
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಹರಿಹರ ಕ್ಷೇತ್ರದ ತುಂಗಭದ್ರಾ ನದಿ ತಟದಲ್ಲಿ 108 ಯೋಗ ಮಂಟಪಗಳನ್ನು ನಿರ್ಮಿಸಿ ಉತ್ತರದಲ್ಲಿ ಗಂಗಾ ಆರತಿ ಮಾದರಿಯಲ್ಲಿ ದಕ್ಷಿಣದಲ್ಲಿ ತುಂಗಾ ಆರತಿಯನ್ನು ಹಮ್ಮಿಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ಇದು ಉತ್ತಮ ಪ್ರವಾಸಿ ಹಾಗೂ ಧಾರ್ಮಿಕ ಸ್ಥಳವಾಗಿ ಅಭಿವೃದ್ಧಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಹರಿಹರದಲ್ಲಿ ಮಾತನಾಡಿದ ಅವರು, ನಮ್ಮ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥನ ದೇವಸ್ಥಾನವನ್ನು ಸಂಪೂರ್ಣವಾಗಿ ಜೀರ್ಣೋದ್ಧಾರ ಮಾಡಿದ್ದಾರೆ. ಮುಂಚೆ ಹೋದಾಗ ದೇವಸ್ಥಾನ ಎಲ್ಲಿದೆ ಎಂದು ಹುಡುಕಬೇಕಿತ್ತು. ಇಂದು ಎಲ್ಲಾ ಘಾಟ್ಗಳನ್ನು ಸ್ವಚ್ಛಗೊಳಿಸಿ, ದೇವಸ್ಥಾನವನ್ನು ಭವ್ಯವಾಗಿ ಕಾಣುವಂತೆ ಮಾಡಿ ಗಂಗಾ ಆರತಿ ಮಾಡುತ್ತಿದ್ದಾರೆ. ಅದೇ ರೀತಿ ದಕ್ಷಿಣದಲ್ಲಿ ತುಂಗಭದ್ರಾ ಆರತಿ ಕಾರ್ಯಕ್ರಮ ವೈಭವವಾಗಿ ನಡೆಯಬೇಕೆಂದು ಹೇಳಿದರು.
ಶ್ರೀ ವಚನಾನಂದ ಜಗದ್ಗುರುಗಳು ತುಂಗಾರತಿ ಕಾರ್ಯಕ್ರಮ ಏರ್ಪಡಿಸಲು ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡು ಉತ್ತಮ ವಾತಾವರಣ ನಿರ್ಮಿಸಿದ್ದಾರೆ. ಪ್ರತಿನಿತ್ಯ ತುಂಗ ಭದ್ರೆಯ ಪೂಜೆ ನಡೆಯಲು ಅನುಕೂಲ ಕಲ್ಪಿಸಲಾಗುತ್ತಿದೆ. ಸ್ವಚ್ಛತಾ ಕಾರ್ಯವನ್ನು ಕೈಗೊಂಡು ಸೇತುವೆಯ ಎರಡೂ ಬದಿಗಳಲ್ಲಿ ನಡಿಗೆ ಪಥ ನಿರ್ಮಿಸುವ ಚಿಂತನೆ ಇದೆ. ಇದನ್ನು ಶೀಘ್ರವಾಗಿ ಪೂರ್ಣಗೊಳಿಸಿ ಜನರಿಗೆ ಸಮರ್ಪಣೆ ಮಾಡಲಾಗುವುದು ಎಂದರು.
ನಗರದ ಪ್ರದೇಶಗಳಲ್ಲಿ ನದಿ ಕಲುಷಿತವಾದಂತೆ ತಡೆಯಲು ಇದೇ ಯೋಜನೆಯಡಿ ಕಾರ್ಯಕ್ರಮವನ್ನು ರೂಪಿಸಲಾಗುವುದು. ಹರಿಹರ ಹೆಸರಿನಲ್ಲಿಯೇ ಸಂಗಮವಿದೆ. ಹರಿ ಮತ್ತು ಹರ ಎರಡು ಶಕ್ತಿಗಳು, ಹರಿಹರರ ಶಕ್ತಿಯ ಸಂಗಮ ಯಾವಾಗಲೂ ಅಧ್ಭುತ ಪರಿಣಾಮಗಳನ್ನು ನೀಡಿವೆ ಎಂದರು.
ಹರಿಹರ ಕ್ಷೇತ್ರದ ಸಮಗ್ರ ಅಭಿವೃದ್ಧಿ
ಹರಿಹರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲಾಗುವುದು. ರಸ್ತೆ, ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ, ಹರಿಹರ ನಗರಕ್ಕೆ ನಗರೋತ್ಥಾನ ಯೋಜನೆಯಡಿ 40 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಹಿಜಾಬ್, ಕೇಸರಿ ಶಾಲು ವಿವಾದದ ನಡುವೆ ಕುಂಕುಮ ಅಭಿಯಾನ