Kannada NewsKarnataka NewsLatest

ಬಸ್, ಅಂಬ್ಯುಲೆನ್ಸ್, ಸರ್ಕಾರಿ ವಾಹನಗಳ ತಪಾಸಣೆ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ– ಉಪ ಚುನಾವಣೆ ಬಹಳ ಸೂಕ್ಷ್ಮವಾಗಿದ್ದು, ಮತದಾನಕ್ಕೆ ಕೇವಲ ಮೂರು ದಿನಗಳು ಬಾಕಿ ಇರುವುದರಿಂದ ನೀತಿಸಂಹಿತೆ ಪಾಲನೆ ಹಾಗೂ ಚುನಾವಣಾ ಅಕ್ರಮ ತಡೆಗಟ್ಟುವಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಾದರಿ ನೀತಿ ಸಂಹಿತೆ ಜಾರಿಯ ವಿಶೇಷ ಅಧಿಕಾರಿ ಮುನಿಷ್ ಮೌದ್ಗಿಲ್ ಅವರು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ವಿವಿಧ ತಂಡಗಳ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣಾ ಆಯೋಗವು ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು,  ಮಾದರಿ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿ ಬಹಳ ಮುಖ್ಯವಾಗಿದೆ.
ಕೊನೆಯ ಮೂರು ದಿನಗಳಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು.
ಚೆಕ್ ಪೋಸ್ಟ್, ಎಫ್.ಎಸ್.ಟಿ., ವಿ.ಎಸ್.ಟಿ, ಮಾದರಿ ನೀತಿ ಸಂಹಿತೆ, ವೆಚ್ವ ವೀಕ್ಷಕ ತಂಡಗಳು, ಅಬಕಾರಿ, ಪೊಲೀಸ್ ಮತ್ತಿತರ ತಂಡಗಳು ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.

ನೇರವಾಗಿ ದೂರು ಸಲ್ಲಿಸಲು ಮನವಿ:

ಜಿಲ್ಲೆಯ ಮೂರು ಮತಕ್ಷೇತ್ರಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಅಕ್ರಮಗಳ ಕುರಿತ ಸಾರ್ವಜನಿಕರು ಮತ್ತು ಪಕ್ಷದ ಪ್ರತಿನಿಧಿಗಳು ನೀಡುವ ದೂರುಗಳಿಗೆ ಸ್ಥಳೀಯ ಅಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸದಿದ್ದರೆ ನೇರವಾಗಿ ತಮಗೆ ದೂರು ಸಲ್ಲಿಸಬಹುದು ಎಂದು ಮೌದ್ಗಿಲ್ ತಿಳಿಸಿದರು.
ಏನಾದರೂ ಅಕ್ರಮ‌ ಕಂಡು ಬಂದರೆ ನೇರವಾಗಿ ತಮ್ಮ ಮೊಬೈಲ್ ಸಂಖ್ಯೆ- ೯೯೦೦೦೯೯೧೧೧ ಗೆ ಕರೆ ಮಾಡಿ‌ ಮಾಹಿತಿ ನೀಡಬಹುದು.
ಇದುವರೆಗೆ ಕಾರ್ಯನಿರ್ವಹಿಸಿರುವ ಎಲ್ಲ ತಂಡಗಳನ್ನು ಮುಂದಿನ ಮೂರು ದಿನಗಳವರೆಗೆ ಯಥಾಪ್ರಕಾರ ಕಾರ್ಯನಿರ್ವಹಿಸಲು ಸೂಚನೆ ನೀಡಿದರು. ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಮಾದರಿ ನೀತಿ ಸಂಹಿತೆ ಉಲ್ಲಂಘನೆ ಹಾಗೂ ಚುನಾವಣಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ವಿವರಿಸಿದರು.
ಅಬಕಾರಿ ಇಲಾಖೆಯ ಅಧಿಕಾರಿಗಳು ಇದುವರೆಗೆ ೭೭ ಪ್ರಕರಣ ದಾಖಲು ಮಾಡಲಾಗಿದೆ ಎಂದು ಅಬಕಾರಿ ಆಯುಕ್ತರಾದ ಬಸವರಾಜ ಮಾಹಿತಿಯನ್ನು ನೀಡಿದರು.
ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮಲಕ್ಷ್ಮಣ ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಉಪಸ್ಥಿತರಿದ್ದರು.
ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಜಗದೀಶ್ ರೂಗಿ, ವೆಚ್ಚ ವೀಕ್ಷಕ ನೋಡಲ್ ಅಧಿಕಾರಿ ಈರಣ್ಣ ಚಂದರಗಿ, ದೂರು ನಿರ್ವಹಣಾ ಕೋಶದ ಅಧಿಕಾರಿ ನಿಸಾರ್ ಅಹ್ಮದ್, ಎಂಸಿಎಂಸಿ ನೋಡಲ್ ಅಧಿಕಾರಿ ಗುರುನಾಥ ಕಡಬೂರ ಸೇರಿದಂತೆ ವಾಣಿಜ್ಯ ತೆರಿಗೆ, ಆದಾಯ ತೆರಿಗೆ ಮತ್ತಿತರ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಎಂಸಿಸಿ ಕೋಶಕ್ಕೆ ಭೇಟಿ:

ಸಭೆಯ ಬಳಿಕ ಮಾದರಿ ನೀತಿ ಸಂಹಿತೆ ಕೋಶಕ್ಕೆ ಭೇಟಿ ನೀಡಿದ ವಿಶೇಷ ಅಧಿಕಾರಿ ಮುನೀಷ್ ಮೌದ್ಗಿಲ್ ಅವರು, ಮೂರೂ ಮತಕ್ಷೇತ್ರಗಳಲ್ಲಿ ಸ್ಥಾಪಿಸಲಾಗಿರುವ ಪ್ರತಿಯೊಂದು ಚೆಕ್ ಪೋಸ್ಟ್ ಕಾರ್ಯನಿರ್ವಹಣೆ ಮೇಲೆ ಎಂಸಿಸಿ ಕೋಶದಿಂದಲೇ ನಿಗಾ ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಾದರಿ ನೀತಿ ಸಂಹಿತೆ ಪಾಲನೆ ಹಾಗೂ ಅಕ್ರಮ ತಡೆಗಟ್ಟಲು ರಚಿಸಲಾಗಿರುವ ಎಫ್.ಎಸ್.ಟಿ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ತಂಡದ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ.
ಅದೇ ರೀತಿ ಚೆಕ್ ಪೋಸ್ಟ್‌ ಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ಮೂಲಕ ಜಿಲ್ಲಾ ಕೇಂದ್ರದಿಂದಲೇ ಕಣ್ಣಿಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ವಿವರಿಸಿದರು.

ಬಸ್, ಅಂಬ್ಯುಲೆನ್ಸ್ ಗಳ ತಪಾಸಣೆ:

ಚುನಾವಣೆ ನಡೆಯುತ್ತಿರುವ ಜಿಲ್ಲೆಯ ಮೂರು ಮತಕ್ಷೇತ್ರಗಳನ್ನು ಪ್ರವೇಶಿಸುವ ಎಲ್ಲ ಮಾರ್ಗಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ.
ಇದಲ್ಲದೇ ಅಕ್ಕಪಕ್ಕದ ಮತಕ್ಷೇತ್ರಗಳಲ್ಲಿ ಕೂಡ ಯಾವ ರೀತಿ ನಿಗಾ ವಹಿಸಬೇಕು ಎಂಬುದರ ಬಗ್ಗೆ ಆಯೋಗದ ಜತೆ ಚರ್ಚಿಸಿ ತಕ್ಷಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಮಾದರಿ ನೀತಿ ಸಂಹಿತೆ ಜಾರಿಯ ವಿಶೇಷಾಧಿಕಾರಿ ಮುನಿಷ್ ಮೌದ್ಗಿಲ್ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಖಚಿತ ಮಾಹಿತಿ ಸಿಕ್ಕರೆ ಪಕ್ಕದ ಮತಕ್ಷೇತ್ರಗಳ ವ್ಯಾಪ್ತಿಯಲ್ಲೂ ಕಾರ್ಯಾಚರಣೆ ನಡೆಸಲಾಗುವುದು. ಸಾರಿಗೆ ಬಸ್, ಅಂಬ್ಯುಲೆನ್ಸ್ ಸೇರಿದಂತೆ ಎಲ್ಲ ಬಗೆಯ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದ್ದು,  ಇದುವರೆಗೆ ನಾಲ್ಕು ಸಾವಿರ ಸಾರಿಗೆ ಬಸ್ ಗಳನ್ನು ತಪಾಸಣೆ ಮಾಡಲಾಗಿದೆ.
ಪೊಲೀಸ್ ಸೇರಿದಂತೆ ಎಲ್ಲ ಬಗೆಯ ಸಾರ್ವಜನಿಕ ಸಾರಿಗೆ ವಾಹನಗಳನ್ನು ಮತ್ತು ಸರ್ಕಾರಿ ವಾಹನಗಳನ್ನೂ ತಪಾಸಣೆ ಮಾಡಲಾಗುತ್ತಿದೆ.
ಚುನಾವಣಾ ಅಕ್ರಮಗಳ ಕುರಿತು ದೂರು ಸಲ್ಲಿಸಲು ಅವಕಾಶವಿರುವ ಬಗ್ಗೆ ಮತ್ತಿ ದೂರವಾಣಿ ಸಂಖ್ಯೆಗಳ ಮಾಹಿತಿಯನ್ನು  ಸಾರ್ವಜನಿಕರಿಗೆ ತಿಳಿಸಲು ಪಂಚಾಯಿತಿಗಳಲ್ಲಿ ಮಾಹಿತಿ ಫಲಕಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಮತದಾರರಿಗೆ ಹಣ ಹಂಚಿಕೆಯ ಪ್ರಕರಣಗಳು ಕಂಡುಬಂದರೆ ರಾಜಕೀಯ ಪಕ್ಷಗಳು ಕೂಡ ದೂರು ದಾಖಲಿಸಬೇಕು ಎಂದು ಮುನಿಷ್ ಮೌದ್ಗಿಲ್ ಅವರು ಮಾಧ್ಯಮಗಳ ಮೂಲಕ ಮನವಿ ಮಾಡಿಕೊಂಡರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button