Kannada NewsKarnataka NewsLatest

ಬೆಳಗಾವಿಯಲ್ಲಿ ಕನ್ನಡದ ಧ್ವಜ ಸ್ವತಂತ್ರವಾಗಿ ಹಾರಾಡಬೇಕು; ಹೇಡಿ ಸರಕಾರವಾಗಬಾರದು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಪುಂಡಾಟಿಕೆ ನಡೆಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯವರಿಗೆ ಕರ್ನಾಟಕದ ಪೋಲೀಸರು ಹಾಗೂ ಜಿಲ್ಲಾಡಳಿತ ಸಹ ಹೆದರುತ್ತಾರೆಯೇ? ಎದು ಪ್ರಶ್ನಿಸಿರುವ ವಿಧಾನಪರಿಷತ್ ಮಾಜಿ ಸಭಾಪತಿ, ಮಾಜಿ ಸಚಿವ, ಹಾಲಿ ಸದಸ್ಯ ಬಸವರಾಜ ಹೊರಟ್ಟಿ, ಕನ್ನಡದ ಮಣ್ಣಿನಲ್ಲಿದ್ದು ನಾಡು ನುಡಿಯ ವಿರುದ್ಧ ದ್ರೋಹ ಬಗೆಯುವ ನಾಡದ್ರೋಹಿ ಎಂಇಎಸ್.ನವರಿಗೆ ಯಾವುದೇ ಕಾರಣಕ್ಕೂ ಹೋರಾಟ ಮಾಡಲು ಅನುಮತಿ ನೀಡಬಾರದು. ಇಂತಹ ನಾಡದ್ರೋಹಿಗಳ ದೇಶದ್ರೋಹ ಕೆಲಸಕ್ಕೆ ರಾಜ್ಯ ಸರಕಾರ ಅವರ ಮೇಲೆ ಉಗ್ರ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಹೊರಟ್ಟಿ, ಆ ಪುಂಡರೆಲ್ಲರನ್ನು ದೇಶದ್ರೋಹಿ ಕೆಲಸ ಮಾಡುತ್ತಿರುವ ಅಡಿಯಲ್ಲಿ ಅವರೆಲ್ಲರನ್ನು ಒಳಗೆ ಹಾಕಬೇಕು ಅಥವಾ ಗಡಿಪಾರು ಮಾಡಬೇಕು ಎಂದಿದ್ದಾರೆ.

ಅವರ ಪತ್ರದ ಪೂರ್ಣ ವಿವರ ಹೀಗಿದೆ –

ಬೆಳಗಾವಿ ಮಹಾನಗರ ಪಾಲಿಕೆಯ ಮುಂದೆ ಹಾರಿಸಲಾಗಿರುವ ಕನ್ನಡ ಧ್ವಜವನ್ನು ಮಹಾರಾಷ್ಟ್ರ ಏಕೀಕರಣ ಸಮಿತಿಯವರು ತೆಗೆದುಹಾಕಬೇಕೆಂದು ಜನರ ನೆಮ್ಮದಿಯನ್ನು ಹಾಳು ಮಾಡಲು ಬೇರೆ ಬೇರೆ ರೀತಿಯಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿಸುತ್ತಿದ್ದಾರೆ.

ಕರ್ನಾಟಕದ ಅನ್ನ ಉಂಡು, ಕರ್ನಾಟಕದ ನೀರು ಕುಡಿದು ಕರ್ನಾಟಕದಲ್ಲಿ ಮಹಾರಾಷ್ಟ್ರದ ಧ್ವಜವನ್ನು ಹಾರಿಸಲು ಪ್ರಯತ್ನಿಸುವ ಮಾಹಾರಾಷ್ಟ್ರ ಏಕೀಕರಣ ಸಮಿತಿಯವರನ್ನು ಹದ್ದುಬಸ್ತಿನಲ್ಲಿಡಲು ಸರಕಾರಕ್ಕೆ ಏಕೆ ಆಗುತ್ತಿಲ್ಲ. ನಾವು ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜವನ್ನು ಹಾರಿಸಿದರೆ ಅವರು ಸುಮ್ಮನಿರುತ್ತಾರೆಯೇ? ಅಂತಹ ಪುಂಡಾಟಿಕೆ ನಡೆಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯವರಿಗೆ ಕರ್ನಾಟಕದ ಪೋಲೀಸರು ಹಾಗೂ ಜಿಲ್ಲಾಡಳಿತ ಸಹ ಹೆದರುತ್ತಾರೆಯೇ? ಕನ್ನಡದ ಮಣ್ಣಿನಲ್ಲಿದ್ದು ನಾಡು ನುಡಿಯ ವಿರುದ್ಧ ದ್ರೋಹ ಬಗೆಯುವ ನಾಡದ್ರೋಹಿ ಎಂಇಎಸ್.ನವರಿಗೆ ಯಾವುದೇ ಕಾರಣಕ್ಕೂ ಹೋರಾಟ ಮಾಡಲು ಅನುಮತಿ ನೀಡಬಾರದು. ಇಂತಹ ನಾಡದ್ರೋಹಿಗಳ ದೇಶದ್ರೋಹ ಕೆಲಸಕ್ಕೆ ರಾಜ್ಯ ಸರಕಾರ ಅವರ ಮೇಲೆ ಉಗ್ರ ಕ್ರಮ ತೆಗೆದುಕೊಳ್ಳಬೇಕು.

ಕನ್ನಡ ಪರ ಸಂಘ, ಸಂಸ್ಥೆಗಳು ಬೆಳಗಾವಿ ಮಹಾನಗರ ಪಾಲಿಕೆಯ ಮುಂದೆ ಕನ್ನಡ ಧ್ವಜ ಹಾರಿಸಿರುವುದಕ್ಕೆ ಅದನ್ನು ತೆಗೆದುಹಾಕುವಂತೆ ಎಂ.ಇ.ಎಸ್.ನವರು ಗಡುವು ನೀಡಿರುವುದು ಹಾಸ್ಯಾಸ್ಪದ. ಒಂದು ವೇಳೆ ಅದನ್ನು ತೆಗೆದುಹಾಕದಿದ್ದರೆ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಕೊಟ್ಟಿದೆ. ಎಚ್ಚರಿಕೆ ಕೊಡಲು ಇವರಾರು? ಈ ಅಂಶಗಳ ಹಿನ್ನೆಲೆಯಲ್ಲಿ  ಹೋರಾಟಕ್ಕೆ ಹಳ್ಳಿ ಹಳ್ಳಿಗಳಿಂದ ಜನರನ್ನಷ್ಟೇ ಅಲ್ಲದೇ ಮಹಾರಾಷ್ಟ್ರದಿಂದ ನಾಯಕರನ್ನು ಕರೆಯಿಸಿ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸಿದೆ ಎಂದು ತಿಳಿದು ಬಂದಿದೆ.

ನಮ್ಮ ರಾಜ್ಯದಲ್ಲಿ ಗಂಡುಮೆಟ್ಟಿನ ಸ್ಥಳವಾದ ಬೆಳಗಾವಿಯಲ್ಲಿ ಗಡುವು ನೀಡಲು ಈ ಅವಿವೇಕಿಗಳಿಗೆ ಯಾರು ಅಧಿಕಾರವನ್ನು ಕೊಟ್ಟಿದ್ದಾರೆ. ಅದು ಕರ್ನಾಟಕ ಸರಕಾರ ಹಾಗೂ ಬೆಳಗಾವಿಯ ಸಮಸ್ತ ಕನ್ನಡಿಗರ ನಿರ್ಧಾರ ಎಂಬುದನ್ನು ಜಿಲ್ಲಾಡಳಿತ ತಿಳಿದುಕೊಳ್ಳಬೇಕು. ಈ ದಿಸೆಯಲ್ಲಿ ಆ ಪುಂಡರೆಲ್ಲರನ್ನು ದೇಶದ್ರೋಹಿ ಕೆಲಸ ಮಾಡುತ್ತಿರುವ ಅಡಿಯಲ್ಲಿ ಅವರೆಲ್ಲರನ್ನು ಒಳಗೆ ಹಾಕಬೇಕು ಅಥವಾ ಗಡಿಪಾರು ಮಾಡಬೇಕು.

ಸರಕಾರ ಹೇಡಿ ಸರಕಾರವಾಗಬಾರದು –

ಆದ ಕಾರಣ ಕರ್ನಾಟಕದಲ್ಲಿ ಕನ್ನಡ ಧ್ವಜ ಹಾರಿಸಲು ಎಂ.ಇ.ಎಸ್.ನವರ ತಕರಾರು ಮಾಡುತ್ತಿರುವುದನ್ನು ಹತ್ತಿಕ್ಕಬೇಕು. ಬೆಳಗಾವಿ ಎಂದೆಂದಿಗೂ ಕರ್ನಾಟಕದ್ದೇ ಎಂದು ದಿಟ್ಟ ನಿಲುವನ್ನು ತೋರಿಸಬೇಕು. ಕನ್ನಡದ ಧ್ವಜ ಬೆಳಗಾವಿ ಮಹಾನಗರ ಪಾಲಿಕೆಯ ಮುಂದೆ ಹಾರಾಡುವುದನ್ನು ಕನ್ನಡಿಗರು ಕಾಯಬೇಕಾದ ಪರಿಸ್ಥಿತಿ ಬಂದಿದ್ದು ನಮ್ಮ ದುರ್ದೈವ. ಇದೇ ರೀತಿ ಮಹಾರಾಷ್ಟ್ರದಲ್ಲಿ ಏನಾದರೂ ಕನ್ನಡಿಗರು ಮಾಡಿದರೆ ಇಷ್ಟೊತ್ತಿಗೆ ಅವರನ್ನು ಸುಟ್ಟು ಹಾಕುತ್ತಿದ್ದರು. ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಕಟ್ಟುನಿಟ್ಟಾದ ಕ್ರಮ ಕೈಕೊಂಡು ಅಶಾಂತಿಗೆ ಕಾರಣರಾದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಕೊಳ್ಳಬೇಕು. ಸರಕಾರ ಹೇಡಿ ಸರಕಾರವಾಗಬಾರದು. ವೋಟಿಗಾಗಿ ಕೆಲವರು ಅವರ ಮುತುವರ್ಜಿ ವಹಿಸುತ್ತಾರೆಂದು ಭಾವಿಸಿದ್ದಾರೆ. ಅದು ಎಂದೂ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಶಾಸಕರು ಹಾಗೂ ಸರಕಾರ ಇದರ ಬಗ್ಗೆ ಗಂಭೀರವಾದ ಚಿಂತನೆ ಮಾಡಿ ಇನ್ನೊಮ್ಮೆ ಇಂತಹ ಘಟನೆಗಳು ಆಗದಂತೆ ನೋಡಿಕೊಳ್ಳುವದು ಸರಕಾರದ ಇಚ್ಛಾಶಕ್ತಿ ಹಾಗೂ ಜವಾಬ್ದಾರಿ ಎನ್ನುವದನ್ನು ಸರಕಾರ ಮರೆಯಬಾರದು. ಈ ನಿಟ್ಟಿನಲ್ಲಿ ಕ್ರಮ ಕೈಕೊಂಡು ಎಂ.ಎ.ಎಸ್.ನವರಿಗೆ ಸರಿಯಾದ ಉತ್ತರ ನೀಡಬೇಕೆಂದು ಈ ಮೂಲಕ ನಾನು ತಮ್ಮನ್ನು ಆಗ್ರಹಿಸುತ್ತೇನೆ.

ಶಿವಸೇನೆ ಪುಂಡರ ಗಲಾಟೆ; ಭಗವಾ ಧ್ವಜ ಹಿಡಿದು ರಾಜ್ಯದ ಗಡಿ ಪ್ರವೇಶಕ್ಕೆ ಯತ್ನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button