*ಬೆಳಗಾವಿಯಲ್ಲಿ ಘೋರ ದುರಂತ: ಕೆಲಸ ಮಾಡುವ ವೇಳೆ ಟಿಪ್ಪರ್ ಹರಿದು ಪೌರಕಾರ್ಮಿಕ ಮಹಿಳೆ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಂದು ಬೆಳ್ಳಂ ಬೆಳಗ್ಗೆ ನಗರವನ್ನು ಶುಚಿಗೊಳಿಸುತ್ತಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಪೌರಕಾರ್ಮಿಕ ಮಹಿಳೆ ಮೇಲೆ ಟಿಪ್ಪರ್ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಬೆಳಗಾವಿ- ಖಾನಾಪುರ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದೆ. ಅವಕ್ಕಾ ಕೋಲ್ಕಾರ್ (50) ಮೃತ ಪೌರಕಾರ್ಮಿಕ ಮಹಿಳೆ ಎಂದು ಗುರುತಿಸಲಾಗಿದೆ. ಎಂದಿನಂತೆ ನಗರವನ್ನು ಶುಚಿಗೊಳಿಸುವ ವೇಳೆ ಬೆಳಗಾವಿ ನಗರದಿಂದ ವೇಗವಾಗಿ ಬಂದ ಟಿಪ್ಪರ್ ವಾಹನ ಅವಕ್ಕಾಗೆ ಅಪ್ಪಳಿಸಿ ಹೋಗಿದೆ.
ಇನ್ನು ಘಟನೆ ವೇಳೆ ಮಾತನಾಡಿದ ಮಾಜಿ ಉಪಮೇಯರ್ ವಾಣಿ ಜೋಶಿ, ಬೆಳಗಾವಿ ಪಾಲಿಕೆಯ ಪೌರಕಾರ್ಮಿಕೆ ಅವಕ್ಕಾಗಿ ಟಿಪ್ಪರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಅಪಘಾತ ಮಾಡಿ ಪರಾರಿಯಾದ ವಾಹನ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದರು.
ಪಾಲಿಕೆ ಪರಿಸರ ಅಭಿಯಂತ ಹನುಮಂತ ಕಲಾದಗಿ ಮಾತನಾಡಿ, ಪೌರಕಾರ್ಮಿಕೆ ಅವಕ್ಕ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಸರಕಾರದಿಂದ ಸಿಗುವ ಎಲ್ಲ ಸೌಲಭ್ಯ ಅವರಿಗೆ ಕೊಡಲಾಗುವುದು. ಅಲ್ಲದೆ ಅವರ ಅಂತ್ಯಸಂಸ್ಕಾರಕ್ಕೆ ಪಾಲಿಕೆಯಿಂದ ಆರ್ಥಿಕ ಸಹಾಯ ಮಾಡಲಾಗುವುದು. ರಸ್ತೆ ಅಪಘಾತದಲ್ಲಿ ಇದು ಎರಡನೇ ಪೌರಕಾರ್ಮಿಕರು ಬಲಿಯಾಗಿರುವುದು ಎಂದರು.
ಈ ಸಂಬಂಧ ಬೆಳಗಾವಿ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



