
ಪ್ರಗತಿವಾಹಿನಿ ಸುದ್ದಿ: ಖಾಸಗಿ ಬಸ್ ನಲ್ಲಿ ದಾಖಲೆಗಳಿಲ್ಲದ 1 ಕೋಟಿ ರೂಪಾಯಿ ಹಣವನ್ನು ಸಾಗಿಸುತ್ತಿದ್ದ ವೇಳೆ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯಲ್ಲಿ ನಡೆದಿದೆ.
ಗೋವಾದಿಂದ ಬೆಂಗಳೂರಿಗೆ ಖಾಸಗಿ ಬಸ್ ನಲ್ಲಿ 1 ಕೋಟಿ ರೂಪಾಯಿ ಹಣವನ್ನು ಬ್ಯಾಗ್ ನಲ್ಲಿಟ್ಟು ಸಾಗಾಟ ಮಾಡಲಾಗುತ್ತಿತ್ತು. ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ಬಸ್ ತಪಾಸಣೆ ನಡೆಸಿದ ವೇಳೆ ಇಬ್ಬರ ಬಳಿ ಇದ್ದ ಬ್ಯಾಗ್ ನಲ್ಲಿ ಹಣ ಪತ್ತೆಯಾಗಿದೆ.
ಕಲ್ಪೇಶಕುಮಾರ್ ಹಾಗೂ ಬೊಂಬ್ರಾ ರಾಮ್ ಎಂಬುವವರ ಬ್ಯಾಗ್ ನಲ್ಲಿ 1 ಕೋಟಿ ಹಣ ಪತ್ತೆಯಾಗಿದೆ. ಪರಿಶೀಲಿಸಿದಾಗ ಯಾವುದೇ ದಾಖಲೆಗಳು ಇರಲಿಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಿ ವಿಚಹರಣೆ ನಡೆಸಿದಾಗ ಈ ಹಣ Mxon ಎಲೆಕ್ಟ್ರಿಕ್ ಹಾರ್ಡ್ ವೇರ್ ಕಂಪನಿಗೆ ಸೇರಿದ್ದಾಗಿದ್ದು, ತೆರಿಗೆ ತಪ್ಪಿಸಲು ಬ್ಯಾಗ್ ನಲ್ಲಿ ಹಣವನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಸದ್ಯ ಹಣವನ್ನು ಜಪ್ತಿ ಮಾಡಿರುವ ಪೊಲೀಸರು ಐಟಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ.


