*ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೆ ಖಾಕಿ ಎಂಟ್ರಿ: ವಿಚಾರಣೆಗೆ ಕರೆದೊಯ್ದ ಪೊಲೀಸರು*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಹೇಶ್ ತಿಮರೋಡಿ ವಿರುದ್ಧ ಉಡುಪಿಯ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನಿನ್ನೆ ನೋಟಿಸ್ ನೀಡಿದ್ದರು. ಆದರೆ ಮಹೇಶ್ ತಿಮರೋಡಿ ವಿಚಾರಣೆಗೆ ಹಾಜರಾಗಿರಲಿಲ್ಲ. ಇಂದು ಬೆಳಿಗ್ಗೆ ಉಡುಪಿ ಎ ಎಸ್ ಪಿ ಸುಧಾಕರ್ ನಾಯಕ್ ನೇತೃತ್ವದ ತಂಡ ನೇರವಾಗಿ ಮಹೇಶ್ ತಿಮರೋಡಿ ನಿವಾಸಕ್ಕೆ ಎಂಟ್ರಿ ಕೊಟ್ಟಿದೆ. ಮನೆಯಿಂದ ಹೊರಬರುವಂತೆ ಸೂಚಿಸಿದೆ. ಈ ವೇಳೆ ತಿಮರೋಡಿ ಅವರ ಉಜಿರೆ ನಾವಸದಲ್ಲಿ ಹೈಡ್ರಾಮಾ ನಡೆದಿದೆ.
ಮಹೇಶ್ ತಿಮರೋಡಿ ಪರ ವಕೀಲರು ತಾವೇ ಅವರನ್ನು ಬ್ರಹ್ಮಾವರ ಠಾಣೆಗೆ ಕರೆತರುತ್ತೇವೆ ಎಂದು ಪೊಲೀಸರ ಮನವೊಲಿಕೆಗೆ ಯತ್ನಿಸಿದರೂ ಪೊಲೀಸರು ಸ್ಥಳದಿಂದ ಕದಲಿಲ್ಲ. ಬಳಿಕ ಮನೆಯಿಂದ ಹೊರಬಂದ ಮಹೇಶ್ ತಿಮರೋಡಿ ತಾನು ನನ್ನ ಖಾಸಗಿ ಕಾರಿನಲ್ಲಿಯೇ ಠಾಣೆಗೆ ಬರುತ್ತೇನೆ ಎಂದು ಹೇಳಿದ್ದು, ಪೊಲೀಸರ ಜೊತೆ ತಮ್ಮದೇ ಕಾರಿನಲ್ಲಿ ಠಾಣೆಗೆ ತೆರಳಿದ್ದಾರೆ. ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ.