*ಶನಿವಾರ ಹಿರಿಯ ನಾಗರಿಕರೊಂದಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಜನ್ಮ ದಿನ ಆಚರಣೆ; ವೈವಿದ್ಯಮಯ ಕಾರ್ಯಕ್ರಮ ಆಯೋಜನೆ: MLC ಚನ್ನರಾಜ ಹಟ್ಟಿಹೊಳಿ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಹಿರಿಯ ನಾಗರಿಕರೊಂದಿಗೆ,ಅವರನ್ನು ಗೌರವಿಸುವ ಮೂಲಕ ಶನಿವಾರ ವಿಶೇಷ ರೀತಿಯಲ್ಲಿ ತಮ್ಮ ಜನ್ಮ ದಿನ ಆಚರಿಸಿಕೊಳ್ಳಲಿದ್ದಾರೆ.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.ಬೆನಕನಹಳ್ಳಿಯ ಗಾರ್ಡನ್ ಕೋರ್ಟ್ ಹೊಟೆಲ್ ಎದುರಿನ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.ಅಂದು ಮಧ್ಯಾಹ್ನ 2 ಗಂಟೆಯಿಂದ ನಡೆಯಲಿರುವ ಕಾರ್ಯಕ್ರಮದಲ್ಲಿ ಕ್ಷೇತ್ರದ 15 ಸಾವಿರಕ್ಕಿಂತ ಹೆಚ್ಚು ಹಿರಿಯ ನಾಗರಿಕರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಹಿರಿಯ ನಾಗರಿಕರು ಈ ಸಮಾಜದ ಆಸ್ತಿ,ಅವರ ಮುಖದಲ್ಲಿನ ನಗುವೇ ನನಗೆ ಶಕ್ತಿ ಎನ್ನುವ ಮಾತನ್ನು ಲಕ್ಷ್ಮೀ ಹೆಬ್ಬಾಳಕರ್ ಅವರು ಪದೇ ಪದೇ ಹೇಳುತ್ತಿರುತ್ತಾರೆ.ಹಾಗಾಗಿ ತಮ್ಮ ಮಾರ್ಗದರ್ಶಕರಾಗಿರುವ ಹಿರಿಯರನ್ನು ಸನ್ಮಾನ ಮಾಡುವ ಮೂಲಕ,ಅವರಿಗೆ ಹಲವಾರು ರೀತಿಯ ಮೋಜಿನ ಆಟಗಳನ್ನು ಆಡಿಸುವ ಮೂಲಕ ಅವರ ಸಂಭ್ರಮದೊಂದಿಗೆ ತಮ್ಮ ಸಂಭ್ರಮ ಆಚರಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಹಿರಿಯ ನಾಗರಿಕರಲ್ಲಿ ಹೊಸ ಚೈತನ್ಯ ಮೂಡಿಸಬೇಕು,ಅವರಲ್ಲಿ ಜೀವನೋತ್ಸಾಹ ತುಂಬಬೇಕು,ಆತ್ಮಸ್ಥೈರ್ಯ ಹೆಚ್ಚಿಸಬೇಕು ಎನ್ನುವುದು ಕಾರ್ಯಕ್ರಮದ ಉದ್ದೇಶ.ಈ ಹಿನ್ನೆಲೆಯಲ್ಲಿ ಮೋಜಿನ ಆಟಗಳು,ಸಂವಾದ,ಸನ್ಮಾನ,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಮ್ಯೂಸಿಕಲ್ ಚೇರ್,ಗನ್ -ಬಲೂನ್ ಶೂಟಿಂಗ್,ರಿಂಗ್ ಇನ್ ವಿಕೆಟ್ಸ್,ಅಂಡರ್ ವಾಟರ್ ಕ್ವೈಯಿನ್ ಚಾಲೇಂಜ್,ಲಿಂಬು-ಚಮಚಾ ಹೀಗೇ… 10ಕ್ಕೂ ಹೆಚ್ಚು ಮೋಜಿನ ಆಟಗಳೊಂದಿಗೆ ಹಿರಿಯರ ಮನರಂಜಿಸಲಾಗುವುದು ಎಂದು ಚನ್ನರಾಜ ವಿವರಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರು ಇತಿಹಾಸದಲ್ಲೇ ಕಾಣದ ರೀತಿಯಲ್ಲಿ ನಿರಂತರ ಅಭಿವೃದ್ದಿ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ.ಇಡೀ ಕ್ಷೇತ್ರದಲ್ಲಿ ಇದ್ದರೆ ಇಂತಹ ಜನಪ್ರತಿನಿಧಿಗಳಿರಬೇಕು ಎನ್ನುವ ಅಭಿಪ್ರಾಯ ಜನರಲ್ಲಿ ಬಂದಿದೆ.ನಾವು ಹಳ್ಳಿಗಳಿಗೆ ಕಾರ್ಯಕ್ರಮಗಳಿಗೆ ಹೋದ ಸಂದರ್ಭದಲ್ಲಿ `ನುಡಿದಂತೆ ನಡೆದ ತಾಯಿ’ ಎನ್ನುವ ಫ್ಲೆಕ್ಸ್ ಗಳನ್ನು ಹಳ್ಳಿ ಹಳ್ಳಿಗಳಲ್ಲಿ ಜನರೇ ಸ್ವಯಂ ಸ್ಫೂರ್ತಿಯಿಂದ ಅಳವಡಿಸುತ್ತಿದ್ದಾರೆ.ಚಿನ್ನದ ಸರ ನೀಡಿ,ಮನೆಗೆ ಬಂದು ಸೀರೆ ಬಾಗಿನ ಅರ್ಪಿಸಿ ಸನ್ಮಾನಿಸಿ,ಕೃತಜ್ಞತೆ ಸಲ್ಲಿಸುತ್ತಿದ್ದಾರೆ.ಅವರ ಕೆಲಸದಿಂದಾಗಿ ಇಡೀ ಕ್ಷೇತ್ರದ ಜನರಲ್ಲಿ ತಾವು ಮತ ಹಾಕಿ ಆರಿಸಿ ತಂದಿದ್ದಕ್ಕೆ ಸಾರ್ಥಕತೆ,ಸಂತೃಪ್ತಿಯ ಭಾವನೆ ನಿರ್ಮಾಣವಾಗಿದೆ ಎಂದು ಚನ್ನರಾಜ ಹಟ್ಟಿಹೊಳಿ ವಿವರಿಸಿದರು.
ಕೆಲಸ ಸಣ್ಣದಿರಲಿ,ದೊಡ್ಡದಿರಲಿ,ವಯಕ್ತಿಕವಿರಲಿ,ಸಾರ್ವಜನಿಕವಿರಲಿ,ಲಕ್ಷ್ಮೀ ಹೆಬ್ಬಾಳಕರ್ ಇದ್ದಾರಲ್ಲಾ ಎನ್ನುವ ವಿಶ್ವಾಸ ಜನರಲ್ಲಿ ಬಂದಿದೆ.ಲಕ್ಷ್ಮೀ ಹೆಬ್ಬಾಳಕರ್ ಕೇವಲ ಜನಪ್ರತಿನಿಧಿಯಾಗಿ ಉಳಿದಿಲ್ಲ,ಲಕ್ಷ್ಮೀ ಹೆಬ್ಬಾಳಕರ್ ಎಂದರೆ ಜನರ ವಿಶ್ವಾಸ,ಜನರ ನಂಬಿಕೆ ಎನ್ನುವಂತಾಗಿದೆ.ಇಡೀ ಕ್ಷೇತ್ರ ಒಂದು ರೀತಿಯಲ್ಲಿ ನಮ್ಮ ಕುಟುಂಬದಂತಾಗಿದೆ.ಕ್ಷೇತ್ರದ ಜನರು ಯಾವ ಪಕ್ಷ,ಯಾವ ಜಾತಿ,ಯಾವ ಧರ್ಮ ಎನ್ನುವುದನ್ನು ನೋಡದೆ ಅವರ ಕಷ್ಟ,ಸುಖದಲ್ಲಿ ಜೊತೆಗೆ ನಿಲ್ಲುತ್ತಿದ್ದೇವೆ.ಹಾಗಾಗಿ ಕ್ಷೇತ್ರದಲ್ಲಿರುವ ಹಿರಿಯ ನಾಗರಿಕರು,ನಮ್ಮ ಮನೆಯ ಹಿರಿಯರು ಎಂದು ಭಾವಿಸಿ,ಅವರ ಯೋಗಕ್ಷೇಮ ವಿಚಾರಿಸುವ ಜೊತೆಗೆ ಅವರ ಬಾಳಲ್ಲಿ ಸಂತಸ ಮೂಡಿಸಬೇಕು,ಇನ್ನಷ್ಟು ಕಾಲ ಅವರ ಬದುಕಿ ನಮ್ಮ ಸಂತಸವನ್ನು ಹೆಚ್ಚಿಸಬೇಕು ಎನ್ನುವ ಆಶಾಭಾವನೆಯಿಂದ ಈ ಇಡೀ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.



