*ಆರೋಪಿಗಳಿಗೆ ಸಾಥ್ ನೀಡಿದರೆ ಎಷ್ಟೇ ಪ್ರಭಾವಿಗಳಾಗಿದ್ದರೂ ಬಿಡಲ್ಲ: ಸುಧೀರ್ ಕುಮಾರ್ ರೆಡ್ಡಿ ಖಡಕ್ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ಬೂದಿ ಮುಚ್ಚಿದ ಕೆಂಡದಂತಿರುವ ಮಂಗಳೂರಿನ ಪರಿಸ್ಥಿತಿಯನ್ನು ಸಂಪೂರ್ಣ ಹತೋಟಿಗೆ ತರಲು ನೂತನ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೊಲೆ ಹಾಗೂ ಇತರ ಯಾವುದೇ ಅಪರಾಧದಲ್ಲಿ ತೊಡಗಿಸಿಕೊಂಡ ಆರೋಪಿಗಳಿಗೆ ಯಾರೆಲ್ಲ ಸಹಾಯ ಮಾಡಲು ಮುಂದಾಗುತ್ತಾರೋ, ಇನ್ಮುಂದೆ ಅಂಥವರನ್ನು ಆರೋಪಿಗಳನ್ನಾಗಿ ಪರಿಗಣಿಸುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೊಲೆ,ಹಲ್ಲೆ ಮತ್ತು ಕೋಮು ದ್ವೇಷದ ರೀತಿಯ ಅಪರಾಧ ಚಟುವಟಿಕೆಗಳಲ್ಲಿ ಆರೋಪಿಯಾದವರಿಗೆ ತಲೆಮರಿಸಿಕೊಳ್ಳಲು ಅಥವಾ ಉಳಿದುಕೊಳ್ಳಲು ಮನೆ ನೀಡುವುದು ಅಥವಾ ಮೊಬೈಲ್ ಒದಗಿಸುವುದು, ಆರೋಪಿಗಳ ಓಡಾಟಕ್ಕೆ ಕಾರು, ಇನ್ನಿತರೆ ಯಾವುದೇ ಸೌಲಭ್ಯಗಳನ್ನು ಕಲ್ಪಿಸುವವರನ್ನು ಆರೋಪಿಗಳು ಎಂದು ಪರಿಗಣಿಸಲಾಗುತ್ತದೆ.
ಈ ರೀತಿ ಕೃತ್ಯಗಳಲ್ಲಿ ಭಾಗಿಯಾದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಅಂಥವರ ವಿರುದ್ಧ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ. ಇನ್ನು ಆರೋಪಿತರಿಗೆ ಸಹಾಯ ಮಾಡುವ ಸಂಬಂಧಿಕರು, ಸ್ನೇಹಿತರ ಮೇಲೆ ಕಣ್ಣಿಡಲಾಗುತ್ತದೆ ಎಂದಿದ್ದಾರೆ. ಈ ಎಲ್ಲಾ ಕಠಿಣ ಕ್ರಮಗಳ ಜೊತೆಗೆ, ಇನ್ನು ಮುಂದೆ ಆರೋಪಿಗಳಿಗೆ ಹಣ ಸಹಾಯ ಸೇರಿದಂತೆ ಯಾವುದೇ ರೀತಿಯ ಸಹಾಯ ಮಾಡುವವರ ವಿರುದ್ಧ ಬಿಎನ್ಎಸ್ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.