
ಪ್ರಗತಿವಾಹಿನಿ ಸುದ್ದಿ: ಪ್ರವಾಸಿಗರ ನೆಚ್ಚಿನ ಸ್ಥಳ ಪಕ್ಕದ ಗೋವಾ ರಾಜ್ಯ, ಸಮಯ ಸಿಕ್ರೆ ಸಾಕು ಗೋವಾ ಟ್ರೀಪ್ ಗೆ ರೇಡಿ ಆಗ್ತಿರಿ. ಹೀಗೆ ಗೋವಾ ಹೋಗುವ ಪ್ರವಾಸಿಗರಿಗೆ ಗೋವಾ ಸರ್ಕಾರ ಮಾರ್ಗಸೂಚಿ ಪ್ರಕಟಿಸಲು ಮುಂದಾಗಿದೆ.
ಗೋವಾಕ್ಕೆ ತೆರಳುವ ಪ್ರವಾಸಿಗರು, ಅಲ್ಲಿಯ ಬೀಚ್, ಚರ್ಚ್ ಹಾಗೂ ದೇವಾಲಯಗಳಿಗೆ ಭೇಟಿ ನೀಡುವುದು ಸಹಜ. ಹಾಗಾಗಿ ಗೋವಾದಲ್ಲಿರುವ ದೇವಾಲಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರವಾಸಿಗರ ಭೇಟಿಯ ಸಮಯವನ್ನು ನಿರ್ಧರಿಸಬೇಕು ಎಂದು ಗೋವಾ ರಾಜ್ಯದ ದೇವಾಲಯ ಸಮಿತಿಗಳು ಒತ್ತಾಯಿಸಿದ್ದು, ಯಾರಿಗೂ ಅನಾನುಕೂಲವಾಗದಂತೆ ಸೌಲಭ್ಯಗಳನ್ನು ಒದಗಿಸಬೇಕು ಎಂದು ಸಮೀತಿ ಮನವಿ ಮಾಡಿದೆ.
ಗೋವಾ ರಾಜ್ಯದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರವಾಸೋದ್ಯಮ ಇಲಾಖೆ ಏಕಾದಶಿ ತೀರ್ಥ ಉಪಕ್ರಮವನ್ನು ಪ್ರಾರಂಭಿಸಿದೆ. ಏಕಾದಶಿ ತೀರ್ಥ ಉಪಕ್ರಮದಡಿಯಲ್ಲಿ, 11 ಪ್ರಸಿದ್ಧ ದೇವಾಲಯಗಳನ್ನು ಆಯ್ಕೆ ಮಾಡುವ ಮೂಲಕ ತೀರ್ಥಯಾತ್ರೆ ಸರ್ಕೀಟ್ ರಚಿಸಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಪ್ರಕ್ರಿಯೆಯನ್ನು ಪ್ರಾರಂಭಿಸಲು ಎಲ್ಲಾ ಹನ್ನೊಂದು ದೇವಾಲಯಗಳ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಲಾಗಿದೆ.
ದೇವಾಲಯಗಳಿಗೆ ಭೇಟಿ ನೀಡುವ ಪ್ರವಾಸಿಗರು ನಿಯಮಗಳನ್ನು ಪಾಲಿಸಬೇಕು ಮತ್ತು ದೇವಾಲಯಗಳ ಪಾವಿತ್ರ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಅಲ್ಲದೆ, ದೇವಾಲಯಗಳು ಪ್ರಮುಖ ಹಬ್ಬಗಳು ಅಥವಾ ಜಾತ್ರೆಗಳ ವೇಳೆ ಅವುಗಳ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು, ಪ್ರವಾಸಿಗರ ಭೇಟಿಯ ದಿನವನ್ನು ನಿರ್ಧರಿಸಬೇಕು ಎಂದು ಸಮಿತಿ ತಿಳಿಸಿದೆ.
ಪ್ರವಾಸಿಗರನ್ನು ಕರೆದೊಯ್ಯುವ ಬಸ್ಸುಗಳು ಇತರೆ ವಾಹನಗಳು ದೇವಾಲಯ ಪ್ರದೇಶಕ್ಕೆ ಬಂದಾಗ ಪಾರ್ಕಿಂಗ್ ಸಮಸ್ಯೆ ಉದ್ಭವಿಸುತ್ತದೆ. ಇದಕ್ಕಾಗಿ, ಪ್ರವಾಸೋದ್ಯಮ ಇಲಾಖೆಯು ದೇವಾಲಯ ಪ್ರದೇಶದಲ್ಲಿನ ಸಂಚಾರ ಸಮಸ್ಯೆಯನ್ನು ಪರಿಹರಿಸಬೇಕು ಮತ್ತು ಸಂಚಾರ ದಟ್ಟಣೆಯನ್ನು ನಿಲ್ಲಿಸಿ, ಪ್ರವಾಸಿಗರು ದೇವಾಲಯ ಪ್ರದೇಶದಲ್ಲಿ ಮುಕ್ತವಾಗಿ ಚಲಿಸಲು ಸಾಧ್ಯವಾಗುವಂತೆ ಮಾಡಬೇಕು ಎಂದೂ ಮನವಿ ಮಾಡಿದೆ.