
ಪ್ರಗತಿವಾಹಿನಿ ಸುದ್ದಿ: ತಾಳಿ ಕಟ್ಟಿದ 15 ನಿಮಿಷದಲ್ಲೇ ವರ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣಮಂಟಪದಲ್ಲಿ ಇಂದು ನಡೆದಿದೆ.
ವರ ಪ್ರವೀಣ ಕುರ್ನೆ (26) ಮೃತ ದುರ್ದೈವಿ. ಕೆಲವೇ ಕ್ಷಣದಲ್ಲಿ ಮಧು ವಿಧವೆಯಾಗಿದ್ದಾರೆ. ಮದುವೆ ಸಂಭ್ರಮದ ಬದಲು ಸೂತಕದ ಛಾಯೆ ಆವರಿಸಿದೆ.
ಇಂದು ಪ್ರವೀಣ ಕುರ್ನೆಯವರ ವಿವಾಹವಾಗಿತ್ತು. ಆದರೆ, ಮದುವೆ ಸಂಭ್ರಮದ ಕೆಲವೇ ಕ್ಷಣದಲ್ಲಿ ಸೂತಕದ ಛಾಯೆ ಆವರಿಸಿದೆ. ಏಕೆಂದರೆ ತಾಳಿ ಕಟ್ಟಿದ 15 ನಿಮಿಷದಲ್ಲೇ ಪ್ರವೀಣ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ತಾಳಿ ಕಟ್ಟಿದ ನಂತರ ವೇದಿಕೆ ಮೇಲೆ ನವವಧುವರರ ಆರತಕ್ಷತೆಗೆ ನಿಂತಿದ್ದರು. ಕೇವಲ ಎರಡರಿಂದ ಮೂರು ಪೊಟೊ ಮಾತ್ರ ಕ್ಲಿಕ್ ಆಗಿದ್ದವು. ಅಷ್ಟರಲ್ಲೇ ವರ ಪ್ರವೀಣ ಅವರಿಗೆ ಕಾಲು ನಡುಗುವುದು, ಎದೆನೋವು ಶುರುವಾಗಿದೆ. ಕೂಡಲೇ ಕುಟುಂಬಸ್ಥರು ಪ್ರವೀಣ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಪ್ರವೀಣ ಮೃತಪಟ್ಟಿದ್ದರು.
ಮೃತ ಪ್ರವೀಣ ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ನಿವಾಸಿಯಾಗಿದ್ದರು. ಸದ್ಯ ಜಮಖಂಡಿ ನಗರದಲ್ಲಿ ವಾಸವಾಗಿದ್ದಾರೆ. ಇನ್ನು ವಧು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಪಾರ್ಥನಹಳ್ಳಿ ಗ್ರಾಮದವರು. ವಧು, ಪ್ರವೀಣ ಅವರ ಸೋದರ ಮಾವನ ಮಗಳು. ಸೋದರ ಮಾವನ ಮಗಳನ್ನೇ ಪ್ರವೀಣ ಅವರು ವರಸಿದ್ದರು. ಬಂಧು ಬಳಗ ಎಲ್ಲರೂ ಸಂಭ್ರಮದಿಂದ ನವಜೋಡಿಯನ್ನು ಆಶೀರ್ವದಿಸಲು ಬಂದಿದ್ದರು. ಬಂದ ಅತಿಥಿಗಳಿಗೆ ಬರಪೂರ ಊಟ ಮಾಡಿಸಲಾಗಿತ್ತು. ಆದರೆ, ಮದುವೆ ಮಾಡಿಕೊಂಡು ಸುಂದರ ಸಂಸಾರದಲ್ಲಿ ತೇಲಬೇಕಿದ್ದ ವರ ಮಸಣ ಸೇರಿದ್ದಾರೆ. ಇನ್ನು ಮದುಮಗ ತೀರಿಕೊಂಡಿದ್ದೇ ತಡ ನಂದಿಕೇಶ್ವರ ಕಲ್ಯಾಣಮಂಟಪ ಬಿಕೊ ಅಂತಿದೆ. ಅಡುಗೆ, ಪಾತ್ರೆ ಎಲ್ಲವನ್ನೂ ಸ್ಥಳಾಂತರಿಸಲಾಗಿದೆ.
ಈ ದುರಂತ ಘಟನೆ ಕಂಡ ಜನರು “ಇಂತಹ ಘಟನೆ ಆಗಬಾರದಿತ್ತು. ನಮಗೆ ಇದೊಂದು ದುಃಖದ ದಿನ ಮದುವೆಯಲ್ಲಿ ನೂರಾರು ವರ್ಷ ಚೆನ್ನಾಗಿ ಬಾಳಿ ಎಂದು ಶುಭ ಹಾರೈಸಲು ಬಂದ, ನಮಗೆ ಪ್ರವೀಣ ಅವರ ಅಂತ್ಯಸಂಸ್ಕಾರ ನೆರವೇರಿಸಿ ಹೋಗುವಂತಾಗಿದೆ” ಎಂದು ಮಮ್ಮಲ ಮರುಗಿದರು.