Kannada NewsKarnataka NewsUncategorized

ಅಪಾರ ಜನಸ್ತೋಮದ ಮಧ್ಯೆ ವಿವಿಧೆಡೆ ಲಕ್ಷ್ಮೀ ಹೆಬ್ಬಾಳಕರ್ ಮತ ಯಾಚನೆ;  ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ ನಿಮ್ಮ ಇಷ್ಟೊಂದು ಪ್ರೀತಿ ಪಡೆದಿದ್ದೇನೆ ಎಂದ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಕಳೆದ 5 ವರ್ಷ ಯಾವುದೇ ತಾರತಮ್ಯವಿಲ್ಲದೇ  ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಿಮ್ಮ ಮನೆ ಮಗಳಂತೆ ಕೆಲಸ ಮಾಡಿದ್ದೇನೆ. ಮೇ 10ರಂದು ನಡೆಯಲಿರುವ ವಿಧಾನ ಸಭೆ ಚುನಾವಣೆಯಲ್ಲಿ ಮತ ನೀಡುವ ಮೂಲಕ ಮತ್ತೊಮ್ಮೆ ಭಾರೀ ಬಹುಮತದಿಂದ ಆಯ್ಕೆ ಮಾಡಿ ಎಂದು ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಮನವಿ ಮಾಡಿದ್ದಾರೆ.

ಕ್ಷೇತ್ರದ ಹಲಗಾ ಮತ್ತು ರಂಗಧೋಳಿ ಗ್ರಾಮದಲ್ಲಿ ಭಾರೀ ಜನಸ್ತೋಮದ ಮಧ್ಯೆ ಪ್ರಚಾರ ಕಾರ್ಯ ಕೈಗೊಂಡು ಅವರು ಮಾತನಾಡುತ್ತಿದ್ದರು. 2018ರಲ್ಲಿ ಆಯ್ಕೆಯಾದಾಗಿನಿಂದ ಒಂದು ದಿನವೂ ಮನೆಯಲ್ಲಿ ಕೂಡ್ರಲಿಲ್ಲ. ಇಡೀ ಕ್ಷೇತ್ರವೇ ನನ್ನ ಮನೆ ಎಂಬಂತೆ ಓಡಾಡಿ ಕೆಲಸ ಮಾಡಿಸಿದ್ದೇನೆ. ನೀವು ಹೇಳಿದ ಕಾಮಗಾರಿಗಳನ್ನೆಲ್ಲ ನನ್ನ ಶಕ್ತಿ ಮೀರಿ ಮಾಡಿಸಿದ್ದೇನೆ. ಕೊರೋನಾದಂತಹ ಸಂದರ್ಭದಲ್ಲೂ ನನ್ನ ಮತ್ತು ನನ್ನ ಕುಟುಂಬದ ಆರೋಗ್ಯವನ್ನೂ ಕಡೆಗಣಿಸಿ ಕೈಲಾದಷ್ಟು ಜನರ ಸೇವೆ ಮಾಡಿದ್ದೇನೆ ಎಂದು ಹೆಬ್ಬಾಳಕರ್ ಹೇಳಿದರು.

​ವಿರೋಧ ಪಕ್ಷದ ಶಾಸಕಿಯಾಗಿದ್ದರೂ 5 ವರ್ಷದ ಹಿಂದೆ ಮತದಾರರಿಗೆ ನೀಡಿದ್ದ ಭರವಸೆಗಳನ್ನೆಲ್ಲ ಈಡೇರಿಸಿದ್ದೇನೆ. ಬಾಕಿ ಇರುವುದು ಕೇವಲ ಒಂದೆರಡು ಮಾತ್ರ. ಅವುಗಳನ್ನೂ ಈ ಬಾರಿ ಪ್ರಥಮ ಆದ್ಯತೆಯ ಮೇಲೆ ಈಡೇರಿಸುತ್ತೇನೆ. ಕಳೆದ ಬಾರಿ ಜನರ ಅಪೇಕ್ಷೆಯಂತೆ ಮೂಲಸೌಕರ್ಯಗಳಿಗೆ ಮೊದಲ ಆದ್ಯತೆ ನೀಡಿದ್ದೆ. ರಸ್ತೆ, ಚರಂಡಿ, ಕುಡಿಯುವ ನೀರು, ಶಾಲೆ, ದೇವಸ್ಥಾನ, ಸಮುದಾಯ ಭವನಗಳ ಬೇಡಿಕೆಗಳನ್ನು ಈಡೇರಿಸಿದ್ದೇನೆ. ಇದರ ಜೊತೆಗೆ, ಕಾಲೇಜು ಮತ್ತು ಆಸ್ಪತ್ರೆ ಕಟ್ಟಿಸುವ ಯೋಜನೆಯನ್ನೂ ನಾನು ಹಾಕಿಕೊಂಡಿದ್ದೆ. ಆದರೆ ನಮ್ಮ ಸರಕಾರವಿಲ್ಲದ್ದರಿಂದ ಅದು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಅವುಗಳನ್ನು ಈಡೇರಿಸುತ್ತೇನೆ ಎಂದು ಅವರು ತಿಳಿಸಿದರು.

​ಕೊರೋನಾ, ಪ್ರವಾಹದಂತಹ ಸಂಕಷ್ಟದ ಸಂದರ್ಭದಲ್ಲಿ ನಿಮ್ಮ ಮನೆ ಮಗಳಾಗಿ ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ಉಚಿತ ಅಂಬುಲೆನ್ಸ್ ಒದಗಿಸಿದ್ದೇನೆ. ಔಷಧ, ಆಹಾರದ ಕಿಟ್ ಗಳನ್ನು ವಿತರಿಸಿದ್ದೇನೆ. ಗ್ರಾಮೀಣ ಮಕ್ಕಳಿಗೆ, ಯುವಕರಿಗೆ ಜಿಮ್ ಹಾಗೂ ಕ್ರೀಡಾ ಸಾಮಗ್ರಿಗಳನ್ನು ಒದಗಿಸಿದ್ದೇನೆ. ಸರಕಾರದ ಅನುದಾನವಲ್ಲದೆ ಲಕ್ಷ್ಮೀ ತಾಯಿ ಫೌಂಡೇಶನ್ ಮೂಲಕ ಸ್ವಂತ ಹಣವನ್ನೂ ಒದಗಿಸಿ ಅಗತ್ಯ ಕೆಲಸ, ಬಡವರ ಬೇಡಿಕೆಗಳಿಗೆ ಸ್ಪಂದಿಸಿದ್ದೇನೆ ಎಂದು ಲಕ್ಷ್ಮೀ ಹೆಬ್ಬಾಳಕರ್ ವಿವರಿಸಿದರು.

​ಗ್ರಾಮೀಣ ಬಸ್ ನಿಲ್ದಾಣ, ವಾಲ್ಮೀಕಿ ಭವನ, ಮರಾಠಾ ಭವನ, ಅಂಬೇಡ್ಕರ್ ಭವನ, 103 ದೇವಸ್ಥಾನಗಳ ನಿರ್ಮಾಣ ಮತ್ತು ಜೀರ್ಣೋದ್ಧಾರ, ಜೈನ ಬಸದಿ, ಮಸೀದಿ, ಚರ್ಚ್ ಗಳ ನಿರ್ಮಾಣಕ್ಕೆ ಅನುದಾನ ಒದಗಿಸಿದ್ದೇನೆ. ರಾಜಹಂಸಗಡದಲ್ಲಿ ದೇಶದಲ್ಲೇ ಬೃಹತ್ತಾದ, ಅಪರೂಪದ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣ ಮಾಡಿ, ಕೋಟೆಯ ಅಭಿವೃದ್ಧಿ ಮಾಡಿಸಿದ್ದೇನೆ. ಮಕ್ಕಳ ವಿದ್ಯಾಭ್ಯಾಸಗಳಿಗೆ ನೆರವಾಗಿದ್ದೇನೆ ಎಂದು ತಿಳಿಸಿದರು.

ಜಲಸಂಪನ್ಮೂಲ ಇಲಾಖೆಯಿಂದ 695.81 ಕೇಟಿ ರೂ., ಸಣ್ಣ ನೀರಾವರಿ ಇಲಾಖೆಯಿಂದ 3092 ಲಕ್ಷ ರೂ., ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ 5142.74 ಲಕ್ಷ ರೂ., ಲೋಕೋಪಯೋಗಿ ಇಲಾಖೆಯಿಂದ 1694.35 ಲಕ್ಷರೂ., ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 100 ಲಕ್ಷ ರೂ., ಕನ್ನಡ ಮತ್ತು ಸಂಸ್ಕೃತಿ ಇಲಾಖಿಯಿಂದ 50 ಲಕ್ಷ ರೂ., ಪ್ರವಾಸೋದ್ಯಮ ಇಲಾಖೆಯಿಂದ 300 ಲಕ್ಷ ರೂ., ಹಿಂದುಳಿದ ವರ್ಗಗಳ ಇಲಾಖಿಯಂದ 100 ಲಕ್ಷ ರೂ., ಶಾಸಕರ ನಿಧಿಯಿಂದ 792 ಲಕ್ಷ ರೂ., ಗ್ರಾಮೀಣಾಭಿವೃದ್ಧಿ ನಿಗಮದಿಂದ 800 ಲಕ್ಷ ರೂ., ಮುಜರಾಯಿ ಇಲಾಖೆಯಿಂದ 960 ಲಕ್ಷ ರೂ., ರಸ್ತೆ, ದೇವಸ್ಥಾನ, ಬ್ರಿಡ್ಜ್ ಕಂ ಬಾಂದಾರ, ಕೆರೆಗಳ ಅಭಿವೃದ್ಧಿ, ಸರಕಾರಿ ಶಾಲೆಗಳ ಕೊಠಡಿ ನಿರ್ಮಾಣ – ದುರಸ್ತಿ, ಶಾಲಾ ಮೈದಾನಗಳ ಅಭಿವೃದ್ಧಿಗೆ ವಿಶೇಷ ಅನುದಾನ ತಂದಿದ್ದೇನೆ ಎಂದು ಅವರು ತಿಳಿಸಿದರು.

​ವಿರೋಧ ಪಕ್ಷದ ಶಾಸಕಿಯಾಗಿ, ಅದರಲ್ಲೂ ಮೊದಲ ಬಾರಿಗೆ ಶಾಸಕರಾಗಿ ಇಷ್ಟೊಂದು ಅನುದಾನ ತರುವುದು ಸುಲಭವಿರಲಿಲ್ಲ. ​ಈ ಬಾರಿ ನಮ್ಮದೇ ಸರಕಾರ ಬರುವುದರಿಂದ ಹೆಚ್ಚಿನ ಕೆಲಸ ತರಲು ಸಾಧ್ಯವಾಗುತ್ತದೆ ಎನ್ನುವ ವಿಶ್ವಾಸವಿದೆ. ವಿಶೇಷವಾಗಿ ಯುವಕರಿಗೆ ಉದ್ಯೋಗ ಒದಗಿಸುವಂತಹ ಯೋಜನೆಗಳನ್ನು ತರುತ್ತೇನೆ. ಉನ್ನತ ಶಿಕ್ಷಣ ಗ್ರಾಮೀಣ ಕ್ಷೇತ್ರದಲ್ಲೇ ಸಿಗುವಂತೆ ಮಾಡುವ ಸಂಕಲ್ಪ ಮಾಡಿದ್ದೇನೆ. ಅತ್ಯಂತ ಕಡಿಮೆ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಹೆಬ್ಬಾಳಕರ್ ಭರವಸೆ ನೀಡಿದರು.

ಬ್ಯಾಲೆಟ್ ಯುನಿಟ್ ನಲ್ಲಿ 4ನೇ ನಂಬರ್ ನಲ್ಲಿರುವ ನನ್ನ ಚುನಾವಣೆ ಚಿಹ್ನೆಯಾಗಿರುವ ಹಸ್ತದ ಗುರುತಿನ ಮುಂದಿರುವ ಬಟನ್ ಒತ್ತುವ ಮೂಲಕ ನನ್ನನ್ನು ಬೆಂಬಲಿಸಿ, ಅಭಿವೃದ್ಧಿಗೆ ಕೈ ಜೋಡಿಸಿ ಎಂದು ಅವರು ಮನವಿ ಮಾಡಿದರು.​ 

ಕ್ಷೇತ್ರದ ಜನರ ಪ್ರೀತಿ ನೋಡಿ ನನ್ನ ಮನಸ್ಸು ತುಂಬಿ ಬರುತ್ತಿದೆ. ಹೆಚ್ಚು ಮಾತನಾಡಲು ಆಗುತ್ತಿಲ್ಲ. ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ, ಶಾಸಕಿಯಾಗಿ ನಿಮ್ಮೆಲ್ಲರ ಪ್ರೀತಿಯನ್ನು‌ ಗಳಿಸಿದ್ದೇನೆ. ಇದು ನನ್ನ ಸುಧೈವವೇ ಸರಿ. 

ಬರುವ ಈ ಚುನಾವಣೆಯಲ್ಲಿ ನಿಮ್ಮ ಮನೆ ಮಗಳನ್ನು‌ ಹರಸಿ, ಆಶೀರ್ವದಿಸಿ ವಿಧಾನಸಭೆಗೆ ಮತ್ತೊಮ್ಮೆ ಆಯ್ಕೆ ಮಾಡಿ ಎಂದು ಕೇಳಿಕೊಳ್ಳುತ್ತೇನೆ​ ಎಂದು ಅವರು ಹೇಳಿದರು. .

ಈ ಸಂದರ್ಭದಲ್ಲಿ ಸ್ಥಳೀಯ ​ವಿವಿಧ ಸಂಘಟನೆಗಳು ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಸಂಪೂರ್ಣ ಬೆಂಬಲ ಘೋಷಿಸಿದವು. ​ಪಕ್ಷಾತೀತವಾಗೆ ಕ್ಷೇತ್ರದ ಅಭಿವೃದ್ಧಿಗಾಗಿ ನಾವು ನಿಮ್ಮ ಜೊತೆಗಿರುತ್ತೇವೆ. ಜಾತಿ, ಭಾಷೆಯ ಭೇದ ಮಾಡದ ನಿಮಗೂ ನಾವೆಲ್ಲ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.

https://pragati.taskdun.com/d-k-shivakumarhelicoper-landinghalipadfireuttara-kannadahonnavara/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button