ಕೆಸರೆರೆಚಾಟ ಬೇಡ. ಎಲ್ಲೆಲ್ಲಿದ್ದೀರೋ ಅಲ್ಲಲ್ಲೇ ಇರಿ. ಅಶಾಂತಿಗೆ ಆಸ್ಪದ ನೀಡಿ, ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರಲೇ ಬೇಡಿ.

ಲೇಖನ : ರವಿ ಕರಣಂ
ನಾವು ಮತ್ತು ಮಹಾರಾಷ್ಟ್ರ ರಾಜ್ಯಗಳ ಜನರು ತುಂಬಾ ಎಚ್ಚರಿಕೆ ವಹಿಸಬೇಕು. ನಾವು ರಾಜಕೀಯ ದಾಳಗಳಾಗಿ ಬಳಕೆಯಾಗಬಾರದು. ಪ್ರತಿ ನಡೆಯೂ ನಮ್ಮ ವಿವೇಕದ ಮೇಲೆ ನಿಂತಿದೆ. ಇಂದಿನ ದಿನಮಾನಗಳಲ್ಲಿ, ದ್ವೇಷಪೂರಿತ ವಾತಾವರಣ ನಿರ್ಮಾಣವಾಗುತ್ತಿರುವುದಕ್ಕೆ ಭಯವೂ, ಅಸಂತೋಷವೂ ಆಗುತ್ತಿದೆ. ಈ ರಾಜಕಾರಣ ರಾಜಧರ್ಮ ಪಾಲನೆಯಿಂದ ವಿಮುಖವಾಗುತ್ತಿದೆ. ಪ್ರಬುದ್ದತೆಯ ಮಟ್ಟ ತಲುಪಿರುವ ಎರೆಡೂ ರಾಜ್ಯ ವಾಸಿಗಳು, ಅದರಲ್ಲೂ ಗಡಿಗಳಲ್ಲಿರುವವರು ಸಮಾಧಾನ ಚಿತ್ತರಾಗಿರಬೇಕು. ಕಾರಣ, ನಮಗೆ ದೇಶದ ಒಗ್ಗಟ್ಟು ಮುಖ್ಯವಾಗಿರಬೇಕು. ಕೆಲವೇ ದುಷ್ಟ ಶಕ್ತಿಗಳ ಪ್ರಚೋದನೆಗಳಿಗೆ, ಸಮೂಹ ಸನ್ನಿಗೆ ಒಳಗಾಗಬಾರದು.
ಒಂಚೂರು ಹಿನ್ನೆಲೆ ತಿಳಿದುಕೊಂಡು ಬಿಡಿ :
ಇಡೀ ದೇಶ, ಸ್ವಾತಂತ್ರ್ಯ ಪಡೆದಾಗ ವ್ಯವಸ್ಥಿತವಾಗಿರಲಿಲ್ಲ. ಕಾರಣ ರಾಜ ಪ್ರಭುತ್ವಗಳಡಿಯಲ್ಲಿ ಪ್ರದೇಶಗಳು ತುಂಡು ತುಂಡಾಗಿದ್ದವು. ಆ ರಾಜ್ಯಗಳೆಲ್ಲವೂ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಅಧೀನದಲ್ಲಿ, ಬ್ರಿಟನ್ ರಾಣಿಯ ಆಜ್ಞೆಯಲ್ಲಿ ಬಂಧಿಯಾಗಿದ್ದವು. ಯಾವಾಗ ಕ್ರಿ ಶ 1757 ರಲ್ಲಿ, ಬಂಗಾಳದ ನವಾಬ ಸಿರಾಜ್ ಉದ್ ದೌಲ್ ನೊಂದಿಗೆ ಹೋರಾಡಿದ ಪ್ಲಾಸಿ ಕದನ, ಭಾರತದ ಚಿತ್ರಣವನ್ನೇ ಬದಲಿಸಿತು. ನಮ್ಮ ನಮ್ಮ ನಡುವೆ ಕಂದಕಗಳನ್ನು ಸೃಷ್ಟಿಸಿ, ಉಂಡ ಮನೆಗೆ ಎರೆಡು ಬಗೆವ ಮನಸುಗಳನ್ನು ಪತ್ತೆ ಹಚ್ಚಿ, ಅಧಿಕಾರದಾಸೆ ತೋರಿಸಿ, ಒಡೆದು ಆಳುವ ನೀತಿಯನ್ನು ಬಲವಾಗಿ ಬೇರೂರಿಸಿದ ರಾಬರ್ಟ್ ಕ್ಲೈವ್ ಎಂಬ ಮನೆ ಮುರುಕನಿಂದ ಬಂಗಾಳ ಬ್ರಿಟಿಷ್ ಅಧಿಪತ್ಯಕ್ಕೆ ಬಂತು. ಅಲ್ಲಿಂದ ಅವ್ಯಾಹತವಾಗಿ ನಡೆದು ಬಂದ ನೀತಿಗಳೆಲ್ಲ, ನಮ್ಮ ಸ್ಥಳೀಯ ಅರಸರುಗಳಲ್ಲಿ ವಿಷ ಬೀಜ ಬಿತ್ತಿದವು. ಅದಾಗಿ 1764 ರ ಬಕ್ಸಾರ್ ಕದನವೂ ಭದ್ರ ಬುನಾದಿ ಹಾಕುವಲ್ಲಿ, ಇತರೆ ಯುರೋಪಿಯನ್ನರ ಸೊಂಟ ಮುರಿಯುವಲ್ಲಿ ಯಶಸ್ವಿಯಾದವು. ಕಡೆಗೆ 1857 ರಲ್ಲಿ ಆರಂಭವಾದ ಉಗ್ರ ಹೋರಾಟವನ್ನು ಅನಾಮತ್ತಾಗಿ ಹತ್ತಿಕ್ಕಿದರು. ಅದನ್ನು ಅವರು “ಸಿಪಾಯಿ ದಂಗೆ’ ಎಂದು ಕರೆದರೆ, ನಮ್ಮವರು ‘ಪ್ರಥಮ ಭಾರತ ಸಂಗ್ರಾಮ” ಎಂದು ಕರೆದರು. ಅಲ್ಲಿಂದ ಸರಿಯಾಗಿ ತೊಂಭತ್ತು ವರ್ಷಗಳವರೆಗೆ ಹಲವು ಹೋರಾಟಗಳು ನಡೆದು ಅಂತೂ ಸ್ವತಂತ್ರ ಪಡೆಯುವಷ್ಟರಲ್ಲಿ, ನೂರಾ ಎಂಟಾಗಿ ಹೋಗಿತ್ತು.
ಸ್ವತಂತ್ರವೇನೋ ಬಂತು. ಒಳಗಡೆ ಎಲ್ಲವೂ ಅತಂತ್ರ. ಅಧಿಕಾರ ಲಾಲಸೆಯ ನೆಹರು ಮೊದಲ ಪ್ರಧಾನ ಮಂತ್ರಿಯಾಗುವಲ್ಲಿ, ಗಾಂಧೀಜಿಯವರನ್ನು ಬಳಸಿಕೊಂಡರು. ತಮ್ಮ ಪ್ರತಿ ಸ್ಪರ್ಧಿಯಾಗಿ ಕಾಣುತಿದ್ದ ಪ್ರಮುಖರಲ್ಲಿ ಸರ್ದಾರ್ ವಲ್ಲಬಾಯಿ ಪಟೇಲ್ ರನ್ನು ಶತಾಯ ಗತಾಯ ಹಿಂದಿಕ್ಕಿದ ಮಹಾನುಭಾವರು, ದೇಶದ ಒಗ್ಗೂಡಿಸುವ ಸಾಮರ್ಥ್ಯ ಇರುವುದು ಪಟೇಲ್ ರಿಗೆ ಮಾತ್ರ ಎಂದೇ ಅರಿತು ಗೃಹ ಮಂತ್ರಿ ಸ್ಥಾನದಲ್ಲಿರಿಸಿದ್ದಲ್ಲ. ಈ ವಿಷಯದಲ್ಲಿ ಒಂದು ವೇಳೆ ಅರಾಜಕತೆ ಮೂಡಿ, ದೇಶದಲ್ಲಿ ಅಲ್ಲೋಲ ಕಲ್ಲೋಲವಾದರೆ, ಪಟೇಲರನ್ನು ಬಲಿಪಶು ಮಾಡಿ ಬಿಡೋಣವೆಂಬ ಹುನ್ನಾರ ! ಪಟೇಲರು ರಂಗೋಲಿ ಕೆಳಗೆ ತೂರುತ್ತಾರೆ ಎಂಬುದು ಗೊತ್ತಿರಲಿಲ್ಲವೇನೋ ! ಈ ವಿಷಯದಲ್ಲಿ ಪಟೇಲರ ಕೀರ್ತಿಯೇ ಅಧಿಕವಾಯಿತು. 564 ರಾಜ್ಯಗಳಲ್ಲಿ ಕಾಶ್ಮೀರ, ಜುನಾಗಢ ಮತ್ತು ಹೈದರಾಬಾದ್ ಗಳು ವಿಲೀನವಾಗಿರಲಿಲ್ಲ. ಕೊಟ್ಟ ಗಡುವಿಗೆ ಎರೆಡು ರಾಜ್ಯಗಳು ವಿಲೀನವಾದರೆ, ಹೈದರಾಬಾದ್ ಸ್ವತಂತ್ರವಾಗಿರಲು ಬಯಸಿತ್ತು. ಪಟೇಲರ ಗಡುವಿಗೆ ಸೆಡ್ಡು ಹೊಡೆಯಿತು. ಕಡೆಗೆ ಮಣ್ಣು ಮುಕ್ಕಿತು. ವಿಲೀನ ಪ್ರಕ್ರಿಯೆ ಆಯಿತು. ಸಂಪೂರ್ಣ ಭಾರತದ ನಿರ್ಮಾಣದ ಕೀರ್ತಿ ಪತಾಕೆ ವಲ್ಲಭಾಯಿ ಪಟೇಲರ ಹೆಸರಲ್ಲಿಯೇ ಉಳಿಯಿತು. ಗೃಹ ಮಂತ್ರಿ ಎಂದರೆ ಹೀಗಿರಬೇಕು ಎಂಬುದನ್ನು ಇಂದಿನವರು ಅರಿತುಕೊಳ್ಳಬೇಕು.
ಸ್ವತಂತ್ರ ನಂತರದಲ್ಲಿ ಬದಲಾದ ನಕಾಶೆ :
ಭಾಷಾಭಿಮಾನಿಗಳಲ್ಲಿ ಮೊದಲಿಗರೆಂದರೆ ತೆಲುಗು ನಾಡಿನವರು. ಛಿದ್ರ ಛಿದ್ರವಾಗಿದ್ದ ಸಂದರ್ಭದಲ್ಲಿ ತೆಲುಗು ಮಾತಾಡುವವರೆಲ್ಲ ಒಂದೆಡೆ ನೆಲೆಸಿದರೆ, ಎಲ್ಲ ದೃಷ್ಟಿಯಿಂದಲೂ, ಅನುಕೂಲವೆಂಬ ಚಿಂತನೆಯ ಮೂಲಕ, ಮೊದಲ ಹೆಜ್ಜೆಯಿರಿಸಿದ್ದು ಕ್ರಿ ಶ 1952 ರಲ್ಲಿ. ಅದೇ ಇಡೀ ದೇಶಕ್ಕೆ ಮಾದರಿಯೂ, ಕಾರ್ಯಗತವೂ ಆಗಿ ಹೋಯಿತು. ಭಾಷಾಧಾರಿತ ರಾಜ್ಯ ವಿಂಗಡಣೆಯಾದಾಗ ಗಡಿ ಭಾಗಗಳು ಈಗೇನಿವೆಯೋ ಅವೆಲ್ಲ, ಸಮ್ಮತ ಪ್ರದೇಶಗಳು. ನಂತರದ ದಿನಗಳಲ್ಲಿ ಜೀವನ ಕಟ್ಟಿಕೊಳ್ಳಲು ಬಂದವರು, ಹೋದವರು ಲೆಕ್ಕಾಚಾರದಲ್ಲಿ ಸಂಖ್ಯೆಯಲ್ಲಿ ವ್ಯತ್ಯಾಸವಾಗಿದೆ. ಅದೇ ಈಗ ಭಾವೈಕ್ಯತೆಗೆ ಕೊಳ್ಳಿ ಇಡುವಂತಾಗಿದೆ.
ಬೆಳಗಾವಿ, ನಿಪ್ಪಾಣಿ, ಚಿಕ್ಕೋಡಿ ಮತ್ತಿತರ ಪ್ರದೇಶಗಳು ನಮಗೆ ಸೇರಬೇಕೆಂದು ಮಹಾರಾಷ್ಟ್ರ ಮೊದಲಿನಿಂದಲೂ ತಂಟೆ ತಕರಾರು ಮಾಡುತ್ತಲೇ ಬಂದಿತು. ಅದಕ್ಕೆ ಸೌಮ್ಯ ಪ್ರತಿಕ್ರಿಯೆ ನೀಡುತ್ತಾ ಬಂದಿದ್ದ ಸರಕಾರಗಳು, ಆಯೋಗ, ಮತ್ತೊಂದು, ಮಗದೊಂದು ಉದಾಹರಿಸುತ್ತಾ ತಣ್ಣಗಿತ್ತು. ಕಡೆಗೆ ಮಹಾರಾಷ್ಟ್ರದ ಗಡಿಯಲ್ಲಿರುವ ಕನ್ನಡಿಗರಿಗೆ, ಮಹಾರಾಷ್ಟ್ರದ ಮಾದರಿಯಲ್ಲಿಯೆ ಕನ್ನಡದೊಲವಿನ ಲೆಕ್ಕಾಚಾರ ಕಲಿಸುವ ಪ್ರಕ್ರಿಯೆ ಸದ್ದಿಲ್ಲದೇ ನಡೆದು ಬಂತೇನೊ ! ಅಂತೂ ಎರೆಡೂ ರಾಜ್ಯಗಳ ಜನರುಗಳ ಮುಗಿಯದ ಕಥೆಯಂತಾಗಿದೆ.
ಇರುವ ಪ್ರದೇಶಗಳನ್ನೇ ಸರಿಯಾಗಿ ಅಭಿವೃದ್ಧಿ ಮಾಡದ ರಾಜ್ಯಗಳಿವು. ಬಡತನ, ನಿರುದ್ಯೋಗ, ಅಪೌಷ್ಟಿಕತೆ, ಭಿಕ್ಷಾಟನೆ, ಅನಕ್ಷರತೆ, ಮಾನವ ಕಳ್ಳ ಸಾಗಾಣಿಕೆ, ಜನಸಂಖ್ಯೆ ಏರಿಕೆ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆ, ಜಾತಿ ಮತ್ತು ಮತೀಯ ಸಂಘರ್ಷಗಳನ್ನು ತೊಲಗಿಸಲಾಗದ ಅಸಮರ್ಥ ನಡೆಗೆ, ಎರೆಡೂ ರಾಜ್ಯಗಳು ಭಾಗಿ. ಹೊಂದಿಕೊಂಡು ನಡೆಯುವುದು ಮುಖ್ಯವಾಗಿದೆ. ಈ ವಿಷಯದಲ್ಲಿ ಕನ್ನಡಿಗರು ಹೆಚ್ಚು ತಾಳ್ಮೆ ಪ್ರದರ್ಶನ ಮಾಡಿದ್ದು ನಿಜಕ್ಕೂ ಶ್ಲಾಘನೀಯ. ಆದರೆ ಕೆದಕುವ ಗುಣ ಮಹಾರಾಷ್ಟ್ರದಲ್ಲೇ ಹೆಚ್ಚಾಗಿದೆ. ಹೀಗಾಗಿ ಆರಂಭದಲ್ಲಿಯೇ ಬಂದೋಬಸ್ತ್ ಮಾಡಿದ್ದರೆ, ಇಲ್ಲಿ ಎಂಇಎಸ್ ನ ಉದ್ಧಟತನ ಮುಂದುವರೆಯುತ್ತಿರಲಿಲ್ಲ. ಈಗಲೂ ಹೆಡೆಮುರಿ ಕಟ್ಟಿ ಹಾಕುವುದು ಸುಲಭವೇ. ಆದರೆ ಓಟುಗಳ ಲೆಕ್ಕಾಚಾರದಲ್ಲಿ, ಹೇಳಿಕೆಗಳ ಮೂಲಕವೇ ಮುಗಿಸುತ್ತಾ ಬಂದಿದ್ದಾರೆ.
ಇನ್ನು ಏನೇನು ಮಾಡಲಿಚ್ಚಿಸಿದ್ದಾರೋ ಗೊತ್ತಿಲ್ಲ. ಶಾಸಕಾಂಗ ಸ್ವ ಹಿತಕ್ಕಾಗಿ ಬಡಿದಾಡುತ್ತವೆ. ಕಾರ್ಯಾಂಗವು ಶಾಸಕಾಂಗದ ಕೈಗೊಂಬೆಯಾಗಿದೆ. ನಮಗೆ ಇರುವ ದೊಡ್ಡ ಶಕ್ತಿಯೆಂದರೆ, ನ್ಯಾಯಾಂಗ. ನಾವು ಉಳಿದೆರೆಡರ ಮೇಲೂ ವಿಶ್ವಾಸ ಕಳೆದುಕೊಂಡಿದ್ದರೂ, ನಮಗಿರುವ ಏಕೈಕ ನಂಬಿಕಸ್ಥ ಅಂಗ ನ್ಯಾಯಾಂಗ. ಬಹುತೇಕ ನೂರಕ್ಕೆ ತೊಂಭತ್ತೊಂಭತ್ತರಷ್ಟು ಪ್ರಾಮಾಣಿಕರು ಅಲ್ಲಿರುವುದರಿಂದಲೇ ದೇಶ ಒಂದು ಹಂತಕ್ಕಿದೆ. ಇದ್ದಿಲ್ಲವೆಂದರೆ …… ಮತ್ತೊಂದು ದೇಶಕ್ಕೆ ಈ ಭವ್ಯಭಾರತವನ್ನು ಹೋಲಿಸಲು ಮನಸಿಲ್ಲ. ಬಿಡಿ.
ಈಗ ಕಿತ್ತಾಡುತ್ತಿರುವ ಮಂದಿಗೆ ಸರ್ವೋಚ್ಛ ನ್ಯಾಯಾಲಯವು ಬಾಲ ಮುದುರಿಕೊಂಡಿರುವಂತೆ ತಾಕೀತು ಮಾಡಬೇಕೆಂಬುದು ನಮ್ಮ ಕೋರಿಕೆ. ಇದು ಎಲ್ಲರಿಗೂ ಅನ್ವಯ. ದೇಶದ ಐಕ್ಯತೆಗೆ ಧಕ್ಕೆ ತರುವ ಮೂಲಕ,ಗಲಭೆ,ದೊಂಬಿ,ಮಿಂಚಿನ ಮುಷ್ಕರಗಳನ್ನು ನಡೆಸಿದ್ದೇ ಆದರೆ ಸೇನಾಪಡೆಗಳ ತುಕಡಿಗಳನ್ನು ತಂದಿರಿಸಲು ಸೂಚಿಸಬೇಕು. ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಬೇಕು. ಕಿವಿ ಹಿಂಡಿ ಬುದ್ದಿ ಹೇಳಬೇಕು. ಇದರಲ್ಲಿ ಜಾಣ ನಡೆ ಪ್ರದರ್ಶನದ ಪ್ರಶ್ನೆಯೇ ಇಲ್ಲ. ಕರಾರುವಕ್ಕಾದ ತೀರ್ಮಾನಗಳು ಬರಲೇಬೇಕು.
ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ಧ್ವಂಸ ಮಾಡುವವರ ಮೇಲೆ ನಿರ್ದಾಕ್ಷಿಣ್ಯವಾಗಿ, ಕ್ರಮ ಜರುಗಿಸಬೇಕು. ಇಲ್ಲವೇ ಅಂಡಮಾನ್ ನಿಕೋಬಾರ್ ಗಳಲ್ಲಿ ಎಣ್ಣೆ ತೆಗೆಯಲು ಹಚ್ಚಬೇಕು. ಅಂದಾಗ ಮಾತ್ರ ಯಾರ ಬಾಲವೂ ಹನುಮಂತನಂತೆ ಬೆಳೆಯುವುದಿಲ್ಲ.
ಬಸ್ ಗಳಿಗೆ ಮಸಿ, ಬಾವುಟಕ್ಕೆ ಮಸಿ,ಮುಂದೆ ನಾಯಕರುಗಳ ಮುಖಗಳಿಗೆ ಮಸಿ ಹೀಗೆ ಮುಂದುವರೆದರೆ, ಇವರನ್ನು ನಾಗರಿಕರು ಎಂದು ಪರಿಗಣಿಸಬೇಕೇ ? ಸಧ್ಯಕ್ಕೆ ಕನ್ನಡಿಗರು ಅವರ ಮಟ್ಟಕ್ಕೆ ಇಳಿಯಬಾರದೆಂಬ ಕಳಕಳಿ ನಮ್ಮದು. ಸರ್ವೋಚ್ಛ ನ್ಯಾಯಾಲಯದ ಆದೇಶಕ್ಕಾಗಿ ಮೊರೆ ಹೋಗುವುದೊಳಿತು.
ಹೊನಗಾ ಬಳಿ ಅಪಘಾತ: ಸ್ಕೂಟಿ ಸವಾರ ಸಾವು