*ಅಧಿವೇಶನಕ್ಕೆ ಬಂದು ಭಾಷಣ ಓದದೇ ತೆರಳಿದ ರಾಜ್ಯಪಾಲರು: ಕರ್ನಾಟಕ ಇತಿಹಾಸದಲ್ಲೇ ಇದೇ ಮೊದಲು*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ರಾಜ್ಯಪಾಲರ ಸಂಘರ್ಷ ತಾರಕಕ್ಕೇರಿದೆ. ವಿಶೇಷ ಅಧಿವೇಶನಕ್ಕೆ ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಓದದೇ ತೆರಳಿರುವ ಘಟನೆ ನಡೆದಿದೆ.

ನರೇಗಾ ಯೋಜನೆಯ ಹೆಸರು ಬದಲಿಸಿರುವ ಕೇಂದ್ರ ಸರ್ಕಾರದ ಕ್ರಮ ಆಕ್ಷೇಪಿಸಿ ರಾಜ್ಯ ಸರ್ಕಾರ ದಿಂದಿನಿಂದ ಜನವರಿ 31ರವರೆಗೆ ವಿಧಾನಮಂಡಲ ವಿಶೇಷ ಅಧಿವೇಶನ ಕರೆದಿದೆ. ಅಧಿವೇಶನದ ಮೊದಲ ದಿನ ಜಂಟಿ ಸದನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದು ವಾಡಿಕೆ. ಆದರೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸರ್ಕಾರ ಬರೆದುಕೊಟ್ಟಿರುವ ಭಾಷಣ ಓದಲು ನಿರಾಕರಿಸಿದ್ದಾರೆ. ನಿನ್ನೆಯೇ ತಾವು ಭಾಷಣ ಓದಲ್ಲ ಎಂದು ಆಕ್ಷೇಪಿಸಿದ್ದ ರಾಜ್ಯಪಾಲರ ನಡೆ ತೀವ್ರ ಗೊಂದಲಕ್ಕೆ ಕಾರಣವಾಗಿತ್ತು. ಇಂದು ರಾಜ್ಯಪಾಲರು ಅಧುವೇಶನಕ್ಕೆ ಆಗಮಿಸುವರೇ? ಎಂಬ ಕುತೂಹಲ ಕೂಡ ಮೂಡಿತ್ತು.
ಬೆಳಿಗ್ಗೆ 11ಗಂಟೆಗೆ ಅಧಿವೇಶನಕ್ಕೆ ಆಗಮಿಸಿದ ರಾಜ್ಯಪಾಲರನ್ನು ಶಿಷ್ಟಾಚಾರದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಯು.ಟಿ.ಖಾದರ್, ಸಭಾಪತಿ ಬಸವರಾಜ್ ಹೊರಟ್ಟಿ ಸಚಿವರು ಸ್ವಾಗತಿಸಿದರು. ವಿಧಾನಸೌಧದ ಒಳಗೆ ಜಂಟಿ ಸದನ ಉದ್ದೇಶಿಸಿ ಮಾತು ಆರಂಭಿಸಿದ ರಾಜ್ಯಪಾಲರು ಎರಡೇ ಸಾಲಿನಲ್ಲಿ ಭಾಷಣ ಮುಗಿಸಿದ್ದಾರೆ.

ಜಂಟಿ ಅಧಿವೇಶನಕ್ಕೆ ಶುಭಕೋರಿ, ಸರ್ಕಾರ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲು ಸನ್ನದ್ಧವಾಗಿದೆ. ಆರ್ಥಿಕವಾಗಿಯೂ ಸದೃಢವಾಗಿದೆ ಎಂದಷ್ಟೇ ಹೇಳಿ ಎರಡೇ ಸಾಲಿನಲ್ಲಿ ಭಾಷಣ ಮುಗಿಸಿ ತೆರಳಿದ್ದಾರೆ. ರಾಜ್ಯ ಸರ್ಕಾರ ಕೊಟ್ಟ ಅಧಿವೇಶನದ ಭಾಷಣವನ್ನು ಓದಲು ರಾಜ್ಯಪಾಲರು ನಿರಾಕರಿಸಿದ್ದಾರೆ. ರಾಜ್ಯಾಪಾಲರು ಭಾಷಣ ಓದದೇ ಸದನದಿಂದ ಹೊರಬರುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಪಾಲರು ಅಧಿವೇಶನದಲ್ಲಿ ಭಾಷಣ ಓದದೇ ತೆರಳಿರುವ ಈ ಘಟನೆ ಕರ್ನಾಟಕ ಇತಿಹಾಸದಲ್ಲಿಯೇ ಇದೇ ಮೊದಲು ಎನ್ನಲಾಗಿದೆ.


