Kannada NewsKarnataka NewsLatestPolitics

*ವಿಮಾನ ಪ್ರಯಾಣದ ವೇಳೆ ರಾಮ ನಾಮ ಜಪಿಸಿದ ಸಚಿವ; 20 ವರ್ಷಗಳಿಂದ ರಾಮ ಕೋಟಿ ಬರೆಯುತ್ತಿದ್ದೇನೆ ಎಂದ ಕಾಂಗ್ರೆಸ್ ನಾಯಕ*

ಪ್ರಗತಿವಾಹಿನಿ ಸುದ್ದಿ: ಜನವರಿ 22ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮ ನಡೆಯುತ್ತಿದ್ದು, ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಇಡೀ ದೇಶವೇ ಕಾತರದಿಂದ ಕಾಯುತ್ತಿದೆ. ಈ ನಡುವೆ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗದಿರಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿರುವ ವಿಚಾರ ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್ ನಿಲುವನ್ನು ವಿಪಕ್ಷ ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸಿದ್ದರೆ, ಮತ್ತೊಂದೆಡೆ ಸ್ವಪಕ್ಷ ಕಾಂಗ್ರೆಸ್ ನ ಕೆಲ ನಾಯಕರು ಕೂಡ ಇಂತಹ ನಿರ್ಧರ ಸರಿಯಲ್ಲ ಎನ್ನುತ್ತಿದ್ದಾರೆ. ಈ ಎಲ್ಲಾ ಬೆಳವಣಿಗಳ ಮಧ್ಯೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ವಿಮಾನದಲ್ಲಿ ಪ್ರಯಾಣಿಸುತ್ತಾ ರಾಮ ಜಪ ಬರೆಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಎಐಸಿಸಿ ಸಭೆಗೆ ಬೆಂಗಳೂರಿನಿಂದ ದೆಹಲಿಗೆ ತೆರಳಿರುವ ಸಚಿವ ಮುನಿಯಪ್ಪ, ವಿಮಾನದಲ್ಲಿ ರಾಮ ನಾಮ ಜಪ ಬರೆದಿದ್ದಾರೆ. ರಾಮ ಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನಾಯಕರು ಗೈರಾಗಲು ತೀರ್ಮಾನಿಸಿರುವ ಸಂದರ್ಭದಲ್ಲಿ ಕಾಂಗ್ರೆಸ್ ಸಚಿವರೊಬ್ಬರು ರಾಮ ನಾಮ ಜಪದಲ್ಲಿ ನಿರತರಾಗಿರುವುದು ತೀವ್ರ ಕುತೂಹಲ ಮೂಡಿಸಿದೆ.

ರಾಮ ನಾಮ ಜಪದ ವಿಚಾರವಾಗಿ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಸಚಿವ ಕೆ.ಹೆಚ್.ಮುನಿಯಪ್ಪ, ನಾನೂ ಶ್ರೀ ರಾಮನ ಭಕ್ತ. 20 ವರ್ಷಗಳಿಂದ ನಾನು ರಾಮ ಕೋಟಿ ಬರೆಯುತ್ತಿದ್ದೇನೆ. ಇದು ನಮ್ಮ ನಿತ್ಯ ಪೂಜೆ ಎಂದು ಹೇಳಿದ್ದಾರೆ.

ಭಕ್ತಿ ಎನ್ನುವುದು ತೋರ್ಪಡಿಕೆಯಲ್ಲ. ಅದು ನಮ್ಮೊಳಗೆ ಇರಬೇಕು. ಕಾಂಗ್ರೆಸ್ ನ ಪ್ರತಿ ಹಿಂದೂವೂ ರಾಮ ಭಕ್ತನೇ, ಇದರಲ್ಲಿ ಸಂಶಯವಿಲ್ಲ. ಬಿಜೆಪಿ ನಾಯಕರು ಈ ವಿಚಾರವನ್ನು ಯಾಕೆ ರಾಜಕೀಯ ಮಾಡುತ್ತಿದ್ದಾರೆ ಗೊತ್ತಿಲ್ಲ. ದೇವರ ವಿಚಾರದಲ್ಲಿ ರಾಜಕೀಯ ಮಾಡುವುದು ಮನಸ್ಸಿಗೆ ಸರಿ ಎನಿಸುತ್ತಿಲ್ಲ. ನಾವು ಲೋಕಕಲ್ಯಾಣಕ್ಕಾಗಿ ರಾಮ ಜಪ ಮಾಡುತ್ತೇವೆ. ಭಕ್ತಿ ಮಾಡುತ್ತೇವೆ. ಆದರೆ ಬಿಜೆಪಿಯವರು ತೋರ್ಪಡಿಕೆಗಾಗಿ, ತಮ್ಮ ಕಲ್ಯಾಣಕ್ಕಾಗಿ ಮಾಡುತ್ತಿದ್ದಾರೆ ಎಂದು ಹೇಳಿದರು.


Related Articles

Back to top button