
ಕೆ.ಡಿ.ಇ.ಎಂ. ಸಂಸ್ಥೆ ಉಳಿದ ರಾಜ್ಯಗಳಿಗೆ ಮಾದರಿ: ಬಿ.ವಿ.ನಾಯ್ಡು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್(ಕೆ.ಡಿ.ಇ.ಎಂ.) ರಾಜ್ಯದ ಡಿಜಿಟಲ್ ಆರ್ಥಿಕತೆಗೆ ಕೊಡುಗೆ ನೀಡಲಿದೆ. ತಂತ್ರಜ್ಞಾನ ಹೂಡಿಕೆಯನ್ನು ಉತ್ತೇಜಿಸುವುದರ ಜೊತೆಗೆ ಸಂಶೋಧನೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡುವುದು ಮುಖ್ಯ ಉದ್ದೇಶವಾಗಿದೆ. ಹೊಸ ಅವಕಾಶಗಳನ್ನು ಸೃಷ್ಟಿಸುವುದು, ಹೂಡಿಕೆ, ನೀತಿ ಅಭಿವೃದ್ಧಿ ಮತ್ತು ಜಾಗತಿಕ ಮಟ್ಟದಲ್ಲಿ ರಾಜ್ಯದ ಡಿಜಿಟಲ್ ಸಾಮರ್ಥ್ಯಗಳನ್ನು ಉತ್ತೇಜಿಸಲು ಕಾರ್ಯನಿರ್ವಹಿಸುತ್ತಿದೆ ಎಂದು ಕೆ.ಡಿ.ಇ.ಎಂ. ಅಧ್ಯಕ್ಷರಾದ ಬಿ.ವಿ. ನಾಯ್ಡು ಅವರು ಹೇಳಿದರು.
ಬೆಳಗಾವಿ ಸುವರ್ಣ ಸೌಧದಲ್ಲಿ ಶುಕ್ರವಾರ (ಆ.22) ಜರುಗಿದ ಟೆಕ್ಸಲರೇಶನ್-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹುಬ್ಬಳ್ಳಿ-ಧಾರವಾಡ-ಬೆಳಗಾವಿ ವಲಯ ತನ್ನ ಬೆಳವಣಿಗೆಯ ಪ್ರಯಾಣದಲ್ಲಿ ಪ್ರಮುಖ ಘಟ್ಟದಲ್ಲಿದೆ. ಕೆ.ಡಿ.ಇ.ಎಂ. ಈಗಾಗಲೇ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸುವುದರ ಮೂಲಕ ಉಳಿದ ರಾಜ್ಯಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಬೆಳಗಾವಿ ಐಟಿ ಪಾರ್ಕ್ ಪುನರುಜೀವಗೊಳ್ಳುವುದನ್ನು ಕುತೂಹಲದಿಂದ ಕಾಯುತ್ತಿದ್ದೇವೆ ಎಂದರು.
ಟೆಕ್ಸೆಲರೇಷನ್ ಬೆಳಗಾವಿ ಕೇವಲ ಪ್ರದರ್ಶನವಲ್ಲ; ಈ ಅವಕಾಶಗಳು ನಿಜವಾದ ಹೂಡಿಕೆಗಳು, ಉದ್ಯೋಗಗಳು ಮತ್ತು ನಾವೀನ್ಯತೆಯಾಗಿ ರೂಪಾಂತರಗೊಳ್ಳುವ ವೇದಿಕೆಯಾಗಿದೆ. 2025 ರ ದೃಷ್ಟಿಕೋನದ ಮೂಲಕ, ಹೆಚ್.ಡಿ.ಬಿ. ಕರ್ನಾಟಕದ ಡಿಜಿಟಲ್ ಆರ್ಥಿಕತೆಗೆ ನಿರ್ಣಾಯಕ ಬೆಳವಣಿಗೆಯೊಂದಿಗೆ ಹುಬ್ಬಳ್ಳಿ-ಧಾರವಾಡ-ಬೆಳಗಾವಿ (ಹೆಚ್.ಡಿ.ಬಿ) ವಲಯವನ್ನು ಭಾರತದಲ್ಲಿ ಮಾದರಿ ವಲಯವನ್ನಾಗಿಸುವ ಉದ್ದೇಶದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ.
ಕೆ.ಡಿ.ಇ.ಎಂ. ವತಿಯಿಂದ ಬೆಳಗಾವಿಯಲ್ಲಿ ನವೋದ್ಯಮ ಪ್ರಾರಂಭಕ್ಕೆ ಬೇಕಾದಂತಹ ಎಲ್ಲ ಸಹಾಯ, ಸಹಕಾರವನ್ನು ನೀಡಲಾಗುವುದು ಎಂದು ಬಿ.ವಿ. ನಾಯ್ಡು ಅವರು ಭರವಸೆ ನೀಡಿದರು.
ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಭಾರತೀಯ ಸಾಫ್ಟ್ರ್ ತಂತ್ರಜ್ಞಾನ ಉದ್ಯಾನವನಗಳ (STPI) ನ್ಯಾಯವ್ಯಾಪ್ತಿಯ ನಿರ್ದೇಶಕ ಸಂಜಯ್ ತ್ಯಾಗಿ ಅವರು ಮಾತನಾಡಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ತಮ್ಮ ಕೈಗಾರಿಕಾ ಕಾರ್ಯಾಚರಣೆಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಅಳವಡಿಸಿಕೊಳ್ಳಬೇಕು. ದೇಶದಲ್ಲಿ ಒಂದು ವರ್ಷದೊಳಗೆ 2 ಲಕ್ಷಕ್ಕೂ ಹೆಚ್ಚು ಹೊಸ ಐಟಿ ಸ್ಟಾರ್ಟ – ಆ್ಯಪ್ ಗಳು ನೋಂದಾಯಿಸಲ್ಪಟ್ಟಿವೆ. ಇದರಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ’ ಎಂದು ತ್ಯಾಗಿ ಹೇಳಿದರು.
ದೇಶದ 300 ಶತಕೋಟಿ ಡಾಲರ್ ಮೌಲ್ಯದ ಐಟಿ ಉದ್ಯಮವು ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಶೇ.8 ರಷ್ಟು ಕೊಡುಗೆ ನೀಡುತ್ತಿದ್ದರೆ, ಅದರಲ್ಲಿ ಶೇ.44 ರಷ್ಟು ಕೊಡುಗೆ ಕರ್ನಾಟಕದಿಂದ ಮಾತ್ರ ಬರುತ್ತಿದೆ ಎಂದು ಅವರು ಹೇಳಿದರು. ದೇಶದಲ್ಲಿ ಐಟಿ ಬೆಳವಣಿಗೆಗೆ ವೆಚ್ಚವನ್ನು ಹೆಚ್ಚಿಸುವಂತೆ ಸರ್ಕಾರಗಳಿಗೆ ಕರೆ ನೀಡಿದರು.
ಬಿಬಿಎಸ್ ಸಂಸ್ಥೆಯ ವ್ಯಸ್ಥಾಪಕ ನಿರ್ದೇಶಕಿ ಶಾರದಾ ಗುಪ್ತಾ ಅವರು ಮಾತನಾಡಿ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ವಲಯ ಭಾಗದಲ್ಲಿ ಕೃಷಿ ಪ್ರಧಾನ ಪ್ರದೇಶವಾಗಿದೆ. ಕೃಷಿಯನ್ನೆ ಅವಲಂಬಿಸಿರುವ ರೈತರು ಯಾವ ಸಮಯದಲ್ಲಿ ಯಾವ ಬೆಳೆಯನ್ನು ಬೆಳೆಯಬೇಕು ಎಂಬುದರ ಕುರಿತು ವೈಜ್ಞಾನಿಕ ವಾದಂತಹ ಮಾಹಿತಿ ಹೊಂದಿರುವುದಿಲ್ಲ. ಈ ಭಾಗದ ರೈತರಿಗೆ ಆಧುನಿಕ ತಂತ್ರಜ್ಞಾನದ ಮೂಲಕ ಕೃಷಿ ಮಾಡಲು ಅನುಕೂಲವಾಗುವಂತಹ ಸ್ಟಾರ್ಟ ಆಫ್ ಗಳನ್ನು ಪ್ರಾರಂಭಿಸಬೇಕು. ರೈತರಿಗೆ ಸ್ಥಳೀಯ ಭಾಷೆಯಲ್ಲಿ ಆಧುನಿಕ ತಂತ್ರಜ್ಞಾನದ ಮಾಹಿತಿ ದೊರಕುವಂತಾಗಬೇಕು ಹುಬ್ಬಳ್ಳಿ-ಧಾರವಾಡ-ಬೆಳಗಾವಿ ವಲಯವನ್ನು ಅಗ್ನಿ ಡಿಜಿಟಲ್ ಹಬ್ ವನ್ನಾಗಿ ಮಾಡಬೇಕು ಎಂದರು.
ರವೀಂದ್ರ ಎನರ್ಜಿ ಅಮಿಟೆಡ್ ಸಹ ಸಂಸ್ಥಾಪಕಿ ಹಾಗೂ ಶ್ರೀ ರೇಣುಕಾ ಶುಗರ್ಸ ಸಂಸ್ಥಾಪಕರಾದ ಡಾ.ವಿದ್ಯಾ ಮುರಕುಂಬಿ ಅವರು ಮಾತನಾಡಿ, ಬೆಳಗಾವಿ ಕೌಶಲ್ಯದಿಂದ ಕೂಡಿದ ಕಾರ್ಮಿಕರನ್ನು ಹೊಂದಿದೆ. ಬೆಳಗಾವಿ ಕೌಶಲ್ಯದ ಹಬ್ ಆಗಿದ್ದು ಜೊತೆಗೆ ಶಿಕ್ಷಣ, ಪರಿಸರ ಹಾಗೂ ನೀರಿನ ಅನುಕೂಲವಾಗಿರುವುದರಿಂದ ಕೈಗಾರಿಕರಣಕ್ಕಾಗಿ ಉತ್ತಮ ಸ್ಥಳವಾಗಿದ್ದು, ಕೈಗಾರಿಕೆಗಳನ್ನು ಪ್ರಾರಂಭಿಸುವರು ಬೆಳಗಾವಿಯಲ್ಲಿ ಪ್ರಾರಂಭಿಸಲು ಪೂರಕವಾದ ವಾತಾವರಣ ಹೊಂದಿದೆ. ಇಂದಿನ ಯುವಜನರು ತಮ್ಮ ಕೌಶಲ್ಯಗಳೊಂದಿಗೆ ನವೋದ್ಯಮದ ಯೋಜನೆಗಳನ್ನು ದೇಶಾದ್ಯಂತ ಪ್ರದರ್ಶಿಸಬೇಕು ಇದಕ್ಕೆ ಬೇಕಾದಂತಹ ಎಲ್ಲ ಸಹಕಾರವನ್ನು ಈ ಭಾಗದ ಇಂಜಿನಿಯರಿಂಗ್ ಕಾಲೇಜುಗಳು ಮಾಡಬೇಕಾಗಿದೆ. ಕೃಷಿ ಹಾಗೂ ಕೈಗಾರಿಕೆ ಕ್ಷೇತ್ರದಲ್ಲಿ ತಂತ್ರಜ್ಞಾನದ ಅಳವಡಿಕೆ ಅಗತ್ಯ ಎಂದರು.
ಎಲೆಕ್ಟ್ರಾನಿಕ್ಸ್, ಐಟಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕರಾದ ರಾಹುಲ್ ಸಂಕನೂರ ಅವರು ಮಾತನಾಡಿ ಭಾರತದ ಡಿಜಿಟಲ್ ರೂಪಾಂತರದಲ್ಲಿ ಕರ್ನಾಟಕವು ಮುಂದುವರಿಯುತ್ತಿದ್ದಂತೆ, ಬೆಳಗಾವಿಯು ರಾಜ್ಯದ ಮುಂದಿನ ನಾವೀನ್ಯತೆ ಮತ್ತು ಹೂಡಿಕೆಯ ವೇಗವಾಗಿ ಹೊರಹೊಮ್ಮುತ್ತಿದೆ. ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ ಜಾರಿಗೆ ತಂದಂತಹ ಪ್ರಥಮ ರಾಜ್ಯವಾಗಿದೆ. ನವೋದ್ಯಮಗಳ ಸ್ಥಾಪನೆಯಲ್ಲಿ ರಾಜ್ಯ ಪ್ರಥಮ ಹತ್ತು ಸ್ಥಾನಗಳಲ್ಲಿದೆ. ನವೋದ್ಯಮಗಳ ಸ್ಥಾಪನೆಗಾಗಿ ಸರಕಾರದಿಂದ ಎಲ್ಲ ರೀತಿಯ ಸಹಕಾರಗಳನ್ನು ನೀಡಲಾಗುತ್ತಿದೆ. ರಾಜ್ಯದಲ್ಲಿ ಟೆಕ್ ಇಕೋಸಿಸ್ಟಮ್ ಅಭಿವೃದ್ಧಿಗಾಗಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಬೆಂಗಳೂರು ಹಾಗೂ ಬೆಳಗಾವಿಯನ್ನು ಮಾಹಿತಿ ತಂತ್ರಜ್ಞಾನದ ಹಬ್ಬಾಗಿಸಲು ಪ್ರೋತ್ಸಾಹಿಸುವ ಕಾರ್ಯವಾಗಬೇಕಾಗಿದೆ. ಬೆಳಗಾವಿಯು ಕಾರ್ಯತಂತ್ರದ ಹೂಡಿಕೆಗಳ ಮುಂದಿನ ಅಲೆಯನ್ನು ಆಕರ್ಷಿಸಲು ಮತ್ತು ಬೆಳವಣಿಗೆಯನ್ನು ಉತ್ತೇಜಿಸುವ, ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಉತ್ತರ ಕರ್ನಾಟಕದ ಸ್ಥಾನವನ್ನು ಮರು ವ್ಯಾಖ್ಯಾನಿಸುವ ಜಾಗತಿಕ ಉದ್ಯಮಗಳಿಗೆ ಸಜ್ಜಾಗಿದೆ ಎಂದರು.
ಕೆ.ಡಿ.ಇ.ಎ. ಮುಖ್ಯ ಕಾರ್ಯನಿವಾಹಕ ಅಧಿಕಾರಿ ಸಂಜೀವಕುಮಾರ ಗುಪ್ತಾ, ಎಚ್.ಡಿ.ಬಿ. ವಲಯದ ಇಂಡ ಆಂಕರ್ ಗಳಾದ ವೆಂಕಟೇಶ ಪಾಟೀಲ ಹಾಗೂ ಸಂತೋಷ ಹುರಳಿಕೊಪ್ಪ ಅವರುಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹುಬ್ಬಳ್ಳಿ- ಧಾರವಾಡ-ಬೆಳಗಾವಿ ವಲಯದ ನವೋದ್ಯಮಿಗಳು, ವಿವಿಧ ಕಾಲೇಜುಗಳ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ನವೋದ್ಯಮಗಳ ಸ್ಥಾಪನೆ ಕುರಿತು ಒಡಂಬಡಿಕೆ ಮಾಡಲಾಯಿತು.