Kannada NewsKarnataka NewsPolitics

ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದ ನರ್ಸಿಂಗ್ ಕಾಲೇಜುಗಳಿಗೆ ಬೀಗ ಜಡಿಯಿರಿ: ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್

ಪ್ರಗತಿವಾಹಿನಿ ಸುದ್ದಿ: ಸರಕಾರದಿಂದ ಎಲ್ಲಾ ಸವಲತ್ತುಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು  ಒದಗಿಸಲು ವಿಫಲಾಗಿರುವ ರಾಜ್ಯದ ನರ್ಸಿಂಗ್ ಕಾಲೇಜುಗಳನ್ನು ತಪಾಸಣೆ ನಡೆಸಿ ಬೀಗ ಜಡಿಯಬೇಕು ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಭಿವೃದ್ದಿ ಹಾಗೂ ಜೀವನೋಪಾಯ ಸಚಿವರಾದ ಡಾ.ಶರಣ್ ಪ್ರಕಾಶ್ ಪಾಟೀಲ್ ಅವರು, ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಗುರುವಾರ ವಿಕಾಸಸೌಧದಲ್ಲಿ ನಡೆದ  ನರ್ಸಿಂಗ್ ಕಾಲೇಜುಗಳ ಪದಾಧಿಕಾರಿಗಳ ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಈ ನಿದೇರ್ಶನ  ನೀಡಿದರು. ರಾಜ್ಯದ ಸುಮಾರು ನರ್ಸಿಂಗ್ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದಿರುವ ಬಗ್ಗೆ ನನಗೆ ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ ತಪಾಸಣೆ ನಡೆಸಿ ಅಂತಹ ಕಾಲೇಜುಗಳಿಗೆ ಬೀಗ ಜಡಿಯಿರಿ ಎಂದು ಸ್ಥಳದಲ್ಲಿದ್ದ ವೈದ್ಯಕೀಯ ಶಿಕ್ಷಣ ಇಲಾಖೆಯ ನಿದೇರ್ಶಕಿ ಡಾ.ಸುಜಾತ ರಾಥೋಡ್ ಅವರಿಗೆ ನಿದೇರ್ಶನ ಕೊಟ್ಡರು.

ಖಾಸಗಿ ಕಾಲೇಜು ಆಡಳಿತ ಮಂಡಳಿಯವರು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಸರ್ಕಾರ ಕೂಡ ಮಾನವೀಯ ದೃಷ್ಟಿಯಿಂದ ನಡೆದುಕೊಂಡಿದೆ. ಇಷ್ಟಾದರೂ ಬುದ್ದಿ ಬಂದಿಲ್ಲ ಅಂದರೆ ಹೇಗೆ ? ಎಂದು ಆಡಳಿತ ಮಂಡಳಿಯವರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು.

ಕೆಲ ಕಾಲೇಜುಗಳನ್ನು ಹೊರತುಪಡಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಬೋಧಕ, ಬೋಧಕೇತರ, ಪ್ರಯೋಗಾಲಯ, ಸಿಬ್ಬಂದಿ, ಗ್ರಂಥಾಲಯ, ಶುಚಿತ್ವ, ಸೇರಿದಂತೆ ಕನಿಷ್ಠ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿವೆ. ಇಷ್ಟು ಸಮಸ್ಯೆಗಳನ್ನು ಇಟ್ಟುಕೊಂಡು ವಿದ್ಯಾರ್ಥಿಗಳಿಗೆ ಯಾವ ಶಿಕ್ಷಣ ಕೊಡುತ್ತಾರೆ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.

ವಿದ್ಯಾರ್ಥಿಗಳನ್ನು ಪ್ರವೇಶ ಮಾಡಿಕೊಳ್ಳುವ ವೇಳೆ ಆಶ್ವಾಸನೆಗಳನ್ನು ನೀಡಿ ಅವರಿಂದ ಹೆಚ್ಚಿನ ಶುಲ್ಕ ಪಡೆಯುತ್ತೀರಿ. ಕನಿಷ್ಠ ಪಕ್ಷ ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಡದಿದ್ದರೆ, ಹೇಗೆ? ಎಂದು ಪ್ರಶ್ನಿಸಿದರು.

ಇನ್ನು ಮುಂದೆ ಪ್ರತಿ ಶೈಕ್ಷಣಿಕ ವರ್ಷದ ಆರಂಭದಲ್ಲಿ ಪ್ರವೇಶ‌ ಮಾಡಿಕೊಳ್ಳುವ ಮುನ್ನ ಅಧಿಕಾರಿಗಳು ಪ್ರತಿಯೊಂದು ಕಾಲೇಜುಗೆ ಭೇಟಿ ನೀಡಬೇಕು. ಯಾವ ಕಾಲೇಜು ಸರ್ಕಾರದ ಮಾನದಂಡ ಪಾಲನೆ ಮಾಡೊರುವುದಿಲ್ಲವೋ, ಅಂತಹ ಕಾಲೇಜುಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಪಾಟೀಲ್ ಸೂಚನೆ ನೀಡಿದರು.

 ಪರಿಷ್ಕರಣೆ ಇಲ್ಲ

ಇದೇ ವೇಳೆ ನರ್ಸಿಂಗ್ ಕಾಲೇಜು ಆಡಳಿತ ಮಂಡಳಿಯ ವತಿಯಿಂದ ಶುಲ್ಕ ಪರಿಷ್ಟರಣೆ ಮಾಡಬೇಕು ಎಂಬ ಬೇಡಿಕೆ ಕೇಳಿ ಬಂದಿತು, ಇದಕ್ಕೆ ಸಚಿವ ಪಾಟೀಲ್, ಯಾವುದೇ ಕಾರಣಕ್ಕೂ ವಾರ್ಷಿಕ ಶುಲ್ಕವನ್ನು ಪರಿಷ್ಕರಣೆ ಮಾಡುವುದಿಲ್ಲ ಎಂದು ಹೇಳಿದರು.

ಸರಕಾರಿ ಕೋಟದಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿ‌ ವಾರ್ಷಿಕ ₹10,000, ಆಡಳಿತ ಮಂಡಳಿಯ ವಿದ್ಯಾರ್ಥಿ  ₹1ಲಕ್ಷ, ಹಾಗೂ ‌ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ₹1.40 ಲಕ್ಷ ಶುಲ್ಕವನ್ನು ನಿಗದಿಪಡಿಸಲಾಗಿದೆ. ಇದನ್ನು ಶೇ 20 ರಷ್ಟು ಪರಿಷ್ಕರಣೆ ಮಾಡಬೇಕು ಎಂಬುದು ಸಂಘದ ಬೇಡಿಕೆಯಾಗಿತ್ತು. ಆದರೆ, ಇದನ್ನು ಒಪ್ಪದ ಸಚಿವರು, ಸಾಧ್ಯವಾದರೆ ಈಗಿರುವ ಶುಲ್ಕವನ್ನೇ ಕಡಿಮೆ ಮಾಡಲಾಗುವುದು. ನಾವು ಯಾವಾಗಲೂ ವಿದ್ಯಾರ್ಥಿಗಳ ಪರ ಎಂದು ಪಾಟೀಲ್ ಹೇಳಿದರು.

ಶೇ40  ರಷ್ಟು ಸೀಟುಗಳನ್ನು ಬಿಡಿ 

ಇನ್ನು ಸಭೆಯಲ್ಲಿ ಸಚಿವ ಶರಣ್ ಪ್ರಕಾಶ್ ಪಾಟೀಲ್ ಸರಕಾರಿ ಕೋಟಾದ ನರ್ಸಿಂಗ್ ಸೀಟುಗಳ ಪ್ರಮಾಣವನ್ನು ಶೇ40 ರಷ್ಟು ಬಿಟ್ಟುಕೊಡಿ ಎಂದು ಆಡಳಿತ ಮಂಡಳಿಯವರಿಗೆ ಸಲಹೆ ಮಾಡಿದರು. ಪ್ರಸ್ತುತ 611 ನರ್ಸಿಂಗ್ ಕಾಲೇಜು ವತಿಯಿಂದ ಒಟ್ಟು 35,000 ಸೀಟುಗಳು ಭರ್ತಿಮಾಡಿಕೊಳ್ಳಲಾಗುತ್ತದೆ. ಶೇ20 ರಷ್ಟು ಸರಕಾರಿ ಹಾಗೂ ಶೇ80 ರಷ್ಟು  ಆಡಳಿತ ಮಂಡಳಿಯವರು ತುಂಬಿಕೊಳ್ಳುತ್ತಾರೆ. ಶೇ 40 ರಷ್ಟು ಕೋಟಾವನ್ನು ಸರಕಾರಕ್ಕೆ ಬಿಟ್ಡುಕೊಟ್ಟರೆ ಬಡ ವಿದ್ಯಾರ್ಥಿಗಳಿಗೆ ಮಹಾದುಪಕಾರವಾಗುತ್ತದೆ ಎಂದು ಪಾಟೀಲ್ ಮನವಿ ಮಾಡಿದರು.

ಇನ್ನು ನರ್ಸಿಂಗ್ ಕಾಲೇಜುಗಳಲ್ಲಿ ಪ್ರವೇಶಾತಿಯನ್ನು ಸೆಪ್ಟೆಂಬರ್ ತಿಂಗಳಿನಿಂದ ಆಕ್ಟೋಬರ್ ವರೆಗೂ ನಡೆಸದೆ, ಇದೆ ಶೈಕ್ಷಣಿಕ ವರ್ಷದಿಂದ ಜುಲೈ ತಿಂಗಳಲ್ಲಿ ಪ್ರವೇಶ ಪ್ರಕ್ರಿಯೆ ನಡೆಸಲು ಅಗತ್ಯವಿರುವ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಸಚಿವ ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರದಾನ ಕಾರ್ಯದರ್ಶಿ ಮೊಹಮ್ಮದ್ ಮೊಸೀನ್, ರಾಜೀವ್ ಗಾಂಧಿ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ರಿಜಿಸ್ಟರ್ ಪಿ.ಆರ್ ಶಿವಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button