ಇನ್ನು ಒಂದು ತಿಂಗಳಲ್ಲಿ ವಕೀಲರಿಗೆ ಆರೋಗ್ಯ ವಿಮೆ; ಮುಂಬರುವ ಅಧಿವೇಶನದಲ್ಲಿ ಅಡ್ವೋಕೇಟ್ ಪ್ರೊಟೆಕ್ಷನ್ ಬಿಲ್

ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಭರವಸೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:  ಕಾನೂನು ಸೇವೆಯಲ್ಲಿ ತೊಡಗಿರುವ ವಕೀಲರಿಗೆ ಮುಂದಿನ ಒಂದು ತಿಂಗಳ ಅವಧಿಯಲ್ಲಿ ಸರ್ಕಾರದ ವತಿಯಿಂದ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ಬೆಂಗಳೂರು ವಕೀಲರ ಸಂಘ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ ನ್ಯಾಯವಾದಿಗಳಿಗೆ ಏರ್ಪಡಿಸಿದ್ದ ನುಡಿನಮನ ಮತ್ತು ಸಾಂತ್ವನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
 ಹಲವಾರು ವರ್ಷಗಳ ಹಿಂದೆ ಪ್ಲೇಗ್ ಬಂದು ಜನ ಸತ್ತಿರುವುದನ್ನು ನಾವು ಕೇಳಿದ್ದೇವೆ. ಆದರೆ ನಮ್ಮ ಜೀವಮಾನದ ಅವಧಿಯಲ್ಲಿ ಕೋವಿಡ್ ಸೋಂಕು ತಗುಲಿ ಸಾವಿರಾರು ಜನ ಸಾವನ್ನಪ್ಪಿರುವುದನ್ನು ನಾವು ನೋಡುತ್ತಿದ್ದೇವೆ.  ಅದರಲ್ಲಿ ಜನತೆಗೆ ನ್ಯಾಯ ಕೊಡಿಸುವ ನ್ಯಾಯವಾದಿಗಳು ಸೇರಿದ್ದಾರೆ. ತುರ್ತು ಸಂದರ್ಭ ಮತ್ತು ಅನಾರೋಗ್ಯದ ಪರಿಸ್ಥಿತಿಗಳಲ್ಲಿ ಚಿಕಿತ್ಸೆ ಪಡೆಯಲು ಹಣ ಹೆಚ್ಚಿನ ಪ್ರಮಾಣದಲ್ಲಿ ವೆಚ್ಚವಾಗುತ್ತದೆ.  ಈ ಹಿನ್ನೆಲೆಯಲ್ಲಿ ವಕೀಲರಿಗೆ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೊಳಿಸಲಾಗುವುದು. ಈ  ಸಂಬಂಧ ರಾಜ್ಯ ಹೈಕೋರ್ಟಿನ‌ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ ಒಕಾ ಅವರ ಸಲಹೆ ಪಡೆಯಲಾಗುವುದು ಎಂದು ಅವರು ಹೇಳಿದರು.

ಕನ್ನಡಿಗರಿಗೆ ಮೀಸಲಾತಿ 

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ನಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡಲು ಆಡಳಿತ ಮಂಡಳಿ ಪದೇ ಪದೇ ವಿರೋಧಿಸುತ್ತಿತ್ತು.  ಆದರೆ ಈ ವರ್ಷದಿಂದ ನ್ಯಾಷನಲ್ ಸ್ಕೂಲಲ್ಲಿ ಶೇಕಡ 25ರಷ್ಟು ಕನ್ನಡಿಗರಿಗೆ ಮೀಸಲಾತಿ ನೀಡಲು ಆಡಳಿತ ಮಂಡಳಿಯವರು ಒಪ್ಪಿಕೊಂಡಿದ್ದಾರೆ. ಇದರಿಂದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡಿಗರಿಗೆ ಕಾನೂನು ಶಿಕ್ಷಣ ದೊರೆಯುವಂತಾಗುತ್ತದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.
ನ್ಯಾಯಾಂಗ ಮತ್ತು ಶಾಸಕಾಂಗ ಪರಸ್ಪರ ಜೊತೆ ಜೊತೆಯಾಗಿ ಹೆಜ್ಜೆ ಹಾಕಬೇಕಾಗಿದೆ. ಅದು ಸಾಂಕ್ರಾಮಿಕ ರೋಗವೇ ಇರಲಿ, ಅಥವಾ  ಇನ್ನಿತರ ರೋಗವೇ  ಇರಲಿ.  ಶಾಸಕಾಂಗ ಮತ್ತು ನ್ಯಾಯಾಂಗ ಜತೆ ಜತೆಯಾಗಿ ಹೋದರೆ ರಾಜ್ಯಕ್ಕೆ ಅನುಕೂಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಕೋವಿಡ್ ನಿಂದ ಮೃತಪಟ್ಟ ನ್ಯಾಯವಾದಿಗಳ ಕುಟುಂಬದವರಿಗೆ ಇದೇ ಸಂದರ್ಭದಲ್ಲಿ ಆರ್ಥಿಕ ನೆರವು ನೀಡಲಾಯಿತು.  ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ ಶ್ರೀನಿವಾಸ್ ಓಕಾ ಮತ್ತು ಕಾನೂನು ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .
ಮುಂಬರುವ ಅಧಿವೇಶನದಲ್ಲಿ ಅಡ್ವೋಕೇಟ್ ಪ್ರೊಟೆಕ್ಷನ್ ಬಿಲ್ ನ್ನು ಸದನದಲ್ಲಿ ಮಂಡಿಸಲಾಗುವುದು. ಈ ಕಾನೂನನ್ನು ಸಮಗ್ರವಾಗಿ ನಿರೂಪಿಸಲಾಗಿದೆ.
-ಬಸವರಾಜ್ ಬೊಮ್ಮಾಯಿ
 ಗೃಹ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button