
ಪ್ರಗತಿವಾಹಿನಿ ಸುದ್ದಿ: ಗೋವಾ ಕಾಂಗ್ರೆಸ್ ನ ಯುವ ನಾಯಕ ಕೇತನ್ ಭಾಟಿಕರ್ ಹಾವು ಕಚ್ಚಿದ ಪರಿಣಾಮ ಮೃತಪಟ್ಟಿರುವ ಆಘಾತಕಾರಿ ಘಟನೆ ನಡೆದಿದೆ.
ಗೋವಾದಿಂದ ಉತ್ತರ ಕನ್ನಡ ಜಿಲೆಯ ದಾಂಡೇಲಿಗೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಹಾವು ಕಡಿದು ಕೇತನ್ ಭಾಟಿಕರ್ ಸಾವನ್ನಪ್ಪಿದ್ದಾರೆ. ಅವರಿಗೆ ಕೇವಲ 38 ವರ್ಷ. ಗೋವಾ ಕಾಂಗ್ರೆಸ್ ನ ಭರವಸೆಯ ನಾಯಕನಾಗಿದ್ದರು. ಫೋಂಡಾ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆದರೆ, ಹೈಕೋರ್ಟ್ ತೀರ್ಪಿನಿಂದಾಗಿ ಉಪಚುನಾವಣೆ ರದ್ದಾಗಿತ್ತು. ಹೈಕೋರ್ಟ್ ಆದೇಶದ ವಿರುದ್ಧ ಕೇತನ್ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸದ್ಯ ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗಲೇ ಅವರು ಹಾವು ಕಡಿತಕ್ಕೆ ಬಲಿಯಾಗಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ ಗುರುವಾರ ರಾತ್ರಿ ಕೇತನ್ ಭಾಟಿಕರ್ ಅವರು ದಾಂಡೇಲಿಗೆ ತೆರಳುತ್ತಿದ್ದರು. ಮಾರ್ಗಮಧ್ಯೆ ಗೋವಾ-ಕರ್ನಾಟಕ ಗಡಿಯಲ್ಲಿರುವ ಕರ್ಮಲ್ ಘಾಟ್ ಬಳಿ ಯಾವುದೋ ಕಾರಣಕ್ಕಾಗಿ ವಾಹನ ನಿಲ್ಲಿಸಿ ಇಳಿದಿದ್ದರು. ಈ ವೇಳೆ ಅವರಿಗೆ ಹಾವು ಕಡಿದಿದೆ.
ತಕ್ಷಣ ಅವರನ್ನು ಗೋವಾದ ಧಾರವಾಡೋರಾದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ, ಅವರು ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಯುವ ಮುಖಂಡನ ಅಕಾಲಿಕ ನಿಧನಕ್ಕೆ ಪಕ್ಷದ ನಾಯಕರು ಕಂಬನಿ ಮಿಡಿದಿದ್ದಾರೆ.

