ಪ್ರಗತಿವಾಹಿನಿ ಸುದ್ದಿ, ಮುಂಬೈ – ಶನಿವಾರವಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದ ಮಹಾರಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ರಾಜಿನಾಮೆ ನೀಡಿದ್ದಾರೆ.
ನಾಳೆ ಸಂಜೆಯೊಳಗೆ ಬಹುಮತ ಸಾಬೀತು ಪಡಿಸುವಂತೆ ಸರ್ವೋಚ್ಛ ನ್ಯಾಯಾಲಯ ಆದೇಶ ನೀಡಿದ ಸ್ವಲ್ಪ ಹೊತ್ತಿನಲ್ಲೇ ಅಜಿತ್ ಪವಾರ್ ರಾಜಿನಾಮೆ ನೀಡಿದ್ದಾರೆ.
ಇದರ ಬೆನ್ನಿಗೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ 3.30ಕ್ಕೆ ಪತ್ರಿಕಾಗೋಷ್ಠಿ ಕರೆದಿದ್ದು, ಅವರೂ ಕೂಡ ರಾಜಿನಾಮೆ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಮಹಾರಾಷ್ಟ್ರದಲ್ಲಿ ದಢೀರ್ ರಾಜಕೀಯ ಬೆಳವಣಿಗೆಯಲ್ಲಿ ಶನಿವಾರ ಬೆಳಗಿನಜಾವ ಬಿಜೆಪಿ -ಎನ್ ಸಿಪಿ ನೇತೃತ್ವದ ಸರಕಾರ ಅಧಿಕಾರಕ್ಕೇರಿತ್ತು. ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವೀಸ್ ಹಾಗೂ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದ್ದರು.
ಇದರ ವಿರುದ್ಧ ಶಿವಸೇನೆ, ಎನ್ ಸಿಪಿ ಮತ್ತು ಕಾಂಗ್ರೆಸ್ ಸುಪ್ರಿಂ ಕೋರ್ಟ್ ಕದ ತಟ್ಟಿದ್ದವು. ಸುಪ್ರಿಂ ಕೋರ್ಟ್ ಮಂಗಳವಾರ ಬೆಳಗ್ಗೆ ತೀರ್ಪು ಪ್ರಕಟಿಸಿತ್ತು. ಬುಧವಾರ ಸಂಜೆಯೊಳಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿತ್ತು.
ಈ ಮಧ್ಯೆ ಸೋಮವಾರ ರಾತ್ರಿ ಶರದ್ ಪವಾರ್ ಮತ್ತು ಅಜಿತ್ ಪವಾರ್ ಸುದೀರ್ಘ ಚರ್ಚೆ ನಡೆಸಿದ್ದರು. ಅಜಿತ್ ಪವಾರ್ ಸರಕಾರದಿಂದ ಹೊರಗೆ ಬರುವಂತೆ ತೀವ್ರ ಒತ್ತಡ ಹೇರಲಾಗಿತ್ತು. ಪಕ್ಷ ಹಾಗೂ ಕುಟುಂಬದಿಂದಲೂ ಅವರ ಮೇಲೆ ಒತ್ತಡ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ರಾಜಿನಾಮೆ ಪ್ರಕಟಿಸಿದ್ದಾರೆ.
ಈಗ ಸ್ವಲ್ಪ ಹೊತ್ತಿನಲ್ಲೇ ದೇವೇಂದ್ರ ಫಡ್ನವೀಸ್ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಅವರಿಗೆ ರಾಜಿನಾಮೆ ನೀಡದೇ ಬೇರೆ ದಾರಿ ಇಲ್ಲ ಎನ್ನಲಾಗುತ್ತಿದೆ. ಆದರೆ ಎನ್ ಸಿಪಿ ಬೆಂಬಲದ ಸ್ಪಷ್ಟ ಆಧಾರವಿಲ್ಲದೇ ಅವರು ಏಕೆ ಸರಕಾರ ರಚಿಸಲು ಮುಂದಾದರು? ಬಿಜೆಪಿ ವರಿಷ್ಠರು ಇದಕ್ಕೆ ಹೇಗೆ ಒಪ್ಪಿಗೆ ನೀಡಿದರು ಎನ್ನುವ ಕುತೂಹಲ ಹಾಗೆಯೇ ಉಳಿದುಕೊಂಡಿದೆ.
ಯಾವುದಕ್ಕೂ 3.30ಕ್ಕೆ ಫಡ್ನವೀಸ್ ಪತ್ರಿಕಾಗೋಷ್ಠಿಯಲ್ಲಿ ಎಲ್ಲವೂ ಬಹುರಂಗವಾಗಲಿದೆ.
ದೇಶದ ಇತಿಹಾಸದಲ್ಲೇ ಬಿಗ್ ಡ್ರಾಮಾ: ಮಹಾರಾಷ್ಟ್ರದಲ್ಲಿ ಬಿಜೆಪಿ-ಎನ್ ಸಿಪಿ ಸರಕಾರ
ಅಬ್ಬಾ, ರಾತ್ರೋರಾತ್ರಿ ಏನೆಲ್ಲ ನಡೆಯಿತು!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ