ಪ್ರಗತಿವಾಹಿನಿ ಸುದ್ದಿ; ಕೋಲಾರ: ಕಳ್ಳನೊಬ್ಬನಿಂದ ಕೋಲಾರದಲ್ಲಿ ಕೊರೊನಾ ಭೀತಿ ಉಂಟಾಗಿದ್ದು, ಪೊಲೀಸರಿಗೂ ಕ್ವಾರಂಟೈನ್ ಗೆ ಒಳಪಡಿಸಿರುವ ಘಟನೆ ನಡೆದಿದೆ. ರೋಗಿ ಸಂಖ್ಯೆ 1128 ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಇದೀಗ ಕೆಜಿಎಫ್ ಪೊಲೀಸರನ್ನು ಬೆಚ್ಚಿ ಬೀಳಿಸಿದೆ.
ಕೋಲಾರ ಜಿಲ್ಲೆಯ ಕೆಜಿಎಫ್ನ ಮೇ 14ರಂದು ಮಾರಿಕುಪ್ಪಂನಲ್ಲಿರುವ ಚಿನ್ನದ ಗಣಿಯಲ್ಲಿ ಐದು ಜನ ಕಳ್ಳರು ಕಳ್ಳತನಕ್ಕೆ ಯತ್ನಿಸಿದ್ದರು. ಈ ವೇಳೆ ಚಿನ್ನದ ಗಣಿಯ ಗುಂಡಿಯಲ್ಲಿ ಬಿದ್ದು ಮೂವರು ಸಾವನ್ನಪ್ಪಿದ್ದರು. ಇನ್ನು ಇಬ್ಬರು ಬಚಾವ್ ಅಗಿ ಪೊಲೀಸರ ಅತಿಥಿಯಾಗಿದ್ದರು.
ಸೆರೆ ಸಿಕ್ಕ ಇಬ್ಬರು ಕಳ್ಳರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ, ಓರ್ವನಲ್ಲಿ ಕೊರೊನಾ ಲಕ್ಷಣ ಕಂಡು ಬಂದ ಹಿನ್ನಲೆಯಲ್ಲಿ ನ್ಯಾಯಾಧೀಶರ ಆದೇಶದ ಮೇರೆಗೆ ಓರ್ವನಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗಿತ್ತು. ಇದೀಗ ಆತನಲ್ಲಿ ಸೋಂಕು ದೃಢವಾಗಿದ್ದು, ಆತನ ಪ್ರಾಥಮಿಕ ಸಂಪರ್ಕ ಹೊಂದಿದ್ದ 9 ಜನ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
ಸೋಂಕು ಲಕ್ಷಣ ಕಂಡುಬಂದ ತಕ್ಷಣ ಕಳ್ಳನನ್ನು ಜೈಲಿನಲ್ಲಿ ಪ್ರತ್ಯೇಕವಾಗಿ ಇರಿಸಿದ್ದಾರೆ. ಜೊತೆಗೆ ಹೆಚ್ಚಿನ ಪೊಲೀಸರು ಅವನ ವಿಚಾರಣೆಗೆ ಹೋಗಿಲ್ಲ. ಇದರಿಂದಾಗಿ ಕೆಜಿಎಫ್ನ ಪೊಲೀಸರು ಸೋಂಕಿನಿಂದ ಬಚಾವ್ ಆಗಿದ್ದಾರೆ. ಆದಾಗ್ಯೂ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ