
ವಾಟಾಳ್ ನಾಗರಾಜ್ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿ: ಕನ್ನಡಿಗರ ಮೇಲೆ ಪರಭಾಷಿಗರ ಹಲ್ಲೆ, ಕೆ.ಎಸ್.ಆರ್.ಟಿ.ಸಿ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣ ಖಂಡಿಸಿ ಮಾರ್ಚ್ 22ರಂದು ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಮಾರ್ಚ್ 22ರಂದು ಶನಿವಾರ ಕರ್ನಾಟಕ ಬಂದ್ ಮಾಡೇ ಮಾಡುತ್ತೇವೆ ಎಂದರು. ಎಂಇಎಸ್, ಶಿವಸೇನೆಯನ್ನು ನಿಷೇಧ ಮಾಡಬೇಕು. ಬೆಳಗಾವಿಯಲ್ಲಿ ಸಂಭಾಜಿ, ಶಿವಾಜಿ ಪ್ರತಿಮೆ ಅಗತ್ಯವೇನು? ಬೇಕಾ? ಎಂದು ಪ್ರಶ್ನಿಸಿದರು.
ಕರ್ನಾಟಕದಲ್ಲಿರುವ ಪರಭಾಷಿಗರು ಕನ್ನಡ ಕಲಿಯದಿದ್ದರೆ ಈ ರಾಜ್ಯ ಬಿಟ್ಟು ಹೋಗಬೇಕು. ಕರ್ನಾಟಕಕ್ಕೆ ಬಂದು ಕನ್ನಡಿಗರ ಮೇಲೆ ಹಲ್ಲೆ, ದೌರ್ಜನ್ಯ ನಡೆಸುವುದು ನಿಲ್ಲಬೇಕು. ಯಾವ ಕಾರಣಕ್ಕೂ ಕನ್ನಡ ಮಾತನಾಡದಿದ್ದರೆ ಪರಭಾಷಿಗರು ಕರ್ನಾಟಕದಲ್ಲಿ ಇರಬಾರದು ಎಂದರು.
ಕನ್ನಡಿಗ ಶಿವಾಜಿ ಪಾತ್ರ ಮಾಡಿದರೆ ಸಿನಿಮಾ ಬಹಿಷ್ಕರಿಸುತ್ತೇವೆ. ಈ ಬಗ್ಗೆ ಗೊತ್ತಿರಲಿ ಎಂದು ಹೇಳುವ ಮೂಲಕ ನಟ ರಿಷಬ್ ಶೆಟ್ಟಿ ಅವರಿಗೆ ಪರೋಕ್ಷ ಎಚ್ಚರಿಕೆ ನೀಡಿದರು.