*ಆಹಾರ- ಆತಿಥ್ಯೋದ್ಯಮ: ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರಿಗೆ ಎಂಐಎಚ್ಎಂಸಿನಲ್ಲಿ ಕೌಶಲ್ಯ ತರಬೇತಿ*

ಪ್ರಗತಿವಾಹಿನಿ ಸುದ್ದಿ: ನಗರದಲ್ಲಿ ಇದೆ ಮೊದಲ ಬಾರಿಗೆ ಆಹಾರ ಹಾಗು ಆತಿಥ್ಯೋದ್ಯಮ ಕ್ಷೇತ್ರದಲ್ಲಿ ಮಹಾರಾಣಿ ವಿಜ್ಞಾನ ಕಾಲೇಜು ವಿದ್ಯಾರ್ಥಿನಿಯರಿಗೆ ಮೈಸೂರು ವಿಶ್ವವಿದ್ಯಾನಿಲಯದಿಂದ ಮಾನ್ಯತೆ ಪಡೆದಿರುವ ಮೈಸೂರು ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್ಮೆಂಟ್ & ಕ್ಯುಲಿನರಿ (ಎಂಐಎಚ್ಎಂಸಿ)ನಲ್ಲಿ 10 ದಿನಗಳ ತರಬೇತಿ ಹಮ್ಮಿಕೊಳ್ಳಲಾಗಿತ್ತು. ದೇಶ-ವಿದೇಶಗಳಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗು ಅತಿ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುತ್ತಿರುವ ಆಹಾರ ಹಾಗು ಆತಿಥ್ಯೋದ್ಯಮ ಕ್ಷೇತ್ರದಲ್ಲಿ ವಿದ್ಯಾರ್ಥಿನಿಯರಿಗೆ ಎಂಐಎಚ್ಎಂಸಿನ ನುರಿತ ತರಬೇತುದಾರರು ಕೌಶಲ್ಯ ತರಬೇತಿ ನೀಡಿದರು.
ಈ ಹತ್ತು ದಿನಗಳ ಅವಧಿಯಲ್ಲಿ ಆಹಾರ ಸುರಕ್ಷತೆ, ಗುಣಮಟ್ಟ ನಿಯಂತ್ರಣ, ಅಡುಗೆ ಮನೆಯಲ್ಲಿ ಸುರಕ್ಷತೆ ಹಾಗು ತುರ್ತು ಕ್ರಮಗಳು, ಆಹಾರ ಹಾಗು ಆರೋಗ್ಯ, ಬೇಕರಿ ಹಾಗು ಪೇಸ್ಟ್ರಿ ತಯಾರಿಕೆಯಲ್ಲಿ ತರಬೇತಿ, ನಾನಾ ಆಹಾರಗಳಿಗೆ ತರಕಾರಿಗಳನ್ನು ವಿವಿಧ ಆಕೃತಿ-ಗಾತ್ರಗಳಲ್ಲಿ ಹಚ್ಚುವುದು, ವ್ಯಕ್ತಿತ್ವ ವಿಕಸನ, ಸಂವಹನ ಹೀಗೆ ನಾನಾ ವಿಷಯಗಳಲ್ಲಿ ತರಬೇತಿ ನೀಡಲಾಯಿತು.
ತರಬೇತಿಯ ಸಮಾರೋಪದಲ್ಲಿ ಮಾತನಾಡಿದ ನಗರದ ಸಿ ಎಸ್ ಐ ಆರ್ ಸಿಎಫ್ ಟಿಆರ್ ಐ ನ ನಿವೃತ್ತ ಮುಖ್ಯ ವಿಜ್ಞಾನಿ ಡಾ. ರೇಣು ಅಗರ್ವಾಲ್ ಮಾತನಾಡಿ, ಕಾಲೇಜುಗಳು ಹಾಗು ಕೈಗಾರಿಕೆಗಳ ನಡುವೆ ನಿಕಟ ಸಂಬಂಧ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸುತ್ತದೆ ಎಂದು ತಿಳಿಸಿದರು.
“ಕೌಶಲ್ಯ ತರಬೇತಿ ಮಕ್ಕಳಿಗೆ ಅತಿ ಅಗತ್ಯ,” ಎಂದು ಅವರು ಅಭಿಪ್ರಾಯ ಪಟ್ಟ್ಟರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜು (ಸ್ವಾಯತ್ತ) ಪ್ರಾಂಶುಪಾಲರಾದ ಡಾ. ಅಬ್ದುಲ್ ರಹಮಾನ್ ಎಂ ಮಾತನಾಡಿ ಕೌಶಲ್ಯ ತರಬೇತಿ ಮೂಲಕ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಕಾಲೇಜಿನ ಆಹಾರ ವಿಜ್ಞಾನ ಹಾಗು ಪೌಷ್ಟಿಕತೆ ವಿಭಾಗದ ಮುಖ್ಯಸ್ಥೆ ಡಾ. ಲಕ್ಷ್ಮಿ ಎಂ, ಉಪನ್ಯಾಸಕಿ ವಿದ್ಯಾ, ಎಂಐಎಚ್ಎಂಸಿ
ಆಡಳಿತ ಮಂಡಳಿಯ ಶ್ರೀಮತಿ ಅರ್ಪಿತ ಧರ್ಮವೀರ್ ಈ ಸಂದರ್ಭದಲ್ಲಿ ಮಾತನಾಡಿ, ಆಹಾರ ವಿಜ್ಞಾನ ಕ್ಷೇತ್ರದಲ್ಲಿ ಲಭ್ಯವಿರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿ, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಕಿವಿ ಮಾತು ಹೇಳಿದರು. ಎಂಐಎಚ್ಎಂಸಿ ಪ್ರಾಂಶುಪಾಲರಾದ ಶ್ರೀ ವಿಕ್ಟರ್ ಹೇಮಂತ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭಲ್ಲಿ ತರಬೇತಿ ಪಡೆದ ವಿದ್ಯಾರ್ಥಿನಿಯರಿಗೆ ಸರ್ಟಿಫಿಕೇಟ್ ವಿತರಿಸಲಾಯಿತು. ಕಾಮಿಸ್ ಹಾಟ್ ಕಿಚನ್ ವಿಭಾಗದ ಮುಖ್ಯಸ್ಥರಾದ ಚೆಫ್ ಸತೀಶ್ ನಾಗರಾಜ್ ಈ ಹತ್ತು ದಿನಗಳ ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು.



