯ ಜಾಧವ, ವೀರಭದ್ರಯ್ಯ ಪೂಜಾರ, ನೀತಿನ ಚೌಗುಲೆ, ಅಭಯ ಅವಲಕ್ಕಿ ಉಪಸ್ಥಿತರಿದ್ದರು ಎಂದೂ ತಿಳಿಸಿದ್ದಾರೆ.

ಈಗೇಕೆ ಸನ್ಮಾನ?

ಈರಣ್ಣ ಕಡಾಡಿ 3 ತಿಂಗಳ ಹಿಂದೆಯೇ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಪಕ್ಷದ ಜಿಲ್ಲಾ ಘಟಕ ಅವರನ್ನು ಸನ್ಮಾನಿಸಲು 3 ತಿಂಗಳು ಬೇಕಾಯಿತೆೆ? ನೂತನವಾಗಿ ಆಯ್ಕೆಯಾದ… ಎಂದು ಬೇರೆ ಉಲ್ಲೇಖಿಸಿದ್ದಾರೆ.

ಎಲ್ಲಕ್ಕಿಂತ ವಿಪರ್ಯಾಸವೆಂದರೆ, ಬೆಳಗಾವಿ ಲೋಕಸಭಾ ಕ್ಷೇತ್ರದ ಸದಸ್ಯ, ಕೇಂದ್ರದ ಸಚಿವರಾಗಿದ್ದ ಸುರೇಶ ಅಂಗಡಿ ಮೃತರಾಗಿ ಇನ್ನೂ ವಾರ ಕಳೆದಿಲ್ಲ. ಇಡೀ ಕ್ಷೇತ್ರದಲ್ಲಿ ಸೂತಕದ ವಾತಾವರಣವಿದೆ. ಈ ಸಂದರ್ಭದಲ್ಲಿ, 3 ತಿಂಗಳ ಹಿಂದೆ ಆಯ್ಕೆಯಾದವರನ್ನು ಸನ್ಮಾನಿಸುವುದರ ಹಿಂದಿನ ಉದ್ದೇಶವೇ ಸಂಶಯಾಸ್ಪದವಾಗಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button