Belagavi NewsBelgaum NewsKannada NewsKarnataka News

ಮಹಾದಾಯಿ ಯೋಜನೆಗೆ ಜಾರಿಗೆ ಸರ್ಕಾರ ಸಿದ್ದ: ಸಿದ್ಧರಾಮಯ್ಯ

———————————————————————————–

ಅಥಣಿ ತಾಲೂಕಿನ 95% ಪ್ರತಿಶತ ಪ್ರದೇಶಕ್ಕೆ ನೀರಾವರಿ ಸೌಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಅಥಣಿ ತಾಲೂಕಿನ ರೈತರ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆಯನ್ನು ಜಾರಿಗೆ ತರಲಾಗಿದೆ. ತೆಲಸಂಗ, ಖಿಲಾರದಡ್ಡಿ, ಬೊಸಲೆವಾಡಿ, ಕನ್ನಾಳ, ಪಡತರವಾಡಿ, ಬನ್ನೂರು, ಕಕಮರಿ, ಕೊಟ್ಟಲಗಿ ಹಾಗೂ ಕರಿಮಸೂತಿ ಗ್ರಾಮಗಳನ್ನು ಒಳಗೊಂಡಂತೆ ಸುಮಾರು 19,274.00 ಹೆಕ್ಟೇರ್ ಪ್ರದೇಶಕ್ಕೆ ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆ ಅನುಕೂಲವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಜಲಸಂಪನ್ಮೂಲ ಇಲಾಖೆ ವತಿಯಿಂದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿಯಲ್ಲಿ ಬುಧವಾರ (ಮಾ.06) ನಡೆದ ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆ ಬಹಳ ದಿನಗಳಿಂದ ನನೆಗುದಿಗೆ ಬಿದ್ದಿತ್ತು. ಕೃಷ್ಣಾ ನದಿಯ ಎಡದಂಡೆಯಿಂದ 2.903 ಟಿ.ಎಂ.ಸಿ ನೀರು ಎತ್ತುವ ಮೂಲಕ ರೈತರ ಅನುಕೂಲಕ್ಕಾಗಿ ಯೋಜನೆ ಪ್ರಾರಂಭಿಸಲಾಗಿದೆ. ಇಲ್ಲಿನ ಶಾಸಕರ ಬೇಡಿಕೆಯಂತೆ ಅಂದಾಜು 1486 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಚಾಲನೆಗೊಳ್ಳಲಿದೆ. ನೀರು ಲಭ್ಯತೆಯಿದ್ದ ಪ್ರದೇಶದ ಪ್ರತಿ ಹನಿ ನೀರು ರೈತರಿಗೆ ಉಪಯೋಗವಾಗಬೇಕು. ರೈತರ ಜಮೀನುಗಳಿಗೆ ಹರಿ ಬಿಡುವ ಮೂಲಕ ನೀರು ಸಮರ್ಪಕ ಬಳಕೆಯಾಗಬೇಕು ಎಂದು ಹೇಳಿದರು.

ಈ ಯೋಜನೆಯಿಂದ ಅಥಣಿ ತಾಲೂಕಿನ 95% ಪ್ರತಿಶತ ನಿರಾವರಿ ಸಮಸ್ಯೆ ಕಡಿಮೆಯಾಗಲಿದೆ. ಕೆರೆಗಳಲ್ಲಿ ನೀರು ತುಂಬಿಸುವ ಮೂಲಕ ಅಂತರ್ಜಲ ಮೇಲೆತ್ತುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಕೆರೆ ತುಂಬಿಸುವ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ ಇದರಿಂದ ಅಂತರ್ಜಾಲ ಕುಸಿತ ತಪ್ಪಿಸಬಹುದು ಎಂದು ತಿಳಿಸಿದರು.

ಮಹಾದಾಯಿ ಯೋಜನೆಗೆ ಜಾರಿಗೆ ಸರ್ಕಾರ ಸಿದ್ದ:

ಸರ್ಕಾರ ಈ ಹಿಂದೆಯೂ ಅಧಿಕಾರದ ಅವಧಿಯಲ್ಲಿ ತಿಳಿಸಿದಂತೆ ನೀರಾವರಿ ಯೋಜನೆಗಳಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ ನೀರಾವರಿ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಿದ್ದೇವೆ. ಮಹಾದಾಯಿ ಯೋಜನೆ ಜಾರಿಗೆ ನ್ಯಾಯಾಲಯದಿಂದ ತಡೆಯಾಜ್ಞೆಯಿದೆ.  ನ್ಯಾಯಾಲಯದಿಂದ ಕ್ಲಿಯರೆನ್ಸ್ ಸಿಕ್ಕರೆ ಉತ್ತರ ಕರ್ನಾಟಕ ಭಾಗದ ಜನರಿಗೆ ಅಭಿವೃದ್ಧಿಗೆ ಕೂಡಲೇ ಮಹಾದಾಯಿ ಯೋಜನೆ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಪ್ರಣಾಳಿಕೆ ನೀಡಿದ ಭರವಸೆಗಳನ್ನು ಈಡೇರಿಸಿದೆ. ಚುನಾವಣೆಗಿಂತ ಮುಂಚಿತವಾಗಿ ಹೇಳಿದ ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಜಾರಿಗೆ ತರಲಾಗಿದೆ.

ಸರ್ಕಾರ ರಾಜ್ಯದ ಎಲ್ಲ ಹೆಣ್ಣುಮಕ್ಕಳಿಗೆ ಶಕ್ತಿ ಯೋಜನೆ ಮೂಲಕ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಕಲ್ಪಿಸಲಾಗಿದೆ.

ಮುಂದಿನ ವರ್ಷ ನೀರಾವರಿ, ರಸ್ತೆ ನಿರ್ಮಾಣ, ಮೂಲಭೂತ ಸೌಕರ್ಯ, ಗ್ಯಾರಂಟಿ ಯೋಜನೆಗಳು ಸೇರಿದಂತೆ ಎಲ್ಲಾ ಯೋಜನೆಗಳು, ಅಭಿವೃದ್ಧಿ ಕಾಮಗಾರಿಗಳಿಗೆ 54 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯ ಮಾಡಲಾಗುವುದು ಎಂದು ತಿಳಿಸಿದರು.

ಆಂಜನೇಯ ಜನ್ಮಸ್ಥಳ ಅಭಿವೃದ್ಧಿಗೆ ಕ್ರಿಯಾ ಯೋಜನೆ:

ಗಂಗಾವತಿ ತಾಲೂಕಿನ ಆಂಜನೇಯ ಜನ್ಮ ಸ್ಥಳ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ಅನುದಾನ ಒದಗಿಸಲಾಗುವುದು. ಸಾಮಾಜಿಕ ಕ್ರಾಂತಿ ಮಾಡಿದ ವಿಶ್ವಗುರು ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಅದೇ ರೀತಿಯಲ್ಲಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಜಗಜ್ಯೋತಿ ಬಸವಣ್ಣವರ ಫೋಟೋ ಇಡುವುದು ಕಡ್ಡಾಯ ಎಂದು ಸರಕಾರ ಆದೇಶ ಹೊರಡಿಸಲಾಗಿದೆ.

ಬಡವರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಪ್ರತಿ ತಿಂಗಳು 1 ಕೋಟಿ 20 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಪ್ರತಿ ತಿಂಗಳಿಗೆ 2 ಸಾವಿರ ನೀಡುವುದರ ಮೂಲಕ ಗೃಹಲಕ್ಷ್ಮೀ ಯೋಜನೆ ಜಾರಿಗೆ ತಂದಿರುವುದು ರಾಜ್ಯದ ಜನರಿಗೆ ಅನುಕೂಲದಾಯಕವಾಗಿದೆ. ಪೆಟ್ರೋಲ್, ಡೀಸೆಲ್, ದವಸ ಧಾನ್ಯಗಳ ಬೆಲೆ ಏರಿಕೆಗೆ ರಾಜ್ಯದ ಜನತೆ ಬೇಸತ್ತು ಹೋಗಿತ್ತು. ಸರ್ಕಾರದ ಗ್ಯಾರೆಂಟಿ ಯೋಜನೆಗಳ ಮೂಲಕ ರಾಜ್ಯದ ಜನತೆಗೆ ಬಹಳ ಅನುಕೂಲವಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

ಇದಕ್ಕೂ ಮುನ್ನ ಮಾತನಾಡಿದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಅನ್ನಭಾಗ್ಯ, ಗ್ರಹಲಕ್ಷ್ಮೀ, ಶಕ್ತಿ ಯೋಜನೆ, ಗೃಹಜ್ಯೋತಿ ಹಾಗೂ ಯುವನಿಧಿ ಯೋಜನೆಗಳನ್ನು ರಾಜ್ಯದ ಜನತೆಯ ಮನೆ ಬಾಗಿಲಿಗೆ ತಲುಪಿಸಲಾಗಿದೆ.  ಈ ಭಾಗದ ಅಭಿವೃದ್ಧಿಗೆ ಶಾಸಕರು ನಿರಂತರ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಹಸಿವು ಮುಕ್ತ ರಾಜ್ಯ ನಿರ್ಮಾಣಕ್ಕೆ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತಿದೆ. ರಾಜ್ಯದ ಕುಟುಂಬಗಳ ಯಜಮಾನಿಯರಿಗೆ ಪ್ರತಿ ತಿಂಗಳು 2 ಸಾವಿರ ಹಣ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ. ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.

ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅದೇ ರೀತಿಯಲ್ಲಿ 

ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆಯ ಕೂಡ ಪ್ರಾರಂಭಿಸಲಾಗಿದೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳ ನೀರಿನ ಸಮಸ್ಯೆ ಬಗೆ ಹರಿಯಲಿದೆ. ಮುಂಬರುವ 2 ವರ್ಷಗಳಲ್ಲಿ ಏತ ನೀರಾವರಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದರು.

  • ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಮಾತಿನ ಮುಖ್ಯಾಂಶಗಳು:*

“ಬಿಜೆಪಿಗೆ ಸುಳ್ಳೇ ಮನೆದೇವರು. ಯಾವುದೇ ದೊಡ್ಡ ಕಾರ್ಯಕ್ರಮವನ್ನು ತರುವಲ್ಲಿ ಅವರಿಂದ ಸಾಧ್ಯವಿಲ್ಲ. ಬಿಡಿಗಾಸು ಸಹ ಅವರಿಂದ ರಾಜ್ಯಕ್ಕೆ ದೊರೆಯುತ್ತಿಲ್ಲ. ಜನರ ಮನದಲ್ಲಿ ಉಳಿಯುವ ಕಾರ್ಯಕ್ರಮವನ್ನು ಬಿಜೆಪಿ ನೀಡಿದ್ದೆ ಆದಲ್ಲಿ ನಾನು ಅವರಿಗೆ ಶರಣಾಗಲು ಸಿದ್ಧ.

ಅಥಣಿ ತಾಲೂಕಿನ ಪಾಲಿಗೆ ಇದೊಂದು ಐತಿಹಾಸಿಕ ಮತ್ತು ಪವಿತ್ರವಾದ ದಿನ. ನಾನು ಆಗಾಗ ಒಂದು ಮಾತು ಹೇಳುತ್ತಿರುತ್ತೇನೆ. ನಾನು ಮೇಕೆದಾಟು ಪಾದಯಾತ್ರೆ ಹಮ್ಮಿಕೊಂಡ ಸಂದರ್ಭದಲ್ಲಿ ನಮ್ಮ ನೀರು ನಮ್ಮ ಹಕ್ಕು ಮಾಡುತ್ತಿದ್ದೇವೆ ಎಂದರೆ ಬುದ್ಧ- ಬಸವ ಮನೆ ಬಿಟ್ಟ ಘಳಿಗೆಯಲ್ಲಿ, ಪೈಗಂಬರ್ ದಿವ್ಯ ವಾಣಿ ಕೇಳಿದ ಘಳಿಗೆಯಲ್ಲಿ, ಮಹಾತ್ಮ ಗಾಂಧಿ ಕಾಂಗ್ರೆಸ್ ನಾಯಕತ್ವ ವಹಿಸಿದ ಘಳಿಗೆಯಲ್ಲಿ, ಸೋನಿಯಾ ಗಾಂಧಿ ಈ ದೇಶಕ್ಕೋಸ್ಕರ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದ ಘಳಿಗೆಯಲ್ಲಿ ಮತ್ತು ಮನಮೋಹನ್ ಸಿಂಗ್ ಆರ್ಥಿಕ ತಜ್ಞ ಈ ರಾಷ್ಟ್ರವನ್ನು ಮುನ್ನಡೆಸಿದ ಘಳಿಗೆಯಲ್ಲಿ ಈ ಕಾರ್ಯಕ್ರಮ ಮಾಡಿದ್ದೇವೆ ಅಂತ ಹೇಳಿದ್ದೆ. 

ಅದೇ ರೀತಿ ಲಕ್ಷ್ಮಣ ಸವದಿ ನಮ್ಮ ಮಿತ್ರರು. ಅವರು ಎಷ್ಟು ಬುದ್ಧಿವಂತರೆಂದರೆ ಈ ಏಳು ತಿಂಗಳಲ್ಲಿ ಎರಡು ಬಾರಿ ನಮ್ಮನ್ನು ತಮ್ಮ ತಾಲೂಕಿಗೆ ಕರೆಸಿಕೊಂಡು, ಅಂತದ್ದೆ ದೊಡ್ಡ ಕಾರ್ಯಕ್ರಮ ಮಾಡಿದರು. ಅದರೊಂದಿಗೆ ನುಡಿದಂತೆ ನಡೆಯಲು ಕಾರಣರಾಗಿದ್ದಾರೆ. 

ಬಸವಣ್ಣನ ನಾಡು, 120 ಮಠಗಳಿರುವ ಈ ಪುಣ್ಯಭೂಮಿಯಲ್ಲಿ ಈ ಕಾರ್ಯಕ್ರಮ ನಡೆಸಿ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲ ಸೇರಿ ಅವರಿಗೆ ಚಿರಋಣಿಯಾಗಿದ್ದೇವೆ. ನೀವೆಲ್ಲ ಸೇರಿ ಜಿಲ್ಲೆಯಲ್ಲಿ ಅತಿ ಹೆಚ್ಚು ಕಾಂಗ್ರೆಸ್ ಶಾಸಕರನ್ನು ಕೊಟ್ಟು ಇಡೀ ರಾಜ್ಯದಲ್ಲಿ 136 ಶಾಸಕರನ್ನು ಆಯ್ಕೆ ಮಾಡುವ ಮೂಲಕ ನುಡಿದಂತೆ ನಡೆಯಲು ಶಕ್ತಿ ಕೊಟ್ಟಿದ್ದಕ್ಕೆ ನಿಮಗೆ ಸಾಷ್ಟಾಂಗ ನಮಸ್ಕಾರ ಅರ್ಪಿಸುತ್ತಿದ್ದೇನೆ.

ಇಂದು ನಮ್ಮ ಈ ಎಲ್ಲಾ ತಾಯಂದಿರನ್ನು ನೋಡಬೇಕು. ಶಕ್ತಿ ಯೋಜನೆಯಿಂದ ಎಲ್ಲರೂ ಪ್ರಯಾಣ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಅಕ್ಕಂದಿರ ಖಾತೆಗೆ ಗ್ಯಾರಂಟಿ ಯೋಜನೆಯ ಹಣ ಹೋಗುತ್ತಿದೆ. ಅವರ ಭಾವನೆ, ನಗುಮುಖ ಹೇಗಿದೆ? ಅವರನ್ನು ನೋಡಲು ನಾವೆಲ್ಲ ಇಲ್ಲಿಗೆ ಬಂದಿದ್ದೇವೆ. ಅಮ್ಮಾಜೇಶ್ವರಿ ನೀರಾವರಿ ಯೋಜನೆ ಶಂಕುಸ್ಥಾಪನೆ ಮಾಡಿದ್ದೇವೆ. ಇದೊಂದು ಬಹಳ ದೊಡ್ಡ ಯೋಜನೆ. ಈ ಯೋಜನೆ ಮೂಲಕ ಈ ಭಾಗದ ಜನರ ಬದುಕು ಹಸನಾಗಲಿದೆ ಎಂದು ಅವರು ಹೇಳಿದರು.

ಜನರಿಗೆ ಅನ್ನಭಾಗ್ಯ, ಗೃಹ ಲಕ್ಷ್ಮಿ ಮುಂತಾದ ಯೋಜನೆಗಳ ಬಗ್ಗೆ ತಿಳಿಸಿ ಹೇಳಬೇಕು. ಈ ಯೋಜನೆಯಿಂದ ಐದು ವರ್ಷಕ್ಕೆ ನಾಲ್ಕು ಲಕ್ಷ ರೂಪಾಯಿ ನಾಗರಿಕರಿಗೆ ಸಿಗುತ್ತದೆ. ಇದಕ್ಕಿಂತ ದೊಡ್ಡದು ಏನು ಮಾಡಬೇಕು. ಬೆಳಗಾವಿ ಜಿಲ್ಲೆಯಲ್ಲಿ ಲಕ್ಷ್ಮಣ ಸವದಿ ಅವರು ಬಹಳ ಅಭಿನಂದನೆಯ ಕೆಲಸ ಮಾಡಿದ್ದಾರೆ. ಅಮ್ಮಾಜೇಶ್ವರಿ ನೀರಾವರಿ ಯೋಜನೆಯನ್ನು ಎರಡು ವರ್ಷದಲ್ಲಿ ಮುಗಿಸುವ ಸಮಯ ಕೊಡುತ್ತೇನೆ. ನಂತರ ನಾವೇ ಬಂದು ಇದರ ಚಾಲನೆ ನೀಡಬೇಕು. 

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಳಸ ಬಂಡೂರಿ ಯೋಜನೆ ಬಗ್ಗೆ ದೊಡ್ಡ ಹಬ್ಬ ಮಾಡಿದರು. ಆದರೆ ಅವರದ್ದೇ ಕೇಂದ್ರ ಸರ್ಕಾರದಿಂದ ಅನುಮತಿ ಪತ್ರ ಕೊಡಲು ಅವರಿಂದ ಸಾಧ್ಯವಾಗುತ್ತಿಲ್ಲ. 27 ಎಂಪಿಗಳು, ಬಲಿಷ್ಠ ಸರ್ಕಾರ ಇದ್ದರೂ ಇನ್ನೂ ಯೋಜನೆ ಪ್ರಾರಂಭ ಮಾಡಿಲ್ಲ. ಯಾವುದೇ ದೊಡ್ಡ ಯೋಜನೆಯನ್ನು ಜಾರಿಗೆ ತಂದಿಲ್ಲ. ಬಿಡಿಗಾಸು ಕೊಡಲು ಬಿಜೆಪಿಯವರಿಂದ ಸಾಧ್ಯವಿಲ್ಲ. ಮತ ಕೇಳಲು ಅವರಿಗೆ ಯಾವ ಹಕ್ಕು ಇಲ್ಲ. ಕಾಂಗ್ರೆಸ್ ಪಕ್ಷ ಜನರ ಕಷ್ಟ ಕಾರ್ಪಣ್ಯದಲ್ಲಿ ಸಹಭಾಗಿಯಾಗಿ ಜನಪರ ಕಾರ್ಯಕ್ರಮ ನಡೆಸುವ ಮೂಲಕ ಜನರ ಮನದಲ್ಲಿದೆ. 

ಸವದಿಯವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ಆದರೆ ಸಂಸತ್ತಿಗೆ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್ ಸಂಸದರನ್ನು ನೀವು ಕೊಡಬೇಕು. ಅಲ್ಲಿಯವರೆಗೆ ನಾನು ಏನು ಹೇಳುವುದಿಲ್ಲ ಎಂದು ತಿಳಿಸಿದರು. ಲಕ್ಷ್ಮಣ ಸವದಿ ಅವರು ಅಥಣಿ ತಾಲೂಕಿನಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡಿದ್ದಾರೆ. ಇದನ್ನು ನೋಡಿ ನಾನು ನನ್ನ ಸಹೋದರ ಡಿ.ಕೆ. ಸುರೇಶ್ ಅವರ ಕಡೆ ಹೇಳಿದೆ. ಕೊನೆಗೆ ಅಧಿಕಾರಿಗಳನ್ನು ಕರೆಸಿ ಈ ಬಗ್ಗೆ ಮಾತನಾಡಿ ಚರ್ಚಿಸಿದ್ದೆ. ಇದೀಗ ಕೃಷಿ ವಿಶ್ವವಿದ್ಯಾಲಯವನ್ನು ಸವದಿ ಅವರು ಕೇಳುತ್ತಿದ್ದಾರೆ. ಬೆಂಗಳೂರಿನ ಖಜಾನೆಯನ್ನು ನಮಗೆ ಕೊಡಿ ಎಂದು ಕೇಳಿಲ್ಲ. ಹೀಗೆ ಕೇಳುವುದು ನಿಮ್ಮ ತಪ್ಪಲ್ಲ. ನಿಮ್ಮ ಋಣ ತೀರಿಸಬೇಕು ಅಲ್ಲವೇ.

ಆಗಾಗ ನಾನು ಒಂದು ಮಾತು ಹೇಳುತ್ತಿರುತ್ತೇನೆ. ಮನುಷ್ಯ ಹುಟ್ಟುವಾಗ ನಾಲ್ಕು ಋಣದಿಂದ ಹುಟ್ಟುತ್ತಾನಂತೆ. ತಂದೆ-ತಾಯಿ, ದೇವರು, ಗುರು ಮತ್ತು ಸಮಾಜದ ಋಣ. ಈ ಋಣವನ್ನು ಧರ್ಮದಿಂದ ನಾವು ತೀರಿಸಬೇಕು. ಈ ನಿಟ್ಟಿನಲ್ಲಿ ಸಮಾಜದ ಅಭಿವೃದ್ದಿಗೆ ತೊಡಗಿಸಿಕೊಂಡ ಸವದಿ ಅವರನ್ನು ಬಹುದೊಡ್ಡ ಅಂತರದಿಂದ ಗೆಲ್ಲಿಸಿ ದಾಖಲೆ ನಿರ್ಮಿಸಿದ್ದೀರಿ. ನನಗೆ ಮಂತ್ರಿ ಸ್ಥಾನ ಕೊಡದೆ ಇದ್ದರೂ ಚಿಂತೆ ಇಲ್ಲ, ತಾಲೂಕಿನ ಜನರ ಋಣ ತೀರಿಸಬೇಕು, ಈ ಕ್ಷೇತ್ರದ ಜನರ ಅಭಿವೃದ್ಧಿ ಮುಖ್ಯ ಎಂದು ಅವರು ಹೇಳಿದ್ದರು. ಅದರಂತೆ ಈಗ ತಾಲೂಕಿನಲ್ಲಿ ಇಷ್ಟು ದೊಡ್ಡ ಯೋಜನೆಗಳನ್ನು ಅವರು ಜಾರಿ ಮಾಡುತ್ತಿದ್ದಾರೆ. ಇಂತಹ ಶಾಸಕರನ್ನು ಪಡೆದುಕೊಂಡ ನೀವೆಲ್ಲ ಭಾಗ್ಯವಂತರು, ಪುಣ್ಯವಂತರು, ಅದೃಷ್ಟವಂತರು ಎಂದು ಹೇಳಲು ನಾನು ಬಯಸುತ್ತೇನೆ.

ಈ ಹಿಂದಿನ ಬಿಜೆಪಿ ಸರಕಾರಕ್ಕೆ ಶಕ್ತಿ ಇರಲಿಲ್ಲ. 38 ಶಾಸಕರನ್ನು ದಳ, 78 ಶಾಸಕರನ್ನು ಕಾಂಗ್ರೆಸ್ ಹೊಂದಿತ್ತು. 104 ಶಾಸಕರನ್ನು ಹೊಂದಿದ್ದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಒಂದೂವರೆ ವರ್ಷಗಳ ಕಾಲ ಸರ್ಕಾರ ಮಾಡಿದೆವು. ಆದರೆ ಬಿಜೆಪಿಯವರು ತಮಗೆ ಬಹುಮತ ಇಲ್ಲದೆ ಇದ್ದರೂ ಆಪರೇಷನ್ ಕಮಲ ಮಾಡಿದರು. ಸವದಿ ಅವರೆ ನಮ್ಮ ಕೆಲ ಶಾಸಕರನ್ನು ಹೊಡೆದುಕೊಂಡು ಹೋದರು. ಅಲ್ವೇ ಸವದಿ ಎಂದು ಪ್ರಶ್ನಿಸಿದರು.

ಬಿಜೆಪಿಯವರಿಗೆ ಜನ ತೀರ್ಪು ಕೊಡದೆ ಇದ್ದರೂ ಅವರು ಸರಕಾರ ರಚಿಸಿದರು. ಆದರೆ ಮೂರೂವರೆ ವರ್ಷದಲ್ಲಿ ನಿಮ್ಮ ಜೀವನದಲ್ಲಿ ಯಾವ ಬದಲಾವಣೆಗಳನ್ನುಂಟು ಮಾಡುವ ಕಾರ್ಯಕ್ರಮವನ್ನು ಅವರು ಕೊಟ್ಟಿದ್ದಾರೆ.  ಅವರ ಅವಧಿಯಲ್ಲಿ ದೇವಸ್ಥಾನ, ದೇವರು ಈ ವಿಷಯಗಳನ್ನು ಬಿಟ್ಟು ಬಿಟ್ಟರೆ ಅವರು ನಿಮ್ಮ ಜೀವನದಲ್ಲಿ ಬದಲಾವಣೆ ಮಾಡುವ ಯಾವ ಕಾರ್ಯಕ್ರಮವನ್ನು ಕೊಟ್ಟಿದ್ದಾರೆ? ಅಂತಹ ಯಾವುದೇ ಕಾರ್ಯಕ್ರಮ ಕೊಟ್ಟಿದ್ದರೆ ನಾನು ಇಂದು ನಿಮ್ಮ ಮುಂದೆ ಬರಲು ಶಕ್ತಿ ಬರುತ್ತಿರಲಿಲ್ಲ. 

ನಾವು ಪ್ರಜಾಧ್ವನಿ ಯಾತ್ರೆ ಮಾಡಿ ಪ್ರಾರಂಭ ಮಾಡಿ ಚಿಕ್ಕೋಡಿಯಲ್ಲಿ ಮೊದಲ ಗ್ಯಾರಂಟಿ ಘೋಷಣೆ ಮಾಡಿದೆವು. 

ನಂತರ ಅಧಿಕಾರಕ್ಕೆ ಬಂದ ಮೇಲೆ ಗ್ಯಾರಂಟಿ ಯೋಜನೆಯನ್ನು ಜಾರಿಗೊಳಿಸಿದೆವು. ಅನ್ನಭಾಗ್ಯ ಮೂಲಕ ಬಡವರಿಗೆ 10 ಕೆ.ಜಿ ಅಕ್ಕಿ. ಗೃಹ ಜ್ಯೋತಿ ಮೂಲಕ 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಮೂಲಕ ಮನೆಯೊಡತಿಯರಿಗೆ ಪ್ರತಿ ತಿಂಗಳು 2 ಸಾವಿರ, ಶಕ್ತಿ ಯೋಜನೆ ಮೂಲಕ ಮಹಿಳೆಯರಿಗೆ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣ ಅವಕಾಶ ಕಲ್ಪಿಸಲಾಗಿದೆ. ಇದರಿಂದ ದೇವಸ್ಥಾನ, ಪ್ರವಾಸಿತಾಣದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ವಿದ್ಯಾವಂತ ನಿರುದ್ಯೋಗಿಗಳಿಗಾಗಿ ಯುವನಿಧಿ ಯೋಜನೆ ಜಾರಿಗೆ ತಂದಿದ್ದರಿಂದ ಯುವ ಸಮೂಹಕ್ಕೆ ಅನುಕೂಲವಾಗಿದೆ. ಇಡೀ ದೇಶದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ತರುವ ಮೂಲಕ ಕಾಂಗ್ರೆಸ್ ಸರ್ಕಾರ ಅತ್ಯುತ್ತಮ ಕೆಲಸ ಮಾಡುತ್ತಿದೆ.

ನೀವು ನಿಮ್ಮ ಸ್ನೇಹಿತರಿಗೆ ಒಂದು ಮಾತು ಹೇಳಬೇಕು. ಕಮಲ ಕೆರೆಯಲ್ಲಿದ್ದರೆ ಚಂದ. ತೆನೆ ಹೊಲದಲ್ಲಿದ್ದರೆ ಚಂದ. ಅದರೆ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಇನ್ನೂ ಚಂದ. ಗ್ಯಾರಂಟಿ ಐದು ಬೆರಳುಗಳು ಸೇರಿ ಕೈ ಗಟ್ಟಿಯಾಗಿ ಆಡಳಿತ ನಡೆಸುತ್ತಿದೆ.

ಕುಮಾರಸ್ವಾಮಿ ಇಂದು ತಮ್ಮ ದಳದ ಬಗ್ಗೆ ಮಾತನಾಡುತ್ತಿಲ್ಲ. ಬಿಜೆಪಿ ವಕ್ತಾರರಾಗಿದ್ದಾರೆ. ಬರೀ ಬಿಜೆಪಿಯ ಸುದ್ದಿ ಮಾತನಾಡುತ್ತಿದ್ದಾರೆ. ಅಂದರೆ ಅವರ ಸ್ಥಿತಿ ಈಗ ಏನಾಗಿರಬೇಕು? ಪಕ್ಷದಲ್ಲಿರುವ ಶಾಸಕರು ಏನಾಗಬಹುದು ಎಂಬ ಚಿಂತೆಯಲ್ಲಿ ಬಿಜೆಪಿ ತಬ್ಬಿಕೊಂಡಿದ್ದಾರೆ. ಅವರ ಮೈತ್ರಿ ಬಗ್ಗೆ ಈಗ ನಾನೇನು ಹೇಳುವುದಿಲ್ಲ. ಚುನಾವಣೆ ಮುಗಿಯಲಿ.

ಬೆಳಗಾವಿ ಜಿಲ್ಲೆಯ ಎರಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ತಂದು ಕೊಡುತ್ತೀರಿ ಎಂಬ ನಂಬಿಕೆ ಮೇಲೆ ನಾವೆಲ್ಲ ಇಲ್ಲಿಗೆ ಬಂದಿದ್ದೇವೆ. ಆದರೆ ನಮ್ಮ ಗ್ಯಾರಂಟಿ ಯೋಜನೆ ಬಗ್ಗೆ ಮಾಜಿ ಮಂತ್ರಿ ಅರಗ ಜ್ಞಾನೇಂದ್ರ ಗ್ಯಾರಂಟಿ ಯೋಜನೆ, 420, ಡುಪ್ಲಿಕೇಟ್ ಎಂದು ಹೇಳುತ್ತಿದ್ದಾರೆ. ನಮ್ಮದು ಡುಪ್ಲಿಕೇಟ್ ಗ್ಯಾರಂಟಿ ಆಗಿದ್ದಲ್ಲಿ ಅವರು ತಮ್ಮ ಪಕ್ಷದವರಿಗೆ ಉಚಿತ ಯೋಜನೆಗಳು ಬೇಡ ಎಂದು ಬರೆದು ಕೊಡಲು ಹೇಳಲಿ.”

ಗ್ಯಾರೆಂಟಿಗಳ ಯೋಜನೆಗಳ ಸಮರ್ಪಕ ಅನುಷ್ಠಾನ;

ಚುನಾವಣೆಯ ಪೂರ್ವದಲ್ಲಿ ರಾಜ್ಯಕ್ಕೆ ನೀಡಿದ ಭರವಸೆಯನ್ನು ಸರ್ಕಾರ ಈಡೇರಿಸಿದೆ. ಬಸವಣ್ಣನವರ ವಚನದಂತೆ ನುಡಿದಂತೆ ನಡೆದ ಸರ್ಕಾರ ನಮ್ಮದಾಗಿದೆ. ಈ ಭಾಗದ ರೈತರು ಸ್ವಾವಲಂಬಿ ಜೀವನ ಸಾಗಿಸಲು ನೀರಿನ ಅವಶ್ಯಕತೆ ಬಹಳಷ್ಟಿದೆ. ಅಥಣಿ ತಾಲೂಕಿನ ಪೂರ್ವಭಾಗದ ಆಸೆಯಂತೆ ಜನರ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಇಂದು ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಕೆಳ ವರ್ಗದ ಬಡ ಜನರು ನೆಮ್ಮದಿಯಿಂದ ಇದ್ದಾರೆ. ಅದರಂತೆ ರಾಜ್ಯದ ಗಡಿ ಭಾಗದ ಸಾಕಷ್ಟು ಹಳ್ಳಿಗಳಲ್ಲಿ ಜನರಿಗೆ, ಜಾನುವಾರುಗಳಿಗೆ, ಪಕ್ಷಿ ಪ್ರಾಣಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಅಥಣಿ ತಾಲೂಕಿನ ರೈತರ ಮಕ್ಕಳ ಅನುಕೂಲಕ್ಕಾಗಿ ಕೃಷಿ ಕಾಲೇಜು ನಿರ್ಮಾಣಕ್ಕೆ ಶಾಸಕ ಲಕ್ಷ್ಮಣ ಸವದಿ ಅವರು ಮನವಿ ಮಾಡಿಕೊಂಡರು.

ಏತ ನೀರಾವರಿ ಯೋಜನೆ; ಬರಗಾಲ ನಿರ್ವಹಣೆ ಸಹಾಯವಾಗಲಿದೆ

ಸುಮಾರು ವರ್ಷಗಳಿಂದ ಈ ಭಾಗದ ರೈತರಿಗೆ ನೀರಾವರಿ ಯೋಜನೆಯ ಅವಶ್ಯಕತೆಯಿತ್ತು. ರೈತರ ಅಭಿವೃದ್ಧಿಗೆ ಸರ್ಕಾರ ಸದಾ ಸಿದ್ಧವಿದೆ. ಪ್ರತಿ ವರ್ಷ ಬರಗಾಲದಲ್ಲಿ ರೈತರಿಗೆ ಬಹಳ ತೊಂದರೆ ಆಗುತಿತ್ತು. ಈ ನೀರಾವರಿ ಯೋಜನೆ ಪ್ರಾರಂಭದಿಂದ ರೈತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ರಾಜ್ಯದಲ್ಲಿ ಸಮಗ್ರ ನೀರಾವರಿ ಅಭಿವೃದ್ಧಿಗೆ ಸರ್ಕಾರ ಬದ್ದವಿದೆ ಎಂದು ಬ್ರಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಮ್. ಬಿ ಪಾಟೀಲ ಅವರು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಮಾತನಾಡಿ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಡಪರ ಯೋಜನೆಗಳಾಗಿವೆ. ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮನಿಯರಿಗೆ ತಿಂಗಳಿಗೆ 2 ಸಾವಿರ ನೀಡುವುದರ ಮೂಲಕ ಪ್ರತಿ ವರ್ಷ 24 ಸಾವಿರ ರೂಪಾಯಿಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ.

ಸುಮಾರು 1486 ಕೋಟಿ ವೆಚ್ಚದಲ್ಲಿ ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆ ಪ್ರಾಂಭಿಸುವ ಮೂಲಕ ಈ ಭಾಗದ ರೈತರ ಅಭಿವೃದ್ಧಿಗೆ ಸರ್ಕಾರ ಮುಂದಾಗಿದೆ. ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ತಿಂಗಳಿಗೆ 5 ಸಾವಿರ ಕೋಟಿ ರೂಪಾಯಿಯನ್ನು ಸರ್ಕಾರ ವ್ಯಯ ಮಾಡುತ್ತಿದೆ. ಅದರ ಜೊತೆಗೆ ಸರ್ಕಾರ ಸಾಕಷ್ಟು ಅಭಿವೃದ್ಧಿಪರ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳುತಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ತಿಳಿಸಿದರು.

ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆಯ ಪ್ರಾರಂಭವಾಗಲು ಶಾಸಕ ಲಕ್ಷ್ಮಣ ಸವದಿ ಅವರ ಪ್ರಾಮಾಣಿಕ ಪ್ರಯತ್ನ ಬಹಳಷ್ಟಿದೆ. ಈ ಭಾಗದ ರೈತರಿಗೆ ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆ ಸಂಜೀವಿನಿ ಆಗಲಿದೆ. ಕೇವಲ ರೈತರಿಗೆ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಆಗಲಿದೆ.

ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಸಾಕಷ್ಟು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಮುಂದಿನ ದಿನಗಳಲ್ಲಿ ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.

ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ:

ಇದಕ್ಕೂ ಮುಂಚೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಲೋಕೋಪಯೋಗಿ ಅಥಣಿ ಶಾಸಕ ಲಕ್ಷ್ಮಣ ಸವದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಗುದ್ದಲಿ ಪೂಜೆ ಸಲ್ಲಿಸುವುದರ ಮೂಲಕ ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ವಿಧಾನ ಪರಿಷತ್ ಶಾಸಕ ಚನ್ನರಾಜ ಹಟ್ಟಿಹೊಳಿ, ವಿಧಾನ ಸಭೆ ಶಾಸಕ ಮಹೇಂದ್ರ ತಮ್ಮಣ್ಣವರ, ಮಹಾರಾಷ್ಟ್ರ ಜತ್ತ ಶಾಸಕರಾದ ವಿಕ್ರಾಂತ ಸಾಮಂತ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ ಸಿಂಗ್,   ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಬೆಳಗಾವಿ ಉತ್ತರ ವಲಯ ಪೋಲಿಸ ಮಹಾನೀರಿಕ್ಷಕ ವಿಕಾಶ ಕುಮಾರ ವಿಕಾಶ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಎಸ್ ಗುಳೇದ, ಕೊಟ್ಟಲಗಿ ಗ್ರಾಮ ಪಂಚಾಯತ ಅಧ್ಯಕ್ಷೆ ನೀಲವ್ವ ತೇಲಿ, ಅಥಣಿ ತಾಲೂಕಿನ ಸುತ್ತ ಮುತ್ತಲಿನ ಗ್ರಾಮದ ಸಾವಿರಾರು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button