ಮಿಣ ಮಿಣ ಪೌಡರ್ ಹೇಳಿಕೆ ವೈರಲ್ ಗೆ ಬಿಜೆಪಿ ವಿರುದ್ಧ ಹರಿಹಾಯ್ದ ಹೆಚ್ ಡಿಕೆ

ಪ್ರಗತಿವಾಹಿನಿ ಸುದ್ದಿ, ರಾಮನಗರ:  ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಬಗ್ಗೆ ನೀಡಿದ್ದ ಮಿಣ ಮಿಣ ಪೌಡರ್ ಎಂಬ ತಮ್ಮ ಹೇಳಿಕೆ ವೈರಲ್ ಮಾಡಿರುವುದು ಬಿಜೆಪಿಗರ ವಿಕೃತ ಮನಸ್ಥಿತಿ ಹಾಗೂ ಅವರಲ್ಲಿನ ಅಸಹ್ಯಕರವಾದ ಆಲೋಚನೆಗಳನ್ನ ತೋರುತ್ತದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಚನ್ನಪಟ್ಟಣದಲ್ಲಿ ಮಾತನಾಡಿದ  ಕುಮಾರಾಸ್ವಾಮಿ, ಮಂಗಳೂರಿನಲ್ಲಿ ಜನವರಿ 19 ರಂದು ನಡೆದ ಬಾಂಬ್ ಪತ್ತೆ ಪ್ರಕರಣದಲ್ಲಿ, ಬಿಜೆಪಿಯವರು ಹೇಳುವುದು ಬಾಂಬ್ ಎನ್ನುವಂತಹದ್ದು, ಆದರೆ ದಿನಪತ್ರಿಕೆಯಲ್ಲಿ ಬಂದ ಮಂಗಳೂರು ವರದಿಯಲ್ಲಿ ಪಟಾಕಿಯಲ್ಲಿ ಬಳಸುವ ಮಿಣಮಿಣ ಪೌಡರ್ ಇತ್ತು ಎಂದು ಹೇಳಿದ್ದಾರೆ. ಆ ವರದಿಯನ್ನು ಆಧರಿಸಿ ನಾನು ಹೇಳಿಕೆ ನೀಡಿದ್ದೇನೆ. ಅದಕ್ಕೆ ದೊಡ್ಡಮಟ್ಟದಲ್ಲಿ ನನ್ನ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ಕೊಡುತ್ತಿದ್ದಾರೆ ಎಂದರು.

ನಾನು ನನ್ನ ಜೀವನದಲ್ಲಿ ಯಾವುದೇ ರೀತಿಯ ತಪ್ಪುಗಳನ್ನು ಮಾಡದೇ ಇರುವವನು. ತಪ್ಪು ಮಾಡಿದರೆ ಓಪನ್ ಆಗಿ ಹೇಳುವವನು ನಾನು, ಅದರಲ್ಲಿ ನನಗೆ ಯಾವುದೇ ಅಂಜಿಕೆಯಿಲ್ಲ. ನನ್ನ ಬಗ್ಗೆ ಕೀಳುಮಟ್ಟದಲ್ಲಿ ಅವರು ಕೆಲವು ವಿಡಿಯೋ ವೈರಲ್ ಮಾಡಿಕೊಂಡು ಹೊರಟಿದ್ದಾರೆ. ಇದು ಬಿಜೆಪಿಯವರ ಕೀಳು ಅಭಿರುಚಿ ಏನು?, ಅವರ ಭಾವನೆಗಳೇನು? ಬಿಜೆಪಿ ಪಕ್ಷದ ಸಂಸ್ಕೃತಿ ಏನು ಎಂಬುದನ್ನು ಇದರಿಂದ ವ್ಯಕ್ತಪಡಿಸಿದ್ದಾರೆ ಎಂದು ಗುಡುಗಿದರು.

ಒಬ್ಬ ಡಿಜಿ ಕಚೇರಿಯಲ್ಲಿ ಬಂದು ಶರಣಾದನಲ್ಲ. ಅವತ್ತು ಲೋಕಲ್ ಪೊಲೀಸ್ ಹಿರಿಯ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಅಧಿಕಾರಿಗಳು ಸಲ್ಫರ್ ಪೌಡರ್ ಇತ್ತು ಅಂತೇಳಿದ್ದಾರೆ. ಇದನ್ನು ನಾನು ಕಥೆ ಕಟ್ಟಿರುವುದಲ್ಲ ಇದು ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ಸಾರ್ವಜನಿಕವಾಗಿ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದೇನೆ. ವಿಧಾನಸಭೆಯಲ್ಲೂ ಚರ್ಚೆ ಮಾಡುತ್ತೇನೆ. ರಾಜ್ಯ ಸರ್ಕಾರ  ಹುಡುಗಾಟಿಕೆ ನಡೆಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button