Latest

*ಆಕ್ಸಿಜನ್ ದುರಂತ ಪ್ರಕರಣ: ಸಂತ್ರಸ್ತ ಕುಟುಂಬ ಸದಸ್ಯರಿಗೆ ಮೆಡಿಕಲ್ ಕಾಲೇಜಿನಲ್ಲಿ ಕೆಲಸ; ಡಿ.ಕೆ.ಶಿವಕುಮಾರ್ ಘೋಷಣೆ*

ಪ್ರಗತಿವಾಹಿನಿ ಸುದ್ದಿ; ಹನೂರು: ಶಾಸಕ ನರೇಂದ್ರ ರಾಜುಗೌಡ ಅವರು ಈ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ನಮ್ಮ ಕೆಲಸದ ಬಗ್ಗೆ ಕಿವಿಯಲ್ಲಿ ಕೇಳಿದರೆ ನಂಬಲು ಸಾಧ್ಯವಿಲ್ಲ. ಕಣ್ಣಾರೇ ನೋಡಿದರೆ ಮಾತ್ರ ನಂಬಲು ಸಾಧ್ಯ. ಇಡೀ ರಾಜ್ಯದಲ್ಲಿ ಹನೂರು ಕ್ಷೇತ್ರದ ಒಂದೇ ವಿದ್ಯಾರ್ಥಿ ನಿಲಯದಲ್ಲಿ ಮೂರೂವರೇ ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ದಾಖಲೆ ಇದೆ. ನನ್ನ ತಂದೆ ತಾಯಿ ನನಗೆ ವಿದ್ಯಾಭ್ಯಾಸ ಕೊಡಿಸಲು ಬೆಂಗಳೂರಿಗೆ ಕಳುಹಿಸಿದರು. ರಾಜ್ಯದ ಎಲ್ಲೆಡೆ ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲು ವಿದ್ಯಾರ್ಥಿಗಳನ್ನು ಬೇರೆ ಊರುಗಳಿಗೆ ಕಳುಹಿಸುತ್ತಿದ್ದಾರೆ. ಆದರೆ ನರೇಂದ್ರ ಅವರು ಇಲ್ಲೇ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಹನೂರಿನಲ್ಲಿ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಇಲ್ಲಿ 151 ಸಮುದಾಯ ಭವನಗಳಿವೆ. ನನ್ನ ಕ್ಷೇತ್ರದಲ್ಲಿ ಇಷ್ಟು ಸಮುದಾಯ ಭವನ ಕಟ್ಟಿಸಲು ಆಗಿಲ್ಲ. ಆದರೆ ನರೇಂದ್ರ ಅವರು ಈ ಸಾಧನೆ ಮಾಡಿದ್ದಾರೆ. ರೈತರಿಗೆ ಕಾಂಗ್ರೆಸ್ ಪಕ್ಷ ಉಚಿತ ವಿದ್ಯುತ್ ನೀಡಿತು. ನಾನು ಇಂಧನ ಸಚಿವನಾಗಿದ್ದಾಗ ವಿದ್ಯುತ್ ಸರಬರಾಜಿನ ನಷ್ಟ ತಪ್ಪಿಸಲು ಈ ಕ್ಷೇತ್ರದಲ್ಲಿ 20 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸಲು ಸೋಲಾರ್ ಕೇಂದ್ರ ಸ್ಥಾಪಿಸಲಾಯಿತು.

ನಾವು ಮಾದೇಶ್ವರನ ಕ್ಷೇತ್ರದಲ್ಲಿ ಮಾತನಾಡುತ್ತಿದ್ದು, ಆತ ವರವನ್ನು ನೀಡುವುದಿಲ್ಲ. ಶಾಪವನ್ನು ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಅದನ್ನು ಈ ಭಾಗದ ನಾಯಕರು ಸಮರ್ಪಕವಾಗಿ ಬಳಸಿಕೊಂಡು ಕೆಲಸ ಮಾಡಿದ್ದಾರೆ. ಬಿಜೆಪಿ ಸರ್ಕಾರ 600 ಭರವಸೆ ನೀಡಿ ಕೇವಲ 50 ಈಡೇರಿಸಿದ್ದಾರೆ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು, ನಿಮ್ಮ ಆದಾಯ ಡಬಲ್ ಆಯಿತಾ? 1 ಲಕ್ಷ ರೂ. ರೈತರ ಸಾಲ ಮನ್ನಾ ಮಾಡುತ್ತೇವೆ ಎಂದರು, ಮಾಡಿದರಾ? ಸ್ವಿಸ್ ಬ್ಯಾಂಕ್ ನಿಂದ ಕಪ್ಪು ಹಣ ತಂದು ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು, ಹಾಕಿದರಾ? ಇಲ್ಲ. ಅಚ್ಛೇದಿನ ನೀಡುತ್ತೇವೆ ಎಂದರು, ಅಚ್ಛೇದಿನ ಬಂತಾ? ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು, ನಿಮಗೆ ಉದ್ಯೋಗ ಸಿಕ್ಕಿತಾ? ಎಲ್ಲಾ ಇಲಾಖೆಗಳ ನೇಮಕಾತಿಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಈ ಸರ್ಕಾರದಲ್ಲಿ 40% ಕಮಿಷನ್ ಇಲ್ಲದೆ ಯಾವುದೇ ಕೆಲಸ ಆಗುವುದಿಲ್ಲ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿದ್ದಾರೆ. ಮಠಾಧೀಶರು ಈ ಸರ್ಕಾರ 30% ಕಮಿಷನ್ ಪಡೆಯುತ್ತಿದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರ ಬಂದ ನಂತರ ಈ ಭ್ರಷ್ಟಾಚಾರ ಕೊನೆಗಾಣಿಸುತ್ತೇವೆ.

Home add -Advt

ನಿಮ್ಮ ಕಷ್ಟಗಳಿಗೆ ಪರಿಹಾರ ನೀಡಲು ನಾವು ಬೆಳಗಾವಿಯಿಂದ ಈ ಪ್ರಜಾದ್ವನಿ ಯಾತ್ರೆ ಆರಂಭಿಸಿದ್ದೇವೆ. ಜನರ ಸಂಕಷ್ಟಗಳಿಗೆ ಪರಿಹಾರ ನೀಡಲು ಎರಡು ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ್ದೇವೆ. ಗೃಹಜ್ಯೋತಿ ಯೋಜನೆ ಮೂಲಕ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ. ನೀವು 200 ಯುನಿಟ್ ಒಳಗೆ ವಿದ್ಯುತ್ ಬಳಸಿದರೆ ವಿದ್ಯುತ್ ಬಿಲ್ ಕಟ್ಟುವ ಅಗತ್ಯವಿಲ್ಲ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆ ಯಜಮಾನಿಗೆ 2000 ರೂ. ಪ್ರತಿ ತಿಂಗಳು ಕೊಡ್ತೇವೆ. ವರ್ಷಕ್ಕೆ ಒಟ್ಟು 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷ ಕೊಡುತ್ತೇವೆ. ಜತೆಗೆ 10 ಕೆಜಿ ಅಕ್ಕಿ ನೀಡುತ್ತೇವೆ. ನಾನು ಸಿದ್ದರಾಮಯ್ಯ ಸಹಿ ಹಾಕಿರೋ ಗ್ಯಾರಂಟಿ ಕಾರ್ಡ್ ನಿಮ್ಮ ಮನೆಗೆ ಬರ್ತದೆ. ಪ್ರತಿ ಕ್ಷೇತ್ರದಲ್ಲಿ ಅತಿ ಹೆಚ್ಚು ಮನೆಗೆ ಈ ಕಾರ್ಡ್ ತಲುಪಿಸುವವರಿಗೆ ಬಹುಮಾನ ನೀಡಲಾಗುವುದು. ಮೇ ತಿಂಗಳಲ್ಲಿ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದೆ, ಜೂನ್ ತಿಂಗಳಿಂದ ಈ ಯೋಜನೆ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಯೋಜನೆ ಜಾರಿ ಮಾಡದಿದ್ದರೆ, ನುಡಿದಂತೆ ನಡೆಯದಿದ್ದರೆ ನಾನು ಹಾಗೂ ಸಿದ್ದರಾಮಯ್ಯ ಅವರು ಮತ್ತೆ ಮತ ಕೇಳಲು ನಿಮ್ಮ ಮುಂದೆ ಬರುವುದಿಲ್ಲ.

ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆಯನ್ನು ರಾಹುಲ್ ಗಾಂಧಿ ಅವರು ನಿಮ್ಮ ಜಿಲ್ಲೆಯಿಂದ ಆರಂಭಿಸಿದರು. ಚಿತ್ರದುರ್ಗದಲ್ಲಿ ಯಾತ್ರೆ ಸಾಗುವಾಗ ಹಿರಿಯ ಮಹಿಳೆ ಬಂದು ಇದು ನಿಮ್ಮ ಅಜ್ಜಿ ಕೊಟ್ಟ ಜಮೀನಿನಲ್ಲಿ ಬೆಳೆದ ಸೌತೇಕಾಯಿ ತಗೊಳ್ಳಿ ಎಂದು ಕೊಟ್ಟರು. ಬಡವವರಿಗೆ ಉಳುಮೆ ಮಾಡಲು ಜಮೀನು ಕೊಟ್ಟಿದ್ದು ಕಾಂಗ್ರೆಸ್. ಮಹಿಳೆಯರಿಗೆ ಸ್ತ್ರೀ ಶಕ್ತಿ ಸಂಘ ಮಾಡಿ ಸಾಲ ನೀಡಿದೆವು. ಬಡವರಿಗೆ 5 ಕೆ.ಜಿ ಉಚಿತ ಅಕ್ಕಿ ನೀಡಿ ನಂತರ 7 ಕೆ.ಜಿ ನೀಡಿದೆವು. ಬಿಜೆಪಿ ಈಗ ಅದನ್ನು 5 ಕೆ.ಜಿಗೆ ಇಳಿಸಿದೆ. ಮುಂದೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ ನೀಡುತ್ತೇವೆ. ಬಿಜೆಪಿ ಸರ್ಕಾರ ಇಂತಹ ಯಾವುದಾದರೂ ಒಂದು ಯೋಜನೆ ನೀಡಿದೆಯಾ? ಎಂದು ಪ್ರಶ್ನಿಸಿದರು.

ಈ ಕ್ಷೇತ್ರದಲ್ಲಿ ಕೆಲವರು ಹಣ ಚೆಲ್ಲಲು ಬರುತ್ತಿದ್ದಾರೆ. ನೀವು ದುಡ್ಡು ಬೇಡ ಎನ್ನಬೇಡಿ. ಹಣ ಪಡೆದು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ. ಕೋವಿಡ್ ಸಮಯದಲ್ಲಿ ಸರ್ಕಾರದಿಂದ ನಿಮಗೆ ಏನಾದರೂ ಸಹಾಯ ಸಿಕ್ಕಿತಾ? ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದೆ 36 ಜನ ಸತ್ತಾಗ ಬಿಜೆಪಿ ನಾಯಕರು ಬಂದು ಸಾಂತ್ವನ ಹೇಳಿದರಾ? ಆ ಸಂತ್ರಸ್ತರಿಗೆ ಭೇಟಿ ಮಾಡಿ ಸಾಂತ್ವನ ಹೇಳಿದ್ದು ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಧೃವನಾರಾಯಣ್. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ 36 ಕುಟುಂಬದ ಸದಸ್ಯರಿಗೆ ಮೆಡಿಕಲ್ ಕಾಲೇಜಿನಲ್ಲಿ ಕೆಲಸ ನೀಡಲಾಗುವುದು ಎಂದು ಘೋಷಿಸಿದರು.

ನಮ್ಮ ಯಾತ್ರೆಗೆ ದೊಡ್ಡ ಪ್ರಮಾಣದಲ್ಲಿ ಜನ ಸೇರಿದ್ದೀರಿ. ನಿಮ್ಮ ಪ್ರೀತಿ ವಿಶ್ವಾಸ ಮೂಲಕ ನಮಗೆ ಶಕ್ತಿ ನೀಡುತ್ತಿದ್ದೀರಿ. ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರಲಿ. ಬಿಜೆಪಿ ಸರ್ಕಾರ ಸಮಾಜವನ್ನು ಕತ್ತರಿಸುವ ಕತ್ತರಿಯಂತೆ ಕೆಲಸ ಮಾಡಿದರೆ, ಕಾಂಗ್ರೆಸ್ ಈ ಸಮಾಜವನ್ನು ಸೂಜಿಯಂತೆ ಹೊಲಿದು ಒಂದು ಮಾಡುವ ಕೆಲಸ ಮಾಡುತ್ತದೆ. ಕಾಂಗ್ರೆಸ್ ಪಕ್ಷ ಮಾತ್ರ ಸಮಾಜದ ಮನಸ್ಸು ಬೆಸೆಯುವ ಕೆಲಸ ಮಾಡುತ್ತದೆ ಎಂದರು.

ಅದ್ಯಾರೋ ಮಂತ್ರಿ ಟಿಪ್ಪುವನ್ನು ಯಾರೋ ಹೊಡೆದುಹಾಕಿ ಕೊಂದರೆಂದು ಹೇಳಿದ್ದಾರೆ. ಅದು ಯಾವ ಇತಿಹಾಸದಲ್ಲಿದೆಯೋ ಗೊತ್ತಿಲ್ಲ. ಅದೇ ರೀತಿ ಈ ರಾಜ್ಯದ ಅನ್ನದಾತ ಸಿದ್ದರಾಮಯ್ಯ ಅವರನ್ನು ಹೊಡೆದುಹಾಕುವಂತೆ ಕರೆ ನೀಡುತ್ತಾನೆ. ಅಂತಹವನ ವಿರುದ್ಧ ಮುಖ್ಯಮಂತ್ರಿಗಳು, ಗೃಹ ಸಚಿವರು ಕ್ರಮ ಕೈಗೊಂಡಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರೆಲ್ಲರೂ ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೋರಾಟ ಮಾಡಬೇಕು. ಆತನನ್ನು ಪೊಲೀಸರು ಬಂಧಿಸಬೇಕು ಎಂದು ಹೇಳಿದರು.

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯಲಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಹಸ್ತಕ್ಕೆ ಮತ ಹಾಕಿ ಶಕ್ತಿ ತುಂಬಬೇಕು ಎಂದರು.

*ಬೇಲೂರು ಶ್ರೀ ಚೆನ್ನಕೇಶವ ದೇಗುಲ ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆ ನಿರೀಕ್ಷೆ*

https://pragati.taskdun.com/belur-sri-chennakesava-templelist-of-unesco-world-heritage-sitescm-basavaraj-bommai/

 

Related Articles

Back to top button