Kannada NewsKarnataka News

ಗೋಕಾಕ ಕ್ಷೇತ್ರದ ಉಸ್ತುವಾರಿಯೂ ನನ್ನ ಹೆಗಲಿಗೇ -ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬಾಕಿ ಉಳಿದಿರುವ ಮೂರೂವರೆ ವರ್ಷ ಆಡಳಿತ ನಡೆಸಲು, ಸರ್ಕಾರ ರಚನೆಗೆ ತ್ಯಾಗ ಮಾಡಿರುವ ರಮೇಶ ಜಾರಕಿಹೊಳಿ ಅವರನ್ನು ಆಯ್ಕೆ ಮಾಡಬೇಕು. ೧೫ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಎಲ್ಲ ಸ್ಥಾನಗಳು ಬಿಜೆಪಿಯ ತೆಕ್ಕೆಗೆ ಬರುವುದರಿಂದ ಮುಖ್ಯಮಂತ್ರಿಗಳಿಗೆ ದೊಡ್ಡ ಶಕ್ತಿ ನೀಡಿದಂತಾಗುತ್ತದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಸೋಮವಾರ ರಾತ್ರಿ ಮಲ್ಲಾಪುರ ಪಿಜಿ(ಘಟಪ್ರಭಾ) ಪಟ್ಟಣದಲ್ಲಿ ರಮೇಶ ಜಾರಕಿಹೊಳಿ ಅವರ ಪ್ರಚಾರಾರ್ಥವಾಗಿ ಜರುಗಿದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಈಚೆಗೆ ಗೋಕಾಕಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಮತ್ತೊಮ್ಮೆ ಉದಯಿಸಲು ರಮೇಶ ಜಾರಕಿಹೊಳಿ ಅವರು ತ್ಯಾಗವನ್ನು ಮಾಡಿದ್ದಾರೆ. ಅವರಿಂದಾಗಿಯೇ ನಾವುಗಳು ರಾಜ್ಯದಲ್ಲಿ ಸ್ಥಿರ ಆಡಳಿತವನ್ನು ನಡೆಸುತ್ತಿದ್ದೇವೆ. ರಮೇಶ ಜಾರಕಿಹೊಳಿ ಮತ್ತವರ ಶಾಸಕ ಮಿತ್ರರಿಗೆ ಗೆಲುವಿನ ಉಡುಗೊರೆ ನೀಡುವ ಮೂಲಕ ರಾಜ್ಯದಲ್ಲಿ ಸ್ಥಿರ ಸರ್ಕಾರ ನಡೆಸುತ್ತೇವೆ. ಎಲ್ಲ ಸಮುದಾಯದವರು ರಮೇಶ ಜಾರಕಿಹೊಳಿ ಅವರಿಗೆ ಮತ ನೀಡುವ ಮೂಲಕ ನನ್ನ ಸರ್ಕಾರಕ್ಕೆ ಆಶೀರ್ವಾದ ನೀಡುವಂತೆ ಕೋರಿಕೊಂಡಿದ್ದಾರೆಂದು ಹೇಳಿದರು.

ರಮೇಶ ಜಾರಕಿಹೊಳಿ ಅವರು ಕಳೆದ ೨೦ ವರ್ಷಗಳಿಂದ ಗೋಕಾಕ ಕ್ಷೇತ್ರದ ಶಾಸಕರಾಗಿ, ಸಚಿವರಾಗಿ ಅನೇಕ ಅಭಿವೃದ್ಧಿ ಪರ ಕೆಲಸಗಳನ್ನು ಕೈಗೊಂಡಿದ್ದಾರೆ. ಅವರ ಸಾಧನೆಗಳನ್ನು ಮತದಾರರಿಗೆ ತಿಳಿ ಹೇಳಬೇಕು. ಇದರ ಜೊತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನೋಪಯೋಗಿ ಕಾರ್ಯಕ್ರಮಗಳನ್ನು ವಿವರಿಸುವಂತೆ ಕೋರಿದರು.

ಬಿಜೆಪಿ ಜಾತ್ಯಾತೀತವಾಗಿದ್ದು, ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಪಣತೊಟ್ಟು ಕೇಂದ್ರ ಮತ್ತು ರಾಜ್ಯದಲ್ಲಿ ಕೆಲಸ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಸುರಕ್ಷತೆಗಾಗಿ ಕೆಲಸ ಮಾಡುತ್ತಿದ್ದರೆ ಇತ್ತ ಯಡಿಯೂರಪ್ಪನವರು ರೈತ ಪರ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ರೈತ ನಾಯಕರಾಗಿದ್ದಾರೆಂದು ಶ್ಲಾಘಿಸಿದರು.

ಶಿಂಧಿಕುರಬೇಟ, ಮಲ್ಲಾಪುರ ಪಿಜಿ, ಫಾಮಲದಿನ್ನಿ ಹಾಗೂ ಧುಪದಾಳ ಗ್ರಾಮಸ್ಥರ ನೋವು-ನಲಿವುಗಳಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಗ್ರಾಮಗಳ ಉಸ್ತುವಾರಿಯನ್ನು ನಾನೇ ತೆಗೆದುಕೊಳ್ಳುತ್ತೇನೆ. ರಮೇಶ ಅವರಿಗೆ ಹೆಚ್ಚಿನ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ನೀಡುವುದರಿಂದ ಗೋಕಾಕ ಕ್ಷೇತ್ರದ ಉಸ್ತುವಾರಿಯೂ ಸಹ ನನ್ನ ಹೆಗಲಿಗೇರಲಿದೆ. ಕಾರ್ಯಕರ್ತರ ಅಹವಾಲುಗಳಿಗೆ ಸ್ಪಂದಿಸಲು ನಮ್ಮ ಗೃಹ ಕಛೇರಿ ಮುಕ್ತ ಪ್ರವೇಶ ಹೊಂದಿದೆ ಎಂದು ಹೇಳಿದರು.

ರಮೇಶ ಜಾರಕಿಹೊಳಿ ಅವರ ಶೇಜ್ ನಂ. ೨ ಇದ್ದು, ಕಮಲ ಹೂವಿನ ಗುರ್ತಿಗೆ ಅಮೂಲ್ಯ ಮತ ನೀಡಿ ಮತ್ತೊಮ್ಮೆ ಜನಸೇವೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡರು.

ಬೆಳಗಾವಿ ವಿಭಾಗೀಯ ಪ್ರಭಾರಿ ಈರಪ್ಪ ಕಡಾಡಿ ಮಾತನಾಡಿ, ಗ್ರಾಮ ಪಂಚಾಯತಿ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಲು ಹಿಂದೇಟು ಹಾಕುತ್ತಿರುವ ಇಂದಿನ ದಿನಗಳಲ್ಲಿ ಹುಟ್ಟು ಹೋರಾಟಗಾರರು, ನಿಷ್ಠಾವಂತ ಕಾಂಗ್ರೇಸ್ ಪಕ್ಷದ ಶಿಸ್ತಿನ ಸಿಪಾಯಿ ಆಗಿದ್ದ ರಮೇಶ ಜಾರಕಿಹೊಳಿ ಅವರು ತಮ್ಮ ಸ್ವಾಭಿಮಾನಕ್ಕೆ ಪೆಟ್ಟಾದಾಗ ಮೈತ್ರಿ ಸರ್ಕಾರಕ್ಕೆ ಕೊಡಲಿ ಪೆಟ್ಟು ನೀಡಿ ನಮ್ಮ ಪಕ್ಷವನ್ನು ಅಪ್ಪಿಕೊಂಡಿದ್ದಾರೆ. ಅವರು ಯಾವುದೇ ಪಕ್ಷದಲ್ಲಿದ್ದರೂ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೆ. ನೇರ ಮಾತುಗಾರಿಕೆ ಹಾಗೂ ಹೃದಯ ವೈಶಾಲ್ಯದ ವ್ಯಕ್ತಿತ್ವ ಹೊಂದಿರುವ ರಮೇಶ ಜಾರಕಿಹೊಳಿ ಅವರು ಶೀಘ್ರದಲ್ಲಿ ಯಡಿಯೂರಪ್ಪನವರ ಸಂಪುಟದಲ್ಲಿ ಮಹತ್ವದ ಖಾತೆಯೊಂದರ ಸಚಿವರಾಗಲಿದ್ದಾರೆಂದು ಸುಳಿವು ನೀಡಿದರು.

ಮುಖಂಡರಾದ ದೇವಪ್ಪ ದಳವಾಯಿ, ರಾಮಣ್ಣಾ ಹುಕ್ಕೇರಿ, ಸುರೇಶ ಕಾಡದವರ, ಮಡಿವಾಳಪ್ಪ ಮುಚಳಂಬಿ, ಈಶ್ವರ ಮಟಗಾರ, ಗಂಗಾಧರ ಬಡಕುಂದ್ರಿ, ಜಿ.ಎಸ್. ರಜಪೂತ, ಸುರೇಶ ಪಾಟೀಲ, ಚಿರಾಕಲಿ ಮಕಾನದಾರ, ನೂರ ಫಿರಜಾದೆ, ಶಬ್ಬೀರ ಜಮಖಂಡಿ, ಮಲ್ಲು ಕೋಳಿ, ಕೆಂಪಣ್ಣಾ ಚೌಕಾಶಿ, ಪ್ರೇಮಾ ಭಂಡಾರಿ, ಈರಣ್ಣಾ ಅಂಗಡಿ, ಬಿಜೆಪಿ ಪದಾಧಿಕಾರಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button