Kannada NewsKarnataka NewsLatest

ಗುಂಪುಗಾರಿಕೆ ಬಿಡಿ, ಅಭಿವೃದ್ಧಿಗೆ ಒಂದಾಗಿ -ಬಾಲಚಂದ್ರ ಜಾರಕಿಹೊಳಿ

 ಪ್ರಗತಿವಾಹಿನಿ ಸುದ್ದಿ, ಘಟಪ್ರಭಾ: ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ಬರಲು ಮೈತ್ರಿ ಸರ್ಕಾರವನ್ನು ಧಿಕ್ಕರಿಸಿ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡುವಲ್ಲಿ ರಮೇಶ ಜಾರಕಿಹೊಳಿ ಅವರ ಕೃಪೆಯೇ ಕಾರಣವೆಂದು ಹಿರಿಯ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಉಮೇಶ ಕತ್ತಿ ಅವರು ಹೇಳಿದರು.

ಹಿರಿಯ ಬಿಜೆಪಿ ನಾಯಕ ಉಮೇಶ ಕತ್ತಿಯವರು ಪಾಮಲದಿನ್ನಿ ಗ್ರಾಮದಲ್ಲಿ ರಮೇಶ ಜಾರಕಿಹೊಳಿ ಪ್ರಚಾರಾರ್ಥವಾಗಿ ಮಾತನಾಡಿದರು. ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಈರಪ್ಪಾ ಕಡಾಡಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇಲ್ಲಿಗೆ ಸಮೀಪದ ಪಾಮಲದಿನ್ನಿ ಗ್ರಾಮದಲ್ಲಿ ಗೋಕಾಕ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಆಡಳಿತಕ್ಕೆ ರಮೇಶ ಜಾರಕಿಹೊಳಿ ಅವರ ತ್ಯಾಗ ಬಹು ದೊಡ್ಡದು ಎಂದು ಹೇಳಿದರು.

ಜೆಡಿಎಸ್-ಕಾಂಗ್ರೇಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರೂ ಸಾಕಷ್ಟು ನೋವುಗಳನ್ನು ಅನುಭವಿಸಿದರು. ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗ ಸಚಿವ ಸ್ಥಾನಕ್ಕೆ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಬಿಜೆಪಿಗೆ ಸೇರ್ಪಡೆಗೊಂಡರು. ಇವರನ್ನು ಈ ಕ್ಷೇತ್ರದಿಂದ ಮತ್ತೊಮ್ಮೆ ಆರಿಸಿ ಕಳುಹಿಸಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶಕ್ತಿ ನೀಡುವಂತೆ ಮತದಾರರಲ್ಲಿ ಕೋರಿದರು.

ಅನರ್ಹ ಶಾಸಕನೆಂಬ ಪಟ್ಟ ಕಟ್ಟುತ್ತಿರುವ ಕಾಂಗ್ರೇಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲು ರಮೇಶ ಜಾರಕಿಹೊಳಿ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಿಕೊಟ್ಟು ಅರ್ಹರನ್ನಾಗಿ ಮಾಡಿ ಯಡಿಯೂರಪ್ಪನವರ ಕೈಬಲಪಡಿಸುವಂತೆ ಕೋರಿದರು.

ಚುನಾವಣೆ ಫಲಿತಾಂಶದ ಬಳಿಕ ರಮೇಶ ಜಾರಕಿಹೊಳಿ ಬಿಜೆಪಿ ಸರ್ಕಾರದಲ್ಲಿ ಮಹತ್ವದ ಖಾತೆಯೊಂದರ ಸಚಿವರಾಗಲಿದ್ದಾರೆ. ಇದರಿಂದ ಗೋಕಾಕ ಮತಕ್ಷೇತ್ರ ಸೇರಿದಂತೆ ಇಡೀ ಜಿಲ್ಲೆಯು ಸಮಗ್ರ ಪ್ರಗತಿಯಾಗುತ್ತದೆ ಎಂದು ಶಾಸಕ ಉಮೇಶ ಕತ್ತಿ ಹೇಳಿದರು.

ಗುಂಪುಗಾರಿಕೆ ಬಿಡಿ, ಅಭಿವೃದ್ಧಿಗೆ ಒಂದಾಗಿ :

ಶಾಸಕ ಬಾಲಚಂದ್ರ ಜಾರಕಿಹೊಳಿ ಅರಭಾಂವಿ ಶಾಸಕ ಮತ್ತು ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಪಾಮಲದಿನ್ನಿ, ಮಲ್ಲಾಪೂರ ಪಿ.ಜಿ, ಶಿಂಧಿಕುರಬೇಟ ಹಾಗೂ ಧುಪದಾಳ ಗ್ರಾಮಗಳೊಂದಿಗೆ ಮೊದಲಿನಿಂದಲೂ ಅವಿನಾಭಾವ ಸಂಬಂಧವಿದೆ.

ಈ ಭಾಗದ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಲಾಗುವುದು. ವೈಯಕ್ತಿಕ ಮನಸ್ತಾಪಗಳನ್ನು, ಗುಂಪುಗಾರಿಕೆಯನ್ನು ಬದಿಗಿಟ್ಟು ರಮೇಶ ಜಾರಕಿಹೊಳಿ ಅವರನ್ನು ಆರನೇ ಬಾರಿಗೆ ಶಾಸಕರನ್ನಾಗಿ ಚುನಾಯಿಸಬೇಕು. ಬಿ.ಎಸ್.ಯಡಿಯೂರಪ್ಪನವರು ಈಗಾಗಲೇ ರಮೇಶ ಅವರಿಗೆ ಮಂತ್ರಿ ಸ್ಥಾನದ ಭರವಸೆಯನ್ನು ನೀಡಿದ್ದಾರೆಂದು ಹೇಳಿದರು.

ಬೆಳಗಾವಿ ವಿಭಾಗೀಯ ಪ್ರಭಾರಿ ಈರಪ್ಪಾ ಕಡಾಡಿ ಮಾತನಾಡಿ, ಹಳೆಯ-ಹೊಸ ಕಾರ್ಯಕರ್ತರೆಂಬ ಬೇಧ ಭಾವ ಮಾಡಿಕೊಳ್ಳದೆ ಎಲ್ಲರೂ ಒಗ್ಗಟ್ಟಿನಿಂದ ಕಮಲ ಗುರುತಿಗೆ ಮತ ನೀಡಿ ರಮೇಶ ಜಾರಕಿಹೊಳಿ ಅವರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಬೀರಪ್ಪ ಡಬಾಜ, ಮಲ್ಲಪ್ಪಾ ಕೌಜಲಗಿ, ಪ್ರಭಾ ಶುಗರ ನಿರ್ದೇಶಕರಾದ ಶಿವಲಿಂಗ ಪೂಜೇರಿ, ಮಾಳಪ್ಪಾ ಜಾಗನೂರ, ಜಿ.ಪಂ ಮಾಜಿ ಸದಸ್ಯ ಸುಧೀರ ಜೋಡಟ್ಟಿ, ಸುರೇಶ ಕಾಡದವರ, ಅಶೋಕ ಖಂಡ್ರಟ್ಟಿ, ಗಣಪತಿ ಹುನಕುಪ್ಪಿ, ಈರಪ್ಪಾ ಸಂಪಗಾರ, ಪ್ರೇಮಾ ಭಂಡಾರಿ, ವೀರಭದ್ರ ಬೆಳಕೂಡ, ಮಹಾದೇವ ಆರೇರ, ಲಕ್ಕಪ್ಪಾ ರಾಜಾಪೂರೆ, ವಿಠ್ಠಲ ಬಂಗಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಶಿವಾಪುರ (ಕೋ), ಸಾವಳಗಿ, ನಂದಗಾಂವ, ಮುತ್ನಾಳ, ಧುಪದಾಳ, ಖಾನಾಪೂರ, ಶಿಂಧಿಕುರಬೇಟ ಗ್ರಾಮಗಳಲ್ಲಿ ರಮೇಶ ಜಾರಕಿಹೊಳಿ ಪರ ಬಿಜೆಪಿ ಮುಖಂಡರು ಬಿರುಸಿನ ಪ್ರಚಾರ ಕೈಗೊಂಡರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button